Man kills girlfriend over suspicion of immoral relationship bengaluru: ಅಕ್ರಮ ಸಂಬಂಧದ ಶಂಕೆಯಿಂದ ಬೆಂಗಳೂರಿನಲ್ಲಿ ಚಾಲಕ ತನ್ನ ಲಿವಿಂಗ್ ಟುಗೆದರ್ ಸಂಗಾತಿ ಹತ್ಯೆ ಮಾಡಿದ್ದಾನೆ. ಕೊಲೆಯ ನಂತರ ರಕ್ತಸಿಕ್ತ ಬಟ್ಟೆಗಳೊಂದಿಗೆ ಹೋಗುತ್ತಿದ್ದಾಗ ಗಸ್ತು ತಿರುಗುತ್ತಿದ್ದ ಪೊಲೀಸರು ಆರೋಪಿ ಬಂಧನ.

ಬೆಂಗಳೂರು (ನ.8): ಅಕ್ರಮ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ತನ್ನ ಪ್ರಿಯತಮೆ ಮೇಲೆ ಹಲ್ಲೆ ನಡೆಸಿ ಹತ್ಯೆಗೈದಿದ್ದ ಚಾಲಕನೊಬ್ಬನನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

Add Asianetnews Kannada as a Preferred SourcegooglePreferred

ಪ್ರಿಯತಮೆಯ ಹತ್ಯೆ ಬೆಳಕಿಗೆ ಬಂದಿದ್ದು ಹೇಗೆ?

ಗಂಗಮ್ಮ ಲೇಔಟ್ ನಿವಾಸಿ ರವಿಚಂದ್ರ ಬಂಧಿತನಾಗಿದ್ದು, ವೈಯಕ್ತಿಕ ಕಾರಣ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ ತನ್ನ ಪ್ರಿಯತಮೆ ಅಂಜಲಿ ಎಂಬುವರನ್ನು (21) ಚಾಕುವಿನಿಂದ ಹಲ್ಲೆ ನಡೆಸಿ ಆತ ಕೊಂದಿದ್ದ. ಈ ಹತ್ಯೆ ಬಳಿಕ ಮನೆಯಿಂದ ಹೊರ ಬಂದು ರಸ್ತೆಯಲ್ಲಿ ನಡೆದುಕೊಂಡು ಅವಸರದಲ್ಲಿ ಆತ ಹೋಗುತ್ತಿದ್ದ. ಆಗ ಆತನ ಬಟ್ಟೆಯಲ್ಲಿ ರಕ್ತದ ಕಲೆಯನ್ನು ಶಂಕೆಗೊಂಡು ವಶಕ್ಕೆ ಪಡೆದು ಗಸ್ತು ಪೊಲೀಸರು ವಿಚಾರಿಸಿದಾಗ ಕೊಲೆ ಕೃತ್ಯ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹತ್ಯೆ ಹೇಗಾಯ್ತು? ಪೊಲೀಸರು ಹೇಳೋದೇನು?

ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ರವಿಚಂದ್ರ ಹಾಗೂ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಅಂಜಲಿ ಕೆಲ ತಿಂಗಳಿಂದ ಲಿವಿಂಗ್ ಟುಗೆದರ್‌ನಲ್ಲಿ ನೆಲೆಸಿದ್ದರು. ಕೌಟುಂಬಿಕ ಕಲಹದಿಂದ ತನ್ನ ಮೊದಲ ಪತಿಯಿಂದ ಆಕೆ ದೂರವಾಗಿದ್ದಳು. ಈಕೆಗೆ ಮಗುವಿದೆ. ಅದೇ ರೀತಿ ವಿವಾಹಿತನಾಗಿದ್ದ ರವಿಚಂದ್ರ, ತನ್ನ ಪತ್ನಿ ಹಾಗೂ ಮೂವರು ಮಕ್ಕಳನ್ನು ಸುರಪುರ ತಾಲೂಕಿನಲ್ಲೇ ಬಿಟ್ಟಿದ್ದ. ಹೀಗಿರುವಾಗ ಅಮೃತಹಳ್ಳಿ ಸಮೀಪದ ಸೂಪರ್‌ ಮಾರ್ಕೆಟ್‌ನಲ್ಲಿ ಕೆಲಸ ಮಾಡುತ್ತಿದ್ದ ಅಂಜಲಿ ಜತೆ ಆತನಿಗೆ ಸ್ನೇಹವಾಗಿತ್ತು. ತರುವಾಯ ಲಿವಿಂಗ್ ಟುಗೆದರ್‌ನಲ್ಲಿ ಇಬ್ಬರು ನೆಲೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಖಾಸಗಿ ಸಾರಿಗೆ ಸಂಸ್ಥೆಯಲ್ಲಿ ಚಾಲಕನಾಗಿದ್ದ ರವಿಚಂದ್ರ, ಕೆಲವು ಬಾರಿ ಐದಾದು ದಿನಗಳು ಹೊರ ರಾಜ್ಯಗಳಿಗೆ ಹೋಗುತ್ತಿದ್ದ. ಈತನಿಗೆ ತನ್ನ ಪ್ರಿಯತಮೆ ಮೇಲೆ ಸಂಶಯ ಮೂಡಿತ್ತು. ಕೆಲಸದ ನಿಮಿತ್ತ ಹೊರ ರಾಜ್ಯಕ್ಕೆ ಹೋಗುವುದಾಗಿ ಅಂಜಲಿಗೆ ಹೇಳಿದ್ದ ರವಿಚಂದ್ರ, ದಿಢೀರನೇ ಗುರುವಾರ ರಾತ್ರಿ ಮನೆಗೆ ಮರಳಿದ್ದಾನೆ.

ಆದರೆ ಆ ವೇಳೆ ಆಕೆ ಮನೆಯಲ್ಲಿರಲಿಲ್ಲ. ಆಗ ಮನೆ ಸಮೀಪದ ಬಾರ್‌ಗೆ ತೆರಳಿ ಕಂಠಮಟ್ಟ ಮದ್ಯ ಸೇವಿಸಿ ಮರಳಿದ್ದಾನೆ. ಅಷ್ಟರಲ್ಲಿ ಮನೆಗೆ ಬಂದು ಅಂಜಲಿ ನಿದ್ರೆಗೆ ಜಾರಿದ್ದಳು. ಪ್ರಿಯತಮೆಯನ್ನು ಕಂಡ ಕೂಡಲೇ ಸಿಟ್ಟಿಗೆದ್ದ ಆತ, ಯಾರ ಜತೆ ಹೋಗಿದ್ದೆ ಎಂದು ಗಲಾಟೆ ಶುರು ಮಾಡಿದ್ದಾನೆ. ಏಕಾಏಕಿ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಚಾಕು ಏಟಿನಿಂದ ತಪ್ಪಿಸಿಕೊಂಡ ಅಂಜಲಿಯನ್ನು ಹಿಡಿದು ಮನಬಂದಂತೆ ಥಳಿಸಿದ್ದಾನೆ. ಮುಖಕ್ಕೆ ಐದಾರು ಬಾರಿ ಆತ ಗುದ್ದಿದ್ದಾನೆ. ಈ ಹೊಡತೆ ತಾಳಲಾರದೆ ಆಕೆ ಕೊನೆಯುಸಿರೆಳೆದಿದ್ದಾಳೆ. ಈ ಹತ್ಯೆ ಬಳಿಕ ಮನೆಯಿಂದ ಹೊರಬಿದ್ದಿದ್ದಾನೆ. ರಕ್ತಸಿಕ್ತ ಬಟ್ಟೆಗಳಿಂದ ಆತ ಪೊಲೀಸರಿಗೆ ಸೆರೆಯಾಗಿದ್ದಾನೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.