ಬಿಸಿಸಿಐನ ಹೊಸ ನಿಯಮದಂತೆ, ಆರಂಭದಲ್ಲಿ ದೇಶೀಯ ಕ್ರಿಕೆಟ್ ಆಡಲು ನಿರಾಸಕ್ತಿ ತೋರಿದ್ದ ವಿರಾಟ್ ಕೊಹ್ಲಿ ಇದೀಗ ತಮ್ಮ ನಿಲುವಿನಿಂದ ಹಿಂದೆ ಸರಿದಿದ್ದಾರೆ. ಮುಂಬರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಅವರು ಡೆಲ್ಲಿ ತಂಡದ ಪರವಾಗಿ ಕಣಕ್ಕಿಳಿಯಲು ಸಿದ್ಧರಾಗಿದ್ದಾರೆ.  

ರಾಯ್‌ಪುರ: ಏಕದಿನ ವಿಶ್ವಕಪ್ ತಂಡಕ್ಕೆ ಪರಿಗಣಿಸಬೇಕಾದರೆ, ದೇಶೀಯ ಕ್ರಿಕೆಟ್ ಪಂದ್ಯಗಳಲ್ಲಿ ಆಡಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಬೇಕು ಎಂಬುದು ಭಾರತೀಯ ಕ್ರಿಕೆಟ್ ತಂಡದ ಆಟಗಾರರಿಗೆ ಇರುವ ಹೊಸ ನಿಯಮ. ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಮತ್ತು ಕೋಚ್ ಗೌತಮ್ ಗಂಭೀರ್ ತಂದ ಈ ಹೊಸ ಸುಧಾರಣೆಗೆ ಭಾರತದ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಮುಖ ತಿರುಗಿಸಿ ನಿಂತಿದ್ದರು. ರೋಹಿತ್ ಶರ್ಮಾ ದೇಶೀಯ ಲೀಗ್‌ನಲ್ಲಿ ಮುಂಬೈ ಪರ ಆಡಲು ಸಿದ್ಧರಾದ ಕಾರಣ, ಕೊಹ್ಲಿ ಈ ನಿಲುವಿನಲ್ಲಿ ಬಹುತೇಕ ಒಬ್ಬಂಟಿಯಾಗಿದ್ದರು. ಬಿಸಿಸಿಐಗೆ ತಲೆನೋವಾಗಬಹುದು ಎಂದು ಭಾವಿಸಲಾಗಿದ್ದ ಈ ನಿಲುವಿನಿಂದ ವಿರಾಟ್ ಕೊಹ್ಲಿ ಈಗ ಯು-ಟರ್ನ್ ಹೊಡೆದಿದ್ದಾರೆ. ಇದೀಗ ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿ, ಮುಂಬರುವ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಡೆಲ್ಲಿ ಪರ ಕಣಕ್ಕಿಳಿಯಲು ರೆಡಿಯಾಗಿದ್ದಾರೆ.

Add Asianetnews Kannada as a Preferred SourcegooglePreferred

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ಅಭಿಮಾನಿಗಳನ್ನು ರಂಜಿಸಿದ್ದು, ಗಂಭೀರ್‌ಗೆ ಕೊಹ್ಲಿ ನೀಡಿದ ಪರೋಕ್ಷ ಉತ್ತರವಾಗಿತ್ತು. ಕೊಹ್ಲಿಯ ಶತಕದ ನಂತರದ ಸಂಭ್ರಮಾಚರಣೆ ಮತ್ತು ಅದಕ್ಕೆ ರೋಹಿತ್ ಪ್ರತಿಕ್ರಿಯೆ ನೋಡಿದ ಬಿಸಿಸಿಐ ಒಳಗಿನ ಭಿನ್ನಾಭಿಪ್ರಾಯ ಬಲ್ಲವರೆಲ್ಲರೂ, ಇದು ಗಂಭೀರ್‌ಗೆ ನೀಡಿದ ಗಂಭೀರ ಉತ್ತರ ಎಂದು ಬರೆದಿದ್ದರು. ಶತಕದ ಬಲದಿಂದ ಇನ್ನು ದೇಶೀಯ ಕ್ರಿಕೆಟ್‌ನಲ್ಲಿ ಆಡಿ ನಾನು ಏನು ಸಾಬೀತುಪಡಿಸಬೇಕು ಎಂಬ ಪ್ರಶ್ನೆಯನ್ನೂ ವಿರಾಟ್ ಕೊಹ್ಲಿ ಮುಂದಿಟ್ಟಿದ್ದರು. ಆದರೆ, ರೋಹಿತ್ ದೇಶೀಯ ಕ್ರಿಕೆಟ್ ಆಡಲು ಸಿದ್ಧ ಎಂದು ತಿಳಿಸಿದ್ದು ಕೊಹ್ಲಿಗೆ ಹಿನ್ನಡೆಯಾಯಿತು. ಬಿಸಿಸಿಐ ಉನ್ನತ ಅಧಿಕಾರಿಗಳ ಒತ್ತಡದಿಂದಾಗಿ ವಿರಾಟ್ ಕೊಹ್ಲಿ ತಮ್ಮ ಏಕಾಂಗಿ ಹೋರಾಟವನ್ನು ನಿಲ್ಲಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಡಿಸೆಂಬರ್ 24ರಿಂದ ವಿಜಯ್ ಹಜಾರೆ ಟ್ರೋಫಿ ಟೂರ್ನಿ ಆರಂಭ

ಈ ತಿಂಗಳ 24 ರಂದು ಆರಂಭವಾಗಲಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ದೆಹಲಿ ಪರ ವಿರಾಟ್ ಕೊಹ್ಲಿ ಕಣಕ್ಕಿಳಿಯಲಿದ್ದಾರೆ ಎಂದು ವರದಿಯಾಗಿದೆ. ಟೂರ್ನಿಯುದ್ದಕ್ಕೂ ದೆಹಲಿ ಪರ ವಿರಾಟ್ ಕೊಹ್ಲಿ ಆಡುತ್ತಾರೆಯೇ ಎಂಬ ಪ್ರಶ್ನೆಯೂ ಬಲವಾಗಿದೆ. ಹೆಸರಿಗಾಗಿ ಕೆಲವು ಪಂದ್ಯಗಳನ್ನು ಆಡುವಂತೆ ಬಿಸಿಸಿಐ ಪದಾಧಿಕಾರಿಗಳು ಕೊಹ್ಲಿಗೆ ಸಲಹೆ ನೀಡಿದ್ದು, ಇದನ್ನು ಕೊಹ್ಲಿ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ನಂತರ, ಕೊಹ್ಲಿ ತಮ್ಮ ಕುಟುಂಬದೊಂದಿಗೆ ಸಮಯ ಕಳೆಯಲು ಲಂಡನ್‌ಗೆ ತೆರಳಲಿದ್ದಾರೆ. ಅಲ್ಲಿಂದ ವಿಜಯ್ ಹಜಾರೆ ಟ್ರೋಫಿ ಪಂದ್ಯಗಳಲ್ಲಿ ಭಾಗವಹಿಸಲು ಅವರು ಹಿಂತಿರುಗಲಿದ್ದಾರೆ. ಇದಕ್ಕೂ ಮುನ್ನ 2010ರ ಫೆಬ್ರವರಿಯಲ್ಲಿ ಅವರು ಕೊನೆಯ ಬಾರಿಗೆ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಿದ್ದರು. ಸರ್ವಿಸಸ್ ತಂಡದ ವಿರುದ್ಧ ಆ ಪಂದ್ಯ ನಡೆದಿತ್ತು. ಇದೀಗ ವಿರಾಟ್ ಕೊಹ್ಲಿ ಉಪಸ್ಥಿತಿಯು ದೆಹಲಿ ತಂಡಕ್ಕೆ ದೊಡ್ಡ ಹುರುಪು ನೀಡಲಿದೆ. ಬೆಂಗಳೂರಿನಲ್ಲಿ ಡಿಸೆಂಬರ್ 24 ರಂದು ಆಂಧ್ರಪ್ರದೇಶ ದೆಹಲಿಯ ಮೊದಲ ಎದುರಾಳಿಯಾಗಿದೆ. ಮೊದಲ ಹಂತದಲ್ಲಿ ದೆಹಲಿಗೆ ಆರು ಪಂದ್ಯಗಳಿವೆ.

Scroll to load tweet…

ವಿಜಯ್ ಹಜಾರೆ ಟೂರ್ನಿಗೆ ಡೆಲ್ಲಿ ತಂಡದ ವೇಳಾಪಟ್ಟಿ ಹೀಗಿದೆ:

ಡಿಸೆಂಬರ್ 24: ಡೆಲ್ಲಿ- ಆಂಧ್ರ

ಡಿಸೆಂಬರ್ 26: ಡೆಲ್ಲಿ- ಗುಜರಾತ್

ಡಿಸೆಂಬರ್ 29: ಡೆಲ್ಲಿ- ಸೌರಾಷ್ಟ್ರ

ಡಿಸೆಂಬರ್ 31: ಡೆಲ್ಲಿ- ಒಡಿಸ್ಸಾ

ಜನವರಿ 03: ಡೆಲ್ಲಿ- ಸರ್ವಿಸಸ್

ಜನವರಿ 06: ಡೆಲ್ಲಿ-ರೈಲ್ವೇಸ್

ಜನವರಿ 08: ಡೆಲ್ಲಿ-ಹರ್ಯಾಣ