Syed Mushtaq Ali Trophy: ಬೆಂಗಾಲ್ಗೆ ಸ್ಪರ್ಧಾತ್ಮಕ ಗುರಿ ನೀಡಿದ ಕರ್ನಾಟಕ
* ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಮಿಂಚಿನ ಪ್ರದರ್ಶನ ತೋರಿದ ಕರ್ನಾಟಕ
* ಬೆಂಗಾಲ್ ಎದುರು ಮೊದಲು ಬ್ಯಾಟಿಂಗ್ ಮಾಡಿ 160 ರನ್ ಚಚ್ಚಿದ ಕರ್ನಾಟಕ
* ಅಜೇಯ ಅರ್ಧಶತಕ ಬಾರಿಸಿ ತಂಡಕ್ಕೆ ನೆರವಾದ ಕರುಣ್ ನಾಯರ್
ದೆಹಲಿ(ನ.18): ಕರುಣ್ ನಾಯರ್ (Karun Nair) ಸ್ಪೋಟಕ ಅರ್ಧಶತಕ ಹಾಗೂ ರೋಹನ್ ಕದಂ ಹಾಗೂ ನಾಯಕ ಮನೀಶ್ ಪಾಂಡೆ (Manish Pandey) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ (Syed Mushtaq Ali Trophy) ಕ್ವಾರ್ಟರ್ ಫೈನಲ್ನಲ್ಲಿ ಕರ್ನಾಟಕ ತಂಡವು 5 ವಿಕೆಟ್ ಕಳೆದುಕೊಂಡು 160 ರನ್ ಬಾರಿಸಿದ್ದು, ಬೆಂಗಾಲ್ ತಂಡಕ್ಕೆ ಗೆಲ್ಲಲು ಸ್ಪರ್ಧಾತ್ಮಕ ಗುರಿ ನೀಡಿದೆ.
ಇಲ್ಲಿನ ಅರುಣ್ ಜೇಟ್ಲಿ ಮೈದಾನದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಕರ್ನಾಟಕ ತಂಡವು ಉತ್ತಮ ಆರಂಭ ಪಡೆಯಲು ವಿಫಲವಾಯಿತು. ವಿಕೆಟ್ ಕೀಪರ್ ಬ್ಯಾಟರ್ ಶರತ್ ಬಿ.ಆರ್ 9 ಎಸೆತಗಳನ್ನು ಎದುರಿಸಿ ಕೇವಲ 4 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಎರಡನೇ ವಿಕೆಟ್ಗೆ ಜತೆಯಾದ ರೋಹನ್ ಕದಂ (Rohan Kada) ಹಾಗೂ ನಾಯಕ ಮನೀಶ್ ಪಾಂಡೆ ಉತ್ತಮ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ರೋಹನ್ 29 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 30 ರನ್ ಬಾರಿಸಿ ಶಹಬಾಜ್ ಅಹಮ್ಮದ್ಗೆ ವಿಕೆಟ್ ಒಪ್ಪಿಸಿದರು. ಇನ್ನು ನಾಯಕ ಮನೀಶ್ ಪಾಂಡೆ ಸಾಕಷ್ಟು ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದರು. ಪಾಂಡೆ 34 ಎಸೆತಗಳನ್ನು ಎದುರಿಸಿ ಒಂದು ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 29 ರನ್ ಬಾರಿಸಿದರು.
Syed Mushtaq Ali Trophy ಕ್ವಾರ್ಟರ್ ಫೈನಲ್: ಕರ್ನಾಟಕಕ್ಕಿಂದು ಬೆಂಗಾಲ್ ಸವಾಲು
ಕರುಣ್ ನಾಯಕ ಸ್ಪೋಟಕ ಅರ್ಧಶತಕ: ಕರ್ನಾಟಕ ತಂಡದ ಮಾಜಿ ನಾಯಕ ಕರುಣ್ ನಾಯರ್ ಸ್ಪೋಟಕ ಬ್ಯಾಟಿಂಗ್ ನಡೆಸುವ ತಂಡ ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ನೆರವಾದರು. ಕಳೆದ ಪಂದ್ಯದ ಹೀರೋ ಅಭಿನವ್ ಮನೋಹರ್ ಜತೆ ಚುರುಕಿನ ಜತೆಯಾಟ ನಿಭಾಯಿಸಿದರು. ಆರಂಭದಿಂದಲೇ ಸ್ಪೋಟಕ ಬ್ಯಾಟಿಂಗ್ ರಣತಂತ್ರ ರೂಪಿಸಿಕೊಂಡ ಕರುಣ್ ನಾಯರ್ ಕೇವಲ 29 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಅಜೇಯ 55 ರನ್ ಸಿಡಿಸಿದರು.
India Tour Pakistan ಪಾಕಿಸ್ತಾನಕ್ಕೆ ಹೋಗುವ ಬಗ್ಗೆ ಈಗಲೇ ನಿರ್ಧರಿಸಿಲ್ಲ: ಕ್ರೀಡಾ ಸಚಿವ ಅನುರಾಗ್ ಠಾಕೂರ್
ಕರುಣ್ ನಾಯರ್ಗೆ ಉತ್ತಮ ಸಾಥ್ ನೀಡಿದ ಅಭಿನವ್ ಮನೋಹರ್ 9 ಎಸೆತಗಳಲ್ಲಿ 19 ರನ್ ಸಿಡಿಸಿದರೆ, ಆಲ್ರೌಂಡರ್ ಅನಿರುದ್ ಜೋಶಿ 10 ಎಸೆತಗಳಲ್ಲಿ 16 ರನ್ ಬಾರಿಸಿ ತಂಡಕ್ಕೆ ಉಪಯುಕ್ತ ರನ್ ಕಾಣಿಕೆ ನೀಡಿದರು. ಅದರಲ್ಲೂ ಪಂದ್ಯದ 16ನೇ ಓವರ್ನಲ್ಲಿ ಅಭಿನವ್ ಮನೋಹರ್ 3 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 18 ರನ್ ಬಾರಿಸುವ ಮೂಲಕ ಕರ್ನಾಟಕ ತಂಡದ ರನ್ ವೇಗಕ್ಕೆ ಮತ್ತಷ್ಟು ಚುರುಕು ಮುಟ್ಟಿಸಿದರು.
ಬೆಂಗಾಲ್ ತಂಡದ ಪರ ಮಕೇಶ್ ಕುಮಾರ್, ಆಕಾಶ್ ದೀಪ್, ಸಯಾನ್ ಘೋಷ್, ವೃತ್ತಿಕ್ ಚಟರ್ಜಿ ಹಾಗೂ ಶೆಹಬಾಜ್ ಅಹಮ್ಮದ್ ತಲಾ ಒಂದೊಂದು ವಿಕೆಟ್ ಪಡೆದರು. ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ ಕರ್ನಾಟಕ ತಂಡವು ಬೆಂಗಾಲ್ ಎದುರು ರೋಚಕ ಸೋಲು ಕಂಡಿತ್ತು. ಇದೀಗ ಆ ಸೋಲಿಗೆ ಕರ್ನಾಟಕ ತಿರುಗೇಟು ನೀಡುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
ಸಂಕ್ಷಿಪ್ತ ಸ್ಕೋರ್
ಕರ್ನಾಟಕ: 160/5
ಕರುಣ್ ನಾಯರ್: 55*
ರೋಹನ್ ಕದಂ: 30
ಆಕಾಶ್ ದೀಪ್: 23/1
ವೃತ್ತಿಕ್ ಚಟರ್ಜಿ: 23/1