Asianet Suvarna News Asianet Suvarna News

ಕೇರಳ ವೈದ್ಯ ವಿಸ್ಮಯ ಆತ್ಮಹತ್ಯೆ ಪ್ರಕರಣ: ವರದಕ್ಷಿಣೆ ಪ್ರಕರಣದಲ್ಲಿ ಪತಿ ದೋಷಿ: ಕೋರ್ಟ್‌

  • ವರದಕ್ಷಿಣೆ ಕಿರುಕುಳ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದ ವಿಸ್ಮಯ
  • ಆಯುರ್ವೇದ ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದ ವಿಸ್ಮಯ 
  • ಪತಿ ಕಿರಣ್‌ಕುಮಾರ್ ಪ್ರಕರಣದಲ್ಲಿ ದೋಷಿ
     
Kerala court convicts husband for dowry death in Doctor Vismaya suicide case akb
Author
Kollam, First Published May 23, 2022, 4:16 PM IST

ಕೊಲ್ಲಂ: ಇಡೀ ಕೇರಳ ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಆಯುರ್ವೇದ ವೈದ್ಯಕೀಯ ವಿದ್ಯಾರ್ಥಿನಿ ವಿಸ್ಮಯ ಆತ್ಮಹತ್ಯೆ ಪ್ರಕರಣದಲ್ಲಿ ಪತಿ ಆರೋಪಿ ಎಸ್ ಕಿರಣ್ ಕುಮಾರ್ (S Kiran Kumar) ದೋಷಿ ಎಂದು (ಮೇ.23) ಸೋಮವಾರ ಕೊಲ್ಲಂ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ. ನಾಲ್ಕು ತಿಂಗಳ ಸುದೀರ್ಘ ವಿಚಾರಣೆಯ ನಂತರ ವಿಸ್ಮಯಾ ಅವರ ಪತಿ ಕಿರಣ್ ಅವರನ್ನು ದೋಷಿ ಎಂದು ನ್ಯಾಯಾಧೀಶ ಸುಜಿತ್ ಕೆಎನ್ (Sujith KN ) ತೀರ್ಪು ಪ್ರಕಟಿಸಿದರು. ಶಿಕ್ಷೆಯ ಪ್ರಮಾಣವನ್ನು ಮಂಗಳವಾರ (ಮೇ.24) ನ್ಯಾಯಾಲಯ ಪ್ರಕಟಿಸಲಿದೆ. 

ಪ್ರಕರಣದ ಏಕೈಕ ಆರೋಪಿಯಾಗಿರುವ ಕಿರಣ್‌ಗೆ ಭಾರತೀಯ ದಂಡ ಸಂಹಿತೆ(ಐಪಿಸಿ) ಕ್ರಮವಾಗಿ 304 ಬಿ (ವರದಕ್ಷಿಣೆ ಸಾವು), 498 ಎ (ವರದಕ್ಷಿಣೆ ಕಿರುಕುಳ) ಮತ್ತು 306 (ಆತ್ಮಹತ್ಯೆಗೆ ಪ್ರಚೋದನೆ) ಈ ಮೂರು ಸೆಕ್ಷನ್‌ಗಳ ಅಡಿಯಲ್ಲಿ ಶಿಕ್ಷೆ ವಿಧಿಸಲಾಗಿದೆ. ವಿಸ್ಮಯಾ  ಸಾವಿಗೂ  ಮುನ್ನ ವಿಸ್ಮಯಾ ಹಾಗೂ ಕಿರಣ್ ನಡುವಿನ ಅವರ ಫೋನ್ ಸಂಭಾಷಣೆಯ ರೆಕಾರ್ಡಿಂಗ್ ಸೇರಿದಂತೆ ಡಿಜಿಟಲ್ ಸಾಕ್ಷ್ಯಗಳು ಪ್ರಕರಣದಲ್ಲಿ ಪ್ರಮುಖ ಪುರಾವೆಯಾಗಿ ಹೊರ ಹೊಮ್ಮಿದವು.

ವೈದ್ಯೆ ಪತ್ನಿ ಸುಸೈಡ್‌ಗೆ ಕಾರಣವಾಗಿದ್ದ ಗಂಡ ಸರ್ಕಾರಿ ಕೆಲಸದಿಂದ ವಜಾ

ವರದಕ್ಷಿಣೆ ಕಿರುಕುಳದ ನಂತರ ಆಯುರ್ವೇದ ವೈದ್ಯಕೀಯದಲ್ಲಿ ಬ್ಯಾಚುಲರ್ ಆಫ್ ಆಯುರ್ವೇದಿಕ್ ಮೆಡಿಸಿನ್ ಮತ್ತು ಸರ್ಜರಿ ವಿಭಾಗದ ವಿದ್ಯಾರ್ಥಿನಿ  24 ವರ್ಷದ ವಿಸ್ಮಯ ಕಳೆದ ವರ್ಷ ಜೂನ್‌ನಲ್ಲಿ ತನ್ನ ಗಂಡನ ಮನೆಯಲ್ಲಿ ನಿಗೂಢವಾಗಿ ಸಾವಿಗೀಡಾಗಿದ್ದರು.  ಇದು ಸಾಮಾಜಿಕ ಪಿಡುಗು ವರದಕ್ಷಿಣೆ ವಿರುದ್ಧದ ತೀರ್ಪು, ಒಬ್ಬ ವ್ಯಕ್ತಿಯ ವಿರುದ್ಧದ ತೀರ್ಪು ಅಲ್ಲ. ಕಿರಣ್‌ಗೆ ಅಪರಾಧಕ್ಕೆ ಗರಿಷ್ಠ ಶಿಕ್ಷೆಯಾಗಬೇಕೆಂದು ನಾವೆಲ್ಲರೂ ನಿರೀಕ್ಷಿಸುತ್ತಿದ್ದೇವೆ ಎಂದು ಪ್ರಕರಣದ ವಿಶೇಷ ಸರ್ಕಾರಿ ಅಭಿಯೋಜಕ (ಎಸ್‌ಪಿಪಿ) ಜಿ ಮೋಹನರಾಜ್ (G Mohanraj) ಹೇಳಿದ್ದಾರೆ.

ತನಿಖಾಧಿಕಾರಿಗಳು ಮತ್ತು ವಿಸ್ಮಯಾ ಅವರ ತಂದೆ ಕೂಡ ತೀರ್ಪಿನ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ನ್ಯಾಯಾಲಯದ ತೀರ್ಪಿನಿಂದ ನನಗೆ ಸಂತೋಷವಾಗಿದೆ. ನನ್ನ ಮಗಳಿಗೆ ನ್ಯಾಯ ಸಿಕ್ಕಿದೆ ಎಂದು ಸೋಮವಾರ ನ್ಯಾಯಾಲಯಕ್ಕೆ ಹಾಜರಾದ ವಿಸ್ಮಯಾ ಅವರ ತಂದೆ ತ್ರಿವಿಕ್ರಮನ್ ನಾಯರ್ (Thrivikraman Nair)  ಹೇಳಿದರು.

ಶವವಾಗಿ ಪತ್ತೆಯಾದ ಕೇರಳದ ಯುವ ರೂಪದರ್ಶಿ: ಪತಿ ಪೊಲೀಸ್ ಕಸ್ಟಡಿಗೆ

ಕೊಲ್ಲಂನಲ್ಲಿ ಆರ್‌ಟಿಒ ಇಲಾಖೆಯಲ್ಲಿ ಸಹಾಯಕ ಮೋಟಾರು ವಾಹನ ನಿರೀಕ್ಷಕರಾಗಿದ್ದ ವಿಸ್ಮಯಾ ಅವರ ಪತಿ ಕಿರಣ್ ಕುಮಾರ್ (Kiran Kumar) ಅವರು ಪ್ರಕರಣದ ಏಕೈಕ ಆರೋಪಿಯಾಗಿದ್ದಾರೆ. ಕಿರಣ್ ಬಂಧನದ ನಂತರ, ಸಾರಿಗೆ ವಾಹನ ಇಲಾಖೆ ಮೊದಲು ಆತನನ್ನು ಸೇವೆಯಿಂದ ಅಮಾನತುಗೊಳಿಸಿತು ಮತ್ತು ನಂತರ ವಜಾಗೊಳಿಸಿತು. ದಕ್ಷಿಣ ವಲಯ ಐಜಿ ಹರ್ಷಿತಾ ಅತ್ತಲ್ಲೂರಿ (Harshita Athalluri) ನೇತೃತ್ವದಲ್ಲಿ ಈ ಪ್ರಕರಣದ ತನಿಖೆ ನಡೆದಿತ್ತು.

ವಿಚಾರಣೆ ವೇಳೆ ನ್ಯಾಯಾಲಯದಲ್ಲಿ 42 ಸಾಕ್ಷಿಗಳು, 102 ದಾಖಲೆಗಳು ಮತ್ತು ಹಲವಾರು ಕರೆ ದಾಖಲೆಗಳನ್ನು ಪರಿಶೀಲಿಸಲಾಗಿತ್ತು. ಕಿರಣ್ ಕುಮಾರ್ ವರದಕ್ಷಿಣೆಗೆ ಒತ್ತಾಯಿಸಿ, ದೈಹಿಕ ಹಲ್ಲೆ, ಆತ್ಮಹತ್ಯೆಗೆ ಪ್ರಚೋದನೆ, ಗಾಯಗೊಳಿಸುವುದು ಮತ್ತು ಪ್ರಾಸಿಕ್ಯೂಷನ್ ನಿಂದ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿತ್ತು. ಆರೋಪಿ ಪರ ಪ್ರತಾಪ ಚಂದ್ರನ್ ಪಿಳ್ಳೆ (Prathapa Chandran Pillai) ಹಾಜರಾಗಿದ್ದರು.

ಆರೋಪಿಯ ತಂದೆ ಸದಾಶಿವನ್ ಪಿಳ್ಳೈ (Sadhasivan Pillai,), ತಾಯಿ ಬಿಂಧು ಕುಮಾರಿ (Bindhu Kumari), ಸಹೋದರಿ ಕೀರ್ತಿ (Keerthi) ಮತ್ತು ಆಕೆಯ ಪತಿ ಮುಖೇಶ್ ಎಂ (Mukesh M) ನ್ಯಾಯಾಲಯಕ್ಕೆ ಹಾಜರಾಗಿದ್ದರು.
 

Follow Us:
Download App:
  • android
  • ios