Ramanagara News: ಮೇಯಲು ಬಿಟ್ಟಿದ್ದ ಹಸುಗಳನ್ನ ವಾಪಾಸ್ ಮನೆಗೆ ಕರೆತರಲು ಹೋಗಿದ್ದ ಮಹಿಳೆಯೊಬ್ಬಳನ್ನ ಭೀಕರವಾಗಿ ಹತ್ಯೆ ಮಾಡಿರೋ ಘಟನೆ ರಾಮನಗರ ತಾಲೂಕಿನ ಅಚ್ಚಲು ಕಾಲೋನಿ ಬಳಿ ನಡೆದಿದೆ. 

ವರದಿ- ಜಗದೀಶ್ ಏಷ್ಯಾನೆಟ್ ಸುವರ್ಣನ್ಯೂಸ್, ರಾಮನಗರ

Add Asianetnews Kannada as a Preferred SourcegooglePreferred

ರಾಮನಗರ (ಸೆ. 09): ಆಕೆ ಮನೆಗೆ ಆಧಾರ ಸ್ತಂಭವಾಗಿದ್ದಳು. ಕಿರಾಣಿ ಅಂಗಡಿ ಜೊತೆಗೆ ಹೈನುಗಾರಿಗೆ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಳು. ಆದರೆ ಮೇಯಲು ಬಿಟ್ಟಿದ್ದ ಹಸುಗಳನ್ನ ವಾಪಾಸ್ ಮನೆಗೆ ಕರೆದುಕೊಂಡು ಬರಲೆಂದು ಹೋದವಳು ವಾಪಾಸ್ ಬಂದಿದ್ದು ಶವವಾಗಿ. ಹೌದು ಮೇಯಲು ಬಿಟ್ಟಿದ್ದ ಹಸುಗಳನ್ನ ವಾಪಾಸ್ ಮನೆಗೆ ಕರೆತರಲು ಹೋಗಿದ್ದ ಮಹಿಳೆಯೊಬ್ಬಳನ್ನ ಭೀಕರವಾಗಿ ಹತ್ಯೆ ಮಾಡಿರೋ ಘಟನೆ ರಾಮನಗರ ತಾಲೂಕಿನ ಅಚ್ಚಲು ಕಾಲೋನಿ ಬಳಿ ನಡೆದಿದೆ. ಅಚ್ಚಲು ಕಾಲೋನಿ ಗ್ರಾಮದ ಕೆಂಪಮ್ಮ(50) ಮೃತ ದುರ್ದೈವಿ. 

ಅಂದಹಾಗೆ ಕೆಂಪಮ್ಮನ ಗಂಡ ಕೆಂಚಪ್ಪನಿಗೆ ಒಂದು ಕಾಲು ಇಲ್ಲ. ಇಬ್ಬರು ಮಕ್ಕಳು ಬೇರೆ ಇದ್ದು, ಆಟೋ ಓಡಿಸುತ್ತಾರೆ. ಹೀಗಾಗಿ ಕೆಂಪಮ್ಮ ಗ್ರಾಮದಲ್ಲಿ ಸಣ್ಣದಾದ ಕಿರಾಣಿ ಇಟ್ಟುಕೊಂಡು ನಾಲ್ಕೈದು ಹಸುಗಳನ್ನ ಸಾಕಿಕೊಂಡು ಬದುಕು ಸಾಗಿಸುತ್ತಿದ್ದರು. ಪ್ರತಿದಿನ ಬೆಳಗ್ಗೆ ಗ್ರಾಮದ ಸಮೀಪವೇ ಇರುವ ಸೇನಾಪತಿ ವೈಟ್ಲೆ ಕಾರ್ಖಾನೆ ಹಿಂಭಾಗದಲ್ಲಿ ಹಸುಗಳನ್ನ ಮೇಯಲು ಬಿಡುತ್ತಿದ್ದರು. ಸಂಜೆ ವೇಳೆ ಹೋಗಿ ವಾಪಾಸ್ ಹಸುಗಳನ್ನು ಕರೆತರುತಿದ್ದರು

ಕೊಲೆಗೈದು ನದಿಗೆ ಎಸೆದ ದುಷ್ಕರ್ಮಿಗಳು: ಅದೇ ರೀತಿ ನೆನ್ನೆ ಸಂಜೆ ಸಹಾ ಹಸುಗಳನ್ನ ವಾಪಸ್ ಮನೆಗೆ ಒಡೆದುಕೊಂಡು ಬರಲು ಹೋಗಿದ್ದಾರೆ. ಆದ್ರೆ ಈ ವೇಳೆ ಅಲ್ಲೇ ಹೊಂಚು ಹಾಕಿ ಕುಳಿತಿದ್ದ ದುಷ್ಕರ್ಮಿಗಳು ಆಕೆಯ ಕತ್ತಿಗೆ ಹಗ್ಗದಿಂದ ಬಿಗಿದು ಕೊಲೆಗೈದು, ನಂತರ ಆಕೆಯ ಕಿವಿಯ ಓಲೆ, ಮೂಗುತಿ, ತಾಳಿಯನ್ನ ಕಿತ್ತುಕೊಂಡು, ಶವವನ್ನು ದೊಡ್ಡದಾದ ಚೀಲದಲ್ಲಿ ಹಾಕಿ ಪಕ್ಕದಲ್ಲೇ ಇದ್ದ ಆರ್ಕಾವತಿ ನದಿಗೆ ಎಸೆದು ಪರಾರಿಯಾಗಿದ್ದಾರೆ.

Bengaluru Crime News: ನಿವೃತ್ತ ಶಿಕ್ಷಕಿಯ ಬರ್ಬರ ಹತ್ಯೆ: ಆಸ್ತಿ ವಿಚಾರಕ್ಕೆ ಕೊಲೆ?

ಸಂಜೆ ಎಷ್ಟು ಹೊತ್ತು ಆದರೂ ವಾಪಾಸ್ ಮನೆಗೆ ಕೆಂಪಮ್ಮ ಬಂದಿಲ್ಲ. ಜೊತೆಗೆ ಕಾಲ್ ಮಾಡಿದ್ರು ಸಹಾ ಪಿಕ್ ಮಾಡಿಲ್ಲ. ಹೀಗಾಗಿ ಅನುಮಾನಗೊಂಡ ಕೆಂಪಮ್ಮನ ಗಂಡ ಕೆಂಚಪ್ಪ ಹಾಗೂ ಕುಟುಂಬಸ್ಥರು ಹೋಗಿ ನೋಡಿದ್ದಾರೆ. ಆದರೆ ಹಸುಗಳು ಮಾತ್ರ ವಾಪಸ್ ಬಂದಿವೆ. ಎಲ್ಲೂ ಕಾಣದೆ ಇದ್ದಾಗ ಎಲ್ಲ ಕಡೆ ಹುಡುಕಾಟ ನಡೆಸಿದ್ದಾರೆ. 

ಈ ವೇಳೆ ಆರ್ಕಾವತಿ ನದಿಯಲ್ಲಿ ದೊಡ್ಡದಾದ ಚೀಲ ಕಂಡಿದೆ. ಅನುಮಾನಗೊಂಡು ಅದನ್ನ ತೆರೆದು ನೋಡಿದಾಗ ಕೆಂಪಮ್ಮನ ಶವ ಪತ್ತೆಯಾಗಿದೆ. ಇನ್ನು ದುಷ್ಕರ್ಮಿಗಳು ಕೊಲೆಗೈದು ಆರ್ಕಾವತಿ ನದಿಗೆ ಎಸೆದಿದ್ದಾರೆ. ಕಳೆದ ಹಲವು ದಿನಗಳಿಂದ ನದಿ ತುಂಬಿ ಹರಿಯುತ್ತಿದ್ದರಿಂದ ನೀರಿನಲ್ಲಿ ಶವವಿದ್ದ ಚೀಲ ತೇಲಿ ಹೋಗಬಹುದು ಎಂಬುದು ಕಿರಾತರ ಪ್ಲಾನ್ ಆಗಿತ್ತು. 

ಆದರೆ ನೆನ್ನೆ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆ ಆದ ಹಿನ್ನೆಲೆಯಲ್ಲಿ ಶವ ತೇಲಿ ಹೋಗಿಲ್ಲ. ಇನ್ನು ಘಟನೆ ನಂತರ ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರೆಸಿದ್ದಾರೆ. ಒಟ್ಟಾರೆ ಮಹಿಳೆಯ ಭೀಕರ ಕೊಲೆ ಇಡೀ ಗ್ರಾಮಸ್ಥರನ್ನ ಬೆಚ್ಚಿ ಬೀಳುವಂತೆ ಮಾಡಿದೆ. ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

Belagavi: ತಾಯಿಗೆ ಚಿಕಿತ್ಸೆ ಕೊಡಿಸಲು ಅಡ್ಡಿ ಮಾಡಿದ ತಂದೆಯನ್ನೇ ಕೊಲೆ ಮಾಡಿದ ಮಗ