ಎಚ್‌ಎಎಲ್‌ ಬಳಿ ಖಾಲಿ ಇರುವ ಕೋಟ್ಯಂತರ ಮೌಲ್ಯದ ಜಾಗ, ನಕಲಿ ದಾಖಲೆ ಸೃಷ್ಟಿಸಿದ್ದ ರಿಯಲ್‌ ಎಸ್ಟೇಟ್‌ ಉದ್ಯಮಿ ಸೇರಿ 7 ಮಂದಿ ಸೆರೆ. 

ಬೆಂಗಳೂರು(ಫೆ.17): ಕೇಂದ್ರ ಸರ್ಕಾರ ಸ್ವಾಮ್ಯದ ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌) ಒಡೆತನದ ಕೋಟ್ಯಂತರ ಮೌಲ್ಯದ 833 ಎಕರೆ ಭೂಮಿಗೆ ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ಜನರಿಗೆ ಗುತ್ತಿಗೆ ನೀಡಿ ವಂಚಿಸಿದ್ದ ರಿಯಲ್‌ ಎಸ್ಟೇಟ್‌ ಉದ್ಯಮಿ ಸೇರಿದಂತೆ 7 ಮಂದಿ ವಂಚಕರನ್ನು ಎಚ್‌ಎಎಲ್‌ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.

ಎಂ.ಜಿ. ರಸ್ತೆಯ ವಿಕ್ಟೋರಿಯಾ ಲೇಔಟ್‌ನ ನಿವಾಸಿ ರಿಯಲ್‌ ಎಸ್ಟೇಟ್‌ ಉದ್ಯಮಿ ಸುರೇಶ್‌ ಜೈನ್‌, ಆತನ ಕಚೇರಿಯ ಕೆಲಸಗಾರರಾದ ರಾಜ್‌ಕುಮಾರ್‌, ಶ್ರೀನಿವಾಸಮೂರ್ತಿ, ವೈಜಯಂತ್‌, ಪ್ರತಾಪ್‌, ರಿಯಲ್‌ ಎಸ್ಟೇಟ್‌ ಏಜೆಂಟ್‌ಗಳಾದ ಸೈಯದ್‌ ಮುನ್ನಾವರ್‌ ಹಾಗೂ ಸೈಯದ್‌ ಅಫೆä್ರೕಜ್‌ ಬಂಧಿತರಾಗಿದ್ದು, ಆರೋಪಿಗಳಿಂದ ಕೆಲ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ತಲೆಮರೆಸಿಕೊಂಡಿರುವ ಈ ವಂಚನೆ ಕೃತ್ಯದ ಮಾಸ್ಟರ್‌ ಮೈಂಡ್‌ ಎನ್ನಲಾದ ಬಿನಿಷ್‌ ಥಾಮಸ್‌ ಪತ್ತೆಗೆ ತನಿಖೆ ಮುಂದುವರೆದಿದೆ ವೈಟ್‌ ಫೀಲ್ಡ್‌ ವಿಭಾಗದ ಡಿಸಿಪಿ ಎಸ್‌.ಗಿರೀಶ್‌ ತಿಳಿಸಿದ್ದಾರೆ.

ಆನ್‌ಲೈನ್‌ನಲ್ಲಿ ಚಂದದ ಹುಡುಗಿ ನೋಡಿ ಮದುವೆಯಾದ, ರೌಡಿಶೀಟರ್‌ ಎಂದು ಗೊತ್ತಾಗಿ ದಂಗಾದ!

ಮಾಫಿಯಾ ಕಣ್ಣು:

ಮಾರತ್ತಹಳ್ಳಿ ಸುತ್ತಮುತ್ತ ಎಚ್‌ಎಎಲ್‌ ಕಂಪನಿಗೆ ಸೇರಿದ 833 ಎಕರೆ ಭೂಮಿ ಇದ್ದು, ಬಹುಪಾಲು ಪ್ರದೇಶ ಖಾಲಿ ಇದೆ. ಈ ಖಾಲಿ ಭೂಮಿ ಮೇಲೆ ಭೂ ಮಾಫಿಯಾದ ಕಣ್ಣು ಬಿದ್ದಿದೆ. ಎರಡ್ಮೂರು ಬಾರಿ ನಕಲಿ ದಾಖಲೆ ಸೃಷ್ಟಿಸಿ ಕೆಲವರು ಕಬಳಿಕೆಗೂ ಯತ್ನಿಸಿದ್ದರು. ಆ ಸಾಲಿಗೆ ಈಗ ರಿಯಲ್‌ ಎಸ್ಟೇಟ್‌ ಉದ್ಯಮಿ ಸುರೇಶ್‌ ಜೈನ್‌ ತಂಡವೂ ಸೇರಿದೆ. ಇತ್ತೀಚೆಗೆ ಎಚ್‌ಎಎಲ್‌ ಸಂಸ್ಥೆಯ ನಿರ್ದೇಶಕ ಮಂಡಳಿಯ ಸಭೆಯಲ್ಲಿ ತಮಗೆ ಎಚ್‌ಎಎಲ್‌ ಕಂಪನಿಯ 833 ಎಕರೆ ಭೂಮಿಯನ್ನು 30 ವರ್ಷಕ್ಕೆ ಗುತ್ತಿಗೆ ನೀಡಿರುವುದಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದರು. ಇದಕ್ಕೆ ಎಚ್‌ಎಎಲ್‌ ನಿರ್ದೇಶಕರ ಸಹಿ ಹಾಗೂ ಸೀಲನ್ನೂ ನಕಲು ಮಾಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ನಂತರ ಈ ದಾಖಲೆ ಮುಂದಿಟ್ಟು ತಾವು ಅಧಿಕೃತವಾಗಿ ಎಚ್‌ಎಎಲ್‌ ಭೂಮಿ ಗುತ್ತಿಗೆ ಪಡೆದಿರುವುದಾಗಿ ಹೇಳಿ ಉದ್ಯಮಿಗಳು ಹಾಗೂ ವ್ಯಾಪಾರಿಗಳಿಗೆ ಕಡಿಮೆ ಬೆಲೆಗೆ ವಾಣಿಜ್ಯ ಉದ್ದೇಶಕ್ಕೆ ಭೂಮಿಯನ್ನು ಗುತ್ತಿಗೆ ನೀಡುವ ಆಮಿಷವೊಡ್ಡುತ್ತಿದ್ದರು. ಆರೋಪಿಗಳ ಮಾತು ನಂಬಿ ಇಬ್ಬರು ವ್ಯಕ್ತಿಗಳು ಜಮೀನು ಗುತ್ತಿಗೆ ಕರಾರು ಮಾಡಿಕೊಂಡಿದ್ದರು. ಈ ಪೈಕಿ ಒಬ್ಬಾತ .1 ಕೋಟಿಯನ್ನು ಆರೋಪಿಗಳಿಗೆ ಪಾವತಿಸಿದ್ದ.

ವಂಚನೆ ಕೃತ್ಯ ಬಯಲಾಗಿದ್ದು ಹೇಗೆ?

ಇತ್ತೀಚೆಗೆ ಕೇಂದ್ರ ರಕ್ಷಣಾ ಇಲಾಖೆಯ ಅಧೀನದ ರಕ್ಷಣಾ ಸಾಮಗ್ರಿಗಳನ್ನು ಉತ್ಪಾದಿಸುವ ನವರತ್ನ ಡಿಫೆನ್ಸ್‌ ಪಿಎಸ್‌ಡಿಯಲ್ಲಿ ವಿವಿಧೆಡೆ ಎಚ್‌ಎಎಲ್‌ಗೆ ಸೇರಿದ ಜಮೀನನ್ನು ಕೆಲವು ವ್ಯಕ್ತಿಗಳು ಗುತ್ತಿಗೆ ನೀಡುವ ನೆಪದಲ್ಲಿ ಕೆಲವರು ಎಚ್‌ಎಎಲ್‌ ಕಂಪನಿಯ ಅಧಿಕೃತ ಲೆಟರ್‌ ಹೆಡ್ಡನ್ನು ನಕಲಿ ಮಾಡಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಸಾರ್ವಜನಿಕರಿಗೆ ಪ್ರಚಾರ ಮಾಡುತ್ತಿದ್ದಾರೆ ಎಂಬ ಮಾಹಿತಿ ಎಚ್‌ಎಎಲ್‌ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ನಿರ್ದೇಶಕ (ಸಿವಿಲ್‌) ಎ.ಸುರೇಶ್‌ ಅವರಿಗೆ ಸಿಕ್ಕಿತು. ಇದನ್ನು ಗಂಭೀರವಾಗಿ ಪರಿಗಣಿಸಿದ ಸುರೇಶ್‌ ಅವರು, ತಕ್ಷಣವೇ ಎಚ್‌ಎಎಲ್‌ ಠಾಣೆಗೆ ಸಲ್ಲಿಸಿದ ದೂರಿನ ಮೇರೆಗೆ ತನಿಖೆ ನಡೆಸಲಾಯಿತು ಎಂದು ಡಿಸಿಪಿ ಎಸ್‌.ಗಿರೀಶ್‌ ತಿಳಿಸಿದ್ದಾರೆ.

ಹೊರ ರಾಜ್ಯದವರಿಗೆ ಟೋಪಿ

ನಗರದಲ್ಲಿ ಉದ್ದಿಮೆ ಆರಂಭಿಸಲು ಉತ್ತರ ಪ್ರದೇಶ ಹಾಗೂ ಮಹಾರಾಷ್ಟ್ರ ಸೇರಿದಂತೆ ಹೊರರಾಜ್ಯಗಳಿಂದ ಬರುವ ಉದ್ಯಮಿಗಳಿಗೆ ಆರೋಪಿಗಳು ವಂಚಿಸುತ್ತಿದ್ದರು. ಎಚ್‌ಎಎಲ್‌ ಕಂಪನಿಯ ಖಾಲಿ ಭೂಮಿಯನ್ನು ತಮ್ಮದೇ ಭೂಮಿ ಎಂದು ತೋರಿಸಿ ಹಣ ಪಡೆದು ಟೋಪಿ ಹಾಕುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಸರ್ಕಾರಿ ಶಾಲಾ ಶಿಕ್ಷಕಿಯಾಗಿದ್ದ ಪತ್ನಿಯ ಶೀಲದ ಮೇಲೆ ಶಂಕೆ!: ಕಲ್ಲು ಎತ್ತಿಹಾಕಿ ಕೊಲೆ ಮಾಡಿದ ಪತಿ

ಇಬ್ಬರಿಗೆ ತಲಾ 1 ಕೋಟಿಗೆ ಗುತ್ತಿಗೆ

ಇಬ್ಬರಿಗೆ ತಲಾ .1 ಕೋಟಿ ಪಡೆದು ಎಚ್‌ಎಎಲ್‌ ಭೂಮಿಯನ್ನು ಆರೋಪಿಗಳು ಗುತ್ತಿಗೆ ನೀಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಈ ಹಿಂದೆ ಎಚ್‌ಎಎಲ್‌ ಭೂಮಿ ಕಬಳಿಕೆ ಬಗ್ಗೆ ಸಿಬಿಐ ಸಹ ತನಿಖೆ ನಡೆಸುತ್ತಿದೆ. ಕೆಲ ವರ್ಷಗಳ ಹಿಂದೆ 3.5 ಎಕರೆ ಭೂಮಿಯನ್ನು ಖಾಸಗಿ ಕಾಲೇಜು ಸ್ಥಾಪನೆ ಸಲುವಾಗಿ ಕೆಲವರು ಗುತ್ತಿಗೆ ನೀಡಿದ್ದರು.

ಎಚ್‌ಎಎಲ್‌ ಸೇರಿದ 833 ಎಕರೆಯಲ್ಲಿ ಗುತ್ತಿಗೆ ಪಡೆದಿವುದಾಗಿ ನಕಲಿ ದಾಖಲೆ ಸೃಷ್ಟಿಸಿದ್ದರು. ಆರೋಪಿಗಳ ಹಣಕಾಸು ವ್ಯವಹಾರ ಸಂಬಂಧ ಬ್ಯಾಂಕ್‌ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಭೂಮಿ ಗುತ್ತಿಗೆ ಸಂಬಂಧ ಎಚ್‌ಎಎಲ್‌ಗೆ .65 ಲಕ್ಷ ಪಾವತಿ ಬಗ್ಗೆ ನಕಲಿ ದಾಖಲೆಗಳು ಪತ್ತೆಯಾಗಿವೆ ಅಂತ ವೈಟ್‌ಫೀಲ್ಡ್‌ ವಿಭಾಗ ಡಿಸಿಪಿ ಎಸ್‌.ಗಿರೀಶ್‌ ತಿಳಿಸಿದ್ದಾರೆ.