ಮತ ಚಲಾಯಿಸಿ ಈ ಬಾರಿ ಐಪಿಎಲ್ ಗೆಲ್ಲೋ ನೆಚ್ಚಿನ ತಂಡದ ಹೆಸರು ಹೇಳಿದ ಸೌರವ್ ಗಂಗೂಲಿ, ಜಿದ್ದಾಜಿದ್ದಿ ತೀವ್ರಗೊಂಡಿದೆ. ಈಗಲೇ ಯಾವ ನಾಲ್ಕು ಕಂಡ ಪ್ಲೇಆಫ್ ಸುತ್ತಿಗೇರಲಿದೆ ಅನ್ನೋ ಕುತೂಹಲ ನಡುವೆ ಸೌರವ್ ಗಂಗೂಲಿ ಹೇಳಿದ್ದೇನು?
ಕೋಲ್ಕತಾ (ಏ.29) ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಈ ಬಾರಿ ಐಪಿಎಲ್ ಗೆಲ್ಲೋ ನೆಚ್ಚಿನ ತಂಡಗಳ ಕುರಿತು ಸುಳಿವು ನೀಡಿದ್ದಾರೆ. ಪಶ್ಚಿಮ ಬಂಗಾಳದ ಎರಡನೇ ಹಂತದ ಮತದಾನದಲ್ಲಿ ಮತ ಚಲಾಯಿಸಿದ ಸೌರವ್ ಗಂಗೂಲಿ ಪತ್ನಿ ಡೋನಾ ಗಂಗೂಲಿ ಬಳಿಕ ಮಾಧ್ಯಮದ ಜೊತೆ ಮಾತನಾಡಿದ್ದಾರೆ. ಇದೇ ವೇಳೆ ಐಪಿಎಲ್ 2026 ಟೂರ್ನಿ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ. ಈ ಬಾರಿಯ ಐಪಿಎಲ್ ಗೆಲ್ಲೋ ತಂಡಗಳ ಯಾವುದು ಅನ್ನೋ ಪ್ರಶ್ನೆಗೆ ಗಂಗೂಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅರ್ಧ ಟೂರ್ನಿ ಬಾಕಿ ಇದೆ, ಆದರೂ ಮೂರು ಫೇವರಿಟ್ ಟೀಂ
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ 24 ಪರಗಣದಲ್ಲಿ ಮತ ಚಲಾಯಿಸಿದ ಸೌರವ್ ಗಂಗೂಲಿ ಬಳಿಕ ಐಪಿಎಲ್ ಗೆಲ್ಲೆ ಫೇವರಿಟ್ ಟೀಂ ಕುರಿತು ಮಾತನಾಡಿದ್ದಾರೆ. ಐಪಿಎಲ್ 2026ರ ಟೂರ್ನಿ ಇನ್ನು ಅರ್ಧ ಬಾಕಿ ಇದೆ. ಈಗಲೇ ಗೆಲ್ಲೋ ತಂಡಗಳನ್ನು ಹೇಳುವುದು ಕಷ್ಟ. ಆದರೂ ಪಂಜಾಬ್ ಕಿಂಗ್ಸ್ ಉತ್ತಮ ಪ್ರದರ್ಶನ ನೀಡುತ್ತಿದೆ. ರಾಜಸ್ಥಾನ ರಾಯಲ್ಸ್ ಚೆನ್ನಾಗಿದೆ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಿಂಚಿನ ಪ್ರದರ್ಶನ ನೀಡಿದೆ. ಈ ತಂಡಗಳು ಐಪಿಎಲ್ ಟೂರ್ನಿ ಗೆಲ್ಲೋ ನೆಚ್ಚಿನ ತಂಡಗಳಾಗಿ ಗುರುತಿಸಿಕೊಂಡಿದೆ. ಇನ್ನು ಹಲವು ತಂಡಗಳಿಗೆ ಅವಕಾಶವಿದೆ. ಕೊನೆಯ ಕ್ಷಣದಲ್ಲಿ ಸತತ ಗೆಲುವಿನ ಮೂಲಕ ಕೆಲ ತಂಡಗಳು ಅಚ್ಚರಿ ಮೂಡಿಸುವ ಸಾಧ್ಯೆಗಳು ಇವೆ. ಈ ಹಿಂದಿನ ಟೂರ್ನಿಗಳಲ್ಲಿ ಈ ರೀತಿಯ ಅಚ್ಚರಿಗಳನ್ನು ನೋಡಿದ್ದೇವೆ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.
ಅಂಕಪಟ್ಟಿಯಲ್ಲಿ ಯಾವ ತಂಡ ಟಾಪ್
ಐಪಿಎಲ್ 2026ರ ಟೂರ್ನಿಯಲ್ಲಿ ಇದುವರೆಗೆ ಪ್ರದರ್ಶನದಲ್ಲಿ ಪಂಜಾಬ್ ಕಿಂಗ್ಸ್ ಮೊದಲ ಸೋಲು ಕಂಡರೂ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. 13 ಅಂಕಗಳೊಂದಿಗೆ ಪಂಜಾಬ್ ಕಿಂಗ್ಸ್ ಮೊದಲ ಸ್ಥಾನದಲ್ಲಿದೆ. ಆರ್ಸಿಬಿ 6 ಗೆಲುವು ಹಾಗೂ 2 ಸೋಲು ಕಂಡಿದೆ. ಈ ಮೂಲಕ 2ನೇ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿರುವ ರಾಜಸ್ಥಾನ ರಾಯಲ್ಸ್ 6 ಗೆಲುವು ಹಾಗೂ 3 ಸೋಲು ಕಂಡಿದೆ. ಇನ್ನು ಸನ್ರೈಸರ್ಸ್ ಹೈದರಾಬಾದ್ ತಂಡ 5 ಗೆಲುವು ಮೂರು ಸೋಲಿನ ಮೂಲಕ 4ನೇ ಸ್ಥಾನದಲ್ಲಿದೆ. 5ನೇ ಸ್ಥಾನದಲ್ಲಿರುವ ಗುಜರಾತ್ ಟೈಟಾನ್ಸ್ 4 ಗೆಲುವು 4 ಸೋಲು ಕಂಡಿದೆ.
ಐಪಿಎಲ್ ಗೆಲ್ಲೋ ನೆಚ್ಚಿನ ತಂಡಗಳ ಪೈಕಿ ಸದ್ಯ ಕೇಳಿಬರುತ್ತಿರುವ ಮೂರು ಹೆಸರು ಪಂಜಾಬ್ ಕಿಂಗ್ಸ್, ಆರ್ಸಿಬಿ ಹಾಗೂ ರಾಜಸ್ಥಾನ ರಾಯಲ್ಸ್. ವಿಶೇಷ ಅಂದರೆ 2025ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮಣಿಸಿ ಆರ್ಸಿಬಿ ಟ್ರೋಫಿ ಗೆದ್ದಿತ್ತು. ಈ ಬಾರಿಯೂ ಟಾಪ್ 2 ತಂಡಗಳ ಪೈಕಿ ಪಂಜಾಬ್ ಕಿಂಗ್ಸ್ ಹಾಗೂ ಆರ್ಸಿಬಿ ಕಾಣಿಸಿಕೊಂಡಿದೆ. ಹೀಗಾಗಿ ಕಳೆದ ಬಾರಿಯಂತೆ ಈ ಬಾರಿಯೂ ಆರ್ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗುತ್ತಾ ಎಂಬ ಕುತೂಹಲ ಮನೆ ಮಾಡಿದೆ.


