ಪ್ರೀತಿ ನಿರಾಕರಿಸಿದ ಯುವತಿ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ ಭಗ್ನಪ್ರೇಮಿ ಕೃಷಿ ಹೊಂಡಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ದೇವಲಾಪುರ ಹೋಬಳಿಯ ಸುನಗನಹಳ್ಳಿ ಸಮೀಪ ಸಂಭವಿಸಿದೆ.

ನಾಗಮಂಗಲ (ಆ.5) : ಪ್ರೀತಿ ನಿರಾಕರಿಸಿದ ಯುವತಿ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ ಭಗ್ನಪ್ರೇಮಿ ಕೃಷಿ ಹೊಂಡಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ದೇವಲಾಪುರ ಹೋಬಳಿಯ ಸುನಗನಹಳ್ಳಿ ಸಮೀಪ ಸಂಭವಿಸಿದೆ.

Add Asianetnews Kannada as a Preferred SourcegooglePreferred

ಮಂಡ್ಯ ತಾಲೂಕಿನ ಬಿಳಿದೇಗಲು ಸಮೀಪದ ಹೊಸಹಳ್ಳಿಯ ಕಾಂತಯ್ಯನ ಪುತ್ರ ಶರತ್ (30) ಆತ್ಮಹತ್ಯೆ ಮಾಡಿಕೊಂಡ ಭಗ್ನ ಪ್ರೇಮಿಯಾಗಿದ್ದಾನೆ.

ಶರತ್ ಹುಟ್ಟೂರು ಹೊಸಹಳ್ಳಿಯಾದರೂ ಬೆಳೆದಿದ್ದು ಕೆರಗೋಡು ಸಮೀಪದ ಅಂಚಹಳ್ಳಿಯ ತನ್ನ ಅಜ್ಜಿ ತಾತನ ಮನೆಯಲ್ಲಿ. ಹಲವು ವರ್ಷಗಳಿಂದ ಅಂಚಹಳ್ಳಿಯಲ್ಲಿಯೇ ನೆಲೆಸಿದ್ದ ಶರತ್. ಅದೇ ಗ್ರಾಮದ ಯುವತಿಯೊಬ್ಬಳನ್ನು ಕಳೆದ ಆರೇಳು ವರ್ಷದಿಂದ ಪ್ರೀತಿಸುತ್ತಿದ್ದನು. ಆದರೆ, ಇತ್ತೀಚೆಗೆ ಆ ಯುವತಿ ಶರತ್ ಪ್ರೀತಿಯನ್ನು ನಿರಾಕರಿಸಿ ಬ್ರೇಕ್‌ಅಪ್ ಮಾಡಿಕೊಂಡಿದ್ದಳು ಎನ್ನಲಾಗಿದೆ. ಇದರಿಂದ ಕುಪಿತಗೊಂಡ ಶರತ್ ಯುವತಿಯನ್ನು ಮಚ್ಚಿನಿಂದ ಹಲ್ಲೆ ನಡೆಸಿದ ನಂತರ ತನ್ನ ಮೊಬೈಲ್ ಸ್ವಿಚ್‌ಆಫ್ ಮಾಡಿಕೊಂಡು ನಾಗಮಂಗಲ ತಾಲೂಕಿನ ಸುನಗನಹಳ್ಳಿ ಸಮೀಪವಿರುವ ಕೃಷಿ ಹೊಂಡವೊಂದಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕೊಪ್ಪಳ: ಒಂದೇ ಕುಟುಂಬದ ಮೂವರ ನಿಗೂಢ ಸಾವು ಪ್ರಕರಣ, ಭಗ್ನ ಪ್ರೇಮಿಯಿಂದ ಮೂವರ ಹತ್ಯೆ

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ರವಿಕುಮಾರ್ ಶರತ್ ಮೃತದೇಹವನ್ನು ಹೊರತೆಗೆಸಿ ತಾಲೂಕಿನ ಬಿ.ಜಿ.ನಗರದ ಆದಿಚುಂಚನಗಿರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿ ಮರಣೋತ್ತರ ಪರೀಕ್ಷೆಗೊಳಪಡಿಸಿದರು.

ಶವಪರೀಕ್ಷೆ ನಂತರ ಮೃತದೇಹವನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಈ ಸಂಬಂಧ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವತಿಗೆ ಕೊಲೆಯತ್ನ ನಡೆಸಿರುವ ಸಂಬಂಧ ಕೆರಗೋಡು ಪೊಲೀಸ್ ಠಾಣೆಯಲ್ಲಿ ಯುವತಿಯ ಪೋಷಕರು ಪ್ರಕರಣ ದಾಖಲಿಸಿದ್ದಾರೆಂದು ತಿಳಿದುಬಂದಿದೆ.