*  ಐವರು ಕುಖ್ಯಾತ ಮನೆಗಳ್ಳರು ಕೋಣನಕುಂಟೆ ಪೊಲೀಸರ ಬಲೆಗೆ*  13 ಲಕ್ಷದ ಆಭರಣ, ಬೈಕ್‌ಗಳ ಜಪ್ತಿ*  ಕಾರ್ಯಾಚರಣೆ ವೇಳೆ ಮತ್ತಿಬ್ಬರು ಆರೋಪಿಗಳು ಪರಾರಿ 

ಬೆಂಗಳೂರು(ಮಾ.06): ನಗರದ ಹೊರವಲಯದಲ್ಲಿ ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿ ಕಳವು(Theft) ಮಾಡುತ್ತಿದ್ದ ಐದು ಮಂದಿ ಕಳ್ಳರನ್ನು ಕೋಣನಕುಂಟೆ ಠಾಣೆ ಪೊಲೀಸರು(Police) ಬಂಧಿಸಿದ್ದಾರೆ. ಬೆಳ್ಳಂದೂರಿನ ಉಲ್ಲಾಸ್‌ ಅಲಿಯಾಸ್‌ ಪಾಲಿ(19), ರಘು ನಾಯಕ್‌(19), ಹಳೇಗುಡ್ಡದ ಹಳ್ಳಿಯ ಸಾಗರ್‌(19), ಶಿಡ್ಲಘಟ್ಟದ ನಂದನ(18) ಹಾಗೂ ಅರಕೆರೆಯ ಆರ್‌.ಆರ್‌.ಲೇಔಟ್‌ನ ಸುಮಂತ್‌(20) ಬಂಧಿತರು(Arrest). ಆರೋಪಿಗಳು(Accused) ನೀಡಿದ ಮಾಹಿತಿ ಮೇರೆಗೆ ಸುಮಾರು 10 ಲಕ್ಷ ರು. ಮೌಲ್ಯದ 200 ಗ್ರಾಂ ಚಿನ್ನಾಭರಣ ಹಾಗೂ 3 ಲಕ್ಷ ರು. ಮೌಲ್ಯದ ಎರಡು ದ್ವಿಚಕ್ರ ವಾಹನಗಳನ್ನು(Bikes) ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚೆಗೆ ಜೆ.ಪಿ.ನಗರ 8ನೇ ಹಂತದ ಕೆಂಬತ್ತಹಳ್ಳಿ ಮುಖ್ಯರಸ್ತೆಯ ಪಾರ್ಕ್ ಸಮೀಪ ಏಳು ಮಂದಿ ಮಾರಕಾಸ್ತ್ರ ಹಿಡಿದು ದರೋಡೆಗೆ ಹೊಂಚು ಹಾಕಿ ಕುಳಿತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ. ಕಾರ್ಯಾಚರಣೆ ವೇಳೆ ಆರೋಪಿಗಳಾದ ಪ್ರಶಾಂತ್‌ ಮತ್ತು ಚಂದನ್‌ ಪರಾರಿಯಾಗಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

'ಕ್ಯಾಚ್ ಇಫ್ಯು ಯು ಕ್ಯಾನ್' ತೆಲಂಗಾಣ ಪೊಲೀಸ್‌ ಠಾಣೆಯಿಂದಲೇ ಕಾರು ಕದ್ದ ಆಸಾಮಿ ಬೆಂಗಳೂರಲ್ಲಿ ಬಲೆಗೆ!

ಆರೋಪಿಗಳು ಬೈಕ್‌ಗಳನ್ನು ಕದ್ದು ಹಗಲಿನಲ್ಲಿ ನಗರದ ಹೊರವಲಯದಲ್ಲಿ ಸುತ್ತಾಡಿ ಬೀಗ ಹಾಕಿದ ಮನೆಗಳನ್ನು ಗುರುತಿಸುತ್ತಿದ್ದರು. ಬಳಿಕ ರಾತ್ರಿ ವೇಳೆ ಆ ಮನೆಗಳ ಬೀಗ ಮೀಟಿ ಒಳ ನುಗ್ಗಿ ಚಿನ್ನಾಭರಣ, ನಗದು ಸೇರಿದಂತೆ ದುಬಾರಿ ವಸ್ತುಗಳನ್ನು ದೋಚಿ(Robbery) ಪರಾರಿಯಾಗುತ್ತಿದ್ದರು. ಕದ್ದ ಮಾಲುಗಳನ್ನು ಮಾರಾಟ ಮಾಡಿ ಹಣ ಹಂಚಿಕೊಂಡು ಮೋಜು-ಮಸ್ತಿಗೆ ವ್ಯಯಿಸುತ್ತಿದ್ದರು ಎಂದು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ.

ಆರೋಪಿಗಳ ಬಂಧನದಿಂದ ಕೋಣನಕುಂಟೆ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಮೂರು ಕನ್ನ ಕಳವು ಪ್ರಕರಣ, ಜಿಗಣಿ ಠಾಣೆಯಲ್ಲಿ ದಾಖಲಾಗಿದ್ದ ಒಂದು ಕಳ್ಳ ಕಳವು ಪ್ರಕರಣ, ಬೊಮ್ಮನಹಳ್ಳಿ ಹಾಗೂ ಹೆಬ್ಬಗೋಡಿ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ತಲಾ ಒಂದು ದ್ವಿಚಕ್ರವಾಹನ ಕಳವು ಪ್ರಕರಣ ಪತ್ತೆಯಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಾಲಮಂದಿರದಲ್ಲಿ ಪರಿಚಯ

ಆರೋಪಿಗಳು ಚಿಕ್ಕ ವಯಸ್ಸಿನಲ್ಲೇ ನಗರದ ವಿವಿಧೆಡೆ ಕಳವು, ದರೋಡೆ, ಸುಲಿಗೆ ಇತ್ಯಾದಿ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಬಾಲಮಂದಿರ ಸೇರಿದ್ದರು. ಬಳಿಕ ಬಾಲಮಂದಿರದಲ್ಲಿ ಪರಸ್ಪರ ಪರಿಚಯವಾಗಿದ್ದ ಆರೋಪಿಗಳು ಅಲ್ಲಿಂದ ಹೊರಬಂದ ನಂತರವೂ ಗುಂಪು ಕಟ್ಟಿಕೊಂಡು ದುಷ್ಕೃತ್ಯಗಳಲ್ಲಿ ತೊಡಗಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಕಲಿ ವಾಲ್‌ಕೇರ್‌ ಪುಟ್ಟಿ ತಯಾರಕನ ಬಂಧನ

ಬೆಂಗಳೂರು: ಪ್ರತಿಷ್ಠಿತ ಬಿರ್ಲಾ ಕಂಪನಿಯ ಹೆಸರಿನಲ್ಲಿ ನಕಲಿ ‘ವಾಲ್‌ಕೇರ್‌ ಪುಟ್ಟಿ’ ತಯಾರಿಸಿ ಮಾರಾಟ ಮಾಡುತ್ತಿದ್ದ ಕಿಡಿಗೇಡಿಯೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಪ್ರಯಾಣಿಕರ ಸೋಗಲ್ಲಿ 125 ಗ್ರಾಂ ಚಿನ್ನ ದೋಚಿದ ಕಳ್ಳಿಯರ ಗ್ಯಾಂಗ್‌: ಡ್ರಾಪ್‌ ಕೇಳಿ ಸಿಕ್ಕಿಬಿದ್ದ ಎಟಿಎಂ ಕಳ್ಳರು!

ಪರಪ್ಪನ ಅಗ್ರಹಾರ ಸಮೀಪದ ವೀರಪ್ಪರೆಡ್ಡಿ ಲೇಔಟ್‌ ನಿವಾಸಿ ಶ್ಯಾಮ್‌ಸುಂದರ್‌ ಸಿಂಗ್‌ ಬಂಧಿತ. ಆರೋಪಿಯಿಂದ 1.5 ಲಕ್ಷ ರು. ಮೌಲ್ಯದ ನಕಲಿ ವಾಲ್‌ಕೇರ್‌ ಪುಟ್ಟಿಯನ್ನು ಜಪ್ತಿ ಮಾಡಲಾಗಿದೆ. ಇತ್ತೀಚಿಗೆ ವೀರಪ್ಪರೆಡ್ಡಿ ಲೇಔಟ್‌ನ ಸಮೀಪ ಅಕ್ರಮವಾಗಿ ಬಿರ್ಲಾ ಕಂಪನಿಯ ಹೆಸರಿನಲ್ಲಿ ‘ವಾಲ್‌ಕೇರ್‌ ಪುಟ್ಟಿ’ ತಯಾರಿಸುತ್ತಿರುವ ಬಗ್ಗೆ ಲಭ್ಯವಾದ ಮಾಹಿತಿ ಮೇರೆಗೆ ದಾಳಿ ನಡೆಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಶ್ಯಾಮ್‌ಸುಂದರ್‌ ಮೂಲತಃ ರಾಜಸ್ಥಾನದವನಾಗಿದ್ದು, ಎರಡು ವರ್ಷಗಳಿಂದ ವೀರಪ್ಪರೆಡ್ಡಿ ಲೇಔಟ್‌ನಲ್ಲಿ ಕಾನೂನುಬಾಹಿರವಾಗಿ ವಾಲ್‌ಕೇರ್‌ ಪುಟ್ಟಿತಯಾರಿಕಾ ಘಟಕ ಸ್ಥಾಪಿಸಿದ್ದ. ದೆಹಲಿಯಿಂದ ಬಿರ್ಲಾ ಕಂಪನಿಯ ಹೆಸರಿನ ಚೀಲಗಳನ್ನು ತರಿಸಿ ತಾನು ತಯಾರಿಸಿ ವಾಲ್‌ಕೇರ್‌ ಪುಟ್ಟಿತುಂಬಿ ಅಂಗಡಿಗಳಿಗೆ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.