Asianet Suvarna News Asianet Suvarna News

1.5 ಕೋಟಿ ರೂ. ಗುಳುಂ ಮಾಡಿ ಎಸ್‌ಬಿಐ ಬ್ಯಾಂಕ್ ಮ್ಯಾನೇಜರ್‌ ನಾಪತ್ತೆ: ಕಂಗಾಲಾದ ಗ್ರಾಹಕರು..!

*  ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಡೆದ ಘಟನೆ 
*  ಎಸ್‌ಬಿಐ ಬ್ಯಾಂಕ್ ಮ್ಯಾನೇಜರ್‌ನಿಂದಲೇ ಕೋಟ್ಯಾಂತರ ರೂಪಾಯಿ ಅವ್ಯವಹಾರ 
*  ಗ್ರಾಹಕರ ಖಾತೆಗೆ ವರ್ಗಾವಣೆ ಹೆಸರಿನಲ್ಲಿ ಬರೋಬ್ಬರಿ 1.5 ಕೋಟಿ ರೂ. ಹಣ ವಂಚನೆ 
 

Branch Manager Cheat to Sate Bank India at Bhatkal in Uttara Kannada grg
Author
Bengaluru, First Published Apr 26, 2022, 9:31 AM IST

ವರದಿ: ಭರತ್‌ರಾಜ್ ಕಲ್ಲಡ್ಕ ಜತೆ ಗಿರೀಶ್ ನಾಯ್ಕ್, ಏಷ್ಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಉತ್ತರ ಕನ್ನಡ(ಏ.26):  ಜನರು ತಾವು ಕಷ್ಟಪಟ್ಟು ದುಡಿದು ಕೂಡಿಟ್ಟ ಹಣ, ಚಿನ್ನಾಭರಣ ಸುರಕ್ಷಿತವಾಗಿರಲಿ ಎಂದು ಬ್ಯಾಂಕುಗಳಲ್ಲಿ ಜಮಾವಣೆ ಮಾಡ್ತಾರೆ. ಅದರಲ್ಲೂ ಯಾವುದೋ ಖಾಸಗಿ ಸಂಸ್ಥೆಗಿಂತ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಇಡುವುದೇ ಸುರಕ್ಷಿತ ಅನ್ನೋದು ಜನರ ಭಾವನೆ. ಆದ್ರೆ, ಇಲ್ಲೊಂದು ಕಡೆ ರಾಷ್ಟ್ರೀಕೃತ ಬ್ಯಾಂಕಿನ ಮ್ಯಾನೇಜರ್‌ ಬರೋಬ್ಬರಿ 1.5 ಕೋಟಿ ರೂ. ಹಣವನ್ನು ಗುಳುಂ ಮಾಡಿ ನಾಪತ್ತೆಯಾಗಿದ್ದಾನೆ. 

ಕರ್ಮಕಾಂಡ ಬಯಲಾಗುತ್ತಿದ್ದಂತೆ ತಲೆಮರೆಸಿಕೊಂಡ ಮ್ಯಾನೇಜರ್ 

ಉತ್ತರ ಕನ್ನಡ(Uttara Kannada) ಜಿಲ್ಲೆಯ ಭಟ್ಕಳದಲ್ಲಿ(Bhatkal) ಬ್ಯಾಂಕ್ ಮ್ಯಾನೇಜರ್‌ನೇ ಬ್ಯಾಂಕಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿ ಪರಾರಿಯಾಗಿದ್ದಾನೆ. ಭಟ್ಕಳ ಪಟ್ಟಣದ ಬಜಾರ್ ಬ್ರ್ಯಾಂಚ್‌ನ ಎಸ್‌ಬಿಐ(State Bank of India) ಶಾಖೆಯಲ್ಲಿ ಇಂತಹದ್ದೊಂದು ಅವ್ಯವಹಾರ(Scam) ನಡೆದಿರೋದು ಬಯಲಾಗಿದ್ದು, ಈ ಬ್ಯಾಂಕ್‌ನ ಮ್ಯಾನೇಜರ್ ಆಗಿದ್ದ, ಆರೋಪಿ ಅನೂಪ್‌ ಪೈಯನ್ನು ಪತ್ತೆ ಹಚ್ಚಲು ಹುಡುಕಾಟ ಮುಂದುವರಿದಿದೆ.

ಚಾಮರಾಜನಗರ: ಜಮೀನು ಮಾರಿ ಸಾಲ ತೀರಿಸಿ ಎಂದು ಪಟ್ಟಿ ಮಾಡಿಟ್ಟು ಯುವಕ ಆತ್ಮಹತ್ಯೆ

ಅನೂಪ್ ದಿನಕರ ಪೈ(Anup Dinkar Pai) ಎಂಬಾತ ಕಳೆದ 2019 ರಿಂದ 2022, ಏ. 11ರ ವರೆಗೆ ಭಟ್ಕಳದ ಎಸ್‌ಬಿಐ ಬ್ಯಾಂಕ್‌ನ ಬಜಾರ್ ಬ್ರ್ಯಾಂಚ್‌ನ ಮ್ಯಾನೇಜರ್(Branch Manager) ಆಗಿ ಕಾರ್ಯನಿರ್ವಹಿಸುತ್ತಿದ್ದ. ಈ ಅವಧಿಯಲ್ಲಿ ಆತ ಮ್ಯಾನೇಜರ್ ಹುದ್ದೆಯ ಸಸ್ಪೆನ್ಸ್ ಖಾತೆಯಿಂದ ಗ್ರಾಹಕರ(Customers) ಖಾತೆಗೆ ಹಣವನ್ನು ವರ್ಗಾಯಿಸುವ ಮೂಲಕ ಬ್ಯಾಂಕಿನ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದ. ಅಂದರೆ, ಬ್ಯಾಂಕಿನ ತುರ್ತು ವ್ಯವಹಾರಗಳಿಗಾಗಿ ಮ್ಯಾನೇಜರ್ ಬಳಿ ಸಸ್ಪೆನ್ಸ್ ಖಾತೆಯಲ್ಲಿ ಒಂದಷ್ಟು ಹಣವನ್ನು ಉಳಿಸಲಾಗಿರುತ್ತದೆ. ಅದನ್ನು ಬ್ಯಾಂಕಿನ ಕಾರ್ಯಗಳಿಗೆ ಮಾತ್ರ ಉಪಯೋಗಿಸಬೇಕು. ಆದರೆ, ಈತ ಇದೇ ಹಣವನ್ನು ಗ್ರಾಹಕರ ಖಾತೆಗೆ ಅಕ್ರಮವಾಗಿ ವರ್ಗಾವಣೆ ಮಾಡಿದ್ದು, ಆ ಮೂಲಕ ಬ್ಯಾಂಕಿನ ಹಣವನ್ನು ದುರ್ಬಳಕೆ ಮಾಡಿದ್ದಾನೆ. ಇದೇ ರೀತಿ ಸುಮಾರು 1.5 ಕೋಟಿ ರೂಪಾಯಿ ಹಣ ಸಸ್ಪೆನ್ಸ್ ಖಾತೆಯಿಂದ ನಾಪತ್ತೆಯಾಗಿದ್ದು, ಬ್ಯಾಂಕಿನ ಆಡಿಟ್ ನಡೆದ ವೇಳೆ ಈತನ ಅವ್ಯವಹಾರ ಬಯಲಾಗಿದೆ ಅಂತ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪೆನ್ನೇಕರ್ ತಿಳಿಸಿದ್ದಾರೆ. 

ಇನ್ನು ಅನೂಪ್ ಪೈ ಅವ್ಯವಹಾರ ತಿಳಿಯುತ್ತಿದ್ದಂತೇ ಆತನನ್ನು ಏ.11ರಂದು ವಜಾಗೊಳಿಸಿ ನೂತನ ಮ್ಯಾನೇಜರ್‌ನನ್ನು ನೇಮಕ ಮಾಡಲಾಗಿತ್ತು. ಇದೀಗ ಎಸ್‌ಬಿಐ ಬ್ಯಾಂಕ್‌ನ ನೂತನ ಮ್ಯಾನೇಜರ್ ಅನೂಪ್ ಪೈ ವಿರುದ್ಧ ವಂಚನೆ ದೂರು ದಾಖಲಿಸಿದ್ದಾರೆ. ಸದ್ಯ ಭಟ್ಕಳ ನಗರ ಠಾಣೆ ಪೊಲೀಸರು ಅನೂಪ್ ವಿರುದ್ಧ ಸೆಕ್ಷನ್ 420 ಅಡಿಯಲ್ಲಿ ವಂಚನೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ಆತ ತಲೆಮರೆಸಿಕೊಂಡಿದ್ದಾನೆ. ಆಡಿಟ್ ವೇಳೆ ಆತನ ಕರ್ಮಕಾಂಡ ಬಯಲಾಗುತ್ತಿದ್ದಂತೇ ಆತ ಉಳಿದುಕೊಂಡಿದ್ದ ಮನೆಗೆ ಬೀಗ ಹಾಕಿ ನಾಪತ್ತೆಯಾಗಿದ್ದಾನೆ ಎನ್ನಲಾಗಿದ್ದು, ಪೊಲೀಸರು ತಂಡ ರಚಿಸಿಕೊಂಡು ಆತನ ಪತ್ತೆಗೆ ಬಲೆ ಬೀಸಿದ್ದಾರೆ. ರಾಷ್ಟ್ರೀಕೃತ ಬ್ಯಾಂಕೊಂದರಲ್ಲೇ ಈ ರೀತಿಯ ಅವ್ಯವಹಾರ ನಡೆದಿರುವುದರಿಂದ ಪೊಲೀಸರು ಈ ಬಗ್ಗೆ ಹೆಚ್ಚಿನ ತನಿಖೆ(Investigation) ಮುಂದುವರಿಸಿದ್ದಾರೆ.

ಒಟ್ಟಿನಲ್ಲಿ ಖಾಸಗಿ ಹಣಕಾಸಿನ ಸಂಸ್ಥೆಗಳಲ್ಲಿ ನಡೆಯುತ್ತಿದ್ದ ಹಣದ ಅವ್ಯವಹಾರ ಇದೀಗ ರಾಷ್ಟ್ರೀಕೃತ ಬ್ಯಾಂಕಿನಲ್ಲೂ(Nationalized Bank) ನಡೆದಿರುವುದು ಗ್ರಾಹಕರನ್ನು ಆತಂಕಕ್ಕೀಡುಮಾಡಿದೆ. ಈ ಬಗ್ಗೆ ಪೊಲೀಸರು ಕೂಲಂಕುಷ ತನಿಖೆ ಆರಂಭಿಸಿದ್ದು, ಪ್ರಕರಣದಲ್ಲಿ ಯಾರ್ಯಾರ ಕೈವಾಡವಿದೆ ಅನ್ನೋದನ್ನು ಕೂಡಾ ಪತ್ತೆ ಹಚ್ಚಲು ಪ್ರಯತ್ನ ಮುಂದುವರಿಸಿದ್ದಾರೆ. 
 

Follow Us:
Download App:
  • android
  • ios