Asianet Suvarna News Asianet Suvarna News

ಚಂದ್ರು ಸಾವಿನ ಪ್ರಕರಣದ ತನಿಖೆ ಸಿಬಿಐಗೆ ಒಪ್ಪಿಸಿ

  • .ಚಂದ್ರು ಸಾವಿನ ಪ್ರಕರಣದ ತನಿಖೆ ಸಿಬಿಐಗೆ ಒಪ್ಪಿಸಿ
  • ಈ ವಿಚಾರದಲ್ಲಿ ಪಕ್ಷಾತೀತವಾಗಿ ಶಾಸಕರು, ಮತ್ತವರ ಕುಟುಂಬದ ಜೊತೆಗೆ ಇದ್ದೇವೆ: ಗುರುಪಾದಯ್ಯ ಮಠದ್‌
Chandru death case Hand over the investigation of  CBI rav
Author
First Published Nov 9, 2022, 8:47 AM IST

ದಾವಣಗೆರೆ (ನ.9) :ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಸಹೋದರ ಎಂ.ಪಿ.ರಮೇಶ್‌ ಪುತ್ರ ಚಂದ್ರಶೇಖರ ಸಾವಿನ ಪ್ರಕರಣದ ತನಿಖೆಯ ಸಿಬಿಐಗೆ ಒಪ್ಪಿಸುವಂತೆ ಆಮ್‌ ಆದ್ಮಿ ಪಕ್ಷದ ಹೊನ್ನಾಳಿ ತಾಲೂಕು ಘಟಕ ಒತ್ತಾಯಿಸಿದೆ.

Hindu word Row: ಜಾರಕಿಹೊಳಿಯವರನ್ನ ಪಕ್ಷದಿಂದ ಉಚ್ಛಾಟಿಸಲಿ ಎಂದ ಎಂಪಿ ರೇಣುಕಾಚಾರ್ಯ

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಆಪ್‌ ಹೊನ್ನಾಳಿ ತಾಲೂಕು ಅಧ್ಯಕ್ಷ ಗುರುಪಾದಯ್ಯ ಮಠದ್‌, ಚಂದ್ರಶೇಖರ ಸಾವಿನ ವಿಚಾರದಲ್ಲಿ ಕ್ಷೇತ್ರದ ಎಲ್ಲಾ ಪಕ್ಷ, ಸಂಘಟನೆಗಳು ಮತ್ತು ಜನತೆ ಪಕ್ಷಾತೀತವಾಗಿ ಶಾಸಕರು, ಮತ್ತವರ ಕುಟುಂಬದ ಜೊತೆಗೆ ನಿಂತಿದ್ದೇವೆ ಎಂದರು. ಚಂದ್ರಶೇಖರ ಪಕ್ಷ, ಜಾತಿ, ರಾಜಕೀಯ ಭಿನ್ನಾಭಿಪ್ರಾಯ ಎಲ್ಲವನ್ನೂ ಮೀರಿ, ಪ್ರತಿಯೊಬ್ಬರ ಸ್ನೇಹ, ವಿಶ್ವಾಸ ಗಳಿಸಿದ್ದಂತಹ ಉತ್ಸಾಹಿ ಯುವಕ. ಶಾಸಕರ ಕುಟುಂಬ ಮತ್ತು ಕ್ಷೇತ್ರದ ಜನತೆಗೆ ನ್ಯಾಯ ಕೊಡಿಸಬೇಕಾದ್ದು ಸರ್ಕಾರಗಳ ಆದ್ಯ ಕರ್ತವ್ಯ. ತುಂಗಾ ಮೇಲ್ದಂಡೆ ಕಾಲುವೆಯಲ್ಲಿ ಕಾರಿನಲ್ಲಿ ಶವವಾಗಿ ಪತ್ತೆಯಾದ ಚಂದ್ರು ಸಾವು ಅಪಘಾತದ್ದೋ ಅಥವಾ ವ್ಯವಸ್ಥಿತ ಕೊಲೆಯೋ ಎಂಬ ಗೊಂದಲದಲ್ಲಿದ್ದೇವೆ ಎಂದು ಹೇಳಿದರು.

ಸ್ವತಃ ಶಾಸಕ ರೇಣುಕಾಚಾರ್ಯರು ಚಂದ್ರು ಸಾವು ವ್ಯವಸ್ಥಿತ ಕೊಲೆಯೆಂಬುದಾಗಿ ಹೇಳಿದ್ದಾರೆ. ಮೃತ ಚಂದ್ರು ತಂದೆ ರಮೇಶ ಸೇರಿದಂತೆ ಕುಟುಂಬ ಸದಸ್ಯರು ಚಂದ್ರುವನ್ನು ಕೊಲೆ ಮಾಡಲಾಗಿದೆಯೆನ್ನುತ್ತಿವೆ. ಚಂದ್ರು ಸಾವಿನ ಪ್ರಕರಣದಲ್ಲಿ ರಾಜ್ಯ ಪೊಲೀಸ್‌ ಇಲಾಖೆ ಸರಿಯಾಗಿ ತನಿಖೆ ಕೈಗೊಂಡಿಲ್ಲ. ಮೇಲಾಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ತನಿಖೆ ಪೂರ್ಣಗೊಳ್ಳುವ ಮುಂಚೆಯೇ ಇದೊಂದು ಅಪಘಾತವೆಂಬುದಾಗಿ ಬಿಂಬಿಸುವ ಹೇಳಿಕೆ ನೀಡುತ್ತಿದ್ದಾರೆಂಬುದು ಶಾಸಕ ಕುಟುಂಬದ ಆರೋಪ ಎಂದು ತಿಳಿಸಿದರು.

ದಿನಕ್ಕೊಂದು ಊಹಾಪೋಹ:

ಪೊಲೀಸರ ತನಿಖಾ ವೈಫಲ್ಯದಿಂದ ರೋಸಿ ಹೋದ ಶಾಸಕರು ಪದೇಪದೇ ಪೊಲೀಸ್‌ ಇಲಾಖೆ ಮೇಲೆ ಹರಿಹಾಯುತ್ತಿರುವುದೂ ಮಾಧ್ಯಮಗಳಲ್ಲಿ ಬರುತ್ತಿದೆ. ಈ ಎಲ್ಲಾ ಬೆಳವಣಿಗೆಗಳಿಂದಾಗಿ ರಾಜ್ಯದಲ್ಲಿ ಮತ್ತು ಕ್ಷೇತ್ರದಲ್ಲಿ ದಿನಕ್ಕೊಂದು ಊಹಾಪೋಹಗಳು ಕೇಳಿ ಬರುತ್ತಿವೆ. ಹಿಂದೆ ನಡೆದ ಪ್ರವೀಣ್‌ ನೆಟ್ಟಾರು, ಶಿವಮೊಗ್ಗದ ಹರ್ಷ ಕೊಲೆ ಪ್ರಕರಣಗಳನ್ನು ಎನ್‌ಐಎಗೆ ವಹಿಸಿರುವುದರಿಂದ ತನಿಖೆ ಸರಿಯಾದ ದಿಕ್ಕಿನಲ್ಲಿ ನಡೆದು, ಆರೋಪಿಗಳ ಹೆಡೆಮುರಿ ಕಟ್ಟಲಾಗಿದೆ. ಈ ಮೂಲಕ ನೊಂದ ಕುಟುಂಬಗಳಿಗೆ ನ್ಯಾಯ ಸಿಕ್ಕಂತಾಗಿದೆ ಎಂದು ಹೇಳಿದರು.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಶಾಸಕ ರೇಣುಕಾಚಾರ್ಯ ತಮ್ಮನ ಮಗ ಚಂದ್ರು ಸಾವಿನ ಪ್ರಕರಣವನ್ನೂ ಅತ್ಯಂತ ಗಂಭೀರವಾಗಿ ಪರಿಗಣಿಸಿ, ಕುಟುಂಬಸ್ಥರ ಅಭಿಪ್ರಾಯ ಪಡೆದು, ಆದಷ್ಟುಬೇಗನೆ ಚಂದ್ರಶೇಖರ ಸಾವಿನ ಪ್ರಕರಣವನ್ನು ಕೇಂದ್ರ ತನಿಖಾ ಸಂಸ್ಥೆಯಾದ ಸಿಬಿಐಗೆ ಒಪ್ಪಿಸಬೇಕು. ಈ ಮೂಲಕ ಚಂದ್ರು ಸಾವಿನ ಸತ್ಯಾಸತ್ಯತೆಯ ಕ್ಷೇತ್ರದ ಜನರ ಮುಂದೆ ಇಡಬೇಕು ಎಂದು ಗುರುಪಾದಯ್ಯ ಸರ್ಕಾರಕ್ಕೆ ಒತ್ತಾಯಿಸಿದರು. ಪಕ್ಷದ ಜಿಲ್ಲಾಧ್ಯಕ್ಷ ಕೆ.ಎಲ್‌.ರಾಘವೇಂದ್ರ, ಜಿ.ಎಲ್‌.ಗದಿಗೇಶ, ಆರುಂಡಿ ನಾಗರಾಜ, ಆದಿಲ್‌ ಖಾನ್‌, ಬಸವರಾಜ ಹನುಮನಹಳ್ಳಿ, ಹರೀಶ ಜನನಿ, ಮಂಜುನಾಥ ಇತರರು ಇದ್ದರು.

ಶಾಸಕ ರೇಣುಕಾಚಾರ್ಯ ನಿವಾಸಕ್ಕೆ ವಿವಿಧ ಮಠಾಧೀಶರ ಭೇಟಿ

ಶಾಸಕ ಎಂ.ಪಿ.ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರಶೇಖರ್‌ ಸಾವಿನ ಹಿನ್ನೆಲೆಯಲ್ಲಿ ವಿವಿಧ ಮಠಾಧೀಶರ ನಿಯೋಗ ಶಾಸಕರ ನಿವಾಸಕ್ಕೆ ಭೇಟಿ ನೀಡಿ ಅವರ ಕುಟುಂಬದವರಿಗೆ ಧೈರ್ಯ ತುಂಬಿ ಸಾಂತ್ವಾನ ಹೇಳಿದರು.ಈ ವೇಳೆ ಶಾಸಕ ಎಂ.ಪಿ.ರೇಣುಕಾಚಾರ್ಯ ಚಂದ್ರು ಕಾಣೆಯಾದ ದಿನದಿಂದ ಮೃತಪಟ್ಟದಿನದವರೆಗಿನ ಎಲ್ಲಾ ಬೆಳವಣಿಗೆ ಬಗ್ಗೆ ಶ್ರೀಗಳ ನಿಯೋಗಕ್ಕೆ ಸಂಪೂರ್ಣ ಮಾಹಿತಿ ನೀಡಿದರು. ಶ್ರೀಗಳೆಲ್ಲರೂ ನಿಮಗೆ ದೇವರು ಒಳ್ಳೆಯದು ಮಾಡುತ್ತಾನೆ ಧೃತಿಗೆಡಬೇಡಿ, ಸರ್ಕಾರವೂ ನಿಮ್ಮ ಬೆನ್ನಿಗಿದೆ ಎಂದರು. ಮಂತ್ರಘೋಷದ ಮೂಲಕ ಅಗಲಿದ ಚಂದ್ರಶೇಖರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಬಳಿಕ ಶಾಸಕ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಶ್ರದ್ಧಾಂಜಲಿ ಕಾರ್ಯಕ್ರಮ ಏರ್ಪಡಿಸುತ್ತೇವೆ, ತಮಗೆಲ್ಲರಿಗೂ ಆಹ್ವಾನ ನೀಡಲಾಗುವುದು ತಾವುಗಳೆಲ್ಲರೂ ಆಗಮಿಸಬೇಕು ಎಂದು ಶ್ರೀಗಳಲ್ಲಿ ಮನವಿ ಮಾಡಿದರು.

ಕುಂಚಿಟಿಗ ಮಠದ ಹೊಸದುರ್ಗದ ಡಾ.ಶಾಂತವೀರ ಸ್ವಾಮೀಜಿ, ಹರಿಹರ ಪಂಚಮಸಾಲಿ ಪೀಠದ ಶ್ರೀವಚನನಾಂದ ಸ್ವಾಮೀಜಿ, ಮಾದಾರ ಚೆನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಯಾದವ ಸಂಸ್ಥಾನ ಮಠದ ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ, ಮಾಚಿದೇವ ಮಠದ ಬಸವ ಮಾಚಿದೇವ ಸ್ವಾಮೀಜಿ, ಕುಂಬಾರ ಗುಂಡಯ್ಯ ಗುರುಪೀಠದ ಕುಂಬಾರ ಗುಂಡಯ್ಯ ಸ್ವಾಮೀಜಿ, ಹಡಪದ ಗುರುಪೀಠದ ಅನ್ನದಾನಿ ಭಾರತಿ ಅಪ್ಪಣ್ಣ ಸ್ವಾಮೀಜಿ ಹಾಗೂ ಶಿವಶಕ್ತಿ ಪೀಠದ ಬಸವಪ್ರಸಾದ ಸ್ವಾಮೀಜಿ, ಸೇರಿದಂತೆ ಹಲವು ಸ್ವಾಮೀಜಿಗಳು ಶಾಸಕರ ನಿವಾಸಕ್ಕೆ ಭೇಟಿ ನೀಡಿದರು.

ಚಂದ್ರು ಹೋಗಿದ್ದು ಕ್ರೆಟಾದಲ್ಲಿ ಅಲ್ಲ: ತಂದೆ ರಮೇಶ್‌ ಸ್ಫೋಟಕ ಹೇಳಿಕೆ

ಜಗಳೂರು ಶಾಸಕ ಎಸ್‌.ರಾಮಚಂದ್ರಪ್ಪ, ರಾಜ್ಯ ಬಿಜೆಪಿ ಪ್ರಕೋಷ್ಠಗಳ ಸಂಯೋಜಕ ಭಾನುಪ್ರಕಾಶ್‌ ಸೇರಿ ಅನೇಕರು ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ನ್ಯಾಮತಿ ತಾಲೂಕಿನ ಹಲವು ಮಹಿಳೆಯರು ಮನೆಯಿಂದಲೇ ಅಡುಗೆ ಮಾಡಿ ತಂದಿದ್ದ ವಿವಿಧ ಬಗೆಯ ತಿನಿಸುಗಳ ಶಾಸಕರ ಕುಟುಂಬಸ್ಥರಿಗೆ ಸಮಾಧಾನ ಹೇಳಿ ಊಟ ಬಡಿಸಿದರು. ಮೃತ ಚಂದ್ರು ತಂದೆ ರಮೇಶ್‌, ಶಾಸಕರ ಪತ್ನಿ ಸುಮಾ ರೇಣುಕಾಚಾರ್ಯ ಹಾಗೂ ಬಿಜೆಪಿ ಮುಖಂಡರಿದ್ದರು.

Follow Us:
Download App:
  • android
  • ios