ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಕರ್ನಾಟಕ ತಂಡವು ಮೊದಲ ಪಂದ್ಯದಲ್ಲೇ ವಿರೋಚಿತ ಸೋಲು ಅನುಭವಿಸಿದೆ

ಇಂದೋರ್‌: ಸಯ್ಯದ್‌ ಮುಷ್ತಾಕ್‌ ಅಲಿ ರಾಷ್ಟ್ರೀಯ ಟಿ20 ಟೂರ್ನಿಯಲ್ಲಿ ಕರ್ನಾಟಕ ಸೋಲಿನ ಆರಂಭ ಪಡೆದಿದೆ. ಕೃಷ್ಣನ್‌ ಶ್ರೀಜಿತ್‌, ಶುಭಾಂಗ್‌ ಹೆಗಡೆ ಹೋರಾಟದ ಹೊರತಾಗಿಯೂ ಕೊನೆ 4 ಎಸೆತಗಳಲ್ಲಿ 4 ವಿಕೆಟ್‌ ಕಳೆದುಕೊಂಡ ರಾಜ್ಯ ತಂಡ, ಉತ್ತರಾಖಂಡ ವಿರುದ್ಧ ಪಂದ್ಯದಲ್ಲಿ 6 ರನ್‌ ವೀರೋಚಿತ ಸೋಲನುಭವಿಸಿದೆ.

ಮೊದಲು ಬ್ಯಾಟ್‌ ಮಾಡಿದ ಉತ್ತರಾಖಂಡ 5 ವಿಕೆಟ್‌ಗೆ 215 ರನ್‌ ಕಲೆಹಾಕಿತು. ಆರಂಭಿಕ ಆಟಗಾರ ಯುವರಾಜ್‌ ಚೌಧರಿ 60 ಎಸೆತಗಳಲ್ಲಿ 123, ಆದಿತ್ಯ ತಾರೆ 23 ಎಸೆತಗಳಲ್ಲಿ ಔಟಾಗದೆ 42 ರನ್‌ ಗಳಿಸಿದರು. ದೊಡ್ಡ ಸ್ಕೋರ್‌ ಬೆನ್ನತ್ತಿದ ರಾಜ್ಯ ತಂಡಕ್ಕೆ ನಾಯಕ ಮಯಾಂಕ್‌ ಅಗರ್‌ವಾಲ್‌(28 ಎಸೆತಗಳಲ್ಲಿ 48) ಆಸರೆಯಾದರು. ಬಳಿಕ ಶ್ರೀಜಿತ್‌(40 ಎಸೆತಗಳಲ್ಲಿ ಔಟಾಗದೆ 72), ಶುಭಾಂಗ್‌(15 ಎಸೆತಗಳಲ್ಲಿ 36) ಕ್ರೀಸ್‌ನಲ್ಲಿದ್ದಾಗ ತಂಡಕ್ಕೆ ಗೆಲುವಿನ ನಿರೀಕ್ಷೆಯಿತ್ತು. 

ಐಪಿಎಲ್‌ ಮೆಗಾ ಹರಾಜಿಗೂ ಮುನ್ನ 3 ಹೊಸ ಹೆಸರು ಸೇರ್ಪಡೆ! ಒಬ್ಬರ ಮೇಲೆ ಆರ್‌ಸಿಬಿ ಕಣ್ಣು?

ಆಕಾಶ್‌ ಮಧ್ವಾಲ್‌ ಎಸೆದ ಕೊನೆ ಓವರಲ್ಲಿ 14 ರನ್ ಬೇಕಿತ್ತು. ಮೊದಲ ಎಸೆತದಲ್ಲಿ ಸಿಕ್ಸರ್ ಸಿಡಿಸಿದ ಶುಭಾಂಗ್‌ 2ನೇ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದರು. ಬಳಿಕ ಸತತ 3 ಎಸೆತಗಳಲ್ಲಿ ಶ್ರೇಯಸ್‌, ವೈಶಾಖ್‌, ಕೌಶಿಕ್‌ ಔಟಾದರು. ನಾನ್‌ಸ್ಟ್ರೈಕ್‌ನಲ್ಲಿದ್ದ ಶ್ರೀಜಿತ್‌ ಔಟಾಗದೆ ಉಳಿದರು. ರಾಜ್ಯ ತಂಡ ಮುಂದಿನ ಪಂದ್ಯದಲ್ಲಿ ಸೋಮವಾರ ತ್ರಿಪುರಾ ವಿರುದ್ಧ ಸೆಣಸಲಿದೆ.

ಸತತ 3 ಶತಕ: ಟಿ20ಯಲ್ಲಿ ವಿಶ್ವ ದಾಖಲೆ ನಿರ್ಮಿಸಿದ ತಿಲಕ್ ವರ್ಮಾ!

ಮುಂಬೈ: ಭಾರತದ ಯುವ ಕ್ರಿಕೆಟಿಗ ತಿಲಕ್‌ ವರ್ಮಾ ಟಿ20 ಕ್ರಿಕೆಟ್‌ನಲ್ಲಿ ಸತತ 3 ಶತಕಗಳನ್ನು ಬಾರಿಸುವ ಮೂಲಕ ವಿಶ್ವದಾಖಲೆ ಬರೆದಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ ಮೊದಲ ಬ್ಯಾಟರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ವಿರುದ್ಧ ಸತತ 2 ಶತಕ ಬಾರಿಸಿದ್ದ ಎಡಗೈ ಬ್ಯಾಟರ್‌ ತಿಲಕ್‌, ಶನಿವಾರ ಮುಷ್ತಾಕ್‌ ಅಲಿ ಟಿ20 ಟೂರ್ನಿಯ ಮೊದಲ ಪಂದ್ಯದಲ್ಲಿ ಹೈದರಾಬಾದ್ ಪರ ಕಣಕ್ಕಿಳಿದು, ಮೇಘಾಲಯ ವಿರುದ್ಧ 67 ಎಸೆತದಲ್ಲಿ 151 ರನ್‌ ಸಿಡಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 14 ಬೌಂಡರಿ, 10 ಸಿಕ್ಸರ್‌ಗಳಿದ್ದವು.

ಚಿನ್ನಸ್ವಾಮಿ ಕ್ರೀಡಾಂಗಣ ನಿರ್ಮಾಣಕ್ಕೆ ಎಂಜಿ ರೋಡ್‌ ಬಳಿ ಜಾಗ ಸಿಕ್ಕಿದ್ದು ಹೇಗೆ ಗೊತ್ತಾ?

ಇನ್ನು, ಟಿ20ಯಲ್ಲಿ 150 ರನ್‌ ದಾಟಿದ ಭಾರತದ ಮೊದಲ ಪುರುಷ, ಒಟ್ಟಾರೆ 2ನೇ ಕ್ರಿಕೆಟಿಗ ಎಂಬ ಖ್ಯಾತಿಯನ್ನೂ ತಿಲಕ್‌ ಪಡೆದುಕೊಂಡರು. 2022ರಲ್ಲಿ ರಾಷ್ಟ್ರೀಯ ಮಹಿಳಾ ಟಿ20ಯಲ್ಲಿ ಅರುಣಾಚಲ ಪ್ರದೇಶದ ಕಿರಣ್‌ ನಾವ್‌ಗಿರೆ ನಾಗಲ್ಯಾಂಡ್ ವಿರುದ್ಧ 162 ರನ್‌ ಗಳಿಸಿದ್ದರು.

ತಿಲಕ್‌ ಅಬ್ಬರದಿಂದಾಗಿ ಹೈದರಾಬಾದ್‌ 4 ವಿಕೆಟ್‌ಗೆ 248 ರನ್‌ ಕಲೆಹಾಕಿದರೆ, ಮೇಘಾಲಯ 69ಕ್ಕೆ ಆಲೌಟಾಗಿ 179 ರನ್‌ ಸೋಲನುಭವಿಸಿತು.