*  ಜಸ್ಟ್‌ ಡಯಲ್‌ನಲ್ಲಿ ಜಾಹೀರಾತು ನೀಡಿ ಮೋಸ*  ನಕಲು ಪ್ರತಿ ತೋರಿಸಿ ವಂಚನೆ *  ಕೊರೋನಾ ಲಾಕ್‌ಡೌನ್‌ ವೇಳೆ ಕೆಲಸ ಕಳೆದುಕೊಂಡಿದ್ದ ಆರೋಪಿ  

ಬೆಂಗಳೂರು(ಮಾ.08): ಅಡವಿಟ್ಟ ಚಿನ್ನಾಭರಣವನ್ನು(Gold) ಕಡಿಮೆ ಬೆಲೆಗೆ ಬಿಡಿಸಿಕೊಡುವುದಾಗಿ ನಂಬಿಸಿ ಗ್ರಾಹಕರಿಂದ ಹಣ ಪಡೆದು ವಂಚಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ವೈಟ್‌ಫೀಲ್ಡ್‌ ಠಾಣೆ ಪೊಲೀಸರು(Police) ಬಂಧಿಸಿದ್ದಾರೆ.

Add Asianetnews Kannada as a Preferred SourcegooglePreferred

ಕಾಡುಗೋಡಿಯ ವಿಎಸ್‌ಆರ್‌ ಲೇಔಟ್‌ ನಿವಾಸಿ ಇಲಿಯಾಸ್‌ ಪಾಷಾ (35) ಬಂಧಿತ(Arrest). ಬಿ.ಕಾಂ. ಪದವೀಧರನಾದ ಈತ ನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಈತನ ಪತ್ನಿ ಪ್ರತಿಷ್ಠಿತ ಸಾಫ್ಟ್‌ವೇರ್‌ ಕಂಪನಿಯಲ್ಲಿ ಎಂಜಿನಿಯರ್‌ ಆಗಿದ್ದಾರೆ. ಕೊರೋನಾ(Coronavirus) ಲಾಕ್‌ಡೌನ್‌(Lockdown) ವೇಳೆ ಕೆಲಸ ಕಳೆದುಕೊಂಡಿದ್ದ ಇಲಿಯಾಸ್‌, ಮೋಜು-ಮಸ್ತಿಗೆ ಹಣ ಹೊಂದಿಸಲು ವಂಚನೆ ಹಾದಿ ಹಿಡಿದಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Crime News: ಬಾಡಿಗೆ ನೆಪದಲ್ಲಿ ಕ್ಯಾಮರಾ ಎಗರಿಸುತ್ತಿದ್ದ ಕಿಡಿಗೇರಿ ಸೆರೆ

ಜಸ್ಟ್‌ ಡಯಲ್‌ನಲ್ಲಿ ಜಾಹೀರಾತು!

ಆರೋಪಿಯು(Accused) ತನ್ನ ಮೊಬೈಲ್‌ ನಂಬರ್‌ ಜಸ್ಟ್‌ ಡಯಲ್‌ನಲ್ಲಿ ಅಪ್ಲೋಡ್‌ ಮಾಡಿ ಅಡವಿಟ್ಟ ಚಿನ್ನಾಭರಣ ಕಡಿಮೆ ಬೆಲೆಗೆ ಬಿಡಿಸಿಕೊಡುವುದಾಗಿ ಜಾಹೀರಾತು ನೀಡಿದ್ದ. ಇದನ್ನು ನೋಡಿ ಕರೆ ಮಾಡಿದ ಗ್ರಾಹಕರೊಂದಿಗೆ ಚೆನ್ನಾಗಿ ಮಾತನಾಡಿ, ಚಿನ್ನ ಅಡವಿರಿಸುವ ಅಂಗಡಿ ಬಳಿಗೆ ಕರೆಸಿಕೊಂಡು ಹಣ ಹಾಗೂ ಅಡವಿಟ್ಟ ಚಿನ್ನದ ಬಿಲ್‌ ಪಡೆದು ಅವರನ್ನು ಹೊರಗಡೆ ನಿಲ್ಲಿಸಿ ಒಬ್ಬನ್ನೇ ಚಿನ್ನದ ಅಂಗಡಿ ಒಳಗೆ ಹೋಗುತ್ತಿದ್ದ. ಕೆಲ ಹೊತ್ತಿನ ಬಳಿಕ ಹೊರಗೆ ಬಂದು ಹಣ ಮತ್ತು ಬಿಲ್‌ ಕೊಟ್ಟಿದ್ದೇನೆ. ಲೆಕ್ಕ ಹಾಕುತ್ತಿದ್ದಾರೆ. ಇನ್ನು ಸ್ವಲ್ಪ ಹೊತ್ತಿಗೆ ಅವರೇ ಕೂಗುತ್ತಾರೆ ಎಂದು ಹೇಳುತ್ತಿದ್ದ. ಬಳಿಕ ಏನಾದರೂ ತುರ್ತು ಕಾರಣ ನೀಡಿ ಕೈಯಲ್ಲಿ ಮೊಬೈಲ್‌ ಹಿಡಿದು ಐದು ನಿಮಿಷಕ್ಕೆ ವಾಪಸ್‌ ಬರುವುದಾಗಿ ಹೇಳಿ ಹೊರಡುತ್ತಿದ್ದ. ಬಳಿಕ ಮೊಬೈಲ್‌ ಸ್ವಿಚ್ಡ್‌ ಆಫ್‌ ಮಾಡಿಕೊಳ್ಳುತ್ತಿದ್ದ. ಎಷ್ಟುಬಾರಿ ಪ್ರಯತ್ನಿಸಿದರೂ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ. ವಂಚನೆ ಹಣದಲ್ಲಿ ಗೋವಾಗೆ(Goa) ಹೋಗಿ ಕ್ಯಾಸಿನೋಗಳಲ್ಲಿ ಮೋಜು-ಮಸ್ತಿ ಮಾಡಿ ವ್ಯಯಿಸುತ್ತಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

2 ಲಕ್ಷ ರು. ಪಡೆದು ಪರಾರಿ:

ಕೆಲ ದಿನಗಳ ಹಿಂದೆ ಕಾರ್ತಿಕ್‌ ಎಂಬುವವರು ಮುತ್ತೂಟ್‌ ಫಿನ್‌ ಕಾಪ್‌ರ್ಲಿ 2 ಲಕ್ಷ ರು.ಗೆ ಚಿನ್ನ ಅಡವಿಟ್ಟಿದ್ದರು. ಜಾಹೀರಾತು ನೋಡಿ ಸಂಪರ್ಕಿಸಿದಾಗ ಚಿನ್ನ ಬಿಡಿಸಿಕೊಡುವುದಾಗಿ ಕರೆಸಿಕೊಂಡು 2 ಲಕ್ಷ ರು. ಪಡೆದು ಸ್ಥಳದಿಂದ ಪರಾರಿಯಾಗಿದ್ದ. ಈ ಸಂಬಂಧ ದಾಖಲಾಗಿದ್ದ ದೂರಿನ ಮೇರೆಗೆ ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯು ಈ 2 ಲಕ್ಷ ರು. ಹಣವನ್ನು ಇಂದಿರಾನಗರದ ಪಬ್‌ವೊಂದರಲ್ಲಿ ಮೋಜು ಮಸ್ತಿ ಮಾಡಿ ಖರ್ಚು ಮಾಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Theft Cases in Bengaluru: ಬೀಗ ಹಾಕಿದ್ದ ಮನೆಗಳಿಗೆ ಕನ್ನ ಹಾಕ್ತಿದ್ದ ಗ್ಯಾಂಗ್‌ ಅರೆಸ್ಟ್‌

ನಕಲು ಪ್ರತಿ ತೋರಿಸಿ ವಂಚನೆ:

ಆರೋಪಿಯು ಮೊದಲಿಗೆ ತನ್ನದೇ ಚಿನ್ನವನ್ನು ಅಡವಿಟ್ಟು ಬಳಿ ಬಿಡಿಸಿಕೊಂಡಿದ್ದ. ಇದಾದ ಕೆಲ ದಿನಗಳ ಬಳಿಕ ವ್ಯಕ್ತಿಯೊಬ್ಬರಿಗೆ ನಕಲು ರಿಸೀದಿ ತೋರಿಸಿ, ಹಣದ ತುರ್ತಿದ್ದು ಕಡಿಮೆ ದರಕ್ಕೆ ಚಿನ್ನಾಭರಣ ಮಾಡುವುದಾಗಿ ಹಣ ಪಡೆದು ಬಳಿಕ ವಂಚಿಸಿದ್ದ. ಇದೇ ರೀತಿ ಮತ್ತಿಬ್ಬರಿಂದ ಹಣ ಪಡೆದು ವಂಚಿಸಿರುವುದಾಗಿ ವಿಚಾರಣೆ ವೇಳೆ ಆರೋಪಿ ಬಾಯ್ಬಿಟ್ಟಿದ್ದಾನೆ. ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಯುವ ಜೋಡಿ ಸೇರಿ ಮೂವರ ಬಂಧನ: 7.76 ಕೋಟಿ ರು. ಡ್ರಗ್ಸ್‌ ವಶ

ಬೆಂಗಳೂರು: ನಗರದಲ್ಲಿ ಮಾದಕವಸ್ತು ಹಾಶೀಶ್‌ ಆಯಿಲ್‌ ಮಾರಾಟ ದಂಧೆಯಲ್ಲಿ ತೊಡಗಿದ್ದ ಯುವ ಜೋಡಿ ಸೇರಿದಂತೆ ಮೂವರು ಡ್ರಗ್ಸ್‌ ಪೆಡ್ಲರ್‌ಗಳನ್ನು(Drugs Peddlers) ಹುಳಿಮಾವು ಠಾಣೆ ಪೊಲೀಸರು(Police) ಬಂಧಿಸಿದ್ದಾರೆ. ಮಡಿವಾಳದ ವಿಕ್ರಂ ಅಲಿಯಾಸ್‌ ವಿಕ್ಕಿ(23), ಕೇರಳದ(Kerala) ಕೊಟ್ಟಾಯಂನ ಸಿಗಿಲ್‌ ವರ್ಗಿಸ್‌ ಮಂಪರಾಂಪಿಲ್‌(23) ಹಾಗೂ ಕೊಯಮತ್ತೂರಿನ ವಿಷ್ಣುಪ್ರಿಯ(22) ಬಂಧಿತರು(Arrest). ಆರೋಪಿಗಳಿಂದ(Accused) ಸುಮಾರು 7.76 ಕೋಟಿ ರು. ಮೌಲ್ಯದ 12 ಕೆ.ಜಿ. 940 ಗ್ರಾಂ ತೂಕದ ಹಾಶೀಶ್‌ ಆಯಿಲ್‌ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.