ಸುಪ್ರೀಂ ಕೋರ್ಟ್ ಖುಲಾಸೆ ಮಾಡಿದ್ದ ಛವ್ಲಾ ಗ್ಯಾಂಗ್ರೇಪ್ ಕೇಸ್ ಆರೋಪಿಯಿಂದ ಆಟೋ ಚಾಲಕನ ಕೊಲೆ!
ದೇಶ ಕಂಡ ಅತ್ಯಂತ ಭೀಕರ ರೇಪ್ & ಮರ್ಡರ್ ಕೇಸ್ಗಳ ಪೈಕಿ ಒಂದಾದ ಛವ್ಲಾ ರೇಪ್ ಕೇಸ್ನಲ್ಲಿ ಮೂವರು ಆರೋಪಿಗಳನ್ನು ತನಿಖೆಯಲ್ಲಿ ದೋಷದ ಕಾರಣದಿಂದಾ ಸುಪ್ರೀಂ ಕೋರ್ಟ್ 2022ರ ನವೆಂಬರ್ 7ರಂದು ಖುಲಾಸೆ ಮಾಡಿತ್ತು. ಇದಕ್ಕೆ ಸಾಕಷ್ಟು ಆಕ್ರೋಶ ವ್ಯಕ್ತವಾದರೂ, ಸುಪ್ರೀಂ ಕೋರ್ಟ್ ಆರೋಪಿಗಳನ್ನು ಬಿಡುಗಡೆ ಮಾಡಿತ್ತು. ಬಿಡುಗಡೆಯಾದ ಮೂರು ತಿಂಗಳಲ್ಲೇ ಗ್ಯಾಂಗ್ರೇಪ್ ಆರೋಪಿಗಳು ಕೊಲೆ ಮಾಡಿ ಸಿಕ್ಕಿಬಿದ್ದಿದ್ದಾರೆ.
ನವದೆಹಲಿ (ಫೆ.8): ದೇಶದ ಅತ್ಯಂತ ಭೀಕರ ಗ್ಯಾಂಗ್ರೇಪ್ಗಳಲ್ಲಿ ಒಂದಾದ ಛವ್ಲಾ ಗ್ಯಾಂಗ್ರೇಪ್ & ಮರ್ಡರ್ ಕೇಸ್ನಲ್ಲಿ ಸುಪ್ರೀಂ ಕೋರ್ಟ್ನಿಂದ ಆಘಾತಕಾರಿಯಾಗಿ ಖುಲಾಸೆಗೊಂಡಿದ್ದ ಮೂವರು ಆರೋಪಿಗಳ ಪೈಕಿ ಒಬ್ಬ ಆರೋಪಿ ಕೊಲೆ ಮಾಡಿ ಸಿಕ್ಕಿಬಿದ್ದಿದ್ದಾರೆ. ಇದರ ನಡುವೆ ದೆಹಲಿ ಪೊಲೀಸ್ ಛವ್ಲಾ ರೇಪ್ ಕೇಸ್ನಲ್ಲಿ ಆರೋಪಿಗಳನ್ನು ಖುಲಾಸೆ ಮಾಡಿರುವ ಅರ್ಜಿಯನ್ನು ಪುನಃ ಪರಿಶೀಲಿಸಬೇಕು ಎಂದು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಿದೆ. ಫೆ. 4 ರಂದು ದೆಹಲಿ ಪೊಲೀಸ್ ನೀಡಿರುವ ಹೇಳಿಕೆಯಲ್ಲಿ ದೆಹಲಿಯಲ್ಲಿ ನಡೆದ ಆಟೋ ರಿಕ್ಷಾ ಚಾಲಕನ ಹತ್ಯೆಯಲ್ಲಿ 35 ವರ್ಷದ ವಿನೋದ್ ಎನ್ನುವವನ ಪಾತ್ರ ಕೂಡ ಇದೆ ಎಂದು ಹೇಳಿದೆ. ವಿನೋದ್, 2012ರಲ್ಲಿ ನಡೆದ ಛವ್ಲಾ ರೇಪ್ & ಮರ್ಡರ್ ಕೇಸ್ನ ಪ್ರಮುಖ ಆರೋಪಿಗಳಲ್ಲಿ ಒಬ್ಬರಾಗಿದ್ದ. ತನಿಖೆಯಲ್ಲಿ ಲೋಪದೋಷಗಳಿವೆ ಎನ್ನುವ ಕಾರಣ ನೀಡಿದ್ದ ಸುಪ್ರೀಂ ಕೋರ್ಟ್ 2022ರ ನವೆಂಬರ್ 7 ರಂದು ರೇಪ್ ಕೇಸ್ನಲ್ಲಿ ಭಾಗಿಯಾಗಿದ್ದ ವಿನೋದ್ ಸೇರಿದಂತೆ ಇತರ ಇಬ್ಬರನ್ನು ಖುಲಾಸೆ ಮಾಡಿತ್ತು. ಈ ನಡುವೆ ಜನವರಿ 26 ರ ಸಂಜೆಯ ವೇಳೆಗೆ ದ್ವಾರಕಾ ಪ್ರದೇಶದ ಸೆಕ್ಷನ್ 14 ಪ್ರದೇಶದಲ್ಲಿ ಆಟೋ ರಿಕ್ಷಾ ಚಾಲಕನ ಕೊಲೆಯಾಗಿತ್ತು. ಇದರಲ್ಲಿ ವಿನೋದ್ ಅಲ್ಲದೆ, ಪವನ್ ಎನ್ನುವ ಇನ್ನಿಬ್ಬ ವ್ಯಕ್ತಿ ಕೂಡ ಆರೋಪಿಯಾಗಿದ್ದಾನೆ.
Chhawla Rape & Murder ದೇಶ ಕಂಡ ಅತ್ಯಂತ ಭೀಕರ ಕೇಸ್: ಕಣ್ಣಿಗೆ ಆಸಿಡ್ ಹಾಕಿದ್ದ ಪಾಪಿಗಳು, ನಿರ್ಭಯಾ ರೀತಿಯ ರೇಪ್ ಕೇಸ್.. ಆದ್ರೂ ಆರೋಪಿಗಳು ಖುಲಾಸೆ!
ವಿಚಾರಣೆಯ ವೇಳೆ ವಿನೋದ್ ಕೂಡ ತಪ್ಪೊಪ್ಪಿಕೊಂಡಿದ್ದಾರೆ. ಜನವರಿ 26 ರಂದು ತಾವು ಅಂದಾಜು 44 ವರ್ಷದ ಅನಾರ್ ಸಿಂಗ್ ಅವರ ಆಟೋ ರಿಕ್ಷಾವನ್ನು ಹತ್ತಿದ್ದೆ. ದ್ವಾರಕಾ ಪ್ರದೇಶಕ್ಕೆ ಮುಟ್ಟುವ ವೇಳೆಗೆ ಅನಾರ್ ಸಿಂಗ್ರನ್ನು ಲೂಟಿ ಮಾಡಲು ಯತ್ನಿಸಿದ್ದರು. ಇದಕ್ಕೆ ಅನಾರ್ ಸಿಂಗ್ ಪ್ರತಿರೋಧ ತೋರಿದಾಗ ಆತನ ಕುತ್ತಿಗೆಗೆ ಚಾಕು ಇರಿದಿದ್ದಾರೆ. ಅನಾರ್ ಸಿಂಗ್ ದೆಹಲಿ ಮುನಿರ್ಕಾ ಭಾಗದ ನಿವಾಸಿಯಾಗಿದ್ದಾರೆ.
ರಾಜಕೀಯ ಹಿನ್ನೆಲೆಯವರಿಗೆ ಜಡ್ಜ್ ಹುದ್ದೆ: ರಿಜಿಜು ಸಮರ್ಥನೆ; ಮದ್ರಾಸ್ ಹೈಕೋರ್ಟ್ಗೆ ಗೌರಿ ನೇಮಕ ಹಿನ್ನೆಲೆ ಸುಪ್ರೀಂ ವಿಚಾರಣೆ
ಪೊಲೀಸರ ಮಾಹಿತಿಯ ಪ್ರಕಾರ, ಅನಾರ್ ಸಿಂಗ್ಗೆ ಚಾಕು ಇರಿದ ಬಳಿಕ, ಆಟೋ ರಿಕ್ಷಾದಿಂದ ಕೆಳಗಿಳಿದು ಸ್ಥಳೀಯ ಜನರ ಸಹಾಯ ಬೇಡಿದ್ದರು. ದಾಳಿಕೋರರು ಗಾಬರಿಗೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ. ಸಿಸಿಟಿವಿ ಕ್ಯಾಮೆರಾದಲ್ಲಿ ಅಪರಾಧ ಸೆರೆಯಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ “ಸಿಸಿಟಿವಿ ದೃಶ್ಯಗಳಲ್ಲಿ, ಅವರು ರಣಹೋಲಾ ಕಡೆಗೆ ನಡೆದುಕೊಂಡು ನಂತರ ದ್ವಾರಕಾ ಪ್ರದೇಶಕ್ಕೆ ಮರಳಿದ್ದು ಗೊತ್ತಾಗಿದೆ. ಅಲ್ಲಿ ಅವರು ಬೇರೆ ಬೇರೆಯಾಗಿದ್ದಾರೆ. ವಿನೋದ್ ಯಾವ ದಿಕ್ಕಿನಲ್ಲಿ ಹೋದರು ಎಂಬುದನ್ನು ಯಾವುದೇ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿಲ್ಲ. ಆದ್ದರಿಂದ ಅವರ ಮುಂದಿನ ಚಲನವಲನವನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ' ಎಂದು ಹೇಳಿದ್ದಾರೆ.
ಉಪ ಪೊಲೀಸ್ ಆಯುಕ್ತ (ಡಿಸಿಪಿ) ದ್ವಾರಕಾ, ಎಂ ಹರ್ಷವರ್ಧನ್ ಈ ಕುರಿತಾಗಿ ಮಾಹಿತಿ ನೀಡಿದ್ದು, ಚಾವ್ಲಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಕ್ಕಾಗಿ 10 ವರ್ಷಗಳ ನಂತರ ವಿನೋದ್ ಜೈಲಿನಿಂದ ಇತ್ತೀಚೆಗೆ ಬಿಡುಗಡೆಗೊಂಡಿದ್ದ ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಖುಲಾಸೆಗೊಳಿಸಿದ ಮೂವರಲ್ಲಿ ಈತ ಕೂಡ ಒಬ್ಬನಾಗಿದ್ದ ಎಂದಿದ್ದಾರೆ.
ಆರೋಪಿಗಳನ್ನು ಬಂಧಿಸಲು ಪೊಲೀಸ್ ತಂಡ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದೆ. ವಿನೋದ್ನ ಚಿಕ್ಕಮ್ಮನ ಮನೆಯ ಮೇಲೆ ದಾಳಿ ನಡೆಸಿದರೂ ಆತ ಪತ್ತೆಯಾಗಿರಲಿಲ್ಲ. ಪವನ್ ವಿಳಾಸವನ್ನು ಆತನ ಸಂಬಂಧಿಕರು ಬಹಿರಂಗಪಡಿಸಿದ್ದಾರೆ. ಜನವರಿ 29 ರಂದು ಆತನನ್ನು ಫರಿದಾಬಾದ್ ಮನೆಯಿಂದ ಬಂಧಿಸಲಾಗಿದೆ. ಆರಂಭದಲ್ಲಿ, ಪ್ರಕರಣದ 2ನೇ ಆರೋಪಿ, ಚಾವ್ಲಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ನ್ಯಾಯಾಲಯದಿಂದ ಖುಲಾಸೆಗೊಂಡ ವ್ಯಕ್ತಿ ಎನ್ನುವುದು ಪೊಲೀಸರಿಗೆ ತಿಳಿದಿರಲಿಲ್ಲ. ವಿಚಾರಣೆ ವೇಳೆ ಪವನ್ ತನ್ನ ಗುರುತು ಬಹಿರಂಗಪಡಿಸಿದ್ದಾನೆ. ಡಿಸಿಪಿ ಮಾತನಾಡಿ, “ಆಟೊ ಚಾಲಕನನ್ನು ದರೋಡೆ ಮಾಡುವ ಸಲುವಾಗಿ ಕೊಂದಿದ್ದೇವೆ ಎಂದು ವಿನೋದ್ ಮತ್ತು ಪವನ್ ಇಬ್ಬರೂ ಹೇಳಿದ್ದಾರೆ. ಖುಲಾಸೆಯಾದ ನಂತರ ಇದು ಅವರ ಮೊದಲ ಅಪರಾಧ ಎಂದು ವಿನೋದ್ ಹೇಳಿದ್ದಾನೆ' ಎಂದು ಪೊಲೀಸರು ತಿಳಿಸಿದ್ದಾರೆ.
ಏನಿದು ಛವ್ಲಾ ರೇಪ್ ಕೇಸ್: 2012ರ ಫೆಬ್ರವರಿ 9 ರಂದು, ಛವ್ಲಾ ಪ್ರದೇಶದಿಂದ ಯುವತಿಯನ್ನು ಅಪಹರಿಸಲಾಗಿತ್ತು. ಕೆಲವು ದಿನಗಳ ನಂತರ, ಪೊಲೀಸರಿಗೆ ಆಕೆಯ ಶವ ಹರಿಯಾಣದ ರೆವಾರಿಯಲ್ಲಿ ಸಿಕ್ಕಿತ್ತು. ಶವಪರೀಕ್ಷೆಯಲ್ಲಿ ಆಕೆಯ ಮೇಲೆ ಹರಿತವಾದ ವಸ್ತುಗಳು ಮತ್ತು ಗಾಜಿನ ಬಾಟಲಿಗಳಿಂದ ಹಲ್ಲೆ ನಡೆಸಿರುವುದು ಬೆಳಕಿಗೆ ಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಾದ ರಾಹುಲ್, ರವಿ ಮತ್ತು ವಿನೋದ್ ಅವರನ್ನು ಪೊಲೀಸರು ಬಂಧನ ಮಾಡಿದ್ದರು. 2014ರ ಫೆಬ್ರವರಿ 19 ರಂದು ದೆಹಲಿ ನ್ಯಾಯಾಲಯವು ಅವರಿಗೆ ಮರಣದಂಡನೆ ವಿಧಿಸಿತು. ಈ ತೀರ್ಪನ್ನು 2014ರ ಆಗಸ್ಟ್ 26ರಂದು ಹೈಕೋರ್ಟ್ ಎತ್ತಿ ಹಿಡಿದಿತ್ತು. ಆದರೆ, ತನಿಖೆಯಲ್ಲಿದ್ದ ದೋಷದ ಕಾರಣ, 2022ರ ನವೆಂಬರ್ 7 ರಂದು ಸುಪ್ರೀಂ ಕೋರ್ಟ್ ಇವರ ಮರಣದಂಡನೆಯನ್ನು ರದ್ದು ಮಾಡಿದ್ದಲ್ಲದೆ, ಪ್ರಕರಣದಿಂದ ಖುಲಾಸೆಯನ್ನೂ ಮಾಡಿತ್ತು.