* ಹೆಣ್ಣೂರು ಸಮೀಪ ಗೆದ್ದಲಹಳ್ಳಿಯ ಬಿಡಿಎಸ್ ಗಾರ್ಡನ್ನಲ್ಲಿ ಘಟನೆ* ಆರೋಪಿಯನ್ನ ಬಂಧಿಸಿದ ಪೊಲೀಸರು* ಇಬ್ಬರ ಜಗಳ ಕೊಲೆಯಲ್ಲಿ ಅಂತ್ಯ
ಬೆಂಗಳೂರು(ಅ.04): ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಬೀಗರ ಮಧ್ಯೆ ಉಂಟಾದ ಜಗಳ ಕೊಲೆಯಲ್ಲಿ(Murder) ಅಂತ್ಯವಾಗಿರುವ ಘಟನೆ ಹೆಣ್ಣೂರು ಸಮೀಪ ಗೆದ್ದಲಹಳ್ಳಿಯ ಬಿಡಿಎಸ್ ಗಾರ್ಡನ್ನಲ್ಲಿ ನಡೆದಿದೆ.
ಸಿದ್ಧಾರ್ಥ ನಗರದ ನಿವಾಸಿ ಮಹಮ್ಮದ್ ಮೆಹಮೂದ್ (48) ಕೊಲೆಯಾದ ದುರ್ದೈವಿ. ಈ ಘಟನೆ ಸಂಬಂಧ ಮೃತನ ಸಂಬಂಧಿ ನಜೀರ್ ಅಹಮ್ಮದ್ನನ್ನು ಹೆಣ್ಣೂರು ಪೊಲೀಸರು ಬಂಧಿಸಿದ್ದಾರೆ(Arrest). ಕೌಟುಂಬಿಕ ವಿಚಾರವಾಗಿ ಬೀಗರ ಜತೆ ಮಾತನಾಡಲು ನಜೀರ್ ಅವರ ಟೈಲರ್ ಅಂಗಡಿಗೆ ಶನಿವಾರ ರಾತ್ರಿ ಮೆಹಮೂದ್ ಬಂದಿದ್ದರು. ಆ ವೇಳೆ ಇಬ್ಬರ ನಡುವೆ ಮಾತುಕತೆ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಮೆಹಮೂದ್ ತಲೆಗೆ ನಜೀರ್ ದೊಣ್ಣೆಯಿಂದ ಹೊಡೆದು ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡು ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು(Police) ಹೇಳಿದ್ದಾರೆ.
ಸೀದ ಚಪಾತಿ ಕೊಟ್ಟಿದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ಕೊಂದೇ ಬಿಟ್ಟ!
ಗೆದ್ದಲಹಳ್ಳಿಯಲ್ಲಿ ಗ್ಯಾರೇಜ್ ಇಟ್ಟಿದ್ದ ಮೆಹಮೂದ್, ತಮ್ಮ ಕುಟುಂಬದ ಜತೆ ನೆಲೆಸಿದ್ದರು. ಎಂಟು ತಿಂಗಳ ಹಿಂದೆ ಅವರ ಮಗಳ ಜತೆ ನಜೀರ್ ಅಹಮ್ಮದ್ ಪುತ್ರನ ವಿವಾಹವಾಗಿತ್ತು. ಮದುವೆ ನಂತರ ಎರಡು ಕುಟುಂಬಗಳ ನಡುವೆ ಮನಸ್ತಾಪವಾಯಿತು. ಇದೇ ವಿಚಾರಕ್ಕೆ ಬೀಗರ ಜತೆ ಮಾತುಕತೆ ಸಲುವಾಗಿ ಅಂಗಡಿಗೆ ರಾತ್ರಿ 8.30ರ ಸುಮಾರಿಗೆ ಮಹಮ್ಮದ್ ತೆರಳುತ್ತಿದ್ದರು. ಆಗ ಇಬ್ಬರ ಮಧ್ಯೆ ಬಿರುಸಿನ ಮಾತುಕತೆ ನಡೆದು ಜಗಳವು ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
