‘ಗೇ’ ಡೇಟಿಂಗ್‌ ಆ್ಯಪಲ್ಲಿ ವಿಹಾರಕ್ಕೆ ಕರೆದು ಟೆಕ್ಕಿಯ ಸುಲಿದವರ ಸೆರೆ. ಅರಮನೆ ಮೈದಾನ ಬಳಿಗೆ ಕರೆಸಿ  ಸಂತ್ರಸ್ತನಿಗೆ ಹಲ್ಲೆ ಮಾಡಿ ಬೆದರಿಸಿ .1 ಲಕ್ಷ ಮೌಲ್ಯದ ಲ್ಯಾಪ್‌ಟಾಪ್‌ ದೋಚಿ ಪರಾರಿಯಾಗಿದ್ದ ಆರೋಪಿಗಳು.

ಬೆಂಗಳೂರು (ಆ.3): ಗೇ ಡೇಟಿಂಗ್‌ ಆ್ಯಪ್‌ನಲ್ಲಿ ವಿಹಾರಕ್ಕೆ ಕರೆದು ಸಾಫ್ಟ್‌ವೇರ್ ಉದ್ಯೋಗಿಯೊಬ್ಬರಿಗೆ ಬೆದರಿಸಿ ಸುಲಿಗೆ ಮಾಡಿದ್ದ ಮೂವರನ್ನು ಸದಾಶಿವ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶಿವಾಜಿ ನಗರದ ಸಮೀರ್‌ ಪಾಷ, ಮಹಮ್ಮದ್‌ ಇಸ್ಮಾಯಿಲ್‌ ಹಾಗೂ ಸಲ್ಮಾನ್‌ ಖಾನ್‌ ಬಂಧಿತರಾಗಿದ್ದು, ಕೃತ್ಯದಲ್ಲಿ ತಲೆಮರೆಸಿಕೊಂಡಿರುವ ಮತ್ತೊಬ್ಬ ಪ್ರಮುಖ ಆರೋಪಿ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಖಾಸಗಿ ಕಂಪನಿಯಲ್ಲಿ ಸಂತ್ರಸ್ತ ಉದ್ಯೋಗದಲ್ಲಿದ್ದು, ನಗರದ ಪೂರ್ವ ವಲಯದ ಕಡೆ ವಾಸವಾಗಿದ್ದಾನೆ. ಕೆಲ ದಿನಗಳ ಹಿಂದೆ ಗೇ ಡೇಟಿಂಗ್‌ ಆ್ಯಪ್‌ನಲ್ಲಿ ಆತನಿಗೆ ಆರೋಪಿ ಪರಿಚಯವಾಗಿದೆ. ಬಳಿಕ ಇಬ್ಬರ ನಡುವೆ ಚಾಟಿಂಗ್‌ ನಡೆದು ಕೊನೆಗೆ ಭೇಟಿಗೆ ಸಮಯ ನಿಗದಿಪಡಿಸಿದ್ದಾರೆ. ಅಂತೆಯೇ ಜು.23ರಂದು ಅರಮನೆ ಮೈದಾನ ಬಳಿಗೆ ಬರುವಂತೆ ಸಂತ್ರಸ್ತನಿಗೆ ಆರೋಪಿ ಸೂಚಿಸಿದ್ದ. ಈ ಮಾತು ನಂಬಿದ ಆತ, ಅಂದು ರಾತ್ರಿ 8.30ರ ಸುಮಾರಿಗೆ ತೆರಳಿದ್ದಾನೆ. ಆಗ ಸಂತ್ರಸ್ತನಿಗೆ ಹಲ್ಲೆ ಮಾಡಿ ಬೆದರಿಸಿ .1 ಲಕ್ಷ ಮೌಲ್ಯದ ಲ್ಯಾಪ್‌ಟಾಪ್‌ ದೋಚಿ ಆರೋಪಿಗಳು ಪರಾರಿಯಾಗಿದ್ದರು. ಮರು ದಿನ ಈ ಸಂಬಂಧ ಸದಾಶಿವನಗರ ಠಾಣೆಯಲ್ಲಿ ಸಂತ್ರಸ್ತ ದೂರು ದಾಖಲಿಸಿದೆ. ತನಿಖೆ ಕೈಗೆತ್ತಿಕೊಂಡ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಮಹಿಳೆಗೆ ಆನ್‌ಲೈನ್‌ನಲ್ಲಿ ವಂಚನೆ: ಇಬ್ಬರ ಬಂಧನ: ಮಹಿಳೆಗೆ ಆನ್‌ಲೈನ್‌ ಮೂಲಕ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಸೈಬರ್‌ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಕುಮಟಾ ನೆಲ್ಲೆಕೇರಿಯ ಮುಸ್ತಫಾ ಫಕೀರಸಾಬ್‌ ಶೇಖ್‌, ಮುಹಮ್ಮದ್‌ ರಿಜ್ವಾನ ಮುಕ್ತಿಯಾರ ಅಹ್ಮದ್‌ ಬಂಧಿತರು. ಜು.4ರಂದು ಅಂಕೋಲಾ ತಾಲೂಕಿನ ಅವರ್ಸಾದ ಮಹಿಳೆಯೊಬ್ಬರಿಗೆ ಕರೆ ಮಾಡಿದ ಆರೋಪಿಗಳು ತಾವು ಬ್ಯಾಂಕ್‌ ಅಧಿಕಾರಿಗಳೆಂದು ನಂಬಿಸಿ . 10,000 ತೊಡಗಿಸಿದಲ್ಲಿ 85 ದಿನಗಳಲ್ಲಿ 2.25 ಲಕ್ಷ ಮರಳಿ ನೀಡುವುದಾಗಿ ನಂಬಿಸಿದ್ದರು.

ಚಿಕ್ಕಮಗಳೂರು: ವಿಕ್ರಾಂತ್ ರೋಣ ಚಿತ್ರ ವೀಕ್ಷಣೆ ವೇಳೆ ಗಲಾಟೆ ಪ್ರಕರಣ, ಆರೋಪಿಗಳ ಬಂಧನ

ಇದನ್ನು ನಂಬಿದ ಸಂತ್ರಸ್ತೆಯು ಆರೋಪಿಗಳ ಪೇಟಿಎಂ ಖಾತೆಗೆ ವರ್ಗಾವಣೆ ಮಾಡಿದ್ದಾರೆ. ಬಳಿಕ ನಿಮ್ಮ ಪರಿಚಿತರಿಗೂ ಹೇಳಿ ಎಂದಿದ್ದಾರೆ. ಕೂಲಂಕಷವಾಗಿ ವಿಚಾರಣೆ ಮಾಡಲು ಆರಂಭಿಸಿದಾಗ ತಾನು ಮೋಸ ಹೋದ ಬಗ್ಗೆ ಮಹಿಳೆಗೆ ಗೊತ್ತಾಗಿದೆ. ಬಳಿಕ ಸಿಇಎನ್‌ ಠಾಣೆಗೆ ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 2 ಮೊಬೈಲ್‌ ವಶಪಡಿಸಿಕೊಂಡಿದ್ದಾರೆ. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿಗಳು ಹಲವಾರು ಜನರಿಗೆ ಇಂತಹ ವಂಚನೆ ಮಾಡಿರುವುದಾಗಿ ತನಿಖೆ ವೇಳೆ ತಿಳಿದು ಬಂದಿದೆ.

ಬೆಂಗಳೂರು: ಮೆಡಿಕಲ್‌ ಎಮೆರ್ಜೆನ್ಸಿ ಕಿಟ್‌ನಲ್ಲಿ ಡ್ರಗ್ಸ್‌ ಪೂರೈಕೆ..!

ವ್ಯಕ್ತಿ ಕೊಲೆಗೆ ವಿಫಲ ಯತ್ನ: ಬೆಂಗಳೂರು ನಗರದ ಹೊರವಲಯದ ಪೋಲಿಸ್‌ ವಸತಿ ಗೃಹದ ಸಮೀಪ ಇಂದು ಮಧ್ಯಾಹ್ನ ಸುಮಾರು 1 ಗಂಟೆ ಸಮಯದಲ್ಲಿ ಅಪರಿಚಿತರು ರಹಮತ್‌ ನಗರದ ನಿವಾಸಿ ಫೈರೋಜ್‌ ಪಾಶ (42) ಎಂಬಾತನ ಮೇಲೆ ಲಾಂಗ್‌ನಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ ಘಟನೆ ನಡೆದಿದೆ. ಇಂದು ಮಧ್ಯಾಹ್ನ ಸುಮಾರು 1 ಗಂಟೆ ಸಮಯದಲ್ಲಿ ರೇಷ್ಮೆ ಮಾರುಕಟ್ಟೆಯಲ್ಲಿ ವ್ಯಾಪಾರ ಮುಗಿಸಿ ವಾಪಸ್‌ ಬರುತ್ತಿದ್ದ ಫೈರೋಜ್‌ ಪಾಶ ಮೊಟರ್‌ ಬೈಕ್‌ನಲ್ಲಿ ಹೋಗುತ್ತಿದ್ದಾಗ ಮತ್ತೊಂದು ಬೈಕಲ್ಲಿ ಬಂದ ಮುಸುಕು ದಾರಿಗಳು ದಾಳಿ ನಡೆಸಿ ಲಾಂಗ್‌ ಬೀಸಿದ್ದಾರೆ. ಆಗ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾಷ ಪಾರಾಗಿದ್ದಾರೆ. ಆದರೆ ಅವರ ಎಡಗೈ ಹೆಬ್ಬೆರಳು ತುಂಡಾಗಿದೆ. ತಕ್ಷಣ ಪ್ರತಿರೋದ ತೋರಿದ ಫೈರೋಜ್‌ ಅಲ್ಲೇ ಇದ್ದ ಕಲ್ಲಿಂದ ಪ್ರತಿ ಹಲ್ಲೆಗೆ ಯತ್ನಿಸಿದಾಗ ಅಪರಿಚಿತ ಮುಸುಕುದಾರಿಗಳು ಬೈಕ್‌ನಲ್ಲಿ ಪರಾರಿಯಾಗಿದ್ದಾರೆ. ಫೈರೋಜ್‌ ಪಾಶನನ್ನ ಬೆಂಗಳೂರು ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ. ನಗರ ಠಾಣೆಯಲ್ಲಿ ಕೊಲೆ ಯತ್ನದ ಪ್ರಕರಣ ದಾಖಲಾಗಿದೆ.