ಚಿನ್ನಸ್ವಾಮಿಯಲ್ಲಿ ಹರ್ಯಾಣ ವಿರುದ್ಧದ ರಣಜಿ ಪಂದ್ಯದಲ್ಲಿ ಕರ್ನಾಟಕ 5 ವಿಕೆಟ್‌ಗೆ 267 ರನ್ ಗಳಿಸಿದೆ. ರಾಹುಲ್ ನಿರೀಕ್ಷೆಗೆ ತಕ್ಕಂತೆ ಆಡದೆ 26 ರನ್‌ಗೆ ಔಟಾದರು. ಮಯಾಂಕ್ 91 ರನ್ ಗಳಿಸಿ ಮಿಂಚಿದರು. ಪಡಿಕ್ಕಲ್ 43, ಸ್ಮರಣ್ 35 ರನ್ ಗಳಿಸಿದರು. ಕ್ವಾರ್ಟರ್‌ಗೆ ಬೋನಸ್ ಅಂಕದೊಂದಿಗೆ ಗೆಲ್ಲಲೇಬೇಕಾದ ಒತ್ತಡದಲ್ಲಿದೆ ಕರ್ನಾಟಕ.

ಬೆಂಗಳೂರು ಕೆ.ಎಲ್.ರಾಹುಲ್‌ ಬಹುನಿರೀಕ್ಷಿತ ರಣಜಿ ಕಮ್‌ಬ್ಯಾಕ್ ಕೇವಲ 37 ಎಸೆತಗಳಿಗೆ ಕೊನೆಗೊಂಡಿತು. ಭಾರತ ತಂಡದ ತಾರಾ ಬ್ಯಾಟರ್ 26 ರನ್ ಗಳಿಸಿ ಔಟಾದರು. ಹರ್ಯಾಣ ವಿರುದ್ದ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 'ಸಿ' ಗುಂಪಿನ ನಿರ್ಣಾಯಕ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡುತ್ತಿರುವ ಕರ್ನಾಟಕ, ಮೊದಲ ದಿನದಂತ್ಯಕ್ಕೆ 5 ವಿಕೆಟ್‌ಗೆ 267 ರನ್ ಗಳಿಸಿದ್ದು, ಮೊದಲ ಇನ್ನಿಂಗ್ಸ್‌ನಲ್ಲಿ ದೊಡ್ಡ ಮೊತ್ತ ಕಲೆಹಾಕಲು ಎದುರು ನೋಡುತ್ತಿದೆ.

Add Asianetnews Kannada as a Preferred SourcegooglePreferred

2020ರ ಫೆಬ್ರವರಿ ಬಳಿಕ ಮೊದಲ ಬಾರಿಗೆ ರಣಜಿ ಪಂದ್ಯವನ್ನಾಡಿದ ರಾಹುಲ್, 3ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿಸಿದರು. ತಮ್ಮ ನೆಚ್ಚಿನ ಆಟಗಾರನ ಆಟ ವೀಕ್ಷಿಸಲು ಕ್ರೀಡಾಂಗಣದಲ್ಲಿ ನೆರೆದಿದ್ದ ಸಾವಿರಾರು ಪ್ರೇಕ್ಷಕರು, 'ರಾಹುಲ್, ರಾಹುಲ್' ಎಂದು ಕೂಗುತ್ತಾ ಹುರಿದುಂಬಿಸಿದರು.

ಚೋಲೆ ಬಟೋರೆ, ಬಟರ್ ಚಿಕನ್ ಅಲ್ಲ, ಕೊಹ್ಲಿಗೆ ಈ ಸಲ ಲಂಚ್‌ನಲ್ಲಿ ಸಿಗುತ್ತೆ ಫೇವರೇಟ್ ಫುಡ್

4 ಆಕರ್ಷಕ ಬೌಂಡರಿಗಳನ್ನು ಬಾರಿಸಿ ದೊಡ್ಡ ಸ್ಕೋರ್ ದಾಖಲಿಸುವ ನಿರೀಕ್ಷೆ ಮೂಡಿಸಿದ ರಾಹುಲ್, ವೇಗಿ ಅಬ್ದುಲ್ ಕಾಂಬೋಜ್‌ರ ಎಸೆತದಲ್ಲಿ ವಿಕೆಟ್ ಕೀಪರ್‌ಗೆ ಕ್ಯಾಚ್ ನೀಡಿ ಔಟಾದರು. 2ನೇ ವಿಕೆಟ್‌ಗೆ ಮಯಾಂಕ್ ಜೊತೆ ರಾಹುಲ್ 54 ರನ್ ಸೇರಿದರು.

ಇದಕ್ಕೂ ಮುನ್ನ ಕೆ.ವಿ.ಅನೀಶ್ ಹಾಗೂ ಮಯಾಂಕ್ ಮೊದಲ ವಿಕೆಟ್‌ಗೆ 46 ರನ್ ಜೊತೆಯಾಟವಾಡಿ, ರಾಜ್ಯಕ್ಕೆ ಉತ್ತಮ ಆರಂಭ ಒದಗಿಸಿದರು. 17 ರನ್ ಗಳಿಸಿ ಅನೀಶ್, ಕಾಂಬೋಜ್ ಎಸೆತದಲ್ಲಿ ಬೌಲ್ಡ್ ಆದರು. 3ನೇ ವಿಕೆಟ್‌ಗೆ ನಾಯಕನ ಜೊತೆ ಕ್ರೀಸ್ ಹಂಚಿಕೊಂಡ ದೇವ್‌ದತ್ ಪಡಿಕ್ಕಲ್ 62 ರನ್ ಜೊತೆಯಾಟದಲ್ಲಿ ಭಾಗಿಯಾದರು. ಶತಕ ದಾಖಲಿಸುವತ್ತ ಮುನ್ನುಗ್ಗುತ್ತಿದ್ದ ಮಯಾಂಕ್, 91 ರನ್ ಗಳಿಸಿದ್ದಾಗ ಅನುಜ್ ಥಕ್ರಾಲ್‌ಗೆ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದರು. 149 ಎಸೆತಗಳನ್ನು ಎದುರಿಸಿದ ಮಯಾಂಕ್, 8 ಬೌಂಡರಿ, 3 ಸಿಕ್ಸರ್ ಸಿಡಿಸಿದರು.

ದಿಲ್ಲಿ ಟೀಂನಲ್ಲೀಗ ಕೊಹ್ಲಿಯದ್ದೇ ಹವಾ! 12 ವರ್ಷಗಳ ಬಳಿಕ ಮೊದಲ ರಣಜಿ ಪಂದ್ಯವಾಡಲಿರುವ ವಿರಾಟ್

ಆಕರ್ಷಕ 43 ರನ್ ಗಳಿಸಿದ ಪಡಿಕ್ಕಲ್, ಕಳೆದ ಪಂದ್ಯದಲ್ಲಿ ಡಬಲ್ ಸೆಂಚುರಿ ಬಾರಿಸಿದ್ದ ಆರ್. ಸ್ಮರಣ್ (35), ದೊಡ್ಡ ಇನ್ನಿಂಗ್ಸ್ ಕಟ್ಟುವ ನಿರೀಕ್ಷೆ ಮೂಡಿಸಿದರಾದರೂ, ಸಾಧ್ಯವಾಗಲಿಲ್ಲ. 222 ರನ್‌ಗೆ ಕರ್ನಾಟಕದ 5ನೇ ವಿಕೆಟ್ ಪತನಗೊಂಡಿತು. ಮುರಿಯದ 6ನೇ ವಿಕೆಟ್‌ಗೆ ಕ್ರೀಸ್ ಹಂಚಿಕೊಂಡಿರುವ ಕೆ.ಎಲ್.ಶ್ರೀಜಿತ್ ಹಾಗೂ ಯಶೋವರ್ಧನ್ 45 ರನ್ ಜೊತೆಯಾಟವಾಡಿ ದಿನದಂತ್ಯಕ್ಕೆ ತಂಡದ ಮೊತ್ತವನ್ನು 267ಕ್ಕೆ ಹೆಚ್ಚಿಸಿದರು. ಯಶೋವರ್ಧನ್ 27, ಶ್ರೀಜಿತ್ 18 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ಕ್ವಾರ್ಟರ್ ಪ್ರವೇಶಿಸಲು ಕರ್ನಾಟಕ ಈ ಪಂದ್ಯದಲ್ಲಿ ಬೋನಸ್ ಅಂಕದೊಂದಿಗೆ ಗೆಲ್ಲಬೇಕಿದೆ. 

ಸ್ಕೋರ್‌: 
ಕರ್ನಾಟಕ ಮೊದಲ ಇನ್ನಿಂಗ್ಸ್: ಮಯಾಂಕ್ 91, ಪಡಿಕ್ಕಲ್ 43, ಅನ್ಸುಲ್ 2-25, ಅನುಜ್ 2-74)
(1ನೇ ದಿನದಂತ್ಯಕ್ಕೆ)

ಕೊಹ್ಲಿ ನೋಡಲು ಜನಸಾಗರ!

ನವದೆಹಲಿ: 12 ವರ್ಷ ಬಳಿಕ ರಣಜಿ ಪಂದ್ಯವನ್ನು ಆಡುತ್ತಿರುವ ವಿರಾಟ್ ಕೊಹ್ಲಿಯನ್ನು ನೋಡಲು ಗುರುವಾರ ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಜನಸಾಗರವೇ ನೆರೆದಿತ್ತು. 

ರೈಲ್ವೇಸ್ ವಿರುದ್ದದ ಪಂದ್ಯದಲ್ಲಿ ದೆಹಲಿ ಪರ ಆಡುತ್ತಿರುವ ಕೊಹ್ಲಿಯ ಆಟ ವೀಕ್ಷಿಸಲು15,000ಕ್ಕಿಂತ ಹೆಚ್ಚು ಅಭಿಮಾನಿಗಳು ಆಗಮಿಸಿದ್ದರು. ದೆಹಲಿ ಕ್ರಿಕೆಟ್ ಸಂಸ್ಥೆ 10000 ಪ್ರೇಕ್ಷಕರು ಬರಬಹುದು ಎಂದು ಅಂದಾಜಿಸಿತ್ತು. ಆದರೆ ನಿರೀಕ್ಷೆಗೂ ಮೀರಿ ಅಭಿಮಾನಿಗಳು ಆಗಮಿಸಿದ್ದರಿಂದ ಮೊದಲು ಘೋಷಿಸಿದ್ದ ಗೇಟ್‌ಗಳ ಜೊತೆ ಇನ್ನಷ್ಟು ಗೇಟ್‌ಗಳನ್ನು ತೆಗೆಯಬೇಕಾಯಿತು.

ಗುರುವಾರ ಕೊಹ್ಲಿಯ ಫೀಲ್ಡಿಂಗ್ ನೋಡಿ ಖುಷಿಪಟ್ಟ ಅಭಿಮಾನಿಗಳು, ಶುಕ್ರವಾರ ಅವರ ಬ್ಯಾಟಿಂಗ್ ವೀಕ್ಷಿಸಲು ಕಾತರಿಸುತ್ತಿದ್ದಾರೆ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರೈಲ್ವೇಸ್, ಮೊದಲ ಇನ್ನಿಂಗಲ್ಲಿ 241 ರನ್‌ಗೆ ಆಲೌಟ್‌ ಆಯಿತು. ಮೊದಲ ಇನ್ನಿಂಗ್ಸ್ ಆರಂಭಿ ಸಿರುವ ದೆಹಲಿ, ಮೊದಲ ದಿನದಂತ್ಯಕ್ಕೆ 1 ವಿಕೆಟ್‌ಗೆ 41 ರನ್ ಗಳಿಸಿದೆ.