Asianet Suvarna News Asianet Suvarna News

ಕೆಎಲ್‌ ರಾಹುಲ್‌ ವಿರುದ್ಧ ವೆಂಕಿ ಗರಂ, 'ಬೇರೆ ಯಾರಿಗಾದ್ರೂ ಚಾನ್ಸ್‌ ನೀಡಿ..' ಎಂದ ಮಾಜಿ ವೇಗಿ!

ಪ್ರವಾಸಿ ಆಸ್ಟ್ರೇಲಿಯಾ ತಂಡದ ವಿರುದ್ದ ನಾಗ್ಪುರ ಟೆಸ್ಟ್‌ನಲ್ಲಿ ನೀರಸ ಬ್ಯಾಟಿಂಗ್‌ ಮಾಡಿದ ಕೆಎಲ್‌ ರಾಹುಲ್‌ ವಿರುದ್ಧ ಕರ್ನಾಟಕದ ಮಾಜಿ ವೇಗಿ ವೆಂಕಟೇಶ್‌ ಪ್ರಸಾದ್‌ ಗರಂ ಆಗಿದ್ದಾರೆ. ಟೆಸ್ಟ್‌ ತಂಡದಲ್ಲಿ ರಾಹುಲ್‌ಗೆ ನೀಡಿರುವ ಸ್ಥಾನವನ್ನು ಬೇರೆ ಯಾರಿಗಾದರೂ ನೀಡಿ ಎಂದು ಆಗ್ರಹ ಮಾಡಿದ್ದಾರೆ.
 

Venkatesh Prasad Angry On KL Rahul Former Indian cricketer tweets on KLR san
Author
First Published Feb 11, 2023, 1:28 PM IST

ಬೆಂಗಳೂರು (ಫೆ.11): ಟೀಮ್‌ ಇಂಡಿಯಾ ಮಾಜಿ ವೇಗಿ ಹಾಗೂ ಕರ್ನಾಟಕದ ದಿಗ್ಗಜ ಕ್ರಿಕೆಟಿಗ ವೆಂಕಟೇಶ್‌ ಪ್ರವಾಸ್‌, ಟೆಸ್ಟ್‌ ಕ್ರಿಕೆಟ್‌ನಲ್ಲಿ ಟೀಮ್‌ ಇಂಡಿಯಾ ಆರಂಭಿಕ ಆಟಗಾರ ಕೆಎಲ್‌ ರಾಹುಲ್‌ಗೆ ಸಿಕ್ಕಾಪಟ್ಟೆ ಅವಕಾಶ ನೀಡುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರಣಿ ಟ್ವೀಟ್‌ ಮಾಡಿರುವ ಟೀಮ್‌ ಇಂಡಿಯಾ ಮಾಜಿ ಕೋಚ್‌ 53 ವರ್ಷದ ವೆಂಕಟೇಶ್‌ ಪ್ರಸಾದ್, ಶುಭ್‌ಮನ್‌ ಗುಲ್‌, ಸರ್ಫ್ರಾಜ್‌ ಖಾನ್‌ ಅವರ ಪ್ರದರ್ಶನವನ್ನು ಆಯ್ಕೆ ಸಮಿತಿ ಗಮನಿಸಬೇಕು. ಪ್ರಸ್ತುತ ದಿನದಲ್ಲಿ ರಾಹುಲ್‌ಗಿಂತ ಅರ್ಹ ಕ್ರಿಕೆಟಿಗರು ಅರ್ಹವಾಗಿ ಅವಕಾಶಕ್ಕಾಗಿ ಕಾಯುತ್ತಿದ್ದಾರೆ ಅವರಿಗೆ ಚಾನ್ಸ್‌ ನೀಡಬೇಕು ಎಂದು ಹೇಳಿದ್ದಾರೆ. ಪ್ರವಾಸಿ ಆಸ್ಟ್ರೇಲಿಯಾ ತಂಡದ ವಿರುದ್ಧ ನಾಗ್ಪುರದಲ್ಲಿ ನಡೆಯುತ್ತಿರುವ ಟೆಸ್ಟ್‌ ಪಂದ್ಯದಲ್ಲಿ ಟೀಮ್‌ ಇಂಡಿಯಾ ಉಪನಾಯಕ ಕೆಎಲ್‌ ರಾಹುಲ್‌ ಕೇಲವ 20 ರನ್‌ಗೆ ಔಟಾಗಿದ್ದರು. 2022ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಜೊಹಾನ್ಸ್‌ಬರ್ಗ್‌ ಟೆಸ್ಟ್‌ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ ಬಳಿಕ ಟೀಮ್‌ ಇಂಡಿಯಾ ಆರಂಭಿಕ ಆಟಗಾರ ಆಡಿದ 8 ಟೆಸ್ಟ್‌ ಇನ್ನಿಂಗ್ಸ್‌ಗಳ ಪೈಕಿ 23 ರನ್‌ ಬಾರಿಸಿರುವುದೇ ಗರಿಷ್ಠ ಮೊತ್ತವಾಗಿದೆ. ತಮ್ಮ ಅಧಿಕೃತ ಟ್ವಿಟರ್‌ ಹ್ಯಾಂಡಲ್‌ನಲ್ಲಿ ಕೆಎಲ್‌ ರಾಹುಲ್‌ ಕುರಿತಾಗಿ ವೆಂಕಟೇಶ್‌ ಪ್ರಸಾದ್‌ ಪ್ರಾಮಾಣಿಕ ಅಭಿಪ್ರಾಯಗಳನ್ನು ಬರೆದುಕೊಂಡಿದ್ದಾರೆ.

'ನನಗೆ ಕೆಎಲ್‌ ರಾಹುಲ್‌ ಅವರ ಪ್ರತಿಭೆ ಮತ್ತೆ ಸಾಮರ್ಥ್ಯದ ಬಗ್ಗೆ ಸಾಕಷ್ಟು ಗೌರವವಿದೆ. ಆದರೆ ಬೇಸರದ ವಿಚಾರವೆಂದರೆ ಇತ್ತೀಚೆಗೆ ಅವರ ನಿರ್ವಹಣೆ ಕಳವಳಕಾರಿಯಾಗಿ ಕಡಿಮೆಯಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 8 ವರ್ಷಗಳ ಅನುಭ ಹಾಗೂ 46 ಟೆಸ್ಟ್‌ ಪಂದ್ಯ ಆಡಿದ ಬಳಿಕವೂ ಕೇವಲ 36ರ ಸರಾಸರಿ ಹೊಂದಿರುವುದು ಆ ಬ್ಯಾಟ್ಸ್‌ಮನ್‌ಅನ್ನು ಕ್ರಿಕೆಟ್‌ ಲೋಕ ಸಾಧಾರಣ ಪ್ಲೇಯರ್‌ ಎಂದು ಪರಿಗಣನೆ ಮಾಡುತ್ತದೆ. ಬಹುಶಃ ಬೇರೆ ಯಾರಿಗೂ ಇಷ್ಟು ದೀರ್ಘಕಾಲ ಅವಕಾಶ ನೀಡಿದ್ದು ನನಗೆ ನೆನಪಿಲ್ಲ. ಅದರಲ್ಲೂ ದೇಶೀಯ ಕ್ರಿಕೆಟ್‌ನಲ್ಲಿ ಕೆಲ ಆಟಗಾರರು ಅದ್ಬುತ ಫಾರ್ಮ್‌ನಲ್ಲಿದ್ದಾಗ ಹಾಗೂ ಟೀಮ್‌ ಇಂಡಿಯಾಕ್ಕೆ ಬರಲು ಅರ್ಹರಾಗಿರುವಾಗ ಕಳಪೆ ನಿರ್ವಹಣೆ ತೋರಿದ ಪ್ಲೇಯರ್‌ಗೆ ಇಷ್ಟು ಅವಕಾಶ ನೀಡಿದ್ದು ಖಂಡಿತವಾಗಿಯೂ ನೆನಪಿಲ್ಲ' ಎಂದು ಅವರು ಬರೆದುಕೊಂಡಿದ್ದಾರೆ.

ಕ್ರಿಕೆಟ್‌ನ ಅಗ್ರ ಮಟ್ಟದಲ್ಲಿ 30 ವರ್ಷದ ಕೆಎಲ್‌ ರಾಹುಲ್‌ಗೆ ಇಷ್ಟು ಅವಕಾಶ ಸಿಕ್ಕಿರುವುದಕ್ಕೆ ನಿಜಕ್ಕೂ ಅದೃಷ್ಟಶಾಲಿ ಎಂದು ಅವರು ಬಣ್ಣಿಸಿದ್ದಾರೆ. 'ಶುಭ್‌ಮನ್‌ ಗಿಲ್ ಅದ್ಭುತವಾದ ಫಾರ್ಮ್‌ನಲ್ಲಿದ್ದಾರೆ. ಸರ್ಫ್ರಾಜ್‌ ಖಾನ್‌ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಸಾಕಷ್ಟು ಶತಕಗಳನ್ನು ಬಾರಿಸುತ್ತಿದ್ದಾರೆ. ಇವರಿಗೆ ರಾಹುಲ್‌ಗಿಂತ ಮುಂಚಿತವಾಗಿ ಅವಕಾಶ ಪಡೆಯಲು ಅರ್ಹರಾಗಿದ್ದಾರೆ. ಕೆಲವರು ಯಶಸ್ವಿಯಾಗುವವರೆಗೆ ಅನಂತವಾಗಿ ಅವಕಾಶಗಳನ್ನು ಪಡೆಯುವ ಅದೃಷ್ಟವಂತರು ಆದರೆ ಕೆಲವರಿಗೆ ಅವಕಾಶಗಳೇ ಸಿಗೋದಿಲ್ಲ' ಎಂದು ಅವರು ಬರೆದಿದ್ದಾರೆ.

Border Gavaskar Trophy: ಮದುವೆ ಬೆನ್ನಲ್ಲೇ ಅಭ್ಯಾಸ ಆರಂಭಿಸಿದ ಕೆ ಎಲ್ ರಾಹುಲ್..!

ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ವೃತ್ತಿಜೀವನದ ಶ್ರೇಷ್ಠ ಫಾರ್ಮ್‌ನಲ್ಲಿರುವ ಶುಭ್‌ಮನ್‌ ಗಿಲ್‌, ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ ಬಾಂಗ್ಲಾದೇಶ ಪ್ರವಾಸದ ವೇಳೆ ತಮ್ಮ ಚೊಚ್ಚಲ ಟೆಸ್ಟ್‌ ಶತಕ ಬಾರಿಸಿದ್ದರು. ಇನ್ನೊಂಡೆ ಮುಂಬೈ ಬ್ಯಾಟ್ಸ್‌ಮನ್‌ ಸರ್ಫ್ರಾಜ್‌ ಖಾನ್‌ ಕಳೆದ ಕೆಲವು ದೇಶೀಯ ಋತುಗಳಿಂದ ಆಯ್ಕೆ ಸಮಿತಿಗೆ ತಮ್ಮ ನಿರ್ವಹಣೆಯ ಮೂಲಕ ಗಮನಸೆಳೆಯುತ್ತಿದ್ದಾರೆ. 37 ಪ್ರಥಮ ದರ್ಜೆ ಪಂದ್ಯಗಳಿಂದ ಸರ್ಫ್ರಾಜ್ ಖಾನ್‌ 79.65ರ ಸರಾಸರಿಯಲ್ಲಿ 3505 ರನ್‌ ಬಾರಿಸಿದ್ದಾರೆ.

ಕೆಎಲ್ ರಾಹುಲ್‌-ಆಥಿಯಾ ಶೆಟ್ಟಿಗೆ ದುಬಾರಿ ಗಿಫ್ಟ್‌, 2.17 ಕೋಟಿ ಮೌಲ್ಯದ ಕಾರು, 30 ಲಕ್ಷದ ವಾಚ್‌!

ಕೆಎಲ್‌ ರಾಹುಲ್‌ ಉಪನಾಯಕ ಬೇರೆ: ಇನ್ನು ಕೆಎಲ್‌ ರಾಹುಲ್‌ ಅವರನ್ನು ತಂಡದ ಉಪನಾಯಕರನ್ನಾಗಿ ಮಾಡಿರುವ ಬಗ್ಗೆಯೂ ವೆಂಕಟೇಶ್‌ ಪ್ರಸಾದ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಇನ್ನಷ್ಟು ಹದಗೆಡುವ ವಿಚಾರವೇನೆಂದರೆ, ಕೆಎಲ್‌ ರಾಹುಲ್‌ ತಂಡದ ಉಪನಾಯಕರಾಗಿದ್ದಾರೆ. ತಂಡದಲ್ಲಿ ಅಶ್ವಿನ್‌ರಂಥ ಚಾಣಾಕ್ಷ ಕ್ರಿಕೆಟ್‌ ಬ್ರೇನ್‌ ಇದೆ ಅವರು ಟೆಸ್ಟ್‌ ತಂಡದ ಉಪನಾಯಕರಾಗಬಹುದು. ಅವರು ಅಗಲು ಸಾಧ್ಯವಾಗದೇ ಇದ್ದರೂ ಚೇತೇಶ್ವರ ಪೂಜಾರ ಹಾಗೂ ರವೀಂದ್ರ ಜಡೇಜಾ ಆಗಬಹುದು. ಟೆಸ್ಟ್‌ನಲ್ಲಿ ಕೆಎಲ್‌ ರಾಹುಲ್‌ಗಿಂಥ ಮಯಾಂಕ್‌ ಅಗರ್ವಾಲ್‌ ಹಾಗೂ ಹನುಮ ವಿಹಾರಿ ಉತ್ತಮ ಆಟಗಾರರಾಗಬಲ್ಲರು' ಎಂದು ಅವರು ಬರೆದುಕೊಂಡಿದ್ದಾರೆ.

Follow Us:
Download App:
  • android
  • ios