ತಾಯಿ ಜತೆ ಜಗಳವಾಡಿ ಮನೆ ಬಿಟ್ಟ ಅಪ್ರಾಪ್ತೆಯನ್ನು ತಿರುಪತಿಗೆ ಕರೆದೊಯ್ದು ಅತ್ಯಾಚಾರ ಮಾಡಿದ ಹಣ್ಣಿನ ವ್ಯಾಪಾರಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಆರೋಪಿ ಸುನೀಲ್ ವಿರುದ್ಧ ರಾಜಾಜಿನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರು (ಮಾ.18) : ತಾಯಿ ಜತೆ ಜಗಳ ಮಾಡಿಕೊಂಡು ಮನೆ ಬಿಟ್ಟು ಬಂದಿದ್ದ ಅಪ್ರಾಪ್ತೆಯನ್ನು ಪುಸಲಾಯಿಸಿ ತಿರುಪತಿಗೆ ಕರೆದೊಯ್ದು ಅತ್ಯಾಚಾರ ಎಸಗಿದ ಆರೋಪದಡಿ ಹಣ್ಣು ವ್ಯಾಪಾರಿಯೊಬ್ಬನ ವಿರುದ್ಧ ರಾಜಾಜಿನಗರ ಪೊಲೀಸ್‌ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Add Asianetnews Kannada as a Preferred SourcegooglePreferred

ಸಂತ್ರಸ್ತೆಯ ತಾಯಿ ನೀಡಿದ ದೂರಿನ ಮೇರೆಗೆ ಕೋಲಾರ ಜಿಲ್ಲೆ ಬಂಗಾರಪೇಟೆ ಮೂಲದ ಸುನೀಲ್‌(30) ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯು ಮೆಜೆಸ್ಟಿಕ್‌ನಲ್ಲಿ ತಳ್ಳುವ ಗಾಡಿನಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಾನೆ. ಅಪ್ರಾಪ್ತೆ ಮೆಜೆಸ್ಟಿಕ್‌ಗೆ ಬಂದಿದ್ದಾಗ ಪುಸಲಾಯಿಸಿ ತಿರುಪತಿಗೆ ಕರೆದುಕೊಂಡು ಹೋಗಿದ್ದರಿಂದ ಪ್ರಕರಣವನ್ನು ಉಪ್ಪಾರಪೇಟೆ ಪೊಲೀಸ್‌ ಠಾಣೆಗೆ ವರ್ಗಾಯಿಸಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಯ ಬಂಧನಕ್ಕೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಉದಯಗಿರಿ, ಹಂಪಿ ಪ್ರಕರಣಗಳ ಬಗ್ಗೆ ಸಮರ್ಪಕ ಉತ್ತರ ನೀಡದ ಗೃಹ ಸಚಿವ; ಪ್ರತಿಪಕ್ಷಗಳು ಸಭಾತ್ಯಾಗ!

ಏನಿದು ಪ್ರಕರಣ?:

ಅಪ್ರಾಪ್ತೆ ದಾವಣಗೆರೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಆಕೆಯ ತಾಯಿ ಬೆಂಗಳೂರಿನ ಸರ್ಕಾರಿ ಸ್ವಾಮ್ಯದ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅನಾರೋಗ್ಯಕ್ಕೆ ತುತ್ತಾಗಿದ್ದರಿಂದ ಆರೈಕೆ ಮಾಡುವ ಸಲುವಾಗಿ ಒಂದೂವರೆ ತಿಂಗಳ ಹಿಂದೆಯಷ್ಟೇ ಅಪ್ರಾಪ್ತೆ ನಗರಕ್ಕೆ ಬಂದಿದ್ದಳು. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಆರೋಪಿ ಸುನೀಲ್‌ನ ಪರಿಚಯವಾಗಿದೆ. ಮಾ.13ರಂದು ಅಪ್ರಾಪ್ತೆ, ತಾಯಿ ಜತೆಗೆ ಜಗಳ ಮಾಡಿಕೊಂಡು ಮನೆ ಬಿಟ್ಟು ಮೆಜೆಸ್ಟಿಕ್‌ಗೆ ಬಂದು ಸುನೀಲ್‌ನನ್ನು ಭೇಟಿಯಾಗಿದ್ದಾಳೆ.

ಇದನ್ನೂ ಓದಿ:ADR analysis: ದೇಶದ 4092 ಶಾಸಕರ ಪೈಕಿ ಶೇ. 45ರಷ್ಟು ಕ್ರಿಮಿನಲ್ಸ್, ಶೇ.29ರಷ್ಟು ಗಂಭೀರ ಪ್ರಕರಣ!

ಈ ವೇಳೆ ಆರೋಪಿಯ ಆಕೆಯನ್ನು ಪುಸಲಾಯಿಸಿ ತಿರುಪತಿಗೆ ಕರೆದೊಯ್ದು ದೇವರ ದರ್ಶನ ಮಾಡಿಸಿ ಬಳಿಕ ಮೂರು ದಿನ ಲಾಡ್ಜ್‌ನಲ್ಲಿ ಇದ್ದುಕೊಂಡು ಅತ್ಯಾಚಾರ ಮಾಡಿದ್ದಾನೆ. ಮಾ.16ರಂದು ಅಪ್ರಾಪ್ತೆಯನ್ನು ಬೆಂಗಳೂರಿಗೆ ಕರೆತಂದು ಬಿಟ್ಟಿದ್ದಾನೆ. ಬಳಿಕ ನೇರ ಮನೆಗೆ ತೆರಳಿದ ಅಪ್ರಾಪ್ರೆಯನ್ನು ತಾಯಿ ಪ್ರಶ್ನಿಸಿದಾಗ, ಆರೋಪಿ ಸುನೀಲ್‌ ಅತ್ಯಾಚಾರದ ವಿಚಾರವನ್ನು ಹೇಳಿದ್ದಾಳೆ. ಬಳಿಕ ತಾಯಿ ರಾಜಾಜಿನಗರ ಠಾಣೆಗೆ ಬಂದು ಸುನೀಲ್‌ ವಿರುದ್ಧ ದೂರು ನೀಡಿದ್ದಾರೆ