ಬೆಂಗಳೂರಿನ ಬನಶಂಕರಿ ಠಾಣಾ ವ್ಯಾಪ್ತಿಯಲ್ಲಿ ಮದ್ಯದ ಅಮಲಿನಲ್ಲಿ ಸ್ನೇಹಿತರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ತ್ಯಾಗರಾಜನಗರ ನಿವಾಸಿ ಸುರೇಶ್ ಎಂಬುವವರನ್ನು ಅವರ ಸ್ನೇಹಿತರು ಬಿಯರ್ ಬಾಟಲ್‌ನಿಂದ ಹೊಡೆದು ಕೊಂದಿದ್ದು, ಹಣಕಾಸು ವ್ಯವಹಾರವು ಜಗಳಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.

 ಬೆಂಗಳೂರು (ನ.8): ಮದ್ಯದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ಮಧ್ಯೆ ಉಂಟಾದ ಜಗಳವು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ತ್ಯಾಗರಾಜನಗರದ ನಿವಾಸಿ ಸುರೇಶ್ (45) ಕೊಲೆಯಾದ ದುರ್ದೈವಿ. ಈ ಹತ್ಯೆ ಸಂಬಂಧ ಮೃತನ ಸ್ನೇಹಿತರಾದ ವೇಲು, ಸ್ಟೀಫನ್‌ ಹಾಗೂ ಪ್ರದೀಪ್ ಬಂಧಿತರಾಗಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಒಟ್ಟಿಗೆ ಮದ್ಯ ಸೇವಿಸಿದ್ದ ನಾಲ್ವರು ಸ್ನೇಹಿತರು

ತ್ಯಾಗರಾಜನಗರದ ಬಳಿ ಆಟೋದಲ್ಲಿ ಗುರುವಾರ ರಾತ್ರಿ ಈ ನಾಲ್ವರು ಸ್ನೇಹಿತರು ಮದ್ಯ ಸೇವಿಸಿದ್ದಾರೆ. ಈ ವೇಳೆ ಮದ್ಯದ ಅಮಲಿನಲ್ಲಿ ಕ್ಷುಲ್ಲಕ ವಿಚಾರಕ್ಕೆ ಜಗಳವಾಗಿದೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಕೆರಳಿದ ಆರೋಪಿಗಳು, ಸುರೇಶ್‌ಗೆ ಬಿಯರ್ ಬಾಟಲ್‌ನಿಂದ ಹೊಡೆದು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಣಕಾಸು ವಿಚಾರಕ್ಕೆ ಹತ್ಯೆ?

ತನ್ನ ಕುಟುಂಬದ ಜತೆ ನೆಲೆಸಿದ್ದ ಸುರೇಶ್‌, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ವೇಲು ಬಳಿ ಸ್ಟೀಫನ್‌ ಹಾಗೂ ಪ್ರದೀಪ್ ಕೆಲಸ ಮಾಡುತ್ತಿದ್ದರು. ಹಲವು ವರ್ಷಗಳಿಂದ ಸುರೇಶ್ ಹಾಗೂ ವೇಲು ಸ್ನೇಹಿತರಾಗಿದ್ದು, ಈ ಗೆಳೆತನದಲ್ಲಿ ಪರಸ್ಪರ ಹಣಕಾಸು ವ್ಯವಹಾರ ಇತ್ತು. ಮದ್ಯ ಸೇವಿಸಿದಾಗ ಗೆಳೆಯರ ಮಧ್ಯೆ ಹಣಕಾಸು ವಿಚಾರ ಪ್ರಸ್ತಾಪವಾಗಿದೆ. ಇದೇ ವಿಚಾರ ಕೊನೆಗೆ ಸುರೇಶ್ ಕೊಲೆಗೂ ಕಾರಣವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.