ಅಸ್ಸಾಂ ಮೂಲದ ಇಬ್ಬರು ಸೆಕ್ಯೂರಿಟಿ ಗಾರ್ಡ್‌ಗಳನ್ನು ಅಡ್ಡಗಟ್ಟಿ ಅಪಹರಿಸಿ ನಿರ್ಜನಪ್ರದೇಶಕ್ಕೆ ಕರೆದೊಯ್ದು ಸುಲಿಗೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. 

ಬೆಂಗಳೂರು (ಜೂ.19): ಅಸ್ಸಾಂ ಮೂಲದ ಇಬ್ಬರು ಸೆಕ್ಯೂರಿಟಿ ಗಾರ್ಡ್‌ಗಳನ್ನು ಅಡ್ಡಗಟ್ಟಿ ಅಪಹರಿಸಿ ನಿರ್ಜನಪ್ರದೇಶಕ್ಕೆ ಕರೆದೊಯ್ದು ಸುಲಿಗೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶಾಂಪುರ ಮಿಲ್‌ ಸ್ಟ್ರೀಟ್‌ನ ಮೊಹಮ್ಮದ್‌ ವಾಹೀದ್‌ (24) ಮತ್ತು ಪಿಳ್ಳಣ್ಣ ಗಾರ್ಡನ್‌ನ ಮೊಹಮ್ಮದ್‌ ತೌಹೀದ್‌ (26) ಬಂಧಿತರು. ಆರೋಪಿಗಳಿಂದ ಎರಡು ದ್ವಿಚಕ್ರ ವಾಹನ, ಮೂರು ಮೊಬೈಲ್‌ ಹಾಗೂ 3,650 ನಗದು ಸೇರಿದಂತೆ ₹1.60 ಲಕ್ಷ ಮೌಲ್ಯದ ವಸ್ತುಗಳನ್ನ ಜಪ್ತಿ ಮಾಡಲಾಗಿದೆ.

Add Asianetnews Kannada as a Preferred SourcegooglePreferred

ಜೂ.9ರಂದು ಮಧ್ಯರಾತ್ರಿ ಸುಮಾರು 12.30ಕ್ಕೆ ಹೊರವರ್ತುಲ ರಸ್ತೆಯ ಸರ್ವಿಸ್‌ ರಸ್ತೆಯಲ್ಲಿ ಬರುತ್ತಿದ್ದ ಇಬ್ಬರು ವ್ಯಕ್ತಿಗಳನ್ನುಆರೋಪಿಗಳು ಅಡ್ಡಗಟ್ಟಿ ನಿರ್ಜನಪ್ರದೇಶದ ನಿರ್ಮಾಣ ಹಂತಕ್ಕೆ ಕರೆದೊಯ್ದು ಹಲ್ಲೆಗೈದು ಸುಲಿಗೆ ಮಾಡಿ ಬಿಟ್ಟು ಕಳುಹಿಸಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ತನಿಖೆ ಕೈಗೊಂಡು ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣ ವಿವರ: ಅಸ್ಸಾಂ ಮೂಲದ ಕೈಲ್ಯಾನ್‌ ಪೆಗು ಮತ್ತು ಉತ್ಪಲ್‌ ಉದ್ಯೋಗ ಅರೆಸಿ ಬೆಂಗಳೂರಿಗೆ ಬಂದಿದ್ದು, ಮರಿಯಣ್ಣಪಾಳ್ಯದ ಬಾಡಿಗೆ ಮನೆಯಲ್ಲಿ ನೆಲೆಸಿದ್ದಾರೆ. ಮಾನ್ಯತಾ ಟೆಕ್‌ ಪಾರ್ಕ್‌ನ ಖಾಸಗಿ ಕಂಪನಿಯಲ್ಲಿ ಸೆಕ್ಯೂರಿಟಿ ಗಾರ್ಡ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ. ಜೂ.9ರಂದು ರಾತ್ರಿ ಮಾರತ್‌ಹಳ್ಳಿಯಲ್ಲಿನ ಸ್ನೇಹಿತನನ್ನು ಭೇಟಿಯಾಗಿ ಬಳಿಕ ಮಧ್ಯರಾತ್ರಿ 12.30ಕ್ಕೆ ದ್ವಿಚಕ್ರ ವಾಹನದಲ್ಲಿ ಮನೆ ಕಡೆಗೆ ವಾಪಾಸಾಗುತ್ತಿದ್ದರು.

ವಾರದೊಳಗೆ ಬೆಂಗಳೂರಿನಲ್ಲಿ ಹೊಸ ಜಾಹೀರಾತು ನೀತಿ: ಡಿ.ಕೆ.ಶಿವಕುಮಾರ್‌

ಕಟ್ಟಡಕ್ಕೆ ಎಳೆದೊಯ್ದು ಸುಲಿಗೆ: ಈ ವೇಳೆ ಮಾರ್ಗ ಮಧ್ಯೆ ಬಾಣಸವಾಡಿ ಠಾಣಾ ವ್ಯಾಪ್ತಿಯ ಹೊರವರ್ತುಲ ರಸ್ತೆಯ ಸರ್ವಿಸ್ ರಸ್ತೆಯಲ್ಲಿ ಬರುವಾಗ, ಇಬ್ಬರು ಅಪರಿಚಿತರು ದ್ವಿಚಕ್ರ ವಾಹನದಲ್ಲಿ ಬಂದು ಅಡ್ಡಗಟ್ಟಿ ಬೆದರಿಸಿ ಕೈಲ್ಯಾನ್‌ ಪೆಗು ಮತ್ತು ಉತ್ಪಲ್‌ನನ್ನು ಹೆದರಿಸಿ ನಿರ್ಜನ ಪ್ರದೇಶದ ನಿರ್ಮಾಣ ಹಂತದ ಕಟ್ಟಡವೊಂದಕ್ಕೆ ಕರೆದೊಯ್ದು ಹಲ್ಲೆ ಮಾಡಿದ್ದಾರೆ. ಬಳಿಕ ದ್ವಿಚಕ್ರ ವಾಹನ, ಎರಡು ಮೊಬೈಲ್‌ ಕಿತ್ತುಕೊಂಡು ಇಬ್ಬರ ಖಾತೆಯಿಂದ 35 ಸಾವಿರ ರು. ಹಣವನ್ನು ಬೇರೆ ಖಾತೆಗೆ ವರ್ಗಾಯಿಸಿಕೊಂಡಿದ್ದರು. ಮಾರನೇ ದಿನ ಬೆಳಗ್ಗೆ ಇಬ್ಬರನ್ನು ಬಿಟ್ಟು ಪರಾರಿಯಾಗಿದ್ದರು. ಬಳಿಕ ಕೈಲ್ಯಾನ್ ಪೆಗು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ಬಾಣಸವಾಡಿ ಪೊಲೀಸ್‌ ಠಾಣೆಗೆ ಬಂದು ದೂರು ನೀಡಿದ್ದರು. ಈ ದೂರಿನ ಮೇರೆಗೆ ತನಿಖೆ ಕೈಗೊಂಡು ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.