ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಸೋಲುಂಡ ಟೀಂ ಇಂಡಿಯಾಅಶ್ವಿನ್ ಕೈಬಿಟ್ಟು ತಪ್ಪು ಮಾಡಿದ ಅನುಭವಿ ಆಫ್‌ಸ್ಪಿನ್ನರ್ಈ ಕುರಿತಂತೆ ಮೊದಲ ಬಾರಿಗೆ ತುಟಿಬಿಚ್ಚಿದ ಅನುಭವಿ ಆಫ್‌ಸ್ಪಿನ್ನರ್

ತಮಿಳುನಾಡು(ಜೂ.16): ವಿಶ್ವ ನಂ.1 ಟೆಸ್ಟ್‌ ಬೌಲರ್‌ ರವಿಚಂದ್ರನ್ ಅಶ್ವಿನ್‌, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ದ ಭಾರತ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದರು. ರವಿಚಂದ್ರನ್ ಅಶ್ವಿನ್‌ ಅವರನ್ನು ಆಡುವ ಹನ್ನೊಂದರ ಬಳಗದಿಂದ ಕೈಬಿಟ್ಟಿದ್ದು, ಟೀಂ ಇಂಡಿಯಾ ಫೈನಲ್‌ ಸೋಲಿಗೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಇದೀಗ ಅನುಭವಿ ಆಫ್‌ಸ್ಪಿನ್ನರ್ ಅಶ್ವಿನ್‌, ಟೆಸ್ಟ್ ವಿಶ್ವಕಪ್ ಫೈನಲ್‌ನಲ್ಲಿ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ಕೈಬಿಟ್ಟ ನಿರ್ಧಾರದ ಕುರಿತಂತೆ ಮೊದಲ ಬಾರಿಗೆ ತುಟಿಬಿಚ್ಚಿದ್ದಾರೆ.

ಇಂಡಿಯನ್‌ ಎಕ್ಸ್‌ಪ್ರೆಸ್‌ ಜತೆ ಮಾಡಿರುವ ರವಿಚಂದ್ರನ್ ತಾವೂ ಕೂಡಾ, ಟೆಸ್ಟ್ ವಿಶ್ವಕಪ್‌ ಫೈನಲ್ ಪಂದ್ಯವನ್ನು ತಾವು ಉತ್ಸುಕರಾಗಿದ್ದಾಗಿ ತಿಳಿಸಿದ್ದರು. ಆದರೆ ಅಶ್ವಿನ್‌ಗೆ ನಿರಾಸೆ ಎದುರಾಗಿತ್ತು. ತಮ್ಮನ್ನು ಕೈಬಿಟ್ಟಿದ್ದೇಕೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅಶ್ವಿನ್‌, " ಈ ಪ್ರಶ್ನೆಗೆ ಉತ್ತರಿಸುವುದು ನಿಜಕ್ಕೂ ಕಷ್ಟದ ಸಂಗತಿಯಾಗಿದೆ. ಯಾಕೆಂದರೆ ನಾವೀಗ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಆಡಿ ಮುಗಿಸಿದ್ದೇವೆ. ನಾನು ಟೆಸ್ಟ್ ವಿಶ್ವಕಪ್ ಫೈನಲ್ ಆಡಲು ತುಂಬಾ ಇಷ್ಟಪಟ್ಟಿದ್ದೆ. ಯಾಕೆಂದರೆ ಭಾರತ ತಂಡವು ಫೈನಲ್‌ಗೇರಲು ನನ್ನ ಪಾತ್ರವೂ ಇದೆ. ಕಳೆದ ಬಾರಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಕೂಡಾ ನಾನು 4 ವಿಕೆಟ್ ಕಬಳಿಸಿದ್ದೆ" ಎಂದು ಅಶ್ವಿನ್ ಹೇಳಿದ್ದಾರೆ.

ವಿದೇಶಿ ನೆಲದಲ್ಲಿ ಅಶ್ವಿನ್ ಪ್ರದರ್ಶನದ ಕುರಿತಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಶ್ವಿನ್‌, 2018-19ರಿಂದೀಚೆಗೆ ಭಾರತದಲ್ಲಿ ಮಾತ್ರವಲ್ಲ ವಿದೇಶಿ ನೆಲದಲ್ಲೂ ನನ್ನ ಪ್ರದರ್ಶನ ಅತ್ಯುತ್ತಮವಾಗಿದೆ ಎಂದು ಆಫ್‌ಸ್ಪಿನ್ನರ್ ಹೇಳಿದ್ದಾರೆ. " 2018-19ರ ಬಳಿಕ ವಿದೇಶಿ ಪಿಚ್‌ನಲ್ಲಿಯೂ ನನ್ನ ಪ್ರದರ್ಶನ ಅತ್ಯುತ್ತಮವಾಗಿಯೇ ಇದೆ. ವಿದೇಶಿ ನೆಲದಲ್ಲಿಯೂ ನಾನು ತಂಡಕ್ಕೆ ಗೆಲುವು ತಂದುಕೊಡುವಂತಹ ಪ್ರದರ್ಶನ ನೀಡಿದ್ದೇನೆ. ನಾಲ್ಕನೇ ಇನಿಂಗ್ಸ್‌ನಲ್ಲಿ ಸ್ಪಿನ್ನರ್‌ಗಳನ್ನು ಎದುರಿಸುವುದು ಬ್ಯಾಟರ್‌ಗಳಿಗೆ ಸುಲಭವಲ್ಲ. ನಾಲ್ಕನೇ ಇನಿಂಗ್ಸ್‌ನಲ್ಲಿ ಒಂದಷ್ಟು ರನ್‌ ಕಲೆಹಾಕಿ ಸ್ಪಿನ್ನರ್‌ಗಳನ್ನು ದಾಳಿಗಿಳಿಸಿದರೆ, ಪಂದ್ಯ ತುಂಬಾ ಪೈಪೋಟಿಯಿಂದ ಕೂಡಿರಲಿದೆ. ಇದೆಲ್ಲವೂ ಸಂಪೂರ್ಣವಾಗಿ ಮನಸ್ಥಿತಿಯನ್ನು ಅವಲಂಬಿಸಿದೆ ಎಂದು ಅನುಭವಿ ಸ್ಪಿನ್ನರ್ ಅಶ್ವಿನ್ ಹೇಳಿದ್ದಾರೆ.

ಅಶ್ವಿನ್‌ರನ್ನು ಆಡಿಸದ್ದಕ್ಕೆ ತೆಂಡುಲ್ಕರ್‌ ಅಚ್ಚರಿ!

ನವದೆಹಲಿ: ಟೆಸ್ಟ್‌ ವಿಶ್ವಕಪ್‌ ಫೈನಲ್‌ನಲ್ಲಿ ಗೆಲುವು ಸಾಧಿಸಿದ ಆಸ್ಪ್ರೇಲಿಯಾ ತಂಡವನ್ನು ಅಭಿನಂದಿಸಿರುವ ಸಚಿನ್‌ ತೆಂಡುಲ್ಕರ್‌, ಭಾರತ ತಂಡದ ಯೋಜನೆಯನ್ನು ಪ್ರಶ್ನಿಸಿದ್ದರು. ಈ ಬಗ್ಗೆ ಟ್ವೀಟ್‌ ಮಾಡಿದ್ದ ಅವರು, ‘ಭಾರತ ಪಂದ್ಯದಲ್ಲಿ ಉಳಿಯಲು ಮೊದಲ ಇನ್ನಿಂಗ್‌್ಸನಲ್ಲಿ ದೊಡ್ಡ ಮೊತ್ತ ಕಲೆಹಾಕಬೇಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ವಿಶ್ವ ನಂ.1 ಬೌಲರ್‌ ಆರ್‌.ಅಶ್ವಿನ್‌ರನ್ನು ಆಡಿಸದೆ ಇದ್ದಿದ್ದು ಅಚ್ಚರಿ ಮೂಡಿಸಿತು. ವಿಶ್ವ ಶ್ರೇಷ್ಠ ಬೌಲರ್‌ಗಳು ಪಿಚ್‌ ನೆರವು ನೀಡಿದರಷ್ಟೇ ಪರಿಣಾಮಕಾರಿಯಾಗುವುದಿಲ್ಲ. ಕಠಿಣ ಪಿಚ್‌ಗಳಲ್ಲೂ ಯಶಸ್ಸು ಕಾಣುವ ಕೌಶಲ್ಯ ಅವರಲ್ಲಿ ಇರಲಿದೆ. ಆಸೀಸ್‌ನ ಅಗ್ರ 8 ಬ್ಯಾಟರ್‌ಗಳಲ್ಲಿ ಐವರು ಎಡಗೈ ಬ್ಯಾಟರ್‌ಗಳಾಗಿದ್ದರು ಎನ್ನುವುದನ್ನು ಮರೆಯುವಂತಿಲ್ಲ’ ಎಂದಿದ್ದರು.

ರೋಹಿತ್‌ ಶರ್ಮಾಗೆ ಟೆಸ್ಟ್ ನಾಯಕರಾಗಲು ಆಸಕ್ತಿಯಿರಲಿಲ್ಲ, ಈ ಇಬ್ಬರು ಸೇರಿ ಒಪ್ಪಿಸಿದ್ದು..!

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಬಗ್ಗೆ ಹೇಳುವುದಾದರೇ, ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಮೋಡಕವಿದ ವಾತಾವರಣವಿದ್ದಿದ್ದರಿಂದಾಗಿ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಮೊದಲ ಇನ್ನಿಂಗ್ಸಲ್ಲಿ ಆಸೀಸ್‌ 76ಕ್ಕೆ 3 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಸ್ಪ್ರೇಲಿಯಾವನ್ನು ಸಾಧಾರಣ ಮೊತ್ತಕ್ಕೆ ನಿಯಂತ್ರಿಸುವ ಅವಕಾಶವನ್ನು ಭಾರತ ಕೈಚೆಲ್ಲಿತು. ಸ್ಮಿತ್‌-ಹೆಡ್‌ 295 ರನ್‌ ಜೊತೆಯಾಟವಾಡಿ ಆಸೀಸ್‌ ಬೃಹತ್‌ ಮೊತ್ತಕ್ಕೆ ಕಾರಣರಾದರು. ಅಂತಿಮವಾಗಿ ಆಸ್ಟ್ರೇಲಿಯಾ ತಂಡವು ಮೊದಲ ಇನಿಂಗ್ಸ್‌ನಲ್ಲಿ 469 ರನ್ ಬಾರಿಸಿ ಸರ್ವಪತನ ಕಂಡಿತು.

ಇನ್ನು ಮೊದಲ ಇನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯಲಿಲ್ಲ.ಮಧ್ಯಮ ಕ್ರಮಾಂಕದಲ್ಲಿ ಅಜಿಂಕ್ಯ ರಹಾನೆ ಹಾಗೂ ಕೆಳ ಕ್ರಮಾಂಕದಲ್ಲಿ ಶಾರ್ದೂಲ್ ಠಾಕೂರ್ ಬಾರಿಸಿದ ಸಮಯೋಚಿತ ಅರ್ಧಶತಕದ ನೆರವಿನಿಂದ ಟೀಂ ಇಂಡಿಯಾ ಫಾಲೋ ಆನ್ ಭೀತಿಯಿಂದ ಪಾರಾಯಿತು. ಅಂತಿಮವಾಗಿ ಭಾರತ ಮೊದಲ ಇನಿಂಗ್ಸ್‌ನಲ್ಲಿ 296 ರನ್‌ಗಳಿಗೆ ಸರ್ವಪತಕ ಕಂಡಿತು. ಈ ಮೂಲಕ ಆಸ್ಟ್ರೇಲಿಯಾ ತಂಡವು 173 ರನ್‌ಗಳ ಭಾರೀ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿತು. ಎರಡನೇ ಇನಿಂಗ್ಸ್‌ನಲ್ಲಿ ಅಲೆಕ್ಸ್ ಕ್ಯಾರಿ ಬಾರಿಸಿದ ಅರ್ಧಶತಕದ ನೆರವಿನಿಂದ 8 ವಿಕೆಟ್ ಕಳೆದುಕೊಂಡು 270 ರನ್ ಬಾರಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಳ್ಳುವ ಮೂಲಕ ಭಾರತಕ್ಕೆ 444 ರನ್ ಗುರಿ ನೀಡಿತ್ತು. ಈ ಗುರಿ ಬೆನ್ನತ್ತಿದ ಭಾರತ ಎರಡನೇ ಇನಿಂಗ್ಸ್‌ನಲ್ಲಿ 234 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ ಆಸ್ಟ್ರೇಲಿಯಾ ಎದುರು ಮಂಡಿಯೂರಿತು.