*   ಹಣ ಸಿಗುವುದಿಲ್ಲ ಎಂದು ಖಚಿತವಾಗುತ್ತಿದ್ದಂತೆ ಪರಾರಿ*  50 ಲಕ್ಷ ಕೊಟ್ಟರೆ, ಪ್ರಕರಣ ಮುಚ್ಚಿ ಹಾಕುವುದಾಗಿ ಬೆದರಿಸಿದ್ದ ಖದೀಮರು*  ಈ ಸಂಬಂಧ ಮಹಾಲಕ್ಷ್ಮಿ ಲೇಔಟ್‌ ಠಾಣೆಗೆ ದೂರು

ಬೆಂಗಳೂರು(ಅ.11):  ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ(IT Officers) ಸೋಗಿನಲ್ಲಿ ಈರುಳ್ಳಿ ವ್ಯಾಪಾರಿಯನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟು, ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಮಹಾಲಕ್ಷ್ಮಿ ಲೇಔಟ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಸವೇಶ್ವರನಗರದ ನಿವಾಸಿ ಶ್ರೀನಿವಾಸನ್‌ (58) ಅಪಹರಣಕ್ಕೆ(Kidnap) ಒಳಗಾದವರು.

ಶ್ರೀನಿವಾಸನ್‌ ಈರುಳ್ಳಿ ವ್ಯಾಪಾರಿಯಾಗಿದ್ದು, ಕುಟುಂಬದೊದಿಗೆ ಮಹಾಲಕ್ಷ್ಮಿ ಲೇಔಟ್‌ನಲ್ಲಿ ನೆಲೆಸಿದ್ದಾರೆ. ಸೆ.30ರಂದು ಶ್ರೀನಿವಾಸನ್‌ ತಮ್ಮ ಕಾರು ಚಾಲಕ ಆರ್ಮುಗಂ ಜತೆ ಕಾರಿನಲ್ಲಿ ಕೆಲಸದ ನಿಮಿತ್ತ ಬಸವೇಶ್ವರ ನಗರದಿಂದ ಆರ್‌ಎಂಸಿ ಯಾರ್ಡ್‌ ಕಡೆ ಹೋಗುತ್ತಿದ್ದರು. ಈ ವೇಳೆ ಮಾರ್ಗ ಮಧ್ಯೆ ಮಹಾಲಕ್ಷ್ಮಿ ಲೇಔಟ್‌ನ ಅಶೋಕಪುರ ಮುಖ್ಯರಸ್ತೆ ಬಳಿ ಪೊಲೀಸ್‌ ಸಮವಸ್ತ್ರದಲ್ಲಿದ್ದ ವ್ಯಕ್ತಿ ಶ್ರೀನಿವಾಸನ್‌ ಅವರಿದ್ದ ಕಾರನ್ನು ಅಡ್ಡಗಟ್ಟಿದ್ದ.
ಆರ್ಮುಗಂ ಕಾರನ್ನು ರಸ್ತೆ ಪಕ್ಕದಲ್ಲಿ ನಿಲುಗಡೆ ಮಾಡುತ್ತಿದ್ದಂತೆ, ಇವರ ಬಳಿ ಬಂದ ಇಬ್ಬರು ಅಪರಿಚಿತರು ತಮ್ಮನ್ನು ಆದಾಯ ತೆರಿಗೆ ಅಧಿಕಾರಿಗಳು ಎಂದು ಪರಿಚಯಿಸಿಕೊಂಡಿದ್ದರು.

ಗಂಡನೊಂದಿಗೆ ಅಕ್ರಮ ಸಂಬಂಧ: ಹೆಂಡ್ತಿಯಿಂದ ಮಹಿಳೆಯ ಕಿಡ್ನಾಪ್‌..!

‘ಸಾಹೇಬರು ಕಾರಿನಲ್ಲಿ ಕುಳಿತಿದ್ದಾರೆ. ನಿಮ್ಮನ್ನು ವಿಚಾರಣೆ ಮಾಡಬೇಕು’ ಎಂದು ಹೇಳಿ ಆರೋಪಿಗಳ ಕಾರಿನಲ್ಲಿ ಶ್ರೀನಿವಾಸನ್‌ ಅವರನ್ನು ಬಲವಂತವಾಗಿ ಕೂರಿಸಿ ಏರ್‌ಪೋರ್ಟ್‌(Airport) ರಸ್ತೆ ಕಡೆಗೆ ಕರೆದುಕೊಂಡು ಹೋಗಿದ್ದರು. ಆ ವೇಳೆ ಕೆಲ ಬ್ಯಾಂಕ್‌ ಸ್ಟೇಟ್‌ಮೆಂಟ್‌ ತೋರಿಸಿ ‘ನೀನು ಇಷ್ಟೆಲ್ಲಾ ವ್ಯವಹಾರ ಮಾಡಿ, ಕಡಿಮೆ ತೆರಿಗೆ ಪಾವತಿ ಮಾಡುತ್ತಿದ್ದೀಯ’ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಶ್ರೀನಿವಾಸನ್‌, ‘ನೀವು ನೋಟಿಸ್‌ ಕೊಟ್ಟರೆ ವಕೀಲರ ಮೂಲಕ ಉತ್ತರ ಕೊಡುತ್ತೇನೆ’ ಎಂದಿದ್ದರು. ಆಕ್ರೋಶಗೊಂಡ ಆರೋಪಿಗಳು(Accused) ಶ್ರೀನಿವಾಸ್‌ ಕಪಾಳಕ್ಕೆ ಹಲ್ಲೆ ನಡೆಸಿ 50 ಲಕ್ಷ ಕೊಟ್ಟರೆ, ಪ್ರಕರಣ ಮುಚ್ಚಿ ಹಾಕುವುದಾಗಿ ಬೆದರಿಸಿದ್ದರು. ಕೊನೆಗೆ ‘ಕನಿಷ್ಠ 20 ಲಕ್ಷ ನೀಡಬೇಕು’ ಎಂದು ಬೇಡಿಕೆ ಇಟ್ಟಿದ್ದರು. ಒಂದು ದಿನ ಸಮಯಾವಕಾಶ ಕೊಟ್ಟರೆ 5 ಲಕ್ಷ ನೀಡುವುದಾಗಿ ಶ್ರೀನಿವಾಸನ್‌ ಹೇಳಿದ್ದರು. ಹೀಗಾಗಿ ತಕ್ಷಣಕ್ಕೆ ಹಣ ಸಿಗುವುದಿಲ್ಲ ಎಂದು ಭಾವಿಸಿ ಶ್ರೀನಿವಾಸನ್‌ ಅವರನ್ನು ಮೇಕ್ರಿ ಸರ್ಕಲ್‌ ಬಳಿ ಬಿಟ್ಟು ಆರೋಪಿಗಳು ಪರಾರಿಯಾಗಿದ್ದರು.

ಈ ಸಂಬಂಧ ಶ್ರೀನಿವಾಸನ್‌ ಮಹಾಲಕ್ಷ್ಮಿ ಲೇಔಟ್‌ ಠಾಣೆಗೆ ದೂರು(Complaint) ನೀಡಿದ್ದಾರೆ. ಹಣಕ್ಕಾಗಿ ಆರೋಪಿಗಳು ಐಟಿ ಅಧಿಕಾರಿಗಳ ಸೋಗಿನಲ್ಲಿ ಅಪಹರಣ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು(Police) ತಿಳಿಸಿದರು.