ದಾಂಡೇಲಿಯಲ್ಲಿ ಕಾಡುಪ್ರಾಣಿಯನ್ನು ಬೇಟೆಯಾಡಿ, ಅದರ ಮಾಂಸವನ್ನು ಬೈಕ್‌ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಬರ್ಚಿ ರಸ್ತೆಯಲ್ಲಿ ತಪಾಸಣೆ ವೇಳೆ ಆರೋಪಿ ರಾಜು ಮಂಜು ಪೋತದಾರ ಸಿಕ್ಕಿಬಿದ್ದಿದ್ದು,  ಮಾಂಸ ಹಾಗೂ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಕಾರವಾರ, ಉತ್ತರಕನ್ನಡ (ಜ.22): ವನ್ಯಜೀವಿಗಳ ತಾಣವಾಗಿರುವ ದಾಂಡೇಲಿಯಲ್ಲಿ ಕಾಡುಪ್ರಾಣಿಗಳನ್ನು ಬೇಟೆಯಾಡಿ ಬೈಕ್‌ನಲ್ಲಿ ಮಾಂಸ ಸಾಗಿಸುತ್ತಿದ್ದ ಘಟನೆ ಬೆಳಕಿಗೆ ಬಂದಿದ್ದು, ಆರೋಪಿಯನ್ನ ಮಾಂಸದ ಚೀಲ ಸಮೇತ ಬಂಧಿಸಿದ್ದಾರೆ.

ಬರ್ಚಿ ರಸ್ತೆಯಲ್ಲಿ ಅರಣ್ಯಾಧಿಕಾರಿಗಳಿಗೆ ಸಿಕ್ಕಿಬಿದ್ದ ಆರೋಪಿ

ದಾಂಡೇಲಿ ನಗರದ ಬರ್ಚಿ ರಸ್ತೆಯಲ್ಲಿ ದ್ವಿಚಕ್ರ ವಾಹನವೊಂದರಲ್ಲಿ ಸಂಶಯಾಸ್ಪದವಾಗಿ ಸಾಗುತ್ತಿದ್ದ ವ್ಯಕ್ತಿಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ತಡೆದು ತಪಾಸಣೆ ನಡೆಸಿದ್ದಾರೆ. ಈ ವೇಳೆ ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಕಾಡುಪ್ರಾಣಿಯ ಮಾಂಸವನ್ನು ಸಾಗಿಸುತ್ತಿರುವುದು ಪತ್ತೆಯಾಗಿದೆ. ಕೂಡಲೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಮಾಂಸದ ಸಮೇತ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ದಾಂಡೇಲಿ ಮೂಲದ ಆರೋಪಿ ಅರೆಸ್ಟ್; ವಾಹನ ವಶಕ್ಕೆ

ಬಂಧಿತ ಆರೋಪಿಯನ್ನು ದಾಂಡೇಲಿ ಕೆರವಾಡದ ನಿವಾಸಿ ರಾಜು ಮಂಜು ಪೋತದಾರ ಎಂದು ಗುರುತಿಸಲಾಗಿದೆ. ಈತ ತನ್ನ ದ್ವಿಚಕ್ರ ವಾಹನದ ಮೂಲಕ ಕಾಡುಪ್ರಾಣಿಯ ಮಾಂಸವನ್ನು ನಗರದ ವಿವಿಧೆಡೆ ಮಾರಾಟ ಮಾಡಲು ಅಥವಾ ಸಾಗಿಸಲು ಯೋಜಿಸಿದ್ದ ಎನ್ನಲಾಗಿದೆ. ಘಟನಾ ಸ್ಥಳದಲ್ಲಿ ಸಾಗಾಟಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಹಾಗೂ ಮಾಂಸದ ಮಾಲನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಕೇಸ್

ಬಂಧಿತ ಆರೋಪಿ ರಾಜು ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ವಿವಿಧ ಕಲಂಗಳಲ್ಲಿ ಪ್ರಕರಣ ದಾಖಲಿಸಲಾಗಿದೆ. ಅರಣ್ಯ ಇಲಾಖೆಯ ನಿಯಮಾವಳಿಗಳಂತೆ ಕ್ರಮ ಕೈಗೊಂಡಿರುವ ಅಧಿಕಾರಿಗಳು, ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ಕಾಡುಪ್ರಾಣಿಗಳ ಬೇಟೆ ಮತ್ತು ಮಾಂಸ ಮಾರಾಟದ ಜಾಲದ ಬಗ್ಗೆ ತನಿಖೆ ಮುಂದುವರಿದಿದೆ.

ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ದಕ್ಷ ಅಧಿಕಾರಿಗಳ ತಂಡ

ಈ ಯಶಸ್ವಿ ಕಾರ್ಯಾಚರಣೆಯನ್ನು ಉಪ ವಲಯ ಅರಣ್ಯಾಧಿಕಾರಿ ಸಂದೀಪ್ ನಾಯ್ಕ ಅವರ ನೇತೃತ್ವದಲ್ಲಿ ನಡೆಸಲಾಯಿತು. ತಂಡದಲ್ಲಿ ಸಿಬ್ಬಂದಿಗಳಾದ ಲೋಕೇಶ, ಬಸಪ್ಪ ನ್ಯಾಮಗೌಡ, ಜ್ಯೋತಿ ನಂದಿಕೋಡ ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿಗಳಿದ್ದರು.