ಹೈದರಾಬಾದ್ನ ಹೋಟೆಲ್ವೊಂದರಲ್ಲಿ ಯುವತಿಯೊಬ್ಬಳು ತನ್ನ ಸ್ನೇಹಿತನಿಗೆ ವಿಡಿಯೋ ಕಾಲ್ನಲ್ಲಿಯೇ ಹುಟ್ಟುಹಬ್ಬದ ಶುಭಾಶಯ ಕೋರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತನ್ನ ಸಾವನ್ನೇ ಸ್ನೇಹಿತನಿಗೆ 'ಹುಟ್ಟುಹಬ್ಬದ ಉಡುಗೊರೆ' ಎಂದು ಹೇಳಿದ್ದು, ಈ ಸಾವಿನ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಹೈದರಾಬಾದ್: ಪತಿಯಿಂದ ಬೇರ್ಪಟ್ಟ ಯುವತಿಯೊಬ್ಬಳು ತನ್ನ ಸ್ನೇಹಿತನ ಹುಟ್ಟುಹಬ್ಬಕ್ಕೆ ತನ್ನ ಸಾವಿನ ಗಿಫ್ಟ್ ನೀಡಿದ್ದು, ಆತನಿಗೆ ಫೋನ್ನಲ್ಲಿಯೇ ವಿಷ್ ಮಾಡಿ ಸಾವನ್ನಪ್ಪಿರುವ ಶಾಕಿಂಗ್ ಘಟನೆ ಹೈದರಾಬಾದ್ನಲ್ಲಿ ನಡೆದಿದೆ. ಹೈದರಾಬಾದ್ ಹೋಟೆಲ್ನಲ್ಲಿ 26 ವರ್ಷದ ರೇಣುಕಾ ಎಂಬುವವರು ಸ್ನೇಹಿತನೊಂದಿಗೆ ವಿಡಿಯೋ ಕರೆ ಮಾಡುತ್ತಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಪಿಎಚ್ಬಿಯ ಪಬ್ನಲ್ಲಿ ಕೆಲಸ ಮಾಡುತ್ತಿದ್ದ ಅಲ್ವಾಲ್ ಮೂಲದ ರೇಣುಕಾ ಎನ್ನುವವರ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಸಾವು ಹಲವಾರು ಅನುಮಾನಗಳನ್ನು ಹುಟ್ಟಿಹಾಕಿದೆ.
ಸ್ನೇಹಿತನಿಗೆ ಕರೆ
ತನಿಖಾಧಿಕಾರಿಗಳ ಪ್ರಕಾರ, ರೇಣುಕಾ ಕಳೆದ ಬುಧವಾರ (ಜುಲೈ 1) ಬೆಳಗಿನ ಜಾವ 3 ಗಂಟೆ ಸುಮಾರಿಗೆ ಶೇಖ್ ಎಂಬ ವ್ಯಕ್ತಿಯೊಂದಿಗೆ ಲಂಗರ್ ಹೌಸ್ನಲ್ಲಿರುವ ಹೋಟೆಲ್ಗೆ ರೇಣುಕಾ ಭೇಟಿ ನೀಡಿದ್ದರು. ಇಬ್ಬರೂ ಅಲ್ಲಿ ಊಟ ಮಾಡಿದ್ದರು. ಜುಲೈ 2ರ ರಾತ್ರಿ 10:30 ರ ಸುಮಾರಿಗೆ ಶೇಖ್ ಹೋಟೆಲ್ನಿಂದ ಹೊರಟರು, ಆದರೆ ರೇಣುಕಾ ಒಬ್ಬಂಟಿಯಾಗಿಯೇ ಇದ್ದರು. ಹೋಟೆಲ್ ದಾಖಲೆಗಳ ಪ್ರಕಾರ ರೇಣುಕಾ, ರಾತ್ರಿ 11:56 ರ ಸುಮಾರಿಗೆ ಭೋಜನವನ್ನು ಆರ್ಡರ್ ಮಾಡಿದ್ದಾರೆ. ಬೆಳಿಗ್ಗೆ 12:18 ರ ಸುಮಾರಿಗೆ, ಅವರು ತಮ್ಮ ಸ್ನೇಹಿತ ಸತ್ಯ ಅವರಿಗೆ ವಿಡಿಯೋ ಕರೆ ಮಾಡಿದ್ದಾರೆ. ಕರೆಯ ಸಮಯದಲ್ಲಿ, ಸತ್ಯ, ರೇಣುಕಾಗೆ ಮದ್ಯಪಾನ ಮಾಡಬೇಡ ಎಂದು ಸಲಹೆ ನೀಡಿದ್ದಾರೆ ಎನ್ನುವುದು ತಿಳಿದಿದೆ.
ತನಿಖಾಧಿಕಾರಿಗಳು ವರದಿ ಮಾಡಿರುವ ಪ್ರಕಾರ, ರೇಣುಕಾ ತನ್ನ ಸ್ನೇಹಿತೆಗೆ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿಕೊಂಡು, ಜುಲೈ 4 ರಂದು ಸತ್ಯ ಅವರ ಹುಟ್ಟುಹಬ್ಬದಂದು "ಹುಟ್ಟುಹಬ್ಬದ ಉಡುಗೊರೆ" ಎಂದು ಬಣ್ಣಿಸಿದ್ದಾರೆ. ರೇಣುಕಾ ವಿಡಿಯೋ ಕರೆಯಲ್ಲಿದ್ದಾಗ ಹೋಟೆಲ್ ಕೋಣೆಯಲ್ಲಿ ನೇಣು ಬಿಗಿದುಕೊಂಡಿದ್ದಾರೆ ಎಂದು ಪೊಲೀಸರು ವರದಿ ಮಾಡಿದ್ದಾರೆ. ಭಯಭೀತರಾದ ಸತ್ಯ ಇತರರಿಗೆ ಮಾಹಿತಿ ನೀಡಿ ಹೋಟೆಲ್ಗೆ ಧಾವಿಸಿದರು. ಸಹಾಯ ಬರುವ ಹೊತ್ತಿಗೆ ರೇಣುಕಾ ಮೃತಪಟ್ಟಿರುವುದು ಕಂಡುಬಂದಿದೆ.
ಶೇಖ್ ಜೊತೆ ಹೋಟೆಲ್ಗೆ ಭೇಟಿ
ರೇಣುಕಾ ಅವರಿಗೆ 7 ವರ್ಷದ ಮಗನಿದ್ದು, ತಮ್ಮ ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಮತ್ತು ನಗರದ ರೆಸ್ಟೋರೆಂಟ್-ಪಬ್ನಲ್ಲಿ ಕೆಲಸ ಮಾಡುತ್ತಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ, ಲಂಗರ್ ಹೌಸ್ ಸಬ್-ಇನ್ಸ್ಪೆಕ್ಟರ್ ಸೈಯದ್ ಮುನ್ವರ್ ಅಲಿ, ಪ್ರಕರಣದ ಎಲ್ಲಾ ಅಂಶಗಳನ್ನು ನಾವು ತನಿಖೆ ಮಾಡುತ್ತಿದ್ದೇವೆ ಎಂದಿದ್ದಾರೆ. ಪೊಲೀಸರ ಪ್ರಕಾರ, ರೇಣುಕಾ ಮತ್ತು ಶೇಖ್ ಆಗಾಗ್ಗೆ ಹೋಟೆಲ್ಗೆ ಭೇಟಿ ನೀಡುತ್ತಿದ್ದರು. ತನಿಖಾಧಿಕಾರಿಗಳು ಆಕೆ ಈ ಹಿಂದೆ ಇತರ ಇಬ್ಬರು ಪುರುಷ ಸ್ನೇಹಿತರೊಂದಿಗೆ ಹೋಟೆಲ್ಗೆ ಭೇಟಿ ನೀಡಿದ್ದರು ಎಂದು ದೃಢಪಡಿಸಿದ್ದಾರೆ. ಶೇಖ್ ವಿವಾಹಿತನಾಗಿದ್ದು, ಮೂವರು ಮಕ್ಕಳಿದ್ದಾರೆ. ಅವರು ಡೈರಿ ವ್ಯವಹಾರ ನಡೆಸುತ್ತಿದ್ದಾರೆ. ಅವರು ರೇಣುಕಾಗೆ ಆರ್ಥಿಕ ಸಹಾಯವನ್ನೂ ನೀಡಿದ್ದಾರೆ ಎಂದು ವರದಿಯಾಗಿದೆ. ಪೊಲೀಸರು ಬಿಎನ್ಎಸ್ಎಸ್ನ ಸೆಕ್ಷನ್ 194 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಮತ್ತು ಅವರ ಸಾವಿಗೆ ಕಾರಣವನ್ನು ತನಿಖೆ ಮಾಡುತ್ತಿದ್ದಾರೆ. ತನಿಖಾಧಿಕಾರಿಗಳು ಕರೆ ದಾಖಲೆಗಳು, ಸಿಸಿಟಿವಿ ದೃಶ್ಯಾವಳಿಗಳು ಮತ್ತು ಭಾಗಿಯಾಗಿರುವ ಜನರ ಹೇಳಿಕೆಗಳನ್ನು ವಿಶ್ಲೇಷಿಸುತ್ತಿದ್ದಾರೆ. ತನಿಖೆ ಪೂರ್ಣಗೊಂಡ ನಂತರ ಘಟನೆಯ ನಿಖರವಾದ ಕಾರಣ ತಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


