*   ಕೆಲಸ, ಕಮಿಷನ್‌ ಆಸೆ ತೋರಿಸಿ ಆನ್‌ಲೈನ್‌ ವಂಚಕರಿಂದ ಲಕ್ಷ ಲಕ್ಷ ವಸೂಲಿ*   ಮಾಲೀಕರ ವಜ್ರದ ಉಂಗುರ ಕದ್ದಿದ್ದ ಸೆಕ್ಯೂರಿಟಿ ಗಾರ್ಡ್‌*   ಕದ್ದ ಮೊಬೈಲ್‌ ಸ್ನೇಹಿತನಿಗೆ ಮಾರಿ ಸಿಕ್ಕಿಬಿದ್ದ ಕಳ್ಳ

ಬೆಂಗಳೂರು(ನ.15): ಅಮೆಜಾನ್‌(Amazon) ಕಂಪನಿಯಲ್ಲಿ ಹೂಡಿಕೆ ಮಾಡಿದರೆ ನೌಕರಿ ಹಾಗೂ ಕಮಿಷನ್‌ ನೀಡುವುದಾಗಿ ಹೇಳಿ ಅಪರಿಚಿತ ವ್ಯಕ್ತಿ ಯುವಕನಿಂದ 12.12 ಲಕ್ಷ ರು. ಪಡೆದುಕೊಂಡು ವಂಚಿಸಿದ್ದಾನೆ.

ಕೂಡ್ಲು ಮುಖ್ಯರಸ್ತೆಯ ಶ್ರೀನಿವಾಸ್‌ ಹಣ ಕಳೆದುಕೊಂಡವರು. ಅಪರಿಚಿತ(stranger) ವ್ಯಕ್ತಿಯೊಬ್ಬ ಅ.10ರಂದು ಶ್ರೀನಿವಾಸ್‌ಗೆ ಕರೆ ಮಾಡಿ, ಅಮೆಜಾನ್‌ನಲ್ಲಿ ಹಣ ಹೂಡಿಕೆ(Investment) ಬಗ್ಗೆ ಮಾತನಾಡಿದ್ದಾನೆ. ಅಷ್ಟೇ ಅಲ್ಲದೆ, ನೌಕರಿ(Job) ಜತೆಗೆ ಕಮಿಷನ್‌ ರೂಪದಲ್ಲಿ ಹೆಚ್ಚು ಸಹ ಸಿಗಲಿದೆ ಎಂದು ಆಸೆ ಹುಟ್ಟಿಸಿದ್ದಾನೆ. ಇದನ್ನು ನಂಬಿದ ಶ್ರೀನಿವಾಸ್‌, ಹಂತ ಹಂತವಾಗಿ ಹೂಡಿಕೆಗೆ ಅಪರಿಚಿತ ವ್ಯಕ್ತಿಗೆ 12.12 ಲಕ್ಷ ರು. ವರ್ಗಾಯಿಸಿದ್ದಾರೆ.

ಕೆಲ ದಿನಗಳ ಬಳಿಕ ವೇತನ(Salary) ಹಾಗೂ ಕಮಿಷನ್‌ ಯಾವುದೇ ಬಂದಿಲ್ಲ. ಈ ಸಂಬಂಧ ಅಪರಿಚಿತನಿಗೆ ಕರೆ ಮಾಡಿ ಹೂಡಿಕೆ ಹಣ ವಾಪಾಸ್‌ ನೀಡುವಂತೆ ಶ್ರೀನಿವಾಸ ಕೇಳಿದ್ದಾರೆ. ಈ ಸಂಭಾಷಣ ಬಳಿಕ ಅಪರಿಚಿತ ಮೊಬೈಲ್‌ ಕರೆ ಸ್ಥಗಿತಗೊಳಿಸಿದ್ದಾನೆ. ಹತ್ತಾರು ಬಾರಿ ಕರೆ ಮಾಡಿದರೂ ಸಂಪರ್ಕಕ್ಕೆ ಸಿಕ್ಕಿಲ್ಲ. ಬಳಿಕ ತಾನು ಸೈಬರ್‌ ವಂಚಕರ(Cyber Fraudster) ಬಲೆಗೆ ಬಿದ್ದಿರುವುದು ಶ್ರೀನಿವಾಸ್‌ಗೆ ಅರಿವಾಗಿದೆ ಎಂದು ಪೊಲೀಸರು(Police) ತಿಳಿಸಿದ್ದಾರೆ.
ಈ ಸಂಬಂಧ ಆಗ್ನೇಯ ಸೈಬರ್‌ ಠಾಣೆಗೆ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Digital Wallet ಬಳಕೆದಾರರೇ ಎಚ್ಚರ : ಹಣ ಪಡೆಯುವಾಗ ಸ್ವಲ್ಪ ಯಾಮಾರಿದ್ರೂ ದೋಖಾ ಪಕ್ಕಾ!

5.41 ಲಕ್ಷ ರು. ವಂಚನೆ

ಮತ್ತೊಂದು ಪ್ರಕರಣದಲ್ಲಿ ಯುವಕನೊಬ್ಬನಿಗೆ ಅಮೆಜಾನ್‌ ವೆಬ್‌ಸೈಟ್‌ನಲ್ಲಿ(Amazon Website) ಕೆಲಸ ಕೊಡಿಸುವುದಾಗಿ ನಂಬಿಸಿ ಬರೊಬ್ಬರಿ 5.41 ಲಕ್ಷ ರು. ಪಡೆದು ವಂಚಿಸಲಾಗಿದೆ(Fraud).

ಹೊಸಕೆರೆಹಳ್ಳಿ ನಿವಾಸಿ ಎಸ್‌. ಹರ್ಷವರ್ಧನ್‌ ವಂಚನೆಗೆ ಒಳಗಾದವರು. ಇತ್ತೀಚೆಗೆ ಹರ್ಷವರ್ಧನ್‌ ಮೊಬೈಲ್‌ಗೆ ಕರೆ ಮಾಡಿರುವ ಸೈಬರ್‌ ವಂಚಕ, ಅಮೆಜಾನ್‌ ವೆಬ್‌ಸೈಟ್‌ನಲ್ಲಿ ಕೆಲಸವಿದ್ದು. ಮನೆಯಿಂದಲೇ ಕೆಲಸ(Work From Home) ಮಾಡಲು ಅವಕಾವಿದೆ. ಉತ್ತಮ ವೇತನ ಹಾಗೂ ಕಮಿಷನ್‌ ಸೌಲಭ್ಯವಿದೆ ಎಂದು ಹೇಳಿದ್ದಾನೆ. ಕೆಲಸಕ್ಕೆ ಸೇರಿಕೊಳ್ಳುವ ಮುನ್ನ ಕೆಲ ಪರೀಕ್ಷೆ ಇರುತ್ತವೆ. ಈ ಪರೀಕ್ಷೆ ಎದುರಿಸಲು ಕೆಲ ವಸ್ತುಗಳನ್ನು ಖರೀದಿಸಬೇಕು. ಬಳಿಕ ಕೆಲಸದ ಜತೆಗೆ ಕಮಿಷನ್‌ ಸಹ ಸಿಗಲಿದೆ ಎಂದು ಆಸೆ ಹುಟ್ಟಿಸಿದ್ದಾನೆ. ಈತನ ಮಾತು ನಂಬಿದ ಹರ್ಷವರ್ಧನ್‌, ಹಂತ ಹಂತವಾಗಿ 5.41 ಲಕ್ಷ ರು. ವರ್ಗಾಯಿಸಿ 22 ಆನ್‌ಲೈನ್‌ ಪರೀಕ್ಷೆ ಎದುರಿಸಿದ್ದಾರೆ. ಬಳಿಕ ಸೈಬರ್‌ ಕಳ್ಳ ಮೊಬೈಲ್‌ ಸಂಪರ್ಕ ಕಡಿದುಕೊಂಡು ವಂಚಿಸಿದ್ದಾನೆ ಎಂದು ಪೊಲೀಸರು ತಿಳಿಸಿದರು. ಈ ಸಂಬಂಧ ದಕ್ಷಿಣ ವಿಭಾಗದ ಸಿಇಎನ್‌ ಠಾಣೆಯಲ್ಲಿ ಪ್ರಕರಣ(case)ದಾಖಲಾಗಿದೆ.

ಕದ್ದ ಮೊಬೈಲ್‌ ಸ್ನೇಹಿತನಿಗೆ ಮಾರಿ ಸಿಕ್ಕಿಬಿದ್ದ ಕಳ್ಳ!

ಮೊಬೈಲ್‌ ಅಂಗಡಿಗೆ ನುಗ್ಗಿ ಕಳವು(Theft) ಮಾಡಿದ್ದ ಕಿಡಿಗೇಡಿಯೊಬ್ಬನನ್ನು ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಂದಿ ಬೆಟ್ಟಸಮೀಪದ ಸುಲ್ತಾನ್‌ಪೇಟೆ ನಿವಾಸಿ ಮಂಜುನಾಥ್‌(34) ಬಂಧಿತ(Arrest). ಕಳೆದ ಜುಲೈನಲ್ಲಿ ಮಲ್ಲತ್ತಹಳ್ಳಿಯ ಕೆಂಗುಟ್ಟೆಯ ದೇವಿ ಎಲೆಕ್ಟ್ರಾನಿಕ್ಸ್‌ ಎಂಬ ಅಂಗಡಿಯಲ್ಲಿ ನಗದು ಹಾಗೂ ಮೊಬೈಲ್‌ ಫೋನ್‌ಗಳ(Mobile Phone) ಕಳವುವಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯಿಂದ(Accused) ಒಟ್ಟು 22.30 ಲಕ್ಷ ರು. ಮೌಲ್ಯದ ಮೂರು ವಜ್ರದ ಉಂಗುರ ಹಾಗೂ ಎರಡು ಮೊಬೈಲ್‌ ಫೋನ್‌ ವಶಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Hubballi| Nex Coin ಹೆಸರಲ್ಲಿ ಕೋಟ್ಯಂತರ ರೂ. ವಂಚನೆ

ಆರೋಪಿ ಮಂಜುನಾಥ್‌ ಮೊಬೈಲ್‌ ಅಂಗಡಿಯ ಕಿಟಕಿಯ ರಾಡು ಮುರಿದು ಒಳಪ್ರವೇಶಿಸಿ ಮೊಬೈಲ್‌ಗಳನ್ನು ಕಳವು ಮಾಡಿ ಪರಾರಿಯಾಗಿದ್ದ. ಕದ್ದ ಮೊಬೈಲ್‌ನನ್ನು ಸ್ನೇಹಿತನಿಗೆ ಮಾರಾಟ ಮಾಡಿದ್ದ. ಹೀಗಾಗಿ ತಾಂತ್ರಿಕತೆಯ ಸಹಾಯದಿಂದ ಮೊಬೈಲ್‌ ಕಾರ್ಯ ನಿರ್ವಹಿಸುತ್ತಿರುವ ಸ್ಥಳವನ್ನು ಪತ್ತೆಹಚ್ಚಿ ಸ್ನೇಹಿತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ, ಆರೋಪಿ ಮಂಜುನಾಥ್‌ ಬಗ್ಗೆ ಮಾಹಿತಿ ಸಿಕ್ಕಿತು. ಈ ಮಾಹಿತಿ ಆಧರಿಸಿ ಮಂಜುನಾಥನನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಆರೋಪಿಯು ಈ ಕಳವು ಪ್ರಕರಣದ ಜತೆಗೆ ಈ ಹಿಂದೆ ಎರಡು-ಮೂರು ಕಳವು ಪ್ರಕರಣದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.

ಮಾಲೀಕರ ವಜ್ರದ ಉಂಗುರ ಕದ್ದಿದ್ದ:

ಆರೋಪಿಯು ನಂದಿ ರಸ್ತೆಯ ವಿಶ್ವನಾಥಪುರದ ಐಷಾರಾಮಿ ವಿಲ್ಲಾವೊಂದರಲ್ಲಿ ಎಂಟು ವರ್ಷಗಳಿಂದ ಸೆಕ್ಯೂರಿಟಿ ಗಾರ್ಡ್‌ ಆಗಿ ಕೆಲಸ ಮಾಡುತ್ತಿದ್ದ. ಈ ವೇಳೆ ಮನೆಯ ಮಾಲೀಕರು ಇಲ್ಲದ ಸಮಯ ನೋಡಿಕೊಂಡು ಮನೆ ನುಗ್ಗಿ ದುಬಾರಿ ಬೆಲೆಯ ಮೂರು ವಜ್ರದ ಉಂಗುರ ಕಳವು ಮಾಡಿದ್ದ. ಮೊಬೈಲ್‌ ಅಂಗಡಿ ಕಳವು ವಿಚಾರಣೆ ವೇಳೆ ಈ ಕಳವು ಪ್ರಕರಣ ಪತ್ತೆಯಾಗಿದೆ. ಆರೋಪಿ ನೀಡಿದ ಮಾಹಿತಿ ಮೇರೆಗೆ ವಜ್ರದ ಉಂಗುರಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.