Asianet Suvarna News Asianet Suvarna News

Firing| ಕಾಲಿಗೆ ಗುಂಡಿಕ್ಕಿ ಕುಖ್ಯಾತ ರೌಡಿಶೀಟರ್‌ ಪಳನಿ ಸೆರೆ

*  ಪಳನಿ ಅಲಿಯಾಸ್‌ ಕರ್ಚಿಫ್‌ ಪಳನಿ ಬಂಧಿತ ಆರೋಪಿ
*  ಸಿಸಿಬಿ ಇನ್ಸ್‌ಪೆಕ್ಟರ್‌ ಹರೀಶ್‌ ಕುಮಾರ್‌ ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನ
*  ಆತ್ಮರಕ್ಷಣೆಗಾಗಿ ಆರೋಪಿ ಕಾಲಿಗೆ ಗುಂಡು ಹಾರಿಸಿದ ಎಸಿಪಿ ಪರಮೇಶ್ವರ್‌ 

CCB Police Firing on Rowdy sheeter Palani in Bengaluru grg
Author
Bengaluru, First Published Nov 18, 2021, 7:06 AM IST

ಬೆಂಗಳೂರು(ನ.18):  ಸೆಕ್ಯೂರಿಟಿ ಗಾರ್ಡ್‌ ಕೊಲೆ ಪ್ರಕರಣ ಹಾಗೂ ನಿರ್ಮಾಪಕನ ಕೊಲೆಗೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡು ಓಡಾಡುತ್ತಿದ್ದ ಕುಖ್ಯಾತ ರೌಡಿಶೀಟರ್‌ವೊಬ್ಬನ ಕಾಲಿಗೆ ಗುಂಡು ಹಾರಿಸಿ ಕೇಂದ್ರ ಅಪರಾಧ ವಿಭಾಗ(CCB) ಪೊಲೀಸರು ಬಂಧಿಸಿದ್ದಾರೆ.

ಎಲ್‌.ಆರ್‌.ನಗರ ಕ್ವಾಟ್ರ್ರಸ್‌ ನಿವಾಸಿ ಪಳನಿ(35) ಅಲಿಯಾಸ್‌ ಕರ್ಚಿಫ್‌ ಪಳನಿ ಬಂಧಿತ(Arrest). ಆರೋಪಿಯ(Accused) ಎಡಗಾಲಿಗೆ ಗುಂಡು ಬಿದ್ದಿದ್ದು, ಬೌರಿಂಗ್‌ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ, ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ ಎಂದು ಪೊಲೀಸ್‌(Police) ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಯು ಬೆಳ್ಳಂದೂರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಕೊಲೆ ಹಾಗೂ ಜಯನಗರ ಠಾಣೆ ವ್ಯಾಪ್ತಿಯಲ್ಲಿ ಕೊಲೆ(Murder) ಯತ್ನ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ. ಆರೋಪಿಯು ಅಶೋಕ ನಗರ ಸ್ಮಶಾನದ ಬಳಿ ಇರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಬುಧವಾರ ಮುಂಜಾನೆ ಸಿಸಿಬಿ ಎಸಿಪಿ ಪರಮೇಶ್ವರ್‌ ಅವರ ನೇತೃತ್ವದಲ್ಲಿ ಬಂಧಿಸಲು ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. 

ದೆಹಲಿ AIIMS ಬಳಿ ಫೈರಿಂಗ್, ದುಷ್ಕರ್ಮಿಯ ಕಾಲಿಗೆ ಪೊಲೀಸರ ಗುಂಡೇಟು!

ಈ ವೇಳೆ ಆರೋಪಿಯು ಡ್ರ್ಯಾಗರ್‌ನಿಂದ ಸಿಸಿಬಿ ಇನ್ಸ್‌ಪೆಕ್ಟರ್‌ ಹರೀಶ್‌ ಕುಮಾರ್‌ ಮೇಲೆ ಹಲ್ಲೆ(Assault) ನಡೆಸಿ ಕೊಲೆಗೆ ಯತ್ನಿಸಿದ್ದಾನೆ. ಈ ವೇಳೆ ಇನ್ಸ್‌ಪೆಕ್ಟರ್‌ ಎಡಗೈಗೆ ಗಾಯವಾಗಿದೆ. ಬಳಿಕ ಎಸಿಪಿ ಪರಮೇಶ್ವರ್‌ ಅವರ ಕಡೆಗೆ ತಿರುಗಿ ಡ್ರ್ಯಾಗರ್‌ನಿಂದ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಈ ವೇಳೆ ಆತ್ಮರಕ್ಷಣೆಗಾಗಿ ಎಸಿಪಿ ಪರಮೇಶ್ವರ್‌ ಆರೋಪಿ ಕಾಲಿಗೆ ಗುಂಡು(Firing) ಹಾರಿಸಿದ್ದಾರೆ. ಕುಸಿದು ಬಿದ್ದ ಪಳನಿಯನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ದಾಖಲಿಸಲಾಗಿದೆ.

ಕೊಲೆಗೆ ಯತ್ನಿಸಿ ಎಸ್ಕೇಪ್‌:

ಅಪರಾಧ(Crime) ಪ್ರವೃತ್ತಿಯ ಆರೋಪಿ ಪಳನಿ ವಿರುದ್ಧ ಈ ಹಿಂದೆಯೇ ಅಶೋಕನಗರ, ಕೋಣನಕುಂಟೆ, ಕುಮಾರಸ್ವಾಮಿ ಲೇಔಟ್‌ ಪೊಲೀಸ್‌ ಠಾಣೆಗಳಲ್ಲಿ ರೌಡಿ ಶೀಟರ್‌(Rowdysheeter) ಪಟ್ಟಿತೆರೆಯಲಾಗಿದೆ. ನ.10ರಂದು ಬೆಳ್ಳಂದೂರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಕರ್ತವ್ಯಕ್ಕೆ ತೆರಳುತ್ತಿದ್ದ ಮುನ್ನಾಕುಮಾರ್‌ ಎಂಬ ಸೆಕ್ಯೂರಿ ಗಾರ್ಡ್‌ ಕೊಲೆಗೈದು ದರೋಡೆ ಮಾಡಿ ತಲೆಮರೆಸಿಕೊಂಡಿದ್ದ. ಇನ್ನು 2020ರಲ್ಲಿ ಪಾತಕಿ ಬಾಂಬೆ ರವಿ ಸೂಚನೆ ಮೇರೆಗೆ ನಿರ್ಮಾಪಕ ಉಮಾಪತಿ ಗೌಡ ಅವರ ಕೊಲೆಗೆ ಸಂಚು ರೂಪಿಸಿದ್ದ. ಪೊಲೀಸರ ದಾಳಿ ವೇಳೆ ತಪ್ಪಿಸಿಕೊಂಡಿದ್ದ. ಈತನ ವಿರುದ್ಧ ಈ ಹಿಂದೆ ಕೊಲೆ, ಕೊಲೆ ಯತ್ನ, ಕಳ್ಳತನ, ಸುಲಿಗೆ, ದರೋಡೆ, ಬೆದರಿಕೆ ಸೇರಿದಂತೆ ವಿವಿಧ ಪೊಲೀಸ್‌ ಠಾಣೆಗಳಲ್ಲಿ 15 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಮುಚ್ಚಳಿಕೆ ಉಲ್ಲಂಘನೆ: 10 ರೌಡಿಶೀಟರ್‌ಗಳು  ನ್ಯಾಯಾಂಗ ಬಂಧನಕ್ಕೆ

ಪೂರ್ವ ವಿಭಾಗದ ವಿವಿಧ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಭದ್ರತಾ ಕಾಯ್ದೆಯ ವೈಯಕ್ತಿಕ ಮುಚ್ಚಳಿಕೆ ಹಾಗೂ ಜಾಮೀನು ಉಲ್ಲಂಘಿಸಿದ ಆರೋಪದಡಿ ರೌಡಿ ಶೀಟರ್‌ ಅಮೀನುದ್ದೀನ್‌ ಅಲಿಯಾಸ್‌ ನಯೀಮ್‌ ಸೇರಿದಂತೆ 10 ಮಂದಿ ರೌಡಿ ಶೀಟರ್‌ಗಳನ್ನು ನ್ಯಾಯಾಂಗ ಬಂಧನಕ್ಕೆ(Judicial Custody)ಒಪ್ಪಿಸಲಾಗಿದೆ.

8 ತಿಂಗಳಿಂದ ತಲೆಮರೆಸಿಕೊಂಡಿದ್ದ ರೌಡಿಗೆ ಗುಂಡು ಹೊಡೆದು ಅರೆಸ್ಟ್‌

ಶಿವಾಜಿನಗರ ಪೊಲೀಸ್‌ ಠಾಣೆ ವ್ಯಾಪ್ತಿಯ ರೌಡಿಶೀಟರ್‌ ಅಮೀನುದ್ದೀನ್‌ ಕಾನೂನು ಸುವ್ಯವಸ್ಥೆಗೆ ಧಕ್ಕೆ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಉಂಟು ಮಾಡುವ ಸ್ವಭಾವದವನಾಗಿದ್ದಾನೆ. ಹೀಗಾಗಿ ಕಳೆದ ಜನವರಿಯಲ್ಲಿ ಆತನ ವಿರುದ್ಧ ಭಾರತಿನಗರ ಪೊಲೀಸ್‌ ಠಾಣೆಯಲ್ಲಿ ಸಿಆರ್‌ಪಿಸಿ ಅಡಿಯಲ್ಲಿ ಭದ್ರತಾ ಪ್ರಕರಣ ದಾಖಲಿಸಲಾಗಿತ್ತು. ಈ ವೇಳೆ 1 ವರ್ಷದ ಅವಧಿಗೆ ವೈಯಕ್ತಿಕ ಮುಚ್ಚಳಿಕೆ ಹಾಗೂ 1 ಲಕ್ಷ ರು. ಮೊತ್ತಕ್ಕೆ ಶ್ಯೂರಿಟಿ ಪಡೆದು ಎಚ್ಚರಿಕೆ ನೀಡಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.

ಇದೀಗ ಮುಚ್ಚಳಿಕೆ ಷರತ್ತು ಉಲ್ಲಂಘಿಸಿರುವುದರಿಂದ ಅಮೀನುದ್ದೀನ್‌ನನ್ನು ಮುಂದಿನ ಜನವರಿವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಪೂರ್ವ ವಿಭಾಗದ ವಿಶೇಷ ಕಾರ್ಯ ನಿರ್ವಾಹಕ ದಂಡಾಧಿಕಾರಿ ಹಾಗೂ ಉಪ ಪೊಲೀಸ್‌ ಆಯುಕ್ತ ಆದೇಶಿಸಿದ್ದಾರೆ.
 

Follow Us:
Download App:
  • android
  • ios