ಧಾರವಾಡ: ಅತ್ಯಾಚಾರ ಆರೋಪಿಯ ಹೆಡೆಮುರಿ ಕಟ್ಟಿದ ಪೊಲೀಸರು
ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಪ್ರಕರಣ| ಬಾಲಕಿಯನ್ನ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿ| ಕಾಮುಕನನ್ನ ಬಂಧಿಸಿದ ಪೊಲೀಸರು|
ಧಾರವಾಡ(ಆ.14): ತಾಲೂಕಿನ ಮಾದನಬಾವಿ ಗ್ರಾಮದ ಬಾಲಕಿಯೋರ್ವಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಾದನಬಾವಿ ಗ್ರಾಮದ ಸಮೀರ್ ಮುಲ್ಲಾನವರ ಎಂಬಾತನೇ ಬಂಧಿತ. ಮೇ 21ರಂದು ಬಾಲಕಿ ಮೇಲೆ ಮಾದನಬಾವಿ ಗ್ರಾಮದ ಬಸವರಾಜ ಕೆರಾಳೆ ಹಾಗೂ ಸಮೀರ್ ಮುಲ್ಲಾನವರ ಎಂಬುವವರು ಲೈಂಗಿಕ ದೌರ್ಜನ್ಯ ನಡೆಸಿ, ಆಕೆಯನ್ನು ಕೊಲೆ ಮಾಡಿದ್ದರು.
ರಾಷ್ಟ್ರಧ್ವಜ ತಯಾರಾಗುವ ಊರಲ್ಲಿ ವಿಕೃತಿಗಳು, SSLC ಹುಡುಗಿಯರ ಬಾಳು ಕಸಿದ ಕಾಮಾಂಧರು!
ಈ ಸಂಬಂಧ ಗರಗ ಠಾಣೆಯಲ್ಲಿ ದೂರು ಸಹ ದಾಖಲಾಗಿತ್ತು. ಆದರೆ, ಈ ಪ್ರಕರಣ ಬೆಳಕಿಗೆ ಬಂದಿರಲಿಲ್ಲ. ಘಟನೆ ಸಂಬಂಧ ಕೇವಲ ಬಸವರಾಜ ಕೆರಾಳೆ ಎಂಬಾತನನ್ನು ಮಾತ್ರ ಬಂಧಿಸಲಾಗಿತ್ತು. ಆದರೆ, ಇನ್ನೊಬ್ಬ ಆರೋಪಿ ಕಣ್ಮರೆಯಾಗಿದ್ದ.
ಈ ಘಟನೆ ನಡೆದು ಮೂರು ತಿಂಗಳಾಗಿದ್ದರೂ ಇನ್ನೋರ್ವ ಆರೋಪಿ ಸಮೀರ್ ಮುಲ್ಲಾನವರನನ್ನು ಬಂಧಿಸಿರಲಿಲ್ಲ. ಪೊಲೀಸರು ಆರೋಪಿ ಬಂಧನಕ್ಕೆ ಸರಿಯಾಗಿ ಕ್ರಮ ಕೈಗೊಂಡಿಲ್ಲ ಎಂದು ಆರೋಪ ಕೇಳಿ ಬಂದಿತ್ತು. ಬೋಗೂರು ಗ್ರಾಮದಲ್ಲಿ ನಡೆದ ಘಟನೆ ನಂತರ ಈ ಘಟನೆಯ ಚರ್ಚೆಯೂ ಜೋರಾಗಿತ್ತು. ಸಾರ್ವಜನಿಕ ಸಂಘಟನೆಗಳು, ರಾಜಕೀಯ ಪಕ್ಷಗಳು ಪ್ರತಿಭಟನೆಯನ್ನು ನಡೆಸಿದ್ದವು. ಸಾರ್ವಜನಿಕ ಒತ್ತಡ ಜಾಸ್ತಿಯಾಗಿತ್ತು. ಇದೀಗ ಸಮೀರ್ನನ್ನು ಪೊಲೀಸರು ಬಂಧಿಸಿ ಕರೆ ತಂದಿದ್ದಾರೆ. ಈ ನಡುವೆ ಸ್ವತಃ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷೆ ಪ್ರಮಿಳಾ ನಾಯ್ಡು ಗುರುವಾರ ಮಾಧನಭಾವಿ ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದರು.