ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಬೌಲರ್‌ಗಳಾದ ಶಾರ್ದೂಲ್ ಠಾಕೂರ್ ಮತ್ತು ದೀಪಕ್ ಚಹಾರ್ ಅವರ ಕಳಪೆ ಪ್ರದರ್ಶನಕ್ಕೆ ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಇಬ್ಬರು ಆಟಗಾರರಿಗೆ ಸಂಬಳ ಕೊಟ್ಟು ಮನೆಗೆ ಕಳುಹಿಸುವಂತೆ ಸಲಹೆ ನೀಡಿದ್ದು, ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ಅಗತ್ಯವಿದೆ ಎಂದು ಹೇಳಿದ್ದಾರೆ.  

ಮುಂಬೈ: ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಬೌಲರ್‌ಗಳಾದ ಶಾರ್ದೂಲ್ ಠಾಕೂರ್ ಮತ್ತು ದೀಪಕ್ ಚಹಾರ್ ಮೇಲೆ ಭಾರತದ ಮಾಜಿ ನಾಯಕ ಕೃಷ್ಣಮಾಚಾರಿ ಶ್ರೀಕಾಂತ್ ಸಖತ್ ಗರಂ ಆಗಿದ್ದಾರೆ. ಈ ಬಾರಿಯ ಐಪಿಎಲ್ ಸೀಸನ್‌ನಲ್ಲಿ ಕಳಪೆ ಪ್ರದರ್ಶನ ನೀಡುತ್ತಿರುವ ಈ ಇಬ್ಬರು ಆಟಗಾರರಿಗೆ ಸಂಬಳ ಕೊಟ್ಟು ಮನೆಗೆ ಕಳುಹಿಸಿಬಿಡಿ ಎಂದು ಶ್ರೀಕಾಂತ್ ಮುಂಬೈ ಮ್ಯಾನೇಜ್‌ಮೆಂಟ್‌ಗೆ ಖಡಕ್ ಆಗಿ ಹೇಳಿದ್ದಾರೆ. ಗುರುವಾರ ವಾಂಖೆಡೆ ಸ್ಟೇಡಿಯಂನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಸೋತ ಬೆನ್ನಲ್ಲೇ ಶ್ರೀಕಾಂತ್ ಈ ರೀತಿ ಆಕ್ರೋಶ ಹೊರಹಾಕಿದ್ದಾರೆ.

Add Asianetnews Kannada as a Preferred SourcegooglePreferred

ಬೌಲಿಂಗ್ ವಿಭಾಗ ಸಂಪೂರ್ಣ ಫ್ಲಾಪ್

ಈ ಮ್ಯಾಚ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ 195 ರನ್ ಗಳಿಸಿತ್ತು. ಆದರೆ, ಪಂಜಾಬ್ ಕಿಂಗ್ಸ್ ತಂಡ ಕೇವಲ 16.2 ಓವರ್‌ಗಳಲ್ಲಿ ಈ ಗುರಿಯನ್ನು ತಲುಪಿ ಗೆದ್ದು ಬೀಗಿತು. ಮುಂಬೈನ ಪ್ರಮುಖ ಬೌಲರ್‌ಗಳಾದ ದೀಪಕ್ ಚಹಾರ್ ಮತ್ತು ಶಾರ್ದೂಲ್ ಠಾಕೂರ್ ಇಬ್ಬರೂ ಸೇರಿ ಕೇವಲ 5.3 ಓವರ್‌ಗಳಲ್ಲಿ 87 ರನ್ ಬಿಟ್ಟುಕೊಟ್ಟರು. ದೀಪಕ್ ಚಹಾರ್ ತನ್ನ ಮೊದಲ ಓವರ್‌ನಲ್ಲೇ 21 ರನ್ ನೀಡಿದ್ದರು. ಒಟ್ಟಾರೆ 2.3 ಓವರ್‌ಗಳಲ್ಲಿ 45 ರನ್ ಕೊಟ್ಟರೆ, ಶಾರ್ದೂಲ್ ಠಾಕೂರ್ 3 ಓವರ್‌ಗಳಲ್ಲಿ 42 ರನ್ ನೀಡಿ ದುಬಾರಿಯಾದರು. ಈ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಶ್ರೀಕಾಂತ್, "ಇವರನ್ನು ಯಾಕೆ ಟೀಮ್‌ನಲ್ಲಿ ಇಟ್ಕೊಂಡಿದ್ದಾರೋ ಗೊತ್ತಿಲ್ಲ. ಅವರಿಗೆ ದುಡ್ಡು ಕೊಟ್ಟು ಮನೆಗೆ ಕಳಿಸಿಬಿಡಿ. ಈ ಸೀಸನ್ ಮುಗಿಯೋವರೆಗೂ ವಾಪಸ್ ಬರಬೇಡಿ ಅಂತ ಹೇಳಿಬಿಡಿ. ಇದರಲ್ಲಿ ತಪ್ಪೇನಿಲ್ಲ," ಎಂದು ಹೇಳಿದ್ದಾರೆ.

ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ಬೇಕು

ತಂಡದ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ಫಾರ್ಮ್ ಬಗ್ಗೆಯೂ ಶ್ರೀಕಾಂತ್ ಕಳವಳ ವ್ಯಕ್ತಪಡಿಸಿದ್ದಾರೆ. ಟಿ20 ವಿಶ್ವಕಪ್ ನಂತರ ಯಾವುದೇ ವಿಶ್ರಾಂತಿ ಇಲ್ಲದೆ ಸತತವಾಗಿ ಆಡುತ್ತಿರುವುದು ಬುಮ್ರಾ ಮೇಲೆ ಪರಿಣಾಮ ಬೀರಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಈ ಸೀಸನ್‌ನ ಕಳೆದ ಐದು ಮ್ಯಾಚ್‌ಗಳಲ್ಲಿ ಬುಮ್ರಾಗೆ ಒಂದೇ ಒಂದು ವಿಕೆಟ್ ಕೂಡ ಸಿಕ್ಕಿಲ್ಲ. ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಬುಮ್ರಾ 4 ಓವರ್‌ಗಳಲ್ಲಿ 41 ರನ್ ಬಿಟ್ಟುಕೊಟ್ಟಿದ್ದರು. ಬುಮ್ರಾಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ವಿಶ್ರಾಂತಿ ಬೇಕು, ಅವರನ್ನು ಅತಿಯಾಗಿ ಆಡಿಸಲಾಗುತ್ತಿದೆ ಎಂದು ಶ್ರೀಕಾಂತ್ ಸೇರಿಸಿದರು.

ಮುಂಬೈ ತಂಡದ ದಯನೀಯ ಸ್ಥಿತಿ

ಸೀಸನ್ ಆರಂಭದಲ್ಲಿ ಮುಂಬೈ ಬೌಲಿಂಗ್ ವಿಭಾಗಕ್ಕೆ ತಾನು 10ಕ್ಕೆ 9.5 ರೇಟಿಂಗ್ ನೀಡಿದ್ದು ತಪ್ಪಾಯ್ತು ಎಂದು ಶ್ರೀಕಾಂತ್ ಒಪ್ಪಿಕೊಂಡಿದ್ದಾರೆ. "ಮುಂಬೈ ತಂಡ 500 ರನ್ ಹೊಡೆದರೂ, ಈ ಬೌಲಿಂಗ್ ಇಟ್ಕೊಂಡು ಎದುರಾಳಿಗಳು ಆ ಮೊತ್ತವನ್ನು ಚೇಸ್ ಮಾಡುತ್ತಾರೆ," ಎಂದು ಅವರು ವ್ಯಂಗ್ಯವಾಡಿದ್ದಾರೆ. ಸತತ ನಾಲ್ಕು ಸೋಲುಗಳಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್, ಸೋಮವಾರ ಅಹಮದಾಬಾದ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ.

ಸದ್ಯ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು ಆಡಿದ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿ ಶುಭಾರಂಭ ಮಾಡಿತ್ತು. ಆದರೆ ಇದಾದ ಬಳಿಕ ಸತತ ನಾಲ್ಕು ಪಂದ್ಯಗಳನ್ನು ಸೋಲುವ ಮೂಲಕ ಅಂಕಪಟ್ಟಿಯಲ್ಲಿ ಕೇವಲ 2 ಅಂಕಗಳೊಂದಿಗೆ 9ನೇ ಸ್ಥಾನದಲ್ಲಿಯೇ ಉಳಿದುಕೊಂಡಿದೆ. ಮುಂಬೈ ಇಂಡಿಯನ್ಸ್ ತಂಡವು ಪ್ಲೇ ಆಫ್ ಕನಸನ್ನು ಜೀವಂತವಾಗಿಟ್ಟುಕೊಳ್ಳಬೇಕಿದ್ದರೇ, ತನ್ನ ಪಾಲಿನ ಮುಂಬರುವ 9 ಪಂದ್ಯಗಳ ಪೈಕಿ ಕನಿಷ್ಠ 7 ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.