ಶಿವಮೂರ್ತಿ ಮುರುಘಾ ಶರಣರ ಮೇಲೆ ಈಗಾಗಲೇ ಫೋಕ್ಸೋ ಕಾಯ್ದೆಯಡಿ ದೂರು ದಾಖಲಾಗಿದೆ. ಆರೋಪ ಮಾಡಿರುವ ಇಬ್ಬರು ಸಂತ್ರಸ್ತ ಬಾಲಕಿಯರಲ್ಲಿ ಒಬ್ಬಾಕೆ ಪರಿಶಿಷ್ಟ ಜಾತಿಗೆ ಸೇರಿದ್ದಾರೆ. 

ಚಿತ್ರದುರ್ಗ(ಆ.31): ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಶಿವಮೂರ್ತಿ ಮುರುಘಾ ಶರಣರ ಮೇಲೆ ಇದೀಗ ಅಟ್ರಾಸಿಟಿ (ದಲಿತರ ಮೇಲಿನ ದೌರ್ಜನ್ಯ ತಡೆ) ಕಾಯ್ದೆಯಡಿ ದೂರು ದಾಖಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪರಶುರಾಂ ತಿಳಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಶಿವಮೂರ್ತಿ ಮುರುಘಾ ಶರಣರ ಮೇಲೆ ಈಗಾಗಲೇ ಫೋಕ್ಸೋ ಕಾಯ್ದೆಯಡಿ ದೂರು ದಾಖಲಾಗಿದೆ. ಆರೋಪ ಮಾಡಿರುವ ಇಬ್ಬರು ಸಂತ್ರಸ್ತ ಬಾಲಕಿಯರಲ್ಲಿ ಒಬ್ಬಾಕೆ ಪರಿಶಿಷ್ಟ ಜಾತಿಗೆ ಸೇರಿದ್ದಾರೆ. ಹಾಗಾಗಿ ಪರಿಶಿಷ್ಟಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ಪ್ರತಿಬಂಧಕ ಅಧಿನಿಯಮದ ಕಲಂ 3 ಕ್ಲಾಸ್‌(1) ಸಬ್‌ ಕ್ಲಾಸ್‌ ಡಬ್ಲ್ಯುಯು(1)(2), 3 ಕ್ಲಾಸ್‌(2)ಗಳನ್ನು ಹೆಚ್ಚುವರಿಯಾಗಿ ಅಳವಡಿಸಿಕೊಂಡು ತನಿಖೆ ನಡೆಸುವ ಬಗ್ಗೆ ನ್ಯಾಯಾಲಯಕ್ಕೆ ಮನವಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಮುರುಘಾ ಶ್ರೀಗಳ ಮೇಲೆ ಷಡ್ಯಂತ್ರ: ಸಂಗನಬಸವ ಸ್ವಾಮೀಜಿ

ಜಡ್ಜ್‌ ಎದುರು 5.5 ತಾಸು ಬಾಲಕಿಯರ ಹೇಳಿಕೆ ದಾಖಲು

ಚಿತ್ರದುರ್ಗ: ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಶಿವಮೂರ್ತಿ ಮುರುಘಾಶರಣರ ವಿರುದ್ಧ ಪೋಕ್ಸೋ ಕಾಯ್ದೆಯಡಿ ದೂರು ನೀಡಿರುವ ಸಂತ್ರಸ್ತ ಬಾಲಕಿಯರು ಮಂಗಳವಾರ ಇಲ್ಲಿನ ಒಂದನೇ ಅಪರ ಸಿವಿಲ್‌ ನ್ಯಾಯಾಧೀಶರ ಮುಂದೆ ಸಿಆರ್‌ಪಿಸಿ 164 ಹೇಳಿಕೆ ನೀಡಿದರು. ಸುಮಾರು ಐದೂವರೆ ತಾಸುಗಳ ಕಾಲ ಅವರ ಹೇಳಿಕೆ ದಾಖಲಿಸಿಕೊಳ್ಳಲಾಗಿದ್ದು, ಸಂಪೂರ್ಣ ವಿಡಿಯೋ ರೆಕಾರ್ಡಿಂಗ್‌ ಮಾಡಿಕೊಳ್ಳಲಾಗಿದೆ.

ಮುರುಘಾಶರಣರಿಗೆ 20+ ಶ್ರೀಗಳ ಬೆಂಬಲ

ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ಬಸವಕೇಂದ್ರ ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರಿಗೆ ರಾಜ್ಯದ ಇಪ್ಪತ್ತಕ್ಕೂ ಹೆಚ್ಚು ಮಠಾಧೀಶರು ನೈತಿಕ ಬೆಂಬಲ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕನಕಪುರ ಮರಳಗವಿ ಮಠದ ಶಿವರುದ್ರಸ್ವಾಮೀಜಿ, ಶಿವಮೂರ್ತಿ ಮುರುಘಾಶರಣರು ವೈಚಾರಿಕ ಕ್ರಾಂತಿ ನಾಡಿನ ಗಮನ ಸೆಳೆದಿದ್ದಾರೆ. ಶ್ರೀಮಠದ ಅಧಿಕಾರ ವಹಿಸಿಕೊಂಡ ನಂತರ ಸರ್ವತೋಮುಖ ಬೆಳವಣಿಗೆಗೆ ಮುಂಚೂಣಿ ವಹಿಸಿದ್ದು ಜಾಗಜ್ಜಾಹೀರು. ಇವರ ವೈಚಾರಿಕ ಬೆಳವಣಿಗೆ ಸಹಿಸದ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಸ್ವಾಮೀಜಿಗಳ ಮುಖಕ್ಕೆ ಕಪ್ಪು ಮಸಿ ಬಳಿಯವ ಷಡ್ಯಂತ್ರ ಮಾಡಿದ್ದಾರೆ. ಶಿವಮೂರ್ತಿ ಮುರುಘಾ ಶರಣರು ಆರೋಪ ಮುಕ್ತರಾಗಿ ಹೊರಬರುತ್ತಾರೆ. ಸತ್ಯ ಹೊರ ಬರುತ್ತದೆ. ಬೆಂಬಲದ ಹೋರಾಟದಲ್ಲಿ ಎಲ್ಲ ಶಾಖಾ ಮಠಾಧೀಶರು ಅವರ ಜೊತೆ ಇರುತ್ತಾರೆ. ಕೆಲ ಭಕ್ತರು ಇರುವ ಸ್ಥಳದಲ್ಲಿ ಬೆಂಬಲ ಸೂಚಿಸುತ್ತಿದ್ದಾರೆ ಎಂದರು.

ಮುರುಘಾ ಶ್ರೀಗಳಿಗೆ ಬಂಧನ ಭೀತಿ, ಪೋಕ್ಸೋ ಕೇಸಲ್ಲಿ ಸಂಧಾನಕ್ಕೆ ಅವಕಾಶ ಇದೆಯಾ..?

ಪ್ರಕರಣದಲ್ಲಿ ಇಬ್ಬರು ವಿದ್ಯಾರ್ಥಿನಿಯರು ಇದ್ದಾರೆ. ಅವರಲ್ಲಿ ಒಬ್ಬರು ದಲಿತ ಹೆಣ್ಣು ಮಗಳು. ಬಸವತತ್ವ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಠಾಧಿಪತಿಗಳು ಸಂತ್ರಸ್ತ ಹೆಣ್ಣು ಮಕ್ಕಳ ಪರವಾಗಿ ನಿಲ್ಲುವ ಬದಲು ಶರಣರ ಪರವಾಗಿ ನಿಲ್ಲುವುದು ಸರಿಯೇ ಎಂಬ ಪ್ರಶ್ನೆಗೆ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಪ್ರತಿಕ್ರಿಯಿಸಲಾರೆ ಎಂದು ಹೇಳಿ ಜಾರಿಕೊಂಡರು.

ಮಾದಾರ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಕುಂಚಿಟಿಗ ಪೀಠದ ಶಾಂತವೀರ ಸ್ವಾಮೀಜಿ, ಮಾಚಿದೇವ ಸ್ವಾಮೀಜಿ, ಶಿವಬಸವ ಸ್ವಾಮೀಜಿ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಶ್ರೀಗಳು ಉಪಸ್ಥಿತರಿದ್ದರು.