ಕಚೇರಿಯಲ್ಲಿ ಸಹೋದ್ಯೋಗಿಯೊಂದಿಗೆ ಕುರ್ಚಿಗಾಗಿ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿ ಯುವಕನೋರ್ವ ಸಹೋದ್ಯೋಗಿಯ ಮೇಲೆ ಗುಂಡಿಕ್ಕಿದ ಆಘಾತಕಾರಿ ಘಟನೆ ದೆಹಲಿ ಸಮೀಪದ ಗುರುಗ್ರಾಮದಲ್ಲಿ ನಡೆದಿದೆ.  

ಗುರುಗ್ರಾಮ್‌: ಕಚೇರಿಯಲ್ಲಿ ಸಹೋದ್ಯೋಗಿಯೊಂದಿಗೆ ಕುರ್ಚಿಗಾಗಿ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿ ಯುವಕನೋರ್ವ ಸಹೋದ್ಯೋಗಿಯ ಮೇಲೆ ಗುಂಡಿಕ್ಕಿದ ಆಘಾತಕಾರಿ ಘಟನೆ ದೆಹಲಿ ಸಮೀಪದ ಗುರುಗ್ರಾಮದಲ್ಲಿ ನಡೆದಿದೆ. ಗುರುಗ್ರಾಮ್‌ನಲ್ಲಿರುವ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ಸಂಸ್ಥೆಯೊಂದರ ಕಚೇರಿಯಲ್ಲಿ ಈ ಘಟನೆ ನಡೆದಿದೆ. 23 ವರ್ಷದ ಯುವಕನೋರ್ವನ ಮೇಲೆ ಸಹೋದ್ಯೋಗಿ ಗುಂಡಿಕ್ಕಿದ್ದಾನೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗುರುಗ್ರಾಮದ ರಮದಾ ಹೊಟೇಲ್ (Ramada hotel) ಬಳಿ ಈ ಘಟನೆ ನಡೆದಿದ್ದು, ವಿಶಾಲ್ ಗುಂಡಿನ ದಾಳಿಗೊಳಗಾದ ಯುವಕ, ಈತ ಸೆಕ್ಟರ್‌ 9 ರಲ್ಲಿ ಇರುವ ಫಿರೋಜ್‌ ಗಾಂಧಿ ಕಾಲೋನಿಯ ನಿವಾಸಿಯಾಗಿದ್ದು, ಈತ ಕೆಲಸ ಮಾಡುವ ಕಚೇರಿಯಲ್ಲಿ ಕುರ್ಚಿಗಾಗಿ ಇಬ್ಬರ ಮಧ್ಯೆ ಜಗಳ ನಡೆದಿದೆ. ಕಿತ್ತಾಟ ವಿಕೋಪಕ್ಕೆ ತಿರುಗಿದ್ದು ಈತನ ಮೇಲೆ ಸಹೋದ್ಯೋಗಿ ಅಮನ್ ಜಂಗ್ರಾ ಗುಂಡಿನ ದಾಳಿ ನಡೆಸಿದ್ದಾನೆ. ಇದರಿಂದ ವಿಶಾಲ್ ಸ್ಥಿತಿ ಗಂಭೀರವಾಗಿದ್ದು, ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ಕುಸಿದ ಚಿನ್ನದ ಗಣಿ: ತನ್ನ ಜೀವದ ಹಂಗು ತೊರೆದು ಸಹೋದ್ಯೋಗಿಗಳ ರಕ್ಷಿಸಿದ ಕಾರ್ಮಿಕ

ಇನ್ನು ಗುಂಡಿನ ದಾಳಿ ನಡೆಸಿದ ಆರೋಪಿ ಅಮನ್ ಜಂಗ್ರಾ (Aman Jangra), ಹರ್ಯಾಣದ (Haryana) ಹಿಸ್ಸಾರ್ ನಿವಾಸಿಯಾಗಿದ್ದು, ಆತನ ವಿರುದ್ಧ ಭಾರತೀಯ ದಂಡ ಸಂಹಿತೆಯಡಿ ಕೊಲೆ ಯತ್ನ ಪ್ರಕರಣ ಹಾಗೂ ಸೆಕ್ಷನ್ 25, 54 ಹಾಗೂ 59 ರ ಅಡಿ ಶಸ್ತ್ರಾಸ್ತ್ರ ಕಾಯ್ದೆಯ (Arms Act) ಉಲ್ಲಂಘನೆಯ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. 

ಮಂಗಳವಾರ ಮಾ.28 ರಂದು ವಿಶಾಲ್ ಹಾಗೂ ಜಂಗ್ರಾಗೆ ಕುರ್ಚಿಯ ವಿಚಾರಕ್ಕೆ ಸಂಬಂಧಿಸಿದಂತೆ ವಾಗ್ವಾದ ನಡೆದಿದೆ. ಇದಾದ ನಂತರ ಆತ ಕಚೇರಿಯಿಂದ ಹೊರ ನಡೆದಿದ್ದಾನೆ. ಆದರೆ ಬುಧವಾರ ಮಾರ್ಚ್‌ 29 ರಂದು ಕೂಡ ಕುರ್ಚಿಯ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೆ ಜಗಳ ಆರಂಭವಾಗಿದೆ. ಇದಾದ ಬಳಿಕ ಕುಪಿತಗೊಂಡ ಜಂಗ್ರಾ, ವಿಶಾಲ್ ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ ಹಿಂದಿನಿಂದ ಗುಂಡಿಕ್ಕಿದ್ದಾನೆ. 

Bengaluru: ವಿಡಿಯೋ ಕಾಲ್‌ನಲ್ಲಿ ಸಹೋದ್ಯೋಗಿ ಆತನ ಹೆಂಡತಿ ತೋರಿಸಿಲ್ಲ ಎಂದು ಹೊಟ್ಟೆಗೆ ಇರಿತ: ಆರೋಪಿ ಬಂಧನ

ಈ ಬಗ್ಗೆ ಸಾರ್ವಜನಿಕರಿಂದ ವಿಚಾರ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ವಿಶಾಲ್‌ನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಗಾಯಾಳುವಿನ ಸಹೋದರ ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಾಗಿದೆ. ಘಟನೆಯ ಬಳಿಕ ಆರೋಪಿ ಪರಾರಿಯಾಗಿದ್ದಾನೆ. ಆತನ ಬಂಧನಕ್ಕೆ ಬಲೆ ಬೀಸಲಾಗಿದ್ದು, ಶೀಘ್ರದಲ್ಲೇ ಆತನನ್ನು ಬಂಧಿಸುತ್ತೇವೆ ಎಂದು ಗುರುಗ್ರಾಮದ ಪಶ್ಚಿಮದ ಡಿಸಿಪಿ ವಿರೇಂದ್ರ ವಿಜ್ (Virender Vij) ಹೇಳಿದ್ದಾರೆ.