ಇಂದು ಮಹಿಳಾ ಏಕದಿನ ಫೈನಲ್: ಕರ್ನಾಟಕ-ರೈಲ್ವೇಸ್ ಫೈಟ್
ರಾಷ್ಟ್ರೀಯ ಮಹಿಳಾ ಏಕದಿನ ಟೂರ್ನಿ ಫೈನಲ್ ಆರಂಭಕ್ಕೆ ಕ್ಷಣಗಣನೆ
ಪ್ರಶಸ್ತಿಗಾಗಿ ಕರ್ನಾಟಕ ಹಾಗೂ ರೈಲ್ವೇಸ್ ನಡುವೆ ಪೈಪೋಟಿ
ಚೊಚ್ಚಲ ಟ್ರೋಫಿ ಮೇಲೆ ಕಣ್ಣಿಟ್ಟಿದೆ ಕರ್ನಾಟಕ ತಂಡ
ರಾಂಚಿ(ಫೆ.07): ಕಳೆದ ಬಾರಿ ರನ್ನರ್-ಅಪ್ ಕರ್ನಾಟಕ ತಂಡ ರಾಷ್ಟ್ರೀಯ ಮಹಿಳಾ ಏಕದಿನ ಟೂರ್ನಿಯಲ್ಲಿ ಚೊಚ್ಚಲ ಬಾರಿ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿದ್ದು, ಮಂಗಳವಾರ ಫೈನಲ್ನಲ್ಲಿ 13 ಬಾರಿ ಚಾಂಪಿಯನ್ ರೈಲ್ವೇಸ್ ವಿರುದ್ಧ ಸೆಣಸಲಿದೆ.
ಕಳೆದ ಆವೃತ್ತಿಯಲ್ಲೂ ಉಭಯ ತಂಡಗಳು ಫೈನಲ್ನಲ್ಲಿ ಮುಖಾಮುಖಿಯಾಗಿದ್ದವು. ಕರ್ನಾಟಕವನ್ನು 8 ವಿಕೆಟ್ಗಳಿಂದ ಮಣಿಸಿ ರೈಲ್ವೇಸ್ ಪ್ರಶಸ್ತಿ ಜಯಿಸಿತ್ತು. ಕರ್ನಾಟಕ ಕಳೆದ ಆವೃತ್ತಿಯ ಫೈನಲ್ ಸೋಲಿಗೆ ಸೇಡು ತೀರಿಸಿ ಪ್ರಶಸ್ತಿ ಗೆಲ್ಲಲು ಪಣ ತೊಟ್ಟಿದೆ. ಈ ಬಾರಿ ‘ಬಿ’ ಗುಂಪಿನಲ್ಲಿ 20 ಅಂಕಗಳೊಂದಿಗೆ ದ್ವಿತೀಯ ಸ್ಥಾನಿಯಾಗಿದ್ದ ಕರ್ನಾಟಕ ಪ್ರಿ ಕ್ವಾರ್ಟರ್ ಫೈನಲ್ನಲ್ಲಿ ಮಧ್ಯಪ್ರದೇಶ, ಕ್ವಾರ್ಟರ್ನಲ್ಲಿ ಡೆಲ್ಲಿ ವಿರುದ್ಧ ಗೆದ್ದಿತ್ತು. ಬಳಿಕ ರಾಜಸ್ಥಾನವನ್ನು ಸೆಮೀಸ್ನಲ್ಲಿ ಸೋಲಿಸಿ ಫೈನಲ್ ತಲುಪಿದೆ. ಮತ್ತೊಂದೆಡೆ ‘ಎ’ ಗುಂಪಿನಲ್ಲಿ 2ನೇ ಸ್ಥಾನ ಪಡೆದಿದ್ದ ರೈಲ್ವೇಸ್ ಪ್ರಿ ಕ್ವಾರ್ಟರ್ನಲ್ಲಿ ತಮಿಳುನಾಡು, ಕ್ವಾರ್ಟರ್ನಲ್ಲಿ ಕೇರಳ ಹಾಗೂ ಸೆಮಿಫೈನಲ್ನಲ್ಲಿ ಉತ್ತರಾಖಂಡವನ್ನು ಮಣಿಸಿತ್ತು.
10 ಪಂದ್ಯಗಳಲ್ಲಿ 470 ರನ್ ಸಿಡಿಸಿರುವ ವೃಂದಾ, 327 ರನ್ ಗಳಿಸಿರುವ ದಿವ್ಯಾ ಕರ್ನಾಟಕದ ಆಧಾರಸ್ತಂಭಗಳಾಗಿದ್ದು, ಇವರ ಪ್ರದರ್ಶನವೇ ತಂಡಕ್ಕೆ ನಿರ್ಣಾಯಕ ಎನಿಸಿಕೊಂಡಿದೆ. ತಾರಾ ಆಟಗಾರ್ತಿ, ನಾಯಕಿ ವೇದಾ ಕೃಷ್ಣಮೂರ್ತಿ ಮೇಲೂ ಹೆಚ್ಚಿನ ನಿರೀಕ್ಷೆ ಇದೆ.
ಪಂದ್ಯ: ಬೆಳಗ್ಗೆ 9.15ಕ್ಕೆ
ನೇರ ಪ್ರಸಾರ: ಡಿಸ್ನಿ+ ಹಾಟ್ಸ್ಟಾರ್
ಫೈನಲಲ್ಲಿ ರೈಲ್ವೇಸ್ ಅಜೇಯ ದಾಖಲೆ!
ರೈಲ್ವೇಸ್ ಟೂರ್ನಿಯ ಫೈನಲ್ನಲ್ಲಿ ಅಜೇಯ ದಾಖಲೆ ಹೊಂದಿದ್ದು, ಈವರೆಗಿನ 15 ಟೂರ್ನಿಗಳಲ್ಲಿ 13 ಬಾರಿ ಫೈನಲ್ ಪ್ರವೇಶಿಸಿ ಎಲ್ಲಾ ಬಾರಿಯೂ ಚಾಂಪಿಯನ್ ಆಗಿ ಹೊರಹೊಮ್ಮಿದೆ. ತಂಡಕ್ಕಿದು 14ನೇ ಫೈನಲ್. ಇನ್ನು ಡೆಲ್ಲಿ, ಬಂಗಾಳ ತಲಾ 1 ಬಾರಿ ಪ್ರಶಸ್ತಿ ಗೆದ್ದಿದೆ. ಕರ್ನಾಟಕ 2ನೇ ಬಾರಿ ಫೈನಲ್ನಲ್ಲಿ ಆಡಲಿದೆ.
ಮಹಿಳಾ ಐಪಿಎಲ್ ಮಾ.4ಕ್ಕೆ ಆರಂಭ, ಫೆ.13ಕ್ಕೆ ಹರಾಜು
ಮುಂಬೈ: ಚೊಚ್ಚಲ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್(ಮಹಿಳಾ ಐಪಿಎಲ್) ಮಾ.4ರಿಂದ 26ರ ವರೆಗೆ ಮುಂಬೈನಲ್ಲಿ ನಡೆಯಲಿದೆ ಎಂದು ಐಪಿಎಲ್ ಮುಖ್ಯಸ್ಥ ಅರುಣ್ ಧುಮಾಳ್ ಖಚಿತಪಡಿಸಿದ್ದಾರೆ. ಜೊತೆಗೆ ಮಹಿಳಾ ಆಟಗಾರರ ಹರಾಜು ಪ್ರಕ್ರಿಯೆ ಮುಂಬೈನಲ್ಲೇ ಫೆ.13ರಂದು ನಡೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
'ಭಾರತ ಏಷ್ಯಾಕಪ್ ಆಡಲು ಬರದೇ ಹೋದ್ರೆ ತೊಂದರೆಯೇನಿಲ್ಲ': ಜಾವೇದ್ ಮಿಯಾಂದಾದ್ ಉದ್ದಟತನ..!
ಟೂರ್ನಿಯ ಎಲ್ಲಾ 22 ಪಂದ್ಯಗಳಿಗೂ ಬ್ರೆಬೋರ್ನ್ ಹಾಗೂ ಡಿ.ವೈ.ಪಾಟೀಲ್ ಕ್ರೀಡಾಂಗಣಗಳು ಆತಿಥ್ಯ ವಹಿಸಲಿವೆ. ಹರಾಜಿಗೆ 1500 ಆಟಗಾರ್ತಿಯರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಪ್ರತಿಷ್ಠಿತ ಮಾಧ್ಯಮವೊಂದು ವರದಿ ಮಾಡಿದೆ. ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಹಾಗೂ ಗುಜರಾತ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗುವ ಸಾಧ್ಯತೆ ಇದೆ.
ರಣಜಿ ಸೆಮೀಸ್: ರಾಜ್ಯ ತಂಡದಲ್ಲಿ 1 ಬದಲಾವಣೆ
ಬೆಂಗಳೂರು: ಬುಧವಾರದಿಂದ ಆರಂಭಗೊಳ್ಳಲಿರುವ ಸೌರಾಷ್ಟ್ರ ವಿರುದ್ಧದ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯಕ್ಕೆ ಕರ್ನಾಟಕ ತಂಡ ಪ್ರಕಟಗೊಂಡಿದ್ದು, ಒಂದು ಬದಲಾವಣೆ ಮಾಡಲಾಗಿದೆ. ವಿಕೆಟ್ ಕೀಪರ್ ಬಿ.ಆರ್.ಶರತ್ ಅನಾರೋಗ್ಯಕ್ಕೆ ತುತ್ತಾಗಿದ್ದು ಅವರ ಬದಲು ನಿಹಾಲ್ ಉಳ್ಳಾಲ ಆಯ್ಕೆಯಾಗಿದ್ದಾರೆ. ಶರತ್ 7 ಪಂದ್ಯಗಳಲ್ಲಿ 3 ಅರ್ಧಶತಕಗಳೊಂದಿಗೆ 267 ರನ್ ಗಳಿಸಿದ್ದಾರೆ.
ತಂಡ: ಮಯಾಂಕ್ ಅಗರ್ವಾಲ್(ನಾಯಕ), ರವಿಕುಮಾರ್ ಸಮರ್ಥ್, ದೇವದತ್ ಪಡಿಕ್ಕಲ್, ನಿಕಿನ್ ಜೋಶ್, ಮನೀಶ್ ಪಾಂಡೆ, ಸಿದ್ಧಾರ್ಥ್, ಶ್ರೇಯಸ್ ಗೋಪಾಲ್, ಶರತ್ ಶ್ರೀನಿವಾಸ್, ಕೆ.ಗೌತಮ್, ಕೌಶಿಕ್, ವಿದ್ವತ್ ಕಾವೇರಪ್ಪ, ವೈಶಾಖ್, ಎಂ ವೆಂಕಟೇಶ್, ಶುಭಾಂಗ್ ಹೆಗ್ಡೆ, ನಿಹಾಲ್ ಉಲ್ಲಾಳ.