ಮಹಾರಾಷ್ಟ್ರ ಮೂಲದ ದಂಪತಿ ಬೆಂಗಳೂರಿನಲ್ಲಿ ವಾಸವಾಗಿದ್ದರು. ಗಂಡ ಹೆಂಡತಿಯನ್ನು ಕೊಲೆ ಮಾಡಿ, ದೇಹವನ್ನು ತುಂಡರಿಸಿ ಸೂಟ್‌ಕೇಸ್‌ನಲ್ಲಿ ತುಂಬಿದ್ದಾನೆ. ಬಳಿಕ ಹೆಂಡತಿಯ ಮನೆಯವರಿಗೆ ಕರೆ ಮಾಡಿ ತಿಳಿಸಿದ್ದಾನೆ. ಮುಂಬೈ ಪೊಲೀಸರ ಮೂಲಕ ಬೆಂಗಳೂರು ಪೊಲೀಸರಿಗೆ ಮಾಹಿತಿ ತಲುಪಿದೆ. ಪೊಲೀಸರು ಮೃತದೇಹ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಆರೋಪಿ ರಾಕೇಶ್‌ನನ್ನು ಬಂಧಿಸಲು ಶೋಧ ಕಾರ್ಯ ನಡೆಯುತ್ತಿದೆ.

ಬೆಂಗಳೂರು/ ಆನೇಕಲ್ (ಮಾ.27): ಮಹರಾಷ್ಟ್ರದಿಂದ ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದು ವಾಸವಾಗಿದ್ದ ದಂಪತಿ ಹಲವು ವರ್ಷಗಳಿಂದ ಇಲ್ಲಿ ಅನ್ಯೋನ್ಯವಾಗಿದ್ದರು. ಆದರೆ, ಇದ್ದಕ್ಕಿದ್ದಂತೆ ಇಬ್ಬರ ನಡುವೆ ಜಗಳ ಆರಂಭವಾಗಿದ್ದು, ಗಂಡನೇ ತನ್ನ ಹೆಂಡತಿಯನ್ನು ಕೊಲೆ ಮಾಡಿ, ಆಕೆಯ ದೇಹವನ್ನು ತುಂಡರಿಸಿ ಸೂಟ್‌ಕೇಸ್‌ಗೆ ತುಂಬಿದ್ದಾನೆ. ನಂತರ, ಹೆಂಡತಿ ಮನೆಯವರಿಗೆ ಕರೆ ಮಾಡಿ ಮಾಹಿತಿ ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ.

Add Asianetnews Kannada as a Preferred SourcegooglePreferred

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಹತ್ಯೆ ಮಾಡಿರುವ ಘಟನೆ ನಡೆದಿದೆ. ಮಹಾರಾಷ್ಟ್ರ ಮೂಲದ ಜೋಡಿಯೊಂದ ಉದ್ಯೋಗ ನಿಮಿತ್ತ ಬೆಂಗಳೂರಿನ ಹೊರವಲಯ ಹುಳಿಮಾವು ಸಮೀಪದ ದೊಡ್ಡ ಕಮ್ಮನಹಳ್ಳಿಯ ಮನೆಯೊಂದರಲ್ಲಿ ವಾಸವಾಗಿದ್ದರು. ರಾಕೇಶ್ ರಾಜೇಂದ್ರ ಹಾಗೂ ಗೌರಿ ಅನಿಲ್ ಸಾಂಬೆಕರ್ ಕೆಲ ವರ್ಷಗಳಿಂದ ಇಲ್ಲಿ ಅನ್ಯೋನ್ಯವಾಗಿದ್ದರು. ಆಗಾಗ್ಗೆ ಮಹಾರಾಷ್ಟ್ರಕ್ಕೂ ಹೋಗಿ ಬರುತ್ತಿದ್ದರು. ಆದರೆ, ಕೆಲ ದಿನಗಳಿಂದ ದಂಪತಿ ನಡುವೆ ಜಗಳ ನಡೆಯುತ್ತಿತ್ತು. ತಡರಾತ್ರಿ ವೇಳೆಯೂ ಇಬ್ಬರ ಜಗಳ ಪಕ್ಕದ ಮನೆಯವರಿಗೂ ಕೇಳಿಸುತ್ತಿತ್ತು.

ಆದರೆ, ಇದೀಗ ಗಂಡ ರಾಕೇಶ್‌ನೇ ತನ್ನ ಹೆಂಡತಿ ಗೌರಿಯನ್ನು ಕೊಲೆ ಮಾಡಿ, ಆಕೆಯ ದೇಹವನ್ನು ತುಂಡರಿಸಿ ಸೂಟ್‌ಕೇಸ್‌ಗೆ ತುಂಬಿದ್ದಾನೆ. ಈ ಮೃತದೇಹವನ್ನು ಬೀಸಾಡಬೇಕು ಎಂದುಕೊಂಡಾಗ ಕೊಲೆ ಮಾಡಿದ ನಂತರ ಪಶ್ಚಾತ್ತಾಪ ಉಂಟಾಗಿದ್ದು, ಹೆಂಡತಿ ಮನೆಯವರಿಗೆ ಕೊಲೆ ಮಾಡಿ, ಸೂಟ್‌ಕೇಸ್‌ಗೆ ತುಂಬಿದ್ದಾಗಿ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೂಡಲೇ ಮಹಾರಾಷ್ಟ್ರದಲ್ಲಿರುವ ಯುವತಿ ಗೌರಿ ಮನೆಯವರು ಮುಂಬೈ ಪೊಲೀಸರನ್ನು ಸಂಪರ್ಕ ಮಾಡಿದ್ದಾರೆ. ಆಗ ಮುಂಬೈ ಪೊಲೀಸರು ಬೆಂಗಳೂರು ಪೊಲೀಸರಿಗೆ ಮಾಹಿತಿ ರವಾನಿದ್ದಾರೆ.

ಇದನ್ನೂ ಓದಿ: ಪತಿಯಂದಿರೇ ಹುಷಾರ್​! ಗಂಡ ಹೆಂಡಿರ ಜಗಳ ನಾಲಿಗೆ ಕಚ್ಚಿ ತುಂಡು ಮಾಡುವ ತನಕ...

ಇದೀಗ ಮುಂಬೈ ಪೊಲೀಸರ ಮಾಹಿತಿ ಮೇರೆಗೆ ಹುಳಿಮಾವು ಪೊಲೀಸರು ರಾಕೇಶ್‌ನ ಮನೆಗೆ ಹೋಗಿದ್ದು, ಮೃತದೇಹವನ್ನು ವಶಕ್ಕೆ ಪಡೆದಿದ್ದಾರೆ. ನಂತರ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನಾ ಸ್ಥಳಕ್ಕೆ ಡಿಸಿಪಿ ಸಾರಾ ಫಾತಿಮಾ ಭೇಟಿ ನೀಡಿದ್ದಾರೆ. ಇದೀಗ ಘಟನೆಯ ಹಿನ್ನೆಲೆಯನ್ನು ತನಿಖೆ ಮಾಡುತ್ತಿದ್ದು, ರಾಕೇಶ್‌ನನ್ನು ವಶಕ್ಕೆ ಪಡೆಯಲು ಶೋಧ ಕಾರ್ಯ ಮುಂದುವರೆಸಿದ್ದಾರೆ.