ಮುಂಬೈ ನಾರ್ಕೊಟಿಕ್ಸ್ ಕ್ರೈಂ ಬ್ರ್ಯಾಂಚ್‌ನಲ್ಲಿ ನಕಲಿ ಅಧಿಕಾರಿಯೊಬ್ಬ ಕರೆ ಮಾಡಿ ವಿಜಯಪುರದ ವೈದ್ಯನೊಬ್ಬನಿಗೆ ₹54 ಲಕ್ಷ ವಂಚನೆ ಮಾಡಿದ್ದಾನೆ. 

ವಿಜಯಪುರ(ಮಾ.14):  ಮುಂಬೈ ನಾರ್ಕೊಟಿಕ್ಸ್ ಕ್ರೈಂ ಬ್ರ್ಯಾಂಚ್‌ನಲ್ಲಿ ನಕಲಿ ಅಧಿಕಾರಿಯೊಬ್ಬ ಕರೆ ಮಾಡಿ ವಿಜಯಪುರದ ವೈದ್ಯನೊಬ್ಬನಿಗೆ ₹54 ಲಕ್ಷ ವಂಚನೆ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ನಗರದ ಮೀನಾಕ್ಷಿ ಚೌಕ್ ಏರಿಯಾದ ವೈದ್ಯ ಡಾ. ಮನಿರುದ್ಧ ಲಿಮರ್ಜಿ(ಹೆಸರು ಬದಲಾಯಿಸಲಾಗಿದೆ) ಎಂಬುವರೇ ಹಣ ಕಳೆದುಕೊಂಡವರು. ನಾನು ಫೆಡೆಕ್ಸ್ ಕೋರಿಯರ್ ಮುಂಬೈ ಮೇನ್ ಬ್ಯಾಂಚ್‌ನಿಂದ ಮಾತನಾಡುತ್ತಿರವೆ. ನೀನು ಮುಂಬೈಗೆ ಕಳುಹಿಸಿದ ಪಾರ್ಸಲ್‌ನಲ್ಲಿ ಇಲ್ಲೀಗಲ್ ಡ್ರಗ್ಸ್ ಸೇರಿದಂತೆ ಇತರೆ ಕಾನೂನು ಬಾಹಿರ ವಸ್ತುಗಳಿವೆ. ಹಾಗಾಗಿ ನಿನ್ನನ್ನು ಜೈಲಿಗೆ ಕಳಿಸುತ್ತೇನೆ ಎಂದು ಫೋನ್ ಕರೆ ಮಾಡಿದ್ದ ವ್ಯಕ್ತಿಯೊಬ್ಬ ಈ ವೈದ್ಯನಿಗೆ ಹೆದರಿಸಿದ್ದಾನೆ.

Add Asianetnews Kannada as a Preferred SourcegooglePreferred

ಅಷ್ಟರಲ್ಲಿ ಮತ್ತೊಂದು ಕರೆ ಬಂದಿದ್ದು, ಮುಂಬೈ ನಾರ್ಕೊಟಿಕ್ಸ್ ಕ್ರೈಂ ಬ್ರ್ಯಾಂಚ್‌ನವರು ಎಂದು ಹೇಳಿ. ಕಾಬುಲ್‌ನಲ್ಲಿರುವ ಅಬ್ದುಲ್ ರೆಹಮಾನ್ ಎಂಬ ವ್ಯಕ್ತಿಗೆ ಕೋರಿಯರ್ ಮೂಲಕ ನೀವು ಇಲ್ಲೀಗಲ್ ಡ್ರಗ್ಸ್, ನಕಲಿ ಸೀಮ್, MDMA ಹಾಗೂ ನಕಲಿ ಪಾಸ್‌ಪೋರ್ಟ್ ಕಳುಹಿಸಿದ್ದೀರಿ. ಅದಕ್ಕಾಗಿ skype ಆ್ಯಪ್‌ನಲ್ಲಿ ವಿಡಿಯೋ ಕಾಲ್ ಮಾಡಿ ತನಿಖೆ ಹೆಸರಿನಲ್ಲಿ ಹಣ ವಂಚಿಸಲಾಗಿದೆ. ಇದೊಂದು ಗಂಭೀರ ಪ್ರಕರಣವಾಗಿದ್ದು, ನೀನು ಜೈಲು ಸೇರುತ್ತಿಯಾ ಎಂದು ಹೆದರಿಸಿದ್ದಾನೆ. ನಂತರ ವೈದ್ಯನ ಖಾತೆಯಲ್ಲಿದ್ದ ₹54 ಲಕ್ಷ ಹಣವನ್ನು ಆನ್‌ಲೈನ್ ಮೂಲಕ ವಂಚನೆ ಮಾಡಿದ್ದಾರೆ. ಮೋಸಹೋದ ಬಳಿಕ ವೈದ್ಯ ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಮಾರ್ಚ್ 7ರಂದು ಸಿ ಇ ಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ರಾಮನಗರ: ಹಣ ದುಪ್ಪಟ್ಟು ಮಾಡುವ ಆಮಿಷ, ಯುವತಿಗೆ 12 ಲಕ್ಷ ಪಂಗನಾಮ ಹಾಕಿದ ಖದೀಮರು..!

ವೈದ್ಯನ ಖಾತೆ ಜಾಲಾಡಿದ ಖದೀಮರು ನಿನ್ನ ಬ್ಯಾಂಕ್‌ನಲ್ಲಿರುವ ₹50 ಲಕ್ಷದ ಎಫ್‌ಡಿಯನ್ನು ತಕ್ಷಣ ಎಸ್‌ಬಿ ಖಾತೆಗೆ ವರ್ಗಾವಣೆ ಮಾಡಿಸು ಎಂದಿದ್ದಾರೆ. ಅವರು ಹೇಳಿದಂತೆ ವೈದ್ಯ ಮಾಡಿದ ಮರುಕ್ಷಣವೇ ಮತ್ತೆ ಕರೆ ಮಾಡಿ ನಿನ್ನ ಎಫ್‌ಡಿ ಹಣ ಹಾಗೂ ಅದರಿಂದ ಬಂದಿರುವ ಬಡ್ಡಿ ಹಣದ ಸಮೇತ ನಾವು ಹೇಳಿದ ಖಾತೆಗೆ ಹಣ ಹಾಕು. ವಿಚಾರಣೆ ಮುಗಿಸಿ ಅರ್ಧ ಗಂಟೆಯಲ್ಲಿ ವಾಪಸ್ ನಿನ್ನ ಖಾತೆಗೆ ಹಾಕುತ್ತೇವೆ ಎಂದು ಪುಸಲಾಯಿಸಿದ್ದಾರೆ. ಇದನ್ನು ನಂಬಿದ ವೈದ್ಯ ಅವರು ಹೇಳಿದ ಖಾತೆಗೆ ಹಣ ಹಾಕಿ ಬರೋಬ್ಬರಿ ₹54 ಲಕ್ಷ ಕಳೆದುಕೊಂಡಿದ್ದಾನೆ.

ಘಟನೆ ಕುರಿತು ವಂಚನೆಗೊಳಗಾದ ವೈದ್ಯ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ತನಿಖೆ ಮುಂದುವರೆದಿದೆ. ಇವೆಲ್ಲ ದೊಡ್ಡ ಮಟ್ಟದಲ್ಲಿ ಹಾಗೂ ಇಂಟರ್‌ನ್ಯಾಷನಲ್ ಕ್ರಿಮಿನಲ್ಸ್ ಇರುವುದರಿಂದ ಪ್ರಕರಣ ಬೇಧಿಸಲು ಸಮಯ ತಗಲುತ್ತದೆ. ಯಾರಾದರೂ ಬೆದರಿಕೆ ಹಾಕಿದರೆ ಅಥವಾ ಹಣದ ಆಮಿಷ ಒಡ್ಡಿದರೆ ಮೋಸ ಹೋಗುವ ಮೊದಲು ಹತ್ತಿರದ ಠಾಣೆಗೆ ತೆರಳಿ ಮಾಹಿತಿ ಪಡೆದುಕೊಳ್ಳಬೇಕು ಎಂದು ವಿಜಯಪುರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ತಿಳಿಸಿದ್ದಾರೆ.