Asianet Suvarna News Asianet Suvarna News

Bagalkoteಯಲ್ಲಿ ಥಳಿತ ಪ್ರಕರಣ, ವಿದ್ಯಾರ್ಥಿ ತನಿಖೆಗೆ ಸಹಕರಿಸುತ್ತಿಲ್ಲವೆಂದ ಪೊಲೀಸರು

ಬಾಗಲಕೋಟೆಯಲ್ಲಿ ವಿದ್ಯಾರ್ಥಿಗೆ ಥಳಿತ  ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿ ತನಿಖೆಗೆ ಸಹಕರಿಸುತ್ತಿಲ್ಲ ಎಂದು ಪೊಲೀಸರು  ಆರೋಪಿಸಿದ್ದಾರೆ,

bagalkote College Skull cap row case student did not cooperate with probe says cop gow
Author
Bengaluru, First Published May 31, 2022, 6:13 PM IST

ಬಾಗಲಕೋಟೆ (ಮೇ.31): ವಿದ್ಯಾರ್ಥಿಯೋರ್ವ (Student) ಮುಸ್ಲಿಂ (Muslim) ಟೋಪಿ ಧರಿಸಿದ ಕಾರಣಕ್ಕೆ ಆತನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿ ತನಿಖೆಗೆ ಸಹಕರಿಸುತ್ತಿಲ್ಲ ಎಂದು ಪೊಲೀಸರು ಸೋಮವಾರ ಹೇಳಿದ್ದಾರೆ. 

ಪ್ರಕರಣ ಸಂಬಂಧ ಹೇಳಿಕೆ ನೀಡಿರುವ ಎಸ್'ಪಿ ಲೋಕೇಶ್ ಜಗಳಸರ್ ಅವರು, ತನಿಖೆಗೆ ಸಹಕಾರ ನೀಡುವಂತೆ ಪೊಲೀಸರ ತಂಡ 2-3 ಬಾರಿ ವಿದ್ಯಾರ್ಥಿ ಸಂಪರ್ಕಿಸಲು ಪ್ರಯತ್ನಿಸಿತ್ತು. ಆದರೆ, ಆತ ಆರೋಗ್ಯ ಸಮಸ್ಯೆ ಹೇಳಿಕೊಂಡು ತನಿಖೆಗೆ ಸಹಕಾರ ನೀಡುತ್ತಿಲ್ಲ. ಕಾಲೇಜು ವಿರುದ್ಧ ನ್ಯಾಯಾಲಯದಲ್ಲಿ ಯುವಕ ಪ್ರಕರಣ ದಾಖಲಿಸಿದ್ದು, ಜಮಖಂಡಿ ಡಿವೈಎಸ್ಪಿ ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆಂದು ಹೇಳಿದ್ದಾರೆ.

ಪಿಎಫ್ಐ ಜಿಲ್ಲಾಧ್ಯಕ್ಷ ಅಸಗರ್ ಅಲಿ ಮಾತನಾಡಿ, ನವೀದ್ ಹಾಗೂ ಆತನ ಕುಟುಂಬಕ್ಕೆ ನಾವು ನೈತಿಕ ಬೆಂಬಲವನ್ನು ನೀಡುತ್ತಿದ್ದೇವೆ. ಹಲ್ಲೆ ಸಂಬಂಧ ನವೀದ್ ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದಾಗ ಪೊಲೀಸರು ದೂರು ದಾಖಲಿಸಿಕೊಂಡಿಲ್ಲ. ಹೀಗಾಗಿ ಅನಿವಾರ್ಯವಾಗಿ ಆತ ನ್ಯಾಯಾಲಯದ ಮೆಟ್ಟಿಲೇರಬೇಕಾಗಿ ಬಂತು. ನ್ಯಾಯ ಸಿಗುವವರೆಗೂ ನಾವು ಹೋರಾಟ ಮಾಡುತ್ತೇವೆಂದು ಹೇಳಿದ್ದಾರೆ. 

UPSC RECRUITMENT 2022: ಉಪಪ್ರಾಂಶುಪಾಲರು ಸೇರಿ ವಿವಿಧ 161 ಹುದ್ದೆಗೆ ನೇಮಕಾತಿ

ಕಾಲೇಜು ಪ್ರಾಂಶುಪಾಲ ಎಎಸ್.ಪೂಜಾರಿ ಮಾತನಾಡಿ, ಘಟನೆ ನಡೆದಿದೆ ಎನ್ನಲಾದ ಸಂದರ್ಭದಲ್ಲಿ ಹಿಜಾಬ್ ಹಾಗೂ ಕೇಸರಿ ವಸ್ತ್ರ ವಿವಾದ ತಾರಕಕ್ಕೇರಿತ್ತು. ಈ ಪರಿಸ್ಥಿತಿಯಲ್ಲಿ ನಾವು ನವೀದ್ ಮೇಲೆ ಹಲ್ಲೆ ನಡೆಸಲು ಹೇಗೆ ಸಾಧ್ಯ. ಆತನ ಮೇಲೆ ನಾನಾಗಲೀ, ಕಾಲೇಜಿನ ಸಿಬ್ಬಂದಿಗಳಾಗಲೀ ಹಲ್ಲೆ ನಡೆಸಿಲ್ಲ. ಯಾವುದೇ ಧರ್ಮದ ವಸ್ತ್ರ ಧರಿಸದೆ ಕಾಲೇಜಿಗೆ ಬರುವಂತೆ ಆತನಿಗೆ ಸೂಚಿಸಲಾಗಿತ್ತು. ಹೈಕೋರ್ಟ್ ಹಾಗೂ ರಾಜ್ಯ ಸರ್ಕಾರದ ಆದೇಶವನ್ನು ಆತನಿಗೆ ಅರ್ಥ ಮಾಡಿಸಲು ನಾನು ಪ್ರಯತ್ನಿಸಿದ್ದೆ. ಆದರೆ, ಆತ ಕೇಳಲಿಲ್ಲ. ಘಟನೆ ವೇಳೆ ನವೀದ್ ತಂದೆ ಕೂಡ ಸ್ಥಳದಲ್ಲಿದ್ದರು. ಎಷ್ಟು ಹೇಳಿದರೂ ಕೇಳದೆ, ಕಾಲೇಜಿನ ಒಳಗೆ ಬರಲು ಯತ್ನಿಸಿದ್ದರು. ನಮಗೆ ಬೇರೆ ದಾರಿಯಿಲ್ಲದೆ ಅವರನ್ನು ಪೊಲೀಸರ ವಶಕ್ಕೆ ನೀಡಿದ್ದೆವು. ನಾವು ಯಾರ ಮೇಲೂ ಹಲ್ಲೆ ನಡೆಸಿಲ್ಲ. ಇನ್ನೂ ಅವರೇ ನಮ್ಮನ್ನು ಕೆಟ್ಟಪದಗಳಿಂದ ನಿಂದಿಸಿದ್ದಾರೆಂದು ಹೇಳಿದ್ದಾರೆ. 

ನ್ಯಾಯಾಲಯದಿಂದ ಸಮನ್ಸ್ ಬಂದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಪೊಲೀಸರಿಂದಾಗಲೀ, ನ್ಯಾಯಾಲಯದಿಂದಾಗಲೀ ನನಗೆ ಯಾವುದೇ ಸಮನ್ಸ್ ಬಂದಿಲ್ಲ. ನಾನು ಯಾವ ತಪ್ಪನ್ನೂ ಮಾಡಿಲ್ಲ. ನ್ಯಾಯಾಲಯ ಸಮನ್ಸ್ ಜಾರಿ ಮಾಡಿದರೂ, ಸಾಕ್ಷಿ ಹಾಗೂ ಸತ್ಯಾಸತ್ಯತೆಗಳೊಂದಿಗೆ ನ್ಯಾಯಾಲಯದ ಮುಂದೆ ಹಾಜರಾಗುತ್ತೇನೆಂದು ಹೇಳಿದ್ದಾರೆ. 

ಕಾಲೇಜು ಪ್ರಾಂಶುಪಾಲರು ನೀಡಿರುವ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ಸಂಬಂಧ ನವೀದ್ ಹಾಗೂ ಆತನ ತಂದೆ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದಾರೆ.

Central University Recruitment 2022; ಒಟ್ಟು 61 ಪ್ರಾಧ್ಯಾಪಕ ಹುದ್ದೆಗಳಿಗೆ ನೇಮಕಾತಿ

ನ್ಯಾಯಾಲಯದ ಮೊರೆ ಹೋಗಿದ್ದ ವಿದ್ಯಾರ್ಥಿ: ಕಾಲೇಜು ಪ್ರಾಂಶುಪಾಲರು ನೀಡಿರುವ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ಸಂಬಂಧ ನವೀದ್ ಹಾಗೂ ಆತನ ತಂದೆ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದಾರೆ.

ಘಟನೆಗೆ ಸಂಬಂಧಿಸಿ ಕಾಲೇಜ್ ಪ್ರಿನ್ಸಿಪಾಲ್ (Principle), ಠಾಣಾ ಪಿಎಸ್ಐ (PSI) ಮತ್ತು  ಪೋಲಿಸ್ ಸಿಬ್ಬಂದಿ ಸೇರಿ 7 ಜನರ ಮೇಲೆ ದೂರು ದಾಖಲಿಸಲು ಕೋರ್ಟ್ ಆದೇಶ ನೀಡಿತ್ತು.

ಕಳೆದ ಫೆ.‌18ರಂದು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ  ವಿದ್ಯಾರ್ಥಿ ನವೀದ್ ಟೋಪಿ ಧರಿಸಿ ಬಂದಿದ್ದ. ಇದೇ ಸಮಯದಲ್ಲಿ ಹಿಜಾಬ್ (Hijab) ವಿವಾದ ಸಹ ಸಾಕಷ್ಟು ವಿವಾದ ಸೃಷ್ಟಿಸಿತ್ತು. ಈ ವೇಳೆ ನವೀದ ಟೋಪಿ ಧರಿಸಿ ಬಂದ ಪರಿಣಾಮ ವಾದ ನಡೆದು ಕಾಲೇಜ ಪ್ರಾಚಾರ್ಯ ನವೀದ ಮೇಲೆ ಕೇಸ್ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ತೇರದಾಳ ಪೋಲಿಸರು ನವೀದನನ್ನ ವಶಕ್ಕೆ ಪಡೆದಿದ್ದರು. ಈ ವೇಳೆ ತನ್ನ ಮೇಲೆ ಪೋಲಿಸರಿಂದ ಹಲ್ಲೆಯಾಗಿದೆ ಎಂದು ನವೀದ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆದುಕೊಂಡಿದ್ದ.

ಈ ಮದ್ಯೆ ತನಗೆ ನ್ಯಾಯ ನೀಡುವಂತೆ ಕೋರಿ ವಿದ್ಯಾರ್ಥಿ ನವೀದ್, 2022ರ ಮಾರ್ಚ್ 29ರಂದು ಬನಹಟ್ಟಿಯ ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಅಜಿ೯ ಸಲ್ಲಿಸಿ, ಕಾಲೇಜು ಪ್ರಾಚಾರ್ಯ ಎ.ಎಸ್.ಪೂಜಾರ, ಠಾಣಾಧಿಕಾರಿ ರಾಜು ಬೀಳಗಿ ಮತ್ತು 7 ಜನ ಪೋಲಿಸರ ವಿರುದ್ಧ FIR ದಾಖಲಿಸುವಂತೆ ಅರ್ಜಿ ಸಲ್ಲಿಸಿದ್ದ. ಇದರ ಬೆನ್ನಲ್ಲೆ ವಿಚಾರಣೆ ನಡೆಸಿದ ಜೆಎಂಎಫ್ ಸಿ ನ್ಯಾಯಾಲಯ ಎಪ್ರಿಲ್ 4 ರಂದು 7 ಜನರ ವಿರುದ್ಧ ಪ್ರಕರಣ ದಾಖಲಿಸುವಂತೆ ಆದೇಶಿಸಿತ್ತು. ಇದರಿಂದ ಮೇ 24ರಂದು 7 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆಯ ಜವಾಬ್ದಾರಿಯನ್ನು ಜಮಖಂಡಿ ಡಿವೈಎಸ್ಪಿ ಅವರಿಗೆ ವಹಿಸಲಾಗಿದೆ. ಈ ಮಧ್ಯೆ ಜೂ.30ಕ್ಕೆ ನ್ಯಾಯಾಲಯ ಪ್ರಕರಣ ಸಂಭಂದ ವಿಚಾರಣೆ ನಡೆಸಲು ಮುಂದಾಗಿದೆ.
 

Follow Us:
Download App:
  • android
  • ios