ಇತ್ತೀಚಿನ ದಿನಗಳಲ್ಲಿ ಭಾರೀ ತಲೆನೋವು ತಂದಿದ್ದ ಸರಗಳ್ಳನನ್ನು ಥಾಣೆ ಪೊಲೀಸರು ಚಾಣಾಕ್ಷತನದಿಂದ ಹಿಡಿದಿದ್ದಾರೆ. 15 ದಿನಗಳ ತನ ರಸ್ತೆಯಲ್ಲಿ ಭಿಕಾರಿಗಳಂತೆ ಅಲೆದಾಡಿದ ಪೊಲೀಸರು, ಸರಗಳ್ಳ ಸಿಕ್ಕ ಬಳಿಕ ಆತನನ್ನು ಹೆಗಲ ಮೇಲೆ ಹೊತ್ತುಕೊಂಡು ಪೊಲೀಸ್‌ ಸ್ಟೇಷನ್‌ನಲ್ಲಿ ಇರಿಸಿದ್ದಾರೆ. 

ಥಾಣೆ (ಏ.13): ಒಬ್ಬ ಸರಗಳ್ಳನನ್ನು ಹಿಡಿಯಲು ಪೊಲೀಸರು ಎಷ್ಟು ಪ್ರಯತ್ನ ಮಾಡಬಹುದು? ಹೆಚ್ಚೆಂದರೆ ಒಂದೆರಡು ವಾರ ಆತನನ್ನು ಗಲ್ಲಿಗಲ್ಲಿಗಳಲ್ಲಿ ಹುಡುಕಾಡಬಹುದು. ಆದರೆ, ಥಾಣೆ ಜಿಲ್ಲೆ ಅಂಬಿವಲಿಯಲ್ಲಿ ಇತ್ತೀಚೆಗೆ ಚೈನ್‌ ಸ್ನ್ಯಾಚರ್‌ನನ್ನು ಹಿಡಯುವ ಸಲುವಾಗಿ ಮೀರಾ ಭಯಂದರ್‌ ವಸಾಯಿ ವಿರಾರ್‌ (ಎಂಬಿವಿವಿ) ಪೊಲೀಸ್‌ನ ಅಪರಾಧ ವಿಭಾಗದ ಅಧಿಕಾರಿಗಳು ಮಾಡಿದ ಸಾಹಸಕ್ಕೆ ಖಂಡಿತಾ ಒಂದು ಮೆಚ್ಚುಗೆ ಬರಲೇಬೇಕು. ಸರಗಳ್ಳ ವಾಸ ಮಾಡುತ್ತಿದ್ದ ಪ್ರದೇಶದಲ್ಲಿ ಹಣ್ಣು ಮಾರುವವರು, ರಸ್ತೆ ಬದಿ ತಿಂಡಿ ಮಾರುವವರು, ಆಟೋ ರಿಕ್ಷಾ ಚಾಲಕರ ವೇಷದಲ್ಲಿ ತಿರುಗಾಟ ನಡೆಸಿದ್ದ ಪೊಲೀಸರು ವಾರಗಟ್ಟಲೆ ಕ್ಷೌರ ಮತ್ತು ಸ್ನಾನ ಕೂಡ ಮಾಡದೇ, ಹರಿದ ಚಪ್ಪಪಿ, ಕೊಳಕಾದ ಬಟ್ಟೆಗಳನ್ನು ಧರಿಸಿ ಸರಗಳ್ಳನ ಚಲನವಲಗಳನ್ನು ಗುರುತು ಮಾಡಿದ್ದರು. 15 ದಿನಗಳ ಕಾಲ ಸರಗಳ್ಳನ ಪ್ರದೇಶದಲ್ಲಿ ಗುರುತೇ ಸಿಗದಂತೆ ಓಡಾಡಿಕೊಂಡಿದ್ದ ಪೊಲೀಸರು ಕೊನೆಗೂ 24 ವರ್ಷದ ಅಬ್ಬಾಸ್‌ ಅಮ್ಜದ್‌ ಇರಾನಿಯನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ. ಹಾಗಂತ ಈತನಿಗೆ ಕೈಕೋಳ ಹಾಕಿ, ಮನೆ ಎದುರು ಜೀಪ್‌ ನಿಲ್ಲಿಸಿ ಬಂಧಿಸಿರಲಿಲ್ಲ. ಆತ ಸಿಕ್ಕಿದ ಬಳಿಕ, ಸ್ಥಳೀಯ ಜನರು ತಮ್ಮ ಮೇಲೆ ದಾಳಿ ಮಾಡುವುದನ್ನು ತಪ್ಪಿಸಿಕೊಳ್ಳಲು ಅಕ್ಷರಶಃ ಆತನನನ್ನು ಹೆಗಲ ಮೇಲೆ ಹೊತ್ತು 500 ಮೀಟರ್‌ ಓಡಿಕೊಂಡು ಪಕ್ಕದಲ್ಲಿಯೇ ಇದ್ದ ರೈಲ್ವೇ ಟ್ರ್ಯಾಕ್‌ಅನ್ನು ದಾಟಿ ಹೋಗಿದ್ದಾರೆ. ಬಳಿಕ ಆತನನನ್ನು ಬಂಧಿಸಿ ಪೊಲೀಸ್‌ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

ಕಳೆದ ಫೆಬ್ರವರಿಯಲ್ಲಿ ಮಣಿಕ್‌ಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಇರಾನಿ ವಿರುದ್ಧ ಸರಗಳ್ಳತನದ ಕೇಸ್‌ ದಾಖಲಾಗಿತ್ತು. ಆದರೆ, ಅಂಬಿವಿಲಿಯಲ್ಲಿ ಪೊಲೀಸರು ಈತನನ್ನು ಬಂಧಿಸಲು ಹೋದಾಗ, ಸರಗಳ್ಳತನ ಮಾಡುವ ಸದಸ್ಯರು ಇಡೀ ಸಮುದಾಯಕ್ಕೆ ಅಲರ್ಟ್‌ ಮಾಡಿದ್ದರು. ಸ್ಥಳಕ್ಕೆ ಹೋದ ಪೊಲೀಸರು ಅಲ್ಲಿಂದ ಬರಿಗೈಲಿ ವಾಪಸ್‌ ಆಗಿದ್ದರು. ಆತನಿರುವ ಪ್ರದೇಶಕ್ಕೆ ಹೋಗಿ, ಆತನನ್ನು ಬಂಧಿಸುವುದು ಅಸಾಧ್ಯವಾದ ಮಾತು ಎನ್ನುವುದು ಪೊಲೀಸರಿಗೆ ಗೊತ್ತಾಗಿತ್ತು. ಕಲ್ಲುತೂರಾಟಕ್ಕೆ ಹೆಸರಾಗಿರುವ ಇರಾನಿ ಸಮುದಾಯ, ಹಾಗೇನಾದರೂ ಸರಗಳ್ಳನನ್ನು ಆತನ ಪ್ರದೇಶದಲ್ಲಿಯೇ ಬಂಧಿಸಿದ್ದಲ್ಲಿ ಆಗಬಹುದಾದ ಅಪಾಯವನ್ನು ಅಂದಾಜು ಮಾಡಿತ್ತು. ಇದಕ್ಕಾಗಿ ಅಂಬಿವಿಲಿಗೆ ಐದು ಬಾರಿ ಭೇಟಿ ನೀಡಿದ್ದ ಪೊಲೀಸರು, ಅಮ್ಜದ್‌ ಇರಾನಿ ಊಟ ಮಾಡುವ ಹೋಟೆಲ್‌ ಸೇರಿದಂತೆ ಇತರ ಮಾಹಿತಿಗಳನ್ನು ಕಲೆ ಹಾಕಿತ್ತು. ಕೊನೆಗೆ ಏಪ್ರಿಲ್‌ 3 ರಂದು ಈತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ನಮ್ಮ ಇಬ್ಬರು ಅಧಿಕಾರಿಗಳು ಆತನ ಬೈಕ್‌ಅನ್ನು ತಡೆಯಲು ಪ್ರಯತ್ನಿಸಿದಾಗ ಆತ ಕೆಳಗೆ ಬಿದ್ದಿದ್ದ. ಈ ವೇಳೆ ಮತ್ತಿಬ್ಬರು ಅಧಿಕಾರಿಗಳು ಅಲ್ಲಿ ಜೊತೆಯಾದರು. ಈ ನಾಕ್ವರೂ ಸೇರಿ ಇರಾನಿಯನ್ನು ಎತ್ತಿದ್ದಲ್ಲದೆ, ಪಕ್ಕದಲ್ಲಿಯೇ ಇದ್ದ ರೈಲ್ವೇ ಟ್ರ್ಯಾಕ್‌ನಿಂದ ಆಚೆಗೆ ಎತ್ತಿಕೊಂಡು ಹೋದರು. ಅಂದಾಜು 500 ಮೀಟರ್‌ ಈತನನ್ನು ಎತ್ತಿಕೊಂಡು ಹೋದ ಪೊಲೀಸ್‌, ಆತನನ್ನು ಆಟೋರಿಕ್ಷಾಕ್ಕೆ ತುಂಬಿದರು. ಬಳಿಕ ಪೊಲೀಸ್ ವಾಹನನ್ನು ಈತನನ್ನು ಬುಂದು ವಾಸೈನಲ್ಲಿ ಹೆಚ್ಚಿನ ತನಿಖೆಗಾಗಿ ಕರೆದುಕೊಂಡು ಹೋಗಲಾಯಿತು ಎಂದು ಪೊಲೀಸ್‌ ಠಾಣೆಯ ಕ್ರೈಮ್‌ ಬ್ರ್ಯಾಂಚ್‌ ಯುನಿಟ್‌-2ನ ಇನ್ಸ್‌ಪೆಕ್ಟರ್‌ ಶಾಹುರಾಜ್‌ ರಾಣಾವೇರ್‌ ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ನಡುಗಿದ ಮಾಫಿಯಾ, ಗ್ಯಾಂಗ್‌ಸ್ಟರ್ ಅತೀಕ್ ಅಹಮ್ಮದ್ ಪುತ್ರನ ಎನ್‌ಕೌಂಟರ್!

ಇರಾನಿಯನ್ನು ಎತ್ತಿಹಾಕಿಕೊಂಡು ಹೋಗುವ ವೇಳೆ, ಪ್ರದೇಶದಲ್ಲಿ ಯಾರೋ ಒಬ್ಬರ ಕೊಲೆಯಾಗಿದೆ ಎಂದು ಸುದ್ದಿ ಹಬ್ಬಿಸಲಾಗಿತ್ತು. ಈ ಸುದ್ದಿ ಸುಳ್ಳು ಎಂದು ಇರಾನಿ ಗ್ಯಾಂಗ್‌ಗೆ ಗೊತ್ತಾಗುವ ವೇಳೆಗೆ ಪೊಲೀಸರು ಅಮ್ಜದ್‌ ಇರಾನಿಯನ್ನು ಬಂಧಿಸಿ ಪೊಲೀಸ್‌ ಠಾಣೆಗೆ ಕರೆದುಕೊಂಡು ಹೋಗುವ ಮಾರ್ಗದಲ್ಲಿತ್ತು.

ಥಾಯ್ಲೆಂಡ್‌ನಲ್ಲಿ ಸ್ಕೂಬಾ ಡೈವಿಂಗ್ ವೇಳೆ ಅವಘಡ, ಮಂಗಳೂರಿನ ಯುವ ಉದ್ಯಮಿ ಸಾವು!

ಡಿಸಿಪಿ (ಕ್ರೈಂ ಬ್ರಾಂಚ್) ಅವಿನಾಶ್ ಅಂಬೂರೆ ಮಾತನಾಡಿದ್ದು, 'ಇರಾನಿ ವಾಸೈ, ವಿರಾರ್-ನಲಸೋಪಾರದಲ್ಲಿ ಏಳು ಚೈನ್ ಸ್ನ್ಯಾಚಿಂಗ್ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಮುಂಬೈ ಮತ್ತು ಥಾಣೆ ಜಿಲ್ಲೆಯಲ್ಲಿ ದಾಖಲಾದ 21 ಪ್ರಕರಣಗಳಲ್ಲೂ ಈತ ಆರೋಪಿಯಾಗಿದ್ದಾನೆ. ಆತನ ವಿರುದ್ಧ ಎರಡು MCOCA ಪ್ರಕರಣಗಳಿವೆ' ಎಂದು ತಿಳಿಸಿದ್ದಾರೆ. ಇಂಥ ಕೃತ್ಯಗಳನ್ನು ಮಾಡಲು ತನ್ನ ತಂದೆ ಹಾಗೂ ಚಿಕ್ಕಪ್ಪನಿಂದ ತರಬೇತಿ ಪಡೆದಿದ್ದ. ಅವರೂ ಕೂಡ ಪೊಲೀಸ್‌ ಕಸ್ಟಡಿಯಲ್ಲಿದ್ದಾರೆ. ದೆಹಲಿಯಲ್ಲಿ ಇರಾನಿ ವಿರುದ್ಧ 100 ಕ್ಕೂ ಹೆಚ್ಚು ಚೈನ್ ಸ್ನ್ಯಾಚಿಂಗ್ ಪ್ರಕರಣಗಳು ದಾಖಲಾಗಿವೆ.