ನಗರದಲ್ಲಿ ಅಕ್ರಮವಾಗಿ ವನ್ಯಜೀವಿಗಳು ಹಾಗೂ ಉತ್ಪನ್ನಗಳನ್ನು ಮಾರಾಟಕ್ಕೆ ಯತ್ನಿಸುತ್ತಿದ್ದ ಆರು ಮಂದಿಯನ್ನು ಪ್ರತ್ಯೇಕವಾಗಿ ರಾಜ್ಯ ಅಪರಾಧ ತನಿಖಾ ದಳದ (ಸಿಐಡಿ) ಅರಣ್ಯ ಘಟಕ ಸಂಚಾರಿ ದಳದ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು (ಫೆ.10) : ನಗರದಲ್ಲಿ ಅಕ್ರಮವಾಗಿ ವನ್ಯಜೀವಿಗಳು ಹಾಗೂ ಉತ್ಪನ್ನಗಳನ್ನು ಮಾರಾಟಕ್ಕೆ ಯತ್ನಿಸುತ್ತಿದ್ದ ಆರು ಮಂದಿಯನ್ನು ಪ್ರತ್ಯೇಕವಾಗಿ ರಾಜ್ಯ ಅಪರಾಧ ತನಿಖಾ ದಳದ (ಸಿಐಡಿ) ಅರಣ್ಯ ಘಟಕ ಸಂಚಾರಿ ದಳದ ಪೊಲೀಸರು ಬಂಧಿಸಿದ್ದಾರೆ.
ವಿದ್ಯಾನಗರದ ಸಿದ್ಧನಹೊಸಹಳ್ಳಿಯ ರಾಕೇಶ್ ಅಲಿಯಾಸ್ ರಾಕಿ, ರಘುನಂದನ್ ಅಲಿಯಾಸ್ ರಘು, ರಾಜಸ್ಥಾನದ ಲೋಕೇಶ್ ಜಾದು, ಮನಮನೋಹನ್ ಸಿಂಗ್ ಚೌಹಾಣ್, ಗುಲಾಬ್ ಚಂದ್ ಪ್ರಜಾಪತ್ ಹಾಗೂ ಮಹಾರಾಷ್ಟ್ರದ ದಿನೇಶ್ ಬಾಳಸಾಹೇಬ್ ಬಂಧಿತರಾಗಿದ್ದು, ಆರೋಪಿಗಳಿಂದ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಲಕ್ಷಾಂತರ ರು. ಮೌಲ್ಯದ ತಿಮಿಂಗಿಲ ವಾಂತಿ ಮಾರಾಟ ಯತ್ನ: ಇಬ್ಬರ ಬಂಧನ
ನೆಲಮಂಗಲ ಹಾಗೂ ಮೆಜೆಸ್ಟಿಕ್ ಸಮೀಪ ಗಿಳಿಗಳು ಹಾಗೂ ಆನೆ ದಂತ ಮಾರಾಟಕ್ಕೆ ಎರಡು ತಂಡಗಳು ಪ್ರತ್ಯೇಕವಾಗಿ ಯತ್ನಿಸಿರುವ ಬಗ್ಗೆ ಮಾಹಿತಿ ಪಡೆದು ಎಡಿಜಿಪಿ ಕೆ.ವಿ.ಶರತ್ ಚಂದ್ರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ರವಿಶಂಕರ್ ನೇತೃತ್ವದ ಸಬ್ ಇನ್ಸ್ಪೆಕ್ಟರ್ ಲತಾ ತಂಡ ಕಾರ್ಯಾಚರಣೆ ನಡೆಸಿ ಬಂಧಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
.₹4,500 ಸಾವಿರಕ್ಕೆ ಗಿಣಿ ಮಾರಾಟ
ಖಾಸಗಿ ಕಂಪನಿಯಲ್ಲಿ ನೌಕರಿಯಲ್ಲಿದ್ದ ರಾಕೇಶ್ ಹಾಗೂ ರಘುನಂದನ್, ನಿರಾಯಾಸವಾಗಿ ಹಣ ಗಳಿಸಲು ಗಿಣಿ ಮಾರಾಟ ದಂಧೆ ಶುರು ಮಾಡಿದ್ದರು. ಮಾಗಡಿ ರಸ್ತೆಯ ಗೊಲ್ಲರಹಳ್ಳಿ ವ್ಯಕ್ತಿಯೊಬ್ಬನಿಂದ ತಲಾ .3 ಸಾವಿರಕ್ಕೆ ಅಲೆಕ್ಯಾಂಡ್ರಿಯನ್ ಪ್ಯಾರಾಕಿಟ್ ಗಿಳಿಗಳನ್ನು ಖರೀದಿಸಿ ಬಳಿಕ ಜನರಿಗೆ .4500ಕ್ಕೆ ಮಾರುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ನೆಲಮಂಗಲ-ಕುಣಿಗಲ್ ಬೈಪಾಸ್ ರಸ್ತೆ ಬಳಿ ರಾಕೇಶ್ ಹಾಗೂ ರಘುನಂದ್ನನ್ನು ಬಂಧಿಸಲಾಯಿತು. ತಪ್ಪಿಸಿಕೊಂಡಿರುವ ಗಿಳಿಗಳ ಪೂರೈಕೆದಾರನ ಪತ್ತೆಗೆ ತನಿಖೆ ನಡೆದಿದೆ. ಇದೇ ರೀತಿ ನಾಲ್ಕೈದು ಬಾರಿ ಆರೋಪಿಗಳು ಗಿಳಿಗಳನ್ನು ಮಾರಾಟ ಮಾಡಿರುವುದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೆಜೆಸ್ಟಿಕ್ನ ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ಬಳಿ ಆನೆ ದಂತ ಮಾರಾಟಕ್ಕೆ ಯತ್ನಿಸಿದ್ದ ರಾಜಸ್ಥಾನದ ತಂಡ ಪೊಲೀಸರ ಬಲೆಗೆ ಬಿದ್ದಿದೆ. ಆರೋಪಿಗಳಿಂದ ಆನೆದಂತದಿಂದ ಮಾಡಿರುವ 7 ಉಂಗುರುಗಳು, ಪಗಡೆಯಾಟದ ದಾಳ ಹಾಗೂ ಕಲಾಕೃತಿಗಳನ್ನು ಜಪ್ತಿ ಮಾಡಲಾಗಿದೆ.
ಬೆಂಗ್ಳೂರಲ್ಲಿ 80 ಕೋಟಿ ಮೌಲ್ಯದ ತಿಮಿಂಗಿಲದ ವಾಂತಿ ಪತ್ತೆ..!
ತನಗೆ ಪ್ರಾಚೀನ ಕಾಲದ ಕಲಾಕೃತಿಗಳನ್ನು ಸಂಗ್ರಹಿಸುವ ಹವ್ಯಾಸವಿದ್ದು, ಇವುಗಳನ್ನು ರಾಜಸ್ಥಾನದ ಜಾತ್ರೆ, ಮಸೀದಿ ಹಾಗೂ ದರ್ಗಾಗಳಲ್ಲಿ ಸಂಗ್ರಹಿಸಿದ್ದಾಗಿ ಲೋಕೇಶ್ ವಿಚಾರಣೆ ವೇಳೆ ಹೇಳಿಕೆ ಕೊಟ್ಟಿದ್ದಾನೆ. ಬಳಿಕ ಇನ್ನುಳಿದ ಆರೋಪಿಗಳ ಸಹಕಾರದಲ್ಲಿ ದುಬಾರಿ ಬೆಲೆಗೆ ಮಾರಾಟಕ್ಕೆ ಯತ್ನಿಸಿದ್ದಾಗಿ ಆತ ಬಹಿರಂಗಪಡಿಸಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.
