ಗೌತಮ್ ಗಂಭೀರ್ ಜತೆ ಕಿತ್ತಾಡಿಕೊಂಡ ಬೆನ್ನಲೇ ದೇವಸ್ಥಾನಕ್ಕೆ ಭೇಟಿ ನೀಡಿದ ವಿರುಷ್ಕಾ ಜೋಡಿ..!
* ವಿರಾಟ್-ಗಂಭೀರ್ ಗಲಾಟೆಯ ಬೆನ್ನಲ್ಲೇ ವಿರುಷ್ಕಾ ದಂಪತಿ ಟೆಂಪಲ್ ರನ್
* ಲಖನೌ ಎದುರಿನ ಪಂದ್ಯದ ವೇಳೆಯಲ್ಲಿ ಆರ್ಸಿಬಿ ಕ್ರಿಕೆಟಿಗ ಕೊಹ್ಲಿ ಜತೆ ಗೌತಿ ಜಗಳ
* ದೇವಸ್ಥಾನದಲ್ಲಿ ವಿರಾಟ್ ಕೊಹ್ಲಿಗೆ ಸಾಥ್ ನೀಡಿದ ಅನುಷ್ಕಾ ಶರ್ಮಾ
ನವದೆಹಲಿ(ಮೇ.04): 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಬ್ಯುಸಿಯಾಗಿರುವ ವಿರಾಟ್ ಕೊಹ್ಲಿ, ತಮ್ಮ ಬಿಡುವಿನ ಸಮಯದಲ್ಲಿ ಇತ್ತೀಚೆಗಷ್ಟೇ ದೇವಸ್ಥಾನಕ್ಕೆ ಭೇಟಿ ನೀಡಿ ಗಮನ ಸೆಳೆದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿರುಷ್ಕಾ ಜೋಡಿ ದೇವಸ್ಥಾನಕ್ಕೆ ಭೇಟಿ ನೀಡಿರುವ ಫೋಟೋಗಳು ವೈರಲ್ ಆಗಿವೆ. ಮೇ 01ರಂದು ಲಖನೌನ ಏಕಾನ ಮೈದಾನದಲ್ಲಿ ನಡೆದ ಲಖನೌ ಸೂಪರ್ ಜೈಂಟ್ಸ್ ವಿರುದ್ದ ಆರ್ಸಿಬಿ ತಂಡವು ಗೆಲುವು ದಾಖಲಿಸಿದ ಬೆನ್ನಲ್ಲೇ ವಿರಾಟ್ ಕೊಹ್ಲಿ ಹಾಗೂ ಲಖನೌ ತಂಡದ ಮೆಂಟರ್ ಗೌತಮ್ ಗಂಭೀರ್ ಜತೆ ಮಾತಿನ ಚಕಮಕಿ ನಡೆದಿತ್ತು. ಇದರ ಬೆನ್ನಲ್ಲೇ ಇದೀಗ ವಿರಾಟ್ ಕೊಹ್ಲಿ ದಂಪತಿ ದೇವಸ್ಥಾನಕ್ಕೆ ತೆರಳಿಸುವುದು ಸಾಕಷ್ಟು ಕುತೂಹಲ ಹುಟ್ಟುಹಾಕಿದೆ.
ವರೀಂದರ್ ಚಾವ್ಲಾ ತಮ್ಮ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಆ ವಿಡಿಯೋದಲ್ಲಿ ವಿರಾಟ್ ಕೊಹ್ಲಿ, ಧೋತಿ ತೊಟ್ಟು ಶಾಲನ್ನು ಕುತ್ತಿಗೆಗೆ ಸುತ್ತಿಕೊಂಡಿರುವ ದೇವಸ್ಥಾನಕ್ಕೆ ಭೇಟಿ ನೀಡಿರುವ ದೃಶ್ಯಾವಳಿಗಳು ಕಂಡು ಬಂದಿವೆ. ಇನ್ನು ಅನುಷ್ಕಾ ಶರ್ಮಾ ಸೀರೆಯುಟ್ಟು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ಈ ಮೊದಲು ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದ ವಿರುಷ್ಕಾ ಜೋಡಿ:
ಈ ಮೊದಲು ಕಳೆದ ಮಾರ್ಚ್ನಲ್ಲಿ ವಿರಾಟ್ ಕೊಹ್ಲಿ ಹಾಗೂ ಮತ್ತವರ ಪತ್ನಿ ಅನುಷ್ಕಾ ಶರ್ಮಾ ಮಧ್ಯಪ್ರದೇಶದ ಉಜ್ಜೇಯಿನಿಯ ಐತಿಹಾಸಿಕ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ವಿರುಷ್ಕಾ ಜೋಡಿ ಶಿವಲಿಂಗಕ್ಕೆ ಹಾಲಿನ ಅಭಿಷೇಕ ಮಾಡಿದ್ದರು. ಆ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು.
ಕೊಹ್ಲಿ-ಗಂಭೀರ್ ನಡುವೆ ಆಗಿದ್ದೇನು?
ತಂಡವೊಂದರ ಡಗೌಟ್ನಲ್ಲಿ ಕೂತಿದ್ದ ಪ್ರತ್ಯಕ್ಷದರ್ಶಿಯೊಬ್ಬರು ಪ್ರತಿಷ್ಠಿತ ಸುದ್ದಿ ಸಂಸ್ಥೆಗೆ ಘಟನೆಯ ವಿವರವನ್ನು ಬಿಚ್ಚಿಟ್ಟಿದ್ದಾರೆ. ‘ಟೀವಿಯಲ್ಲಿ ನೋಡಿದಂತೆ ಪಂದ್ಯ ಮುಗಿದ ಬಳಿಕ ಕೊಹ್ಲಿ ಹಾಗೂ ಮೇಯರ್ಸ್ ಮಾತನಾಡುತ್ತಾ ನಡೆಯುತ್ತಿದ್ದರು. ಏಕೆ ನಿರಂತರವಾಗಿ ತಮ್ಮ ತಂಡದ ಆಟಗಾರರನ್ನು ನಿಂದಿಸುತ್ತಿದ್ದಿರಿ ಎಂದು ಮೇಯರ್ಸ್ ಕೊಹ್ಲಿಯನ್ನು ಕೇಳಿದಾಗ, ನೀವೇಕೆ(ಮೇಯರ್ಸ್) ನನ್ನನ್ನು ಗುರಾಯಿಸಿ ನೋಡಿದಿರಿ ಎಂದು ಕೊಹ್ಲಿ ಮರು ಪ್ರಶ್ನೆ ಕೇಳಿದರು. ಇದಕ್ಕೂ ಮುನ್ನ ಕೊಹ್ಲಿ ಬಿಟ್ಟೂಬಿಡದಂತೆ ನಂ.10 ಬ್ಯಾಟರ್ ನವೀನ್-ಉಲ್-ಹಕ್ರ ವಿರುದ್ಧ ಅವಾಚ್ಯ ಶಬ್ಧಗಳ ಬಳಕೆ ಮಾಡುತ್ತಿದ್ದ ಕಾರಣ, ಅವರ ಜೊತೆ ಬ್ಯಾಟ್ ಮಾಡುತ್ತಿದ್ದ ಅಮಿತ್ ಮಿಶ್ರ ಅಂಪೈರ್ಗಳಿಗೆ ದೂರು ನೀಡಿದ್ದರು’.
IPL 2023 ಕೋಲ್ಕತಾ ನೈಟ್ ರೈಡರ್ಸ್- ಸನ್ರೈಸರ್ಸ್ ಹೈದರಾಬಾದ್ ಫೈಟ್ಗೆ ಕ್ಷಣಗಣನೆ
‘ಇದನ್ನು ಗಮನಿಸಿದ ಗಂಭೀರ್, ಮೇಯರ್ಸ್ರನ್ನು ಕೊಹ್ಲಿ ಜೊತೆ ಮಾತಾಡದಂತೆ ಕರೆದರು. ಇದರಿಂದ ಕೊಹ್ಲಿ ಹಾಗೂ ಗಂಭೀರ್ ನಡುವೆ ಮಾತಿನ ಚಕಮಕಿ ಶುರುವಾಯಿತು’ ಎಂದು ವಿವರಿಸಿದ್ದಾರೆ. ‘‘ಗಂಭೀರ್, ‘ನೀನೇನು ಹೇಳುತ್ತಿದ್ದೀಯ ಈಗ ಹೇಳು’ ಎಂದು ಪ್ರಶ್ನಿಸಿದಾಗ ‘ನಾನು ನಿಮಗೇನು ಹೇಳಿಲ್ಲ. ನೀವೇಕೆ ತಲೆಹಾಕುತ್ತಿದ್ದೀರಿ’ ಎಂದು ಉತ್ತರಿಸಿದರು. ಇದಕ್ಕೆ ಗಂಭೀರ್ ‘ನೀನು ನನ್ನ ಆಟಗಾರನನ್ನು ನಿಂದಿಸಿದರೆ ನನ್ನ ಕುಟುಂಬವನ್ನು ನಿಂದಿಸಿದ ಹಾಗೆ’ ಎಂದರು. ಇದಕ್ಕೆ ಕೊಹ್ಲಿ, ‘ಹಾಗಿದ್ದರೆ ನಿಮ್ಮ ಕುಟುಂಬವನ್ನು ನೀವು ಸರಿಯಾಗಿ ನಿರ್ವಹಿಸಿ’ ಎಂದರು. ಗಂಭೀರ್ರನ್ನು ಕೆ.ಎಲ್.ರಾಹುಲ್ ಸೇರಿ ಇತರರು ಕರೆದೊಯ್ಯುವ ಮುನ್ನ, ‘ಹಾಗಿದ್ದರೆ, ಈಗ ನಾನು ನಿನ್ನಿಂದ ಕಲಿಯಬೇಕಾ’ ಎಂದರು’’ ಎಂದು ಪ್ರತ್ಯಕ್ಷದರ್ಶಿ ವಿವರಿಸಿದ್ದಾರೆ.
ಕೊಹ್ಲಿ vs ಗಂಭೀರ್ ಕಿತ್ತಾಟ ಹೊಸದೇನಲ್ಲ!
2013ರಲ್ಲಿ ಕೊಹ್ಲಿ ಭಾರತ ತಂಡದ ಸೂಪರ್ಸ್ಟಾರ್ ಆಗುವತ್ತ ಸಾಗಿದ್ದರು. ಭಾರತ ತಂಡದಿಂದ ಹೊರಬಿದ್ದಿದ್ದ ಗಂಭೀರ್ ಆಗ ಕೆಕೆಆರ್ ನಾಯಕ. ಆರ್ಸಿಬಿ ಹಾಗೂ ಕೆಕೆಆರ್ ನಡುವಿನ ಪಂದ್ಯದ ವೇಳೆ ಕೊಹ್ಲಿ ಹಾಗೂ ಗಂಭೀರ್ ಮೈದಾನದಲ್ಲೇ ಹೆಚ್ಚೂ ಕಡಿಮೆ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದರು. ಬಳಿಕ ಗಂಭೀರ್ ಹಲವು ಬಾರಿ ಕೊಹ್ಲಿಯ ನಾಯಕತ್ವದ ಬಗ್ಗೆ ಟೀಕಿಸಿದ್ದಾರೆ. ಇಬ್ಬರು ‘ನಮ್ಮ ನಡುವೆ ಯಾವುದೇ ದ್ವೇಷವಿಲ್ಲ’ ಎಂದು ಹಲವು ಬಾರಿ ಹೇಳಿದ್ದರೂ, ಇಬ್ಬರ ನಡುವಿನ ಶೀತಲ ಸಮರ ಮುಂದುವರಿಯುತ್ತಲೇ ಇದೆ.