ಬೆಂಗಳೂರು: ಕಳ್ಳನೆಂದು ಭಾವಿಸಿ ಪೈಶಾಚಿಕವಾಗಿ ವ್ಯಕ್ತಿಯ ಹತ್ಯೆ
ಗುಜರಿ ಅಂಗಡಿಯಲ್ಲಿ ನಡೆದಿದ್ದ ಕಳ್ಳತನ, ಕಾವಲಿಗೆ ಇದ್ದಾಗ ಅಲ್ಲಿಗೆ ಬಂದವನ ಹಿಡಿದು ಹಿಂಸೆ, ಅನ್ನ ನೀರು ಕೊಡದೆ ಹಲ್ಲೆ.
ಬೆಂಗಳೂರು(ಏ.11): ಇತ್ತೀಚೆಗೆ ಕಳ್ಳತನ ಶಂಕೆ ಮೇರೆಗೆ ಕೂಲಿ ಕಾರ್ಮಿಕನೊಬ್ಬನನ್ನು ಅಕ್ರಮವಾಗಿ ಬಂಧಿಸಿಟ್ಟು ದೌರ್ಜನ್ಯ ನಡೆಸಿ ಹತ್ಯೆಗೈದು ಬಳಿಕ ಮೃತದೇಹವನ್ನು ಚರಂಡಿಯಲ್ಲಿ ಎಸೆದಿದ್ದ ಗುಜರಿ ಅಂಗಡಿ ಮಾಲಿಕ ಸೇರಿದಂತೆ ಮೂವರನ್ನು ರಾಮಮೂರ್ತಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ದೇವರಜೀವನಹಳ್ಳಿ ನಿವಾಸಿ ಸೈಫುಲ್ಲಾ (35) ಎಂಬಾತನ ಕೊಲೆ ಮಾಡಿದ ಸಂಬಂಧ ನಾಗವಾರದ ಪ್ರಶಾಂತ್, ಪಿಳ್ಳಣ್ಣ ಗಾರ್ಡನ್ನ ಶೇಖ್ ಜಬೀವುಲ್ಲಾ ಹಾಗೂ ಬಿಲಾಲ್ ಮಸೀದಿ ಬಳಿಯ ಬಬನ್ ಅಲಿಯಾಸ್ ಶಹಬಾಜ್ ಬಂಧಿತರಾಗಿದ್ದು, ಕೃತ್ಯದಲ್ಲಿ ತಲೆಮರೆಸಿಕೊಂಡಿರುವ ಇತರೆ ಆರೋಪಿಗಳ ಪತ್ತೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹುಡುಗಿಯೊಂದಿಗೆ ಅನೈತಿಕ ಸಂಬಂಧ: ಪತ್ನಿಯನ್ನು ಕೊಲೆಗೈದು ಆತ್ಮಹತ್ಯೆ ಎಂದು ಬಿಂಬಿಸಿದ ಪತಿ
ಚಿತ್ರಹಿಂಸೆ ವಿಡಿಯೋ ಮಾಡಿ ಸಿಕ್ಕಿಬಿದ್ದರು:
ತನ್ನ ಪತ್ನಿ ಹಾಗೂ ಮಕ್ಕಳಿಂದ ಪ್ರತ್ಯೇಕನಾಗಿದ್ದ ಮೃತ ಸೈಫುಲ್ಲಾ, ಕೂಲಿ ಕೆಲಸ ಮಾಡಿಕೊಂಡು ದೇವರಜೀವನಹಳ್ಳಿಯಲ್ಲಿ ನೆಲೆಸಿದ್ದ. ಉಡುಪಿ ಜಿಲ್ಲೆಯ ಪ್ರಶಾಂತ್, ಹಲವು ದಿನಗಳಿಂದ ಕೆ.ಜಿ.ಹಳ್ಳಿ ಸಮೀಪ ಗುಜರಿ ಅಂಗಡಿ ನಡೆಸುತ್ತಿದ್ದಾನೆ. ಇತ್ತೀಚೆಗೆ ಆತನ ಗುಜರಿ ಅಂಗಡಿಯಲ್ಲಿ ಕೆಲವು ವಸ್ತುಗಳು ಕಳ್ಳತನವಾಗುತ್ತಿದ್ದವು. ಕಳ್ಳತನ ಪತ್ತೆ ಮಾಡಲು ಪ್ರಶಾಂತ್ ಫೆಬ್ರವರಿಯಲ್ಲಿ ರಾತ್ರಿ ಅಂಗಡಿಯಲ್ಲಿ ಕಾವಲು ಕಾಯುವಾಗ ಅಲ್ಲಿಗೆ ಬಂದಿದ್ದ ಸೈಫುಲ್ಲಾನನ್ನು ಪ್ರಶಾಂತ್ ಹಿಡಿದುಕೊಂಡಿದ್ದ. ತನ್ನ ಅಂಗಡಿಯಲ್ಲಿ ಕಳ್ಳತನ ಮಾಡಿದ್ದು ಈತನೇ ಎಂದು ಭಾವಿಸಿ, ತನ್ನ ಸ್ನೇಹಿತ ಜಬೀವುಲ್ಲಾ ಹಾಗೂ ಶಹಬಾಜ್ಗೆ ಕರೆ ಮಾಡಿ ಕರೆಸಿಕೊಂಡಿದ್ದ. ಬಳಿಕ ಗುಜರಿ ಅಂಗಡಿಯಲ್ಲಿ ಸೈಫುಲ್ಲಾನನ್ನು ಕೂಡಿ ಹಾಕಿ ಒಂದು ವಾರವೀಡಿ ಅನ್ನಹಾರ ನೀಡದೆ ಆತನ ಮೇಲೆ ಮನ ಬಂದಂತೆ ಹೊಡೆದಿದ್ದಾರೆ. ಈ ಪೈಶಾಚಿಕ ದೌರ್ಜನ್ಯವನ್ನು ಪ್ರಶಾಂತ್ ಹಾಗೂ ಆತನ ಸ್ನೇಹಿತರು ಮೊಬೈಲ್ನಲ್ಲಿ ಚಿತ್ರೀಕರಿಸಿಕೊಂಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಾ.1ರಂದು ಚಿತ್ರಹಿಂಸೆ ತೀವ್ರವಾಗಿ ನಿತ್ರಾಣಗೊಂಡಿದ್ದ ಸೈಫುಲ್ಲಾ ಮೃತಪಟ್ಟಿದ್ದಾನೆ. ಈ ಸಾವಿನಿಂದ ಆತಂಕಗೊಂಡ ಆರೋಪಿಗಳು, ಮಾ.3ರಂದು ರಾತ್ರಿ ಮೃತದೇಹವನ್ನು ಆಟೋದಲ್ಲಿ ತೆಗೆದುಕೊಂಡು ಹೋಗಿ ಕಸ್ತೂರಿ ನಗರದ ಸಾದಹಳ್ಳಿ ರಸ್ತೆಯ ಚರಂಡಿಗೆ ಎಸೆದು ಮರಳಿದ್ದರು. ಮರು ದಿನ ಚರಂಡಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಮೃತದೇಹ ಗುರುತು ಸಿಗದ ಕಾರಣ ಅಂದು ಶಂಕಾಸ್ಪದ ಸಾವು ಎಂದು ರಾಮಮೂರ್ತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
Bengaluru: ಬಾರ್ನಲ್ಲಿ ಕುಡಿದು ಗಲಾಟೆ, ರೌಡಿಶೀಟರ್ ಭೀಕರ ಹತ್ಯೆ!
ಇತ್ತ ಮಗ ನಾಪತ್ತೆಯಾದ ಬಗ್ಗೆ ಮಾ.6ರಂದು ಕೆ.ಜಿ.ಹಳ್ಳಿ ಠಾಣೆಯಲ್ಲಿ ತಾಯಿ ದೂರು ದಾಖಲಿಸಿದ್ದರು. ಆಗ ರಾಮಮೂರ್ತಿ ನಗರ ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾಗಿದ್ದ ಅಪರಿಚಿತ ವ್ಯಕ್ತಿ ಮೃತದೇಹದ ಫೋಟೋ ಇದ್ದ ಕರಪತ್ರವನ್ನು ಕೆ.ಜಿ.ಠಾಣೆಯ ಫಲಕದಲ್ಲಿ ಸೈಫುಲ್ಲಾ ಸೋದರ ಫೈಜುಲ್ಲಾ ಗಮನಿಸಿದ್ದ. ಬಳಿಕ ಆಸ್ಪತ್ರೆಯ ಶವಾಗಾರಕ್ಕೆ ತೆರಳಿ ಸೈಫುಲ್ಲಾ ಕುಟುಂಬದವರು ಮೃತದೇಹದ ಗುರುತು ಪತ್ತೆ ಹಚ್ಚಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ಗುಸುಗುಸು ಸುದ್ದಿ ನೀಡಿದ ಸುಳಿವು
ಕೆ.ಜಿ.ಹಳ್ಳಿಯಲ್ಲಿ ಪ್ರಶಾಂತ್ ಗುಜರಿ ಅಂಗಡಿಯಲ್ಲಿ ವ್ಯಕ್ತಿಯೊಬ್ಬನನ್ನು ಕೂಡಿ ಹಾಕಿ ಹೊಡೆದು ಬಡಿದು ಸಾಯಿಸಿದ್ದರಂತೆ ಎಂದು ಸ್ಥಳೀಯ ಜನರಲ್ಲಿ ಸುದ್ದಿ ಹರಡಿತು. ಈ ವಿಚಾರ ಕಿವಿಗೆ ಬಿದ್ದ ಕೂಡಲೇ ಪೊಲೀಸರಿಗೆ ಮೃತ ಸೈಫುಲ್ಲಾ ಸೋದರ ಮಾಹಿತಿ ನೀಡಿದ. ಈ ಹಿನ್ನೆಲೆಯಲ್ಲಿ ಶಂಕೆ ಮೇರೆಗೆ ಗುಜರಿ ಅಂಗಡಿ ಮಾಲಿಕ ಪ್ರಶಾಂತ್ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬಯಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.