ಲಾಕರ್‌ ಕೀ ಕಳೆದಿದೆ ಎಂದು ನಾಟಕ| ದೇವಸ್ಥಾನಕ್ಕೆ ಸೇರಿದ ಆಭರಣವನ್ನು ದುರುಪಯೋಗಪಡಿಸಿಕೊಂಡಿರುವ ಆರ್ಚಕರ ವಿರುದ್ಧ ದೂರು ದಾಖಲು| ವಿನಾಯಕ ದೇವಾಲಯ ಆರ್ಚಕ ಜೆ.ಆರ್‌.ಗಿರೀಶ್‌ ವಿರುದ್ಧ ಕೇಳಿ ಬಂದ ಆರೋಪ| 

ಬೆಂಗಳೂರು(ಆ.22): ದೇವಾಲಯದ ಆರ್ಚಕರೇ ದೇವರ ಲಕ್ಷಾಂತರ ಮೌಲ್ಯದ ಆಭರಣವನ್ನು ಅಕ್ರಮವಾಗಿ ಅಡಮಾನವಿಟ್ಟು ಹಣ ಪಡೆದಿದ್ದ ಘಟನೆ ನಗರದಲ್ಲಿ ನಡೆದಿದೆ.

Add Asianetnews Kannada as a Preferred SourcegooglePreferred

ಬನಶಂಕರಿ ಮೂರನೇ ಹಂತದ ಕೆಂಪೇಗೌಡ ಲೇಔಟ್‌ನ ವರಸಿದ್ದಿ ವಿನಾಯಕ ದೇವಾಲಯ ಆರ್ಚಕ ಜೆ.ಆರ್‌.ಗಿರೀಶ್‌ ವಿರುದ್ಧ ಆರೋಪ ಬಂದಿದ್ದು, ಈ ಸಂಬಂಧ ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಗೆ ದೇವಾಲಯದ ಟ್ರಸ್ಟಿ ಎಚ್‌.ಆರ್‌.ಸತ್ಯನಾರಾಯಣ್‌ ದೂರು ನೀಡಿದ್ದಾರೆ. ಅದರನ್ವಯ ಎಫ್‌ಐಆರ್‌ ದಾಖಲಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬಾಡಿಗೆಗೆ ಲೋಡ್‌ ಕೊಡದ್ದಕ್ಕೆ ಚೂರಿಯಿಂದ ಇರಿದು ಹತ್ಯೆ

ಹಲವು ವರ್ಷಗಳಿಂದ ವರಸಿದ್ಧಿ ವಿನಾಯಕ ದೇವಾಲಯದಲ್ಲಿ ಗಿರೀಶ್‌ ಆರ್ಚಕರಾಗಿದ್ದು, ಪ್ರತಿದಿನ ಪೂಜಾ ಕೈಂಕರ್ಯ ನಡೆಸುತ್ತಿದ್ದಾರೆ. ದೇವಾಲಯಕ್ಕೆ ಭಕ್ತರು ಸುಮಾರು 920 ಗ್ರಾಂ ತೂಕದ ಆಭರಣಗಳನ್ನು ನೀಡಿದ್ದರು. ಅವುಗಳನ್ನು ಅರ್ಚಕರ ಸುಪರ್ದಿಗೆ ದೇವಾಲಯದ ಟ್ರಸ್ಟಿ ನೀಡಿತ್ತು. 2019ರ ಜೂನ್‌ನಲ್ಲಿ ದೇವಸ್ಥಾನದೊಳಗೆ ಲಾಕರ್‌ ಮಾಡಿಸಿ ಅದರಲ್ಲಿ ಚಿನ್ನದ ಒಡವೆಗಳನ್ನು ಇಟ್ಟು ಆರ್ಚಕರಿಗೆ ಟ್ರಸ್ಟಿನ ಸದಸ್ಯರು ಕೀ ಕೊಟ್ಟಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಇದೇ ಜೂನ್‌ನಲ್ಲಿ ಆಭರಣ ಪರಿಶೀಲಿಸುವ ಉದ್ದೇಶದಿಂದ ಲಾಕರ್‌ ತೆಗೆಯುವಂತೆ ಆರ್ಚಕರಿಗೆ ಟ್ರಸ್ಟ್‌ ಸೂಚಿಸಿದೆ. ಆದರೆ ಲಾಕರ್‌ ಕೀ ಕಳೆದು ಹೋಗಿದೆ ಎಂದು ಸಬೂಬು ಹೇಳುತ್ತಲೇ ತಪ್ಪಿಸಿಕೊಳ್ಳುತ್ತಿದ್ದರು. ಕೊನೆಗೆ ಅನುಮಾನ ಬಂದು ಗಿರೀಶ್‌ ಭಟ್‌ ಸಮುಖದಲ್ಲಿಯೇ ಲಾಕರ್‌ ಒಡೆದು ನೋಡಿದಾಗ ದೇವರ ಆಭರಣ ನಾಪತೆಯಾಗಿದ್ದವು. ಈ ಬಗ್ಗೆ ಪ್ರಶ್ನಿಸಿದಾಗ ಗಿರೀಶ್‌ ಭಟ್‌, ತುರ್ತು ಹಣದ ಅಗತ್ಯವಿದ್ದ ಕಾರಣಕ್ಕೆ ಗಿರವಿ ಇಟ್ಟಿರುವುದಾಗಿ ಹೇಳಿದ್ದರು. ದೇವಸ್ಥಾನಕ್ಕೆ ಸೇರಿದ ಆಭರಣವನ್ನು ದುರುಪಯೋಗಪಡಿಸಿಕೊಂಡಿರುವ ಆರ್ಚಕರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಟ್ರಸ್ಟ್‌ ಸದಸ್ಯ ಸತ್ಯನಾರಾಯಣ ದೂರು ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.