ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಭ್ ಪಂತ್ ಭೇಟಿಮಾಡಿದ ಭಜ್ಜಿ, ರೈನಾ, ಶ್ರೀಶಾಂತ್..!
* ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರಿಂದ ರಿಷಭ್ ಪಂತ್ ಭೇಟಿ
* ಅಪಘಾತದಿಂದ ಚೇತರಿಸಿಕೊಳ್ಳುತ್ತಿರುವ ವಿಕೆಟ್ ಕೀಪರ್ ಬ್ಯಾಟರ್ ಪಂತ್
* ಪಂತ್ ಭೇಟಿ ಮಾಡಿದ ರೈನಾ, ಹರ್ಭಜನ್ ಸಿಂಗ್, ಶ್ರೀಶಾಂತ್
ನವದೆಹಲಿ(ಮಾ.26): ಕಳೆದ ವರ್ಷದ ಕೊನೆಯಲ್ಲಿ ಗಂಭೀರ ರಸ್ತೆ ಅಪಘಾತಕ್ಕೊಳಗಾಗಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಅವರನ್ನು ಮಾಜಿ ಕ್ರಿಕೆಟಿಗರಾದ ಸುರೇಶ್ ರೈನಾ, ಹರ್ಭಜನ್ ಸಿಂಗ್ ಹಾಗೂ ಶ್ರೀಶಾಂತ್ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಈಗಾಗಲೇ ಹಲವು ಕ್ರಿಕೆಟಿಗರು ರಿಷಭ್ ಪಂತ್ ಮನೆಗೆ ಭೇಟಿ ನೀಡಿ, ಅವರ ಆರೋಗ್ಯ ಯೋಗಕ್ಷೇಮ ವಿಚಾರಿಸಿದ್ದಾರೆ. ಕೆಲದಿನಗಳ ಹಿಂದಷ್ಟೇ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್, ಪಂತ್ ಮನೆಗೆ ಭೇಟಿ ನೀಡಿ ಅವರಿಗೆ ಸ್ಪೂರ್ತಿ ತುಂಬುವ ಕೆಲಸ ಮಾಡಿದ್ದರು. ಇದೀಗ 25 ವರ್ಷದ ರಿಷಭ್ ಪಂತ್ ಅವರನ್ನು ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರರಾದ ಸುರೇಶ್ ರೈನಾ, ಹರ್ಭಜನ್ ಸಿಂಗ್ ಹಾಗೂ ಎಸ್. ಶ್ರೀಶಾಂತ್ ಭೇಟಿ ಮಾಡಿ, ಮಾತುಕತೆ ನಡೆಸಿದ್ದಾರೆ.
ಮಾಜಿ ಕ್ರಿಕೆಟಿಗ ರಿಷಭ್ ಪಂತ್ ಜತೆಗಿರುವ ಫೋಟೋವನ್ನು ಸುರೇಶ್ ರೈನಾ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ, ಬೇಗ ಚೇತರಿಸಿಕೊಳ್ಳಲಿ ಎಂದು ಶುಭಹಾರೈಸಿದ್ದಾಗಿ ತಿಳಿಸಿದ್ದಾರೆ. ಇನ್ನು ಶ್ರೀಶಾಂತ್, ಪಂತ್ಗೆ ನಿಮ್ಮಲ್ಲಿ ನೀವು ವಿಶ್ವಾಸದಿಂದಿರಿ ಹಾಗೂ ದೃತಿಗೆಡಬೇಡಿ ಎಂದು ಕಿವಿಮಾತು ಹೇಳಿದ್ದಾರೆ.
ಸಹೋದರತ್ವವೇ ಎಲ್ಲವು, ಆದಷ್ಟು ಬೇಗ ಹಾಗೂ ಚೆನ್ನಾಗಿ ಗುಣಮುಖರಾಗಿ ಎಂದು ಸುರೇಶ್ ರೈನಾ ಶುಭಹಾರೈಸಿದ್ದಾರೆ. ಇನ್ನು ಎಸ್. ಶ್ರೀಶಾಂತ್ ಕೂಡಾ, ಪಂತ್ ಆದಷ್ಟು ಬೇಗ ಗಾಯದಿಂದ ಗುಣಮುಖರಾಗಲಿ ಎಂದು ಶುಭ ಹಾರೈಸಿದ್ದಾರೆ.
ಮೊದಲ ಐಪಿಎಲ್ ಟ್ರೋಫಿ ಕನವರಿಕೆಯಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್:
ಚೊಚ್ಚಲ ಆವೃತ್ತಿಯಿಂದಲೂ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಾ ಬಂದಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಿಗೆ ಐಪಿಎಲ್ ಟ್ರೋಫಿ ಮರಿಚಿಕೆಯಾಗಿಯೇ ಉಳಿದಿದೆ. ಕಳೆದ 15 ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಒಮ್ಮೆ ಮಾತ್ರ ಫೈನಲ್ ಪ್ರವೇಶಿಸಿದ್ದು ಬಿಟ್ಟರೇ, ಪ್ರಶಸ್ತಿ ಹತ್ತಿರವೂ ಸುಳಿದಿಲ್ಲ.ಇದೀಗ ಡೇವಿಡ್ ವಾರ್ನರ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿ ನೇಮಕಗೊಂಡಿದ್ದು, ತಮ್ಮ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.
IPL 2023: ಗ್ಲೆನ್ ಮ್ಯಾಕ್ಸ್ವೆಲ್ ಆರ್ಸಿಬಿಯ ಕೆಲ ಪಂದ್ಯಗಳಿಗೆ ಡೌಟ್?
ಡೇವಿಡ್ ವಾರ್ನರ್ ಈ ಹಿಂದೆ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. 2016ರಲ್ಲಿ ಅವರ ನಾಯಕತ್ವದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮಣಿಸಿ ಚೊಚ್ಚಲ ಬಾರಿಗೆ ಚಾಂಪಿಯನ್ ಆಗಿತ್ತು.