ಬೆಂಗಳೂರು: ಜೀವ ಉಳಿಸುವ ಆ್ಯಂಬುಲೆನ್ಸ್ಗೆ ಇಬ್ಬರು ಬಲಿ
ಜೀವ ಉಳಿಸುವ ಆ್ಯಂಬುಲೆನ್ಸ್ ಒಂದು ಓನ್ ವೇಯಲ್ಲಿ ವೇಗವಾಗಿ ಬರುತ್ತಿದ್ದಾಗ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
ಬೆಂಗಳೂರು, (ಜ.08): ಬೈಕಿಗೆ ಆ್ಯಂಬುಲೆನ್ಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿರುವ ಘಟನೆ ಬೆಂಗಳೂರಿನ ಶ್ರೀನಿವಾಗಿಲು ಜಂಕ್ಷನ್ ಬಳಿ ನಡೆದಿದೆ.
ಇಬ್ರಾಹಿಂ ಖಲೀಲ್ 30, ಮನ್ಸೂರ್ 28 ಮೃತ ದುರ್ದೈವಿಗಳು. ಆ್ಯಂಬುಲೆನ್ಸ್ ಡ್ರೈವರ್ನ ಅಜಾಗರೂಕತೆಯಿಂದಲೇ ಇವರಿಬ್ಬರು ಬಲಿಯಾಗಿದ್ದಾರೆ.
ಇಬ್ಬರ ಜೀವ ತೆಗೆದ ಬಿಎಂಟಿಸಿ, ಬ್ರೇಕ್ ಫೇಲ್ ಅಸಲಿ ಕಾರಣ ಬಹಿರಂಗ
ಈ ಇಬ್ಬರು ಯುವಕರು ಮಂಗಳವಾರ ರಾತ್ರಿ ಬೈಕ್ನಲ್ಲಿ ಓಲ್ಡ್ ಏರ್ ಪೋರ್ಟ್ ರಸ್ತೆ ಮರ್ಗವಾಗಿ ನಾಗವಾರ ಕಡೆ ಹೊರಟಿದ್ದರು. ಈ ವೇಳೆ ಒನ್ ವೇ ರಸ್ತೆಯಲ್ಲಿ ಅತಿವೇಗವಾಗಿ ಬಂದ ಆ್ಯಂಬುಲೆನ್ಸ್ ಎದುರಿನ ಬೈಕ್ಗೆ ಡಿಕ್ಕಿ ಹೊಡೆದಿದೆ.
ಕೂಡಲೇ ಗಾಯಾಳುಗಳನ್ನು ಸ್ಥಳೀಯರೇ ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು (ಬುಧವಾರ) ಮಧ್ಯಾಹ್ನ ಇಬ್ಬರು ಸಾವನ್ನಪ್ಪಿದ್ದಾರೆ.
ಇಬ್ರಾಹಿಂ ಮತ್ತು ಮನ್ಸೂರ್ ಇಬ್ಬರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ನಿನ್ನೆ ರಾತ್ರಿ ಕೆಲಸ ಮುಗಿಸಿ ನಾಗವಾರ ಕಡೆಗೆ ಹೊರಟ್ಟಿದ್ದರು. ಈ ವೇಳೆ ದುರಂತ ಸಂಭವಿಸಿದೆ.
ಬೆಂಗಳೂರಿಗರಿಗೆ ಆತಂಕ ತಂದಿಟ್ಟ ಅಂಕಿ-ಅಂಶ, ಮಸ್ಟ್ ರೀಡ್!
ಈ ಬಗ್ಗೆ ಅಶೋಕನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಅಂಬ್ಯುಲೆನ್ಸ್ ಡ್ರೈವರ್ ವಿರುದ್ಧ ಕೊಲೆ ಆರೋಪದಡಿ ಸೆಕ್ಷನ್ 304 ಪ್ರಕರಣ ದಾಖಲಿಸಿಕೊಂಡಿದ್ದಾರೆ.