12 ವರ್ಷಗಳ ಬಳಿಕ ರಣಜಿಗೆ ಮರಳಿದ ವಿರಾಟ್ ಕೊಹ್ಲಿ, ರೈಲ್ವೇಸ್ ವಿರುದ್ಧ ಕೇವಲ 6 ರನ್ ಗಳಿಸಿ ನಿರಾಸೆ ಮೂಡಿಸಿದರು. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳಿಗೆ ಕೊಹ್ಲಿಯ ಇನ್ನಿಂಗ್ಸ್ ನೋಡುವ ಭಾಗ್ಯ ತಪ್ಪಿತು. ರೈಲ್ವೇಸ್ ಮೊದಲ ಇನ್ನಿಂಗ್ಸ್‌ನಲ್ಲಿ ೨೪೧ ರನ್ ಗಳಿಸಿತು. ದೆಹಲಿ 4 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿದೆ.

ನವದೆಹಲಿ: ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗ ವಿರಾಟ್ ಕೊಹ್ಲಿಯವರ ದೊಡ್ಡ ಇನ್ನಿಂಗ್ಸ್‌ ಕಣ್ತುಂಬಿಕೊಳ್ಳಬೇಕು ಎಂದು ಅರುಣ್ ಜೇಟ್ಲಿ ಮೈದಾನಕ್ಕೆ ಬಂದಿದ್ದ ಅವರ ಅಭಿಮಾನಿಗಳಿಗೆ ಮತ್ತೆ ನಿರಾಸೆ ಎದುರಾಗಿದೆ. ಬರೋಬ್ಬರಿ 12 ವರ್ಷಗಳ ಬಳಿಕ ರಣಜಿ ಟ್ರೋಫಿಗೆ ಕಮ್‌ಬ್ಯಾಕ್‌ ಮಾಡಿದ್ದ ವಿರಾಟ್ ಕೊಹ್ಲಿ, ರೈಲ್ವೇಸ್ ಎದುರು ತಮ್ಮ ತವರಿನ ಮೈದಾನದಲ್ಲಿ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದ್ದಾರೆ. ಇದರೊಂದಿಗೆ ಕಿಂಗ್‌ ಕೊಹ್ಲಿಯ ದಯನೀಯ ಬ್ಯಾಟಿಂಗ್ ವೈಫಲ್ಯ ದೇಶಿ ಕ್ರಿಕೆಟ್‌ನಲ್ಲೂ ಮುಂದುವರೆದಿದೆ.

Add Asianetnews Kannada as a Preferred SourcegooglePreferred

ತವರಿನಲ್ಲಿ ನಡೆದಿದ್ದ ನ್ಯೂಜಿಲೆಂಡ್ ಎದುರಿನ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನೀರಸ ಪ್ರದರ್ಶನ ತೋರಿದ್ದ ವಿರಾಟ್ ಕೊಹ್ಲಿ, ಇದಾದ ಬಳಿಕ ಆಸ್ಟ್ರೇಲಿಯಾ ಎದುರಿನ ಬಾರ್ಡರ್‌-ಗವಾಸ್ಕರ್ ಟೆಸ್ಟ್‌ನಲ್ಲಿಯೂ ಮೊದಲ ಟೆಸ್ಟ್‌ ಹೊರತುಪಡಿಸಿ ಕೊಹ್ಲಿಯಿಂದ ದೊಡ್ಡ ಇನ್ನಿಂಗ್ಸ್‌ ಮೂಡಿ ಬಂದಿರಲಿಲ್ಲ. ಇನ್ನು ಮುಂಬರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಸಜ್ಜಾಗುತ್ತಿರುವ ವಿರಾಟ್ ಕೊಹ್ಲಿ, 2012ರ ಬಳಿಕ ಮೊದಲ ಬಾರಿಗೆ ರಣಜಿ ಟ್ರೋಫಿ ಟೂರ್ನಿಯಲ್ಲಿ ಪಾಲ್ಗೊಂಡಿದ್ದಾರೆ. ರೈಲ್ವೇಸ್ ಎದುರಿನ ಪಂದ್ಯದಲ್ಲಿ ಎಂದಿನಂತೆ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿಳಿದ ವಿರಾಟ್ ಕೊಹ್ಲಿ ಆಟವನ್ನು ಕಣ್ತುಂಬಿಕೊಳ್ಳಲು ಅವರ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಅರುಣ್ ಜೇಟ್ಲಿ ಮೈದಾನಕ್ಕೆ ಧಾವಿಸಿದ್ದರು. 

ಈ ಕಾರಣಕ್ಕಾಗಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಉದ್ಘಾಟನಾ ಸಮಾರಂಭ ರದ್ದು?

ಡೆಲ್ಲಿ ಹಾಗೂ ರೈಲ್ವೇಸ್ ನಡುವಿನ ರಣಜಿ ಟ್ರೋಫಿ ಪಂದ್ಯದ ಎರಡನೇ ದಿನದಾಟದಲ್ಲಿ ರೈಲ್ವೇಸ್ ವೇಗಿ ಹಿಮಾಂನ್ಶು ಸಂಗ್ವಾನ್ ಎಸೆದ ಇನ್‌ಸ್ವಿಂಗ್ ದಾಳಿಯನ್ನು ಕೊಹ್ಲಿ ಸರಿಯಾಗಿ ಗ್ರಹಿಸದ ಪರಿಣಾಮ ವಿಕೆಟ್ ಚೆಲ್ಲಾಪಿಲ್ಲಿಯಾಯಿತು. ರಣಜಿ ಟ್ರೋಫಿ ಕಮ್‌ಬ್ಯಾಕ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ, 15 ಎಸೆತಗಳನ್ನು ಎದುರಿಸಿ ಕೇವಲ 6 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

ಹೀಗಿತ್ತು ನೋಡಿ ವಿರಾಟ್ ಕೊಹ್ಲಿ ಔಟ್ ಆದ ವಿಡಿಯೋ:

Scroll to load tweet…

ಇನ್ನು ದಶಕದ ಬಳಿಕ ರಣಜಿ ಪಂದ್ಯವನ್ನಾಡಲು ಮೈದಾನಕ್ಕಿಳಿದಿರುವ ವಿರಾಟ್ ಕೊಹ್ಲಿ ಆಟವನ್ನು ಕಣ್ತುಂಬಿಕೊಳ್ಳಲು ಮೊದಲ ದಿನವೇ ಸುಮಾರು 15 ಸಾವಿರಕ್ಕೂ ಅಧಿಕ ಮಂದಿ ಮೈದಾನಕ್ಕೆ ಆಗಮಿಸಿದ್ದರು ಎಂದು ವರದಿಯಾಗಿದೆ. ಇನ್ನು ಇಂದು ಕೂಡಾ ಭಾರತದ ಸೂಪರ್‌ ಸ್ಟಾರ್ ವಿರಾಟ್ ಕೊಹ್ಲಿಯ ಆಟವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಅರುಣ್ ಜೇಟ್ಲಿ ಮೈದಾನಕ್ಕೆ ಬಂದಿದ್ದಾರೆ.

ರಣಜಿ ಟ್ರೋಫಿ ಕಮ್‌ಬ್ಯಾಕ್‌ನಲ್ಲಿ ರಾಹುಲ್ ಕೇವಲ 26ಕ್ಕೆ ಔಟ್!

ಇನ್ನು ಡೆಲ್ಲಿ ಹಾಗೂ ರೈಲ್ವೇಸ್ ನಡುವಿನ ಪಂದ್ಯದ ಬಗ್ಗೆ ಹೇಳುವುದಾದರೇ, ಮೊದಲು ಬ್ಯಾಟ್ ಮಾಡಿದ ರೈಲ್ವೇಸ್ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 241 ರನ್ ಗಳಿಸಿ ಸರ್ವಪತನ ಕಂಡಿದೆ. ಇನ್ನು ಇದಕ್ಕುತ್ತರವಾಗಿ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಡೆಲ್ಲಿ ತಂಡವು 43 ಓವರ್ ಅಂತ್ಯದ ವೇಳೆಗೆ 4 ವಿಕೆಟ್ ಕಳೆದುಕೊಂಡು 174 ರನ್ ಗಳಿಸಿದೆ. ಸದ್ಯ ನಾಯಕ ಆಯುಷ್ ಬದೌನಿ(57) ಹಾಗೂ ಸುಮಿತ್ ಮಾಥುರ್(29) ಐದನೇ ವಿಕೆಟ್‌ಗೆ ಮುರಿಯದ 77 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ. ಡೆಲ್ಲಿ ಇನ್ನೂ 67 ರನ್‌ಗಳ ಹಿನ್ನಡೆಯಲ್ಲಿದೆ.