2027ರ ಏಕದಿನ ವಿಶ್ವಕಪ್ವರೆಗೆ ಕೊಹ್ಲಿ ಮತ್ತು ರೋಹಿತ್ ಲಭ್ಯರಿದ್ದರೂ, ಬಿಸಿಸಿಐ ಯುವ ಆಟಗಾರರಿಗೆ ಅವಕಾಶ ನೀಡುವ ಉದ್ದೇಶದಿಂದ ಅವರನ್ನು ತಂಡದಿಂದ ಕೈಬಿಡಬಹುದು. ಅಕ್ಟೋಬರ್ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ಸರಣಿಯೇ ಇವರಿಬ್ಬರಿಗೂ ವಿದಾಯದ ಸರಣಿಯಾಗುವ ಸಾಧ್ಯತೆಯಿದೆ.
ನವದೆಹಲಿ: ಭಾರತದ ದಿಗ್ಗಜ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಟೆಸ್ಟ್ ಹಾಗೂ ಅಂತಾರಾಷ್ಟ್ರೀಯ ಟಿ20ಯಿಂದ ಈಗಾಗಲೇ ನಿವೃತ್ತಿಯಾಗಿದ್ದಾರೆ. ಹೀಗಾಗಿ ಏಕದಿನ ಕ್ರಿಕೆಟ್ನಲ್ಲಿ ಈ ಇಬ್ಬರ ಆಟವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ಏಕದಿನದಿಂದಲೂ ಕೊಹ್ಲಿ, ರೋಹಿತ್ ನಿವೃತ್ತಿಯಾಗುವ ಸಮಯ ದೂರವಿಲ್ಲ ಎನ್ನುತ್ತಿವೆ ಕೆಲ ಮಾಧ್ಯಮ ವರದಿಗಳು.
38 ವರ್ಷದ ರೋಹಿತ್, 36 ವರ್ಷದ ಕೊಹ್ಲಿ 2027ರ ಐಸಿಸಿ ಏಕದಿನ ವಿಶ್ವಕಪ್ ದೃಷ್ಟಿಯಲ್ಲಿಟ್ಟುಕೊಂಡು ಏಕದಿನ ಮಾದರಿಯಲ್ಲಿ ಮುಂದುವರಿಯುತ್ತಿದ್ದಾರೆ. ಈ ಮಾದರಿಯಲ್ಲಿ ಇಬ್ಬರೂ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ವಿಶ್ವಕಪ್ವರೆಗೆ ಕೊಹ್ಲಿ, ರೋಹಿತ್ ಲಯ, ಫಿಟ್ನೆಸ್ ಕಾಯ್ದುಕೊಳ್ಳಬಹುದಾಗಿದ್ದರೂ ಬಿಸಿಸಿಐ ತನ್ನ ವಿಶ್ವಕಪ್ ತಂಡದ ಯೋಜನೆಯಲ್ಲಿ ಇವರಿಬ್ಬರನ್ನೂ ಹೊರಗಿಡಬಹುದು ಎಂದು ಹೇಳಲಾಗುತ್ತಿದೆ.
ವಿಶ್ವಕಪ್ನಲ್ಲಿ ಯುವ ಪ್ರತಿಭೆಗಳಿಗೆ ಅವಕಾಶ ನೀಡಲು ಬಿಸಿಸಿಐ ನಿರ್ಧರಿಸಿದ್ದು, ಅದಕ್ಕಾಗಿ ಈ ವರ್ಷದಿಂದಲೇ ಸಜ್ಜಾಗಲಿದೆ. ಇದಕ್ಕೆ ಪೂರಕವೆಂಬಂತೆ, ‘2027ರ ಏಕದಿನ ವಿಶ್ವಕಪ್ನ ನಮ್ಮ ಯೋಜನೆಗೆ ಕೊಹ್ಲಿ ಮತ್ತು ರೋಹಿತ್ ಹೊಂದಿಕೊಳ್ಳುವುದಿಲ್ಲ’ ಎಂದು ತಂಡದ ಆಡಳಿತ ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದ್ದಾಗ ವರದಿಯಾಗಿದೆ.
ಆಸೀಸ್ ಸರಣಿಯೇ ಕೊನೆ?:
ಅಕ್ಟೋಬರ್ನಲ್ಲಿ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ತಂಡ 3 ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ವರದಿಗಳ ಪ್ರಕಾರ, ಆಸೀಸ್ ಸರಣಿಯೇ ಕೊಹ್ಲಿ ಹಾಗೂ ರೋಹಿತ್ಗೆ ವಿದಾಯದ ಸರಣಿಯಾಗುವ ಸಾಧ್ಯತೆಯಿದೆ. ಒಂದು ವೇಳೆ ಅವರು ಆಸೀಸ್ ಸರಣಿ ಬಳಿಕ ಏಕದಿನದಲ್ಲಿ ಮುಂದುವರಿಯಲು ನಿರ್ಧರಿಸಿದರೂ, ಬಿಸಿಸಿಐ ಅವರನ್ನು 2027ರ ಏಕದಿನ ವಿಶ್ವಕಪ್ಗೂ ಮುನ್ನವೇ ನಿವೃತ್ತಿಗೆ ಸೂಚಿಸಬಹುದು ಎನ್ನಲಾಗುತ್ತಿದೆ. 2026ರಲ್ಲಿ ಅವರು ಏಕದಿನದಲ್ಲಿ ಮುಂದುವರಿಯಬೇಕಾದರೆ ಈ ವರ್ಷಾಂತ್ಯಕ್ಕೆ ನಡೆಯಲಿರುವ ವಿಜಯ್ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯಲ್ಲಿ ಆಡಬೇಕಾಗುತ್ತದೆ ಎಂದು ವರದಿಯಾಗಿದೆ.
ಭಾರತ ಏಕದಿನ ತಂಡದ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ, 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು. ಫೈನಲ್ನಲ್ಲಿ ನ್ಯೂಜಿಲೆಂಡ್ ಎದುರು ಟೀಂ ಇಂಡಿಯಾ 4 ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸಿತ್ತು. ಫೈನಲ್ನಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿದ್ದ ರೋಹಿತ್ ಶರ್ಮಾ, ಪಂದ್ಯಶ್ರೇಷ್ಠ ಪ್ರಶಸ್ತಿ ಜಯಿಸುವಲ್ಲಿ ಯಶಸ್ವಿಯಾಗಿದ್ದರು. ಈ ಸರಣಿಯಲ್ಲಿ ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿ 216 ರನ್ ಸಿಡಿಸಿ ಮಿಂಚಿದ್ದರು.
ವಿಶ್ವಕಪ್ಗೆ ಮುನ್ನ ಭಾರತಕ್ಕೆ 8 ಸರಣಿ
2027ರ ಏಕದಿನ ವಿಶ್ವಕಪ್ವರೆಗೆ ಭಾರತ ಒಟ್ಟು 8 ಏಕದಿನ ಸರಣಿಗಳನ್ನಾಡಲಿದ್ದು, 24 ಪಂದ್ಯಗಳು ನಿಗದಿಯಾಗಿವೆ. ತವರಿನಲ್ಲಿ ದ.ಆಫ್ರಿಕಾ, ನ್ಯೂಜಿಲೆಂಡ್(2 ಬಾರಿ), ಅಫ್ಘಾನಿಸ್ತಾನ, ವೆಸ್ಟ್ಇಂಡೀಸ್, ಶ್ರೀಲಂಕಾ ವಿರುದ್ಧ, ತವರಿನಾಚೆ ಆಸ್ಟ್ರೇಲಿಯಾ, ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಈಗಾಗಲೇ ಹಲವು ಪ್ರತಿಭಾವಂತ ಆಟಗಾರರ ಮೇಲೆ ಕಣ್ಣಿಟ್ಟಿರುವ ಮಂಡಳಿ, ಅವರಿಗೆ ಈ ಮೇಲಿನ ಸರಣಿಗಳಲ್ಲಿ ಹೆಚ್ಚಿನ ಅವಕಾಶ ಕಲ್ಪಿಸಿ ವಿಶ್ವಕಪ್ಗೆ ಸಿದ್ಧಗೊಳಿಸಲಿದೆ.
ಶುಭ್ಮನ್ ಗಿಲ್ ಭವಿಷ್ಯದ ನಾಯಕ?
ಇಂಗ್ಲೆಂಡ್ ಸರಣಿಯ ತಮ್ಮ ಚೊಚ್ಚಲ ನಾಯಕತ್ವದಲ್ಲೇ ಗಮನ ಸೆಳೆದಿರುವ ಯುವ ಕ್ರಿಕೆಟಿಗ ಶುಭ್ಮನ್ ಗಿಲ್ ಭಾರತದ ಮೂರೂ ಮಾದರಿ ತಂಡಗಳ ಭವಿಷ್ಯದ ನಾಯಕರಾಗಿ ಹೊರಹೊಮ್ಮುವ ಸಾಧ್ಯತೆಯಿದೆ. ಸೆಪ್ಟೆಂಬರ್ನಲ್ಲಿ ನಡೆಯಲಿರುವ ಏಷ್ಯಾಕಪ್ ಟಿ20ಯಲ್ಲಿ ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಭಾರತ ಆಡಲಿದೆ. ಆ ಟೂರ್ನಿಗೆ ಗಿಲ್ರನ್ನು ಉಪನಾಯಕನನ್ನಾಗಿ ನೇಮಿಸುವ ಸಾಧ್ಯತೆಯಿದೆ. ಅಲ್ಲದೆ, ರೋಹಿತ್ ಶರ್ಮಾ ನಿವೃತ್ತಿ ಬಳಿಕ ಏಕದಿನದ ನಾಯಕತ್ವವನ್ನೂ ಶುಭ್ಮನ್ ಗಿಲ್ಗೆ ನೀಡುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.
