Asianet Suvarna News Asianet Suvarna News

Vijay Hazare Trophy 2021: ಫೈನಲ್‌ನಲ್ಲಿಂದು ತಮಿಳುನಾಡು-ಹಿಮಾಚಲ ಪ್ರದೇಶ ಫೈಟ್‌

* ವಿಜಯ್ ಹಜಾರೆ ಟ್ರೋಫಿ ಫೈನಲ್‌ನಲ್ಲಿ ತಮಿಳುನಾಡಿಗೆ ಹಿಮಾಚಲ ಪ್ರದೇಶ ಸವಾಲು

* 6ನೇ ವಿಜಯ್ ಹಜಾರೆ ಟ್ರೋಫಿ ಮೇಲೆ ಕಣ್ಣಿಟ್ಟಿದೆ ಬಲಿಷ್ಠ ತಮಿಳುನಾಡು ತಂಡ

* ಚೊಚ್ಚಲ ಟ್ರೋಫಿ ಕನವರಿಕೆಯಲ್ಲಿದೆ ಹಿಮಾಚಲ ಪ್ರದೇಶ ಕ್ರಿಕೆಟ್ ತಂಡ

Vijay Hazare Trophy 2021 Tamil Nadu take on Himachal Pradesh Final Clash in Jaipur kvn
Author
Bengaluru, First Published Dec 26, 2021, 7:38 AM IST

ಜೈಪುರ(ಡಿ.26): 20ನೇ ಆವೃತ್ತಿಯ ವಿಜಯ್‌ ಹಜಾರೆ (Vijay Hazare Trophy 2021) ರಾಷ್ಟ್ರೀಯ ಏಕದಿನ ಟೂರ್ನಿಯ ಫೈನಲ್‌ ಪಂದ್ಯ ತಮಿಳುನಾಡು (Tamil Nadu Cricket Team) ಹಾಗೂ ಹಿಮಾಚಲ ಪ್ರದೇಶದ ನಡುವೆ ಭಾನುವಾರ ನಡೆಯಲಿದೆ. ಇತ್ತೀಚೆಗಷ್ಟೇ ನಡೆದ ಮುಷ್ತಾಕ್‌ ಅಲಿ ಟಿ20 ಲೀಗ್‌ನಲ್ಲೂ ಚಾಂಪಿಯನ್‌ ಆಗಿದ್ದ ತಮಿಳುನಾಡು ವಿಜಯ್‌ ಹಜಾರೆ ಟ್ರೋಫಿಯನ್ನೂ ಗೆಲ್ಲುವ ನಿರೀಕ್ಷೆಯಲ್ಲಿದೆ. 5 ಬಾರಿಯ ಚಾಂಪಿಯನ್‌ ತಮಿಳುನಾಡು 7ನೇ ಬಾರಿ ಫೈನಲ್‌ನಲ್ಲಿ ಆಡುತ್ತಿದ್ದು, 6ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ.. ಇನ್ನೊಂದೆಡೆ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿ ಆತ್ಮವಿಶ್ವಾಸದಿಂದ ಬೀಗುತ್ತಿರುವ ಹಿಮಾಚಲ ಪ್ರದೇಶ ತಂಡವು (Himachal Pradesh Cricket Team) ಚೊಚ್ಚಲ ಟ್ರೋಫಿಗೆ ಮುತ್ತಿಕ್ಕಲು ತುದಿಗಾಲಿನಲ್ಲಿ ನಿಂತಿದೆ.

ಗುಂಪು ಹಂತದಲ್ಲಿ ನೆಟ್‌ ರನ್‌ರೇಟ್‌ ಆಧಾರದಲ್ಲಿ ಕರ್ನಾಟಕವನ್ನು 2ನೇ ಸ್ಥಾನಕ್ಕೆ ತಳ್ಳಿ, ಅಗ್ರಸ್ಥಾನಿಯಾಗಿ ನೇರವಾಗಿ ಕ್ವಾರ್ಟರ್‌ ಫೈನಲ್‌ಗೇರಿದ್ದ ತಮಿಳುನಾಡು, ಅಂತಿಮ 8ರ ಪಂದ್ಯದಲ್ಲಿ ಕರ್ನಾಟಕವನ್ನು ದೊಡ್ಡ ಅಂತರದಲ್ಲಿ ಸೋಲಿಸಿತ್ತು. ಬಳಿಕ ಸೆಮಿಫೈನಲ್‌ನಲ್ಲಿ ಸೌರಾಷ್ಟ್ರ ವಿರುದ್ಧ ಕೊನೆ ಎಸೆತದಲ್ಲಿ ಗೆಲುವು ಸಾಧಿಸಿ ಫೈನಲ್‌ಗೆ ಲಗ್ಗೆಯಿಟ್ಟಿತ್ತು. ಬಾಬಾ ಅಪರಾಜಿತ್‌, ಬಾಬಾ ಇಂದ್ರಜಿತ್‌, ಎನ್‌.ಜಗದೀಶನ್‌, ಸಾಯಿಕಿಶೋರ್‌ ತಂಡದ ಬ್ಯಾಟಿಂಗ್‌ ಆಧಾರಸ್ತಂಭಗಳಾಗಿದ್ದಾರೆ. ದಿನೇಶ್‌ ಕಾರ್ತಿಕ್‌(Dinesh Karthik), ಶಾರುಖ್‌ ಖಾನ್‌ ಫಿನಿಶರ್‌ಗಳ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದು, ನಾಯಕ ವಿಜಯ್‌ ಶಂಕರ್‌(Vijay Shankar) ಆಲ್ರೌಂಡ್‌ ಆಟದ ಮೂಲಕ ಗಮನ ಸೆಳೆಯುತ್ತಿದ್ದಾರೆ. ತಂಡದ ಬೌಲಿಂಗ್‌ ಪಡೆ ಸಹ ಉತ್ತಮ ಲಯದಲ್ಲಿದೆ. ಕಳೆದ ಪಂದ್ಯದಲ್ಲಿ ಅನುಭವಿ ಆಫ್‌ಸ್ಪಿನ್ನರ್‌ ವಾಷಿಂಗ್ಟನ್ ಸುಂದರ್ ಕೂಡಾ ಆಕರ್ಷಕ ಆಲ್ರೌಂಡರ್ ಆಟದ ಮೂಲಕ ಗಮನ ಸೆಳೆದಿದ್ದರು. ಮೇಲ್ನೋಟಕ್ಕೆ ತಮಿಳುನಾಡು ತಂಡವು ಪ್ರಶಸ್ತಿ ಗೆಲ್ಲಬಲ್ಲ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದೆ

ಇನ್ನು, ಯಾವುದೇ ಮಾದರಿಯ ರಾಷ್ಟ್ರೀಯ ಟೂರ್ನಿಯಲ್ಲಿ ಈ ವರೆಗೂ ಫೈನಲ್‌ನಲ್ಲಿ ಆಡಿರದ ಹಿಮಾಚಲ ಪ್ರದೇಶ ಚೊಚ್ಚಲ ಬಾರಿಗೆ ಫೈನಲ್‌ಗೇರಿದ್ದು ಮೊದಲ ಬಾರಿಗೆ ಟ್ರೋಫಿ ಗೆಲ್ಲುವ ತವಕದಲ್ಲಿದೆ. ಕ್ವಾರ್ಟರ್‌ನಲ್ಲಿ ಉತ್ತರ ಪ್ರದೇಶ ವಿರುದ್ಧ ಜಯಿಸಿದ್ದ ಹಿಮಾಚಲ, ಸೆಮೀಸ್‌ನಲ್ಲಿ ಸರ್ವೀಸಸ್ ತಂಡವನ್ನು ಮಣಿಸಿತ್ತು. ನಾಯಕ ರಿಶಿ ಧವನ್‌ ಆಲ್ರೌಂಡ್‌ ಆಟದ ಮೂಲಕ ತಂಡವನ್ನು ಫೈನಲ್‌ಗೇರಿಸಿದ್ದಾರೆ. ಸರ್ವಿಸಸ್ ತಂಡದ ಎದುರು ಅಮೋಘ ಗೆಲುವು ದಾಖಲಿಸಿ ಆತ್ಮವಿಶ್ವಾಸದಿಂದ ಬೀಗುತ್ತಿರುವ ರಿಶಿ ಧವನ್ ಪಡೆ, ಬಲಿಷ್ಠ ತಮಿಳುನಾಡು ಕ್ರಿಕೆಟ್ ತಂಡಕ್ಕೆ ಶಾಕ್ ನೀಡುವ ಮೂಲಕ ಚೊಚ್ಚಲ ಬಾರಿಗೆ ಟ್ರೋಫಿಗೆ ಮುತ್ತಿಕ್ಕಲು ಎದುರು ನೋಡುತ್ತಿದೆ.

Vijay Hazare Trophy: ಫೈನಲ್‌ಗೆ ಲಗ್ಗೆಯಿಟ್ಟ ತಮಿಳುನಾಡು- ಹಿಮಾಚಲ ಪ್ರದೇಶ

ಪಂದ್ಯ ಆರಂಭ: ಬೆಳಗ್ಗೆ 9ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 2

ರಣಜಿ ಟ್ರೋಫಿ: ಕರ್ನಾಟಕಕ್ಕೆ ಉತ್ತರಾಖಂಡ ವಿರುದ್ಧ ಜನವರಿ 13ರಿಂದ ಮೊದಲ ಪಂದ್ಯ

ಮುಂಬೈ: ಜನವರಿ 13ರಿಂದ ಆರಂಭಗೊಳ್ಳಲಿರುವ 2022ನೇ ಸಾಲಿನ ರಣಜಿ ಟ್ರೋಫಿಯಲ್ಲಿ (Ranji Trophy) ಕರ್ನಾಟಕ ತಂಡ ಎಲೈಟ್‌ ‘ಸಿ’ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಮೊದಲ ಪಂದ್ಯದಲ್ಲಿ ಉತ್ತರಾಖಂಡ ತಂಡವನ್ನು ಎದುರಿಸಲಿದೆ. 

ಜನವರಿ 20ರಿಂದ ಹೈದರಾಬಾದ್‌, ಜನವರಿ 27ರಿಂದ ಮಹಾರಾಷ್ಟ್ರ, ಫೆಬ್ರವರಿ 3ರಿಂದ ಮುಂಬೈ, ಫೆಬ್ರವರಿ 10ರಿಂದ ದೆಹಲಿ ವಿರುದ್ಧ ಸೆಣಸಲಿದೆ. ಕರ್ನಾಟಕ ಗುಂಪು ಹಂತದ ಎಲ್ಲಾ ಪಂದ್ಯಗಳನ್ನೂ ಕೋಲ್ಕತಾದಲ್ಲಿ ಆಡಲಿದೆ. ಕೋವಿಡ್‌ ಕಾರಣ 2021ರ ಸಾಲಿನ ರಣಜಿ ಟ್ರೋಫಿ ರದ್ದುಗೊಂಡಿತ್ತು. 2019-20ನೇ ಸಾಲಿನಲ್ಲಿ ಸೌರಾಷ್ಟ್ರ ಚೊಚ್ಚಲ ಬಾರಿಗೆ ಚಾಂಪಿಯನ್‌ ಆಗಿತ್ತು. ಕರ್ನಾಟಕ ಸೆಮಿಫೈನಲ್‌ನಲ್ಲಿ ಸೋಲುಂಡಿತ್ತು.
 

Follow Us:
Download App:
  • android
  • ios