ಸಯ್ಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ತಂಡವು 86 ರನ್‌ಗಳ ಗುರಿಯನ್ನು ಕೇವಲ 6 ಓವರ್‌ಗಳೊಳಗೆ ತಲುಪಿ ನಾಕೌಟ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ.

ಇಂದೋರ್‌: ಮುಷ್ತಾಕ್‌ ಅಲಿ ರಾಷ್ಟ್ರೀಯ ಟಿ20 ಟೂರ್ನಿಯಲ್ಲಿ ಕರ್ನಾಟಕ ತಂಡ 2ನೇ ಗೆಲುವು ಸಾಧಿಸಿದ್ದು, ನಾಕೌಟ್‌ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಶುಕ್ರವಾರ ಸಿಕ್ಕಿಂ ವಿರುದ್ಧ ರಾಜ್ಯ ತಂಡ 8 ವಿಕೆಟ್ ಭರ್ಜರಿ ಗೆಲುವು ಸಾಧಿಸಿತು. ಟೂರ್ನಿಯಲ್ಲಿ ಆಡಿರುವ 4 ಪಂದ್ಯಗಳಲ್ಲಿ 2ನೇ ಗೆಲುವು ದಾಖಲಿಸಿದ ತಂಡ, ‘ಬಿ’ ಗುಂಪಿನಲ್ಲಿ 5ನೇ ಸ್ಥಾನದಲ್ಲಿದೆ.

ಮೊದಲು ಬ್ಯಾಟ್‌ ಮಾಡಿದ ಸಿಕ್ಕಿಂ ತಂಡ 18.2 ಓವರ್‌ಗಳಲ್ಲಿ 82 ರನ್‌ಗೆ ಆಲೌಟಾಯಿತು. ಆಶಿಶ್‌ ಥಾಪ(18) ತಂಡದ ಪರ ಗರಿಷ್ಠ ವೈಯಕ್ತಿಕ ಮೊತ್ತ ದಾಖಲಿಸಿದರು. ಮಾರಕ ದಾಳಿ ಸಂಘಟಿಸಿದ ಸ್ಪಿನ್ನರ್‌ ಶ್ರೇಯಸ್‌ ಗೋಪಾಲ್‌ 4 ಓವರಲ್ಲಿ 13 ರನ್‌ಗೆ 5 ವಿಕೆಟ್‌ ಕಿತ್ತರು. ವಿದ್ಯಾಧರ್‌ ಪಾಟೀಲ್‌ 10 ರನ್‌ಗೆ 3, ವೈಶಾಖ್‌ 14 ರನ್‌ಗೆ 2 ವಿಕೆಟ್‌ ಕಿತ್ತರು.

ಸುಲಭ ಗುರಿಯನ್ನು ಕರ್ನಾಟಕ ಕೇವಲ 5.4 ಓವರ್‌ಗಳಲ್ಲೇ ಚೇಸ್‌ ಮಾಡಿ ಗೆಲುವು ಸಾಧಿಸಿತು. ಮನೀಶ್‌ ಪಾಂಡೆ 13 ಎಸೆತಗಳಲ್ಲಿ ಔಟಾಗದೆ 30, ಕೆ.ಎಲ್‌.ಶ್ರೀಜಿತ್‌ 13 ಎಸೆತಗಳಲ್ಲಿ 37, ಸ್ಮರಣ್ 7 ಎಸೆತಗಳಲ್ಲಿ ಔಟಾಗದೆ 19 ರನ್‌ ಗಳಿಸಿದರು. ರಾಜ್ಯ ತಂಡ ಮುಂದಿನ ಪಂದ್ಯದಲ್ಲಿ ಭಾನುವಾರ ತಮಿಳುನಾಡು ವಿರುದ್ಧ ಸೆಣಸಾಡಲಿದೆ.

ಪಟ್ಟು ಸಡಿಲಿಸದ ಬಿಸಿಸಿಐ-ಪಿಸಿಬಿ: ಇಂದೂ ನಡೆಯುತ್ತೆ ಹೈಬ್ರಿಡ್‌ ಸಭೆ

4 ಓವರ್‌ನಲ್ಲಿ 69 ರನ್‌ ನೀಡಿದ ಶಾರ್ದೂಲ್‌: ಟೂರ್ನಿಯಲ್ಲೇ ಗರಿಷ್ಠ!

ಹೈದರಾಬಾದ್‌: ಇತ್ತೀಚೆಗೆ ಐಪಿಎಲ್‌ ಹರಾಜಿನಲ್ಲಿ ಯಾವುದೇ ತಂಡಕ್ಕೆ ಮಾರಾಟವಾಗದೆ ಉಳಿಸಿದ್ದ ತಾರಾ ಬೌಲರ್‌ ಶಾರ್ದೂಲ್‌ ಠಾಕೂರ್‌ ಮುಷ್ತಾಕ್‌ ಅಲಿ ರಾಷ್ಟ್ರೀಯ ಟಿ20 ಟೂರ್ನಿಯ ಪಂದ್ಯವೊಂದರಲ್ಲಿ ಗರಿಷ್ಠ ರನ್‌ ಬಿಟ್ಟುಕೊಟ್ಟ ಅನಗತ್ಯ ದಾಖಲೆ ಬರೆದಿದ್ದಾರೆ. ಮುಂಬೈ ತಂಡವನ್ನು ಪ್ರತಿನಿಧಿಸುತ್ತಿರುವ ಶಾರ್ದೂಲ್‌, ‘ಇ’ ಗುಂಪಿನ ಕೇರಳ ವಿರುದ್ಧ ಪಂದ್ಯದಲ್ಲಿ 4 ಓವರ್‌ಗಳಲ್ಲಿ ಬರೋಬ್ಬರಿ 69 ರನ್‌ ಬಿಟ್ಟುಕೊಟ್ಟರು. ಅವರು 6 ಸಿಕ್ಸರ್‌, 5 ಬೌಂಡರಿಗಳನ್ನು ಹೊಡೆಸಿಕೊಂಡರು. ಇದು ಟೂರ್ನಿಯಲ್ಲೇ ಬೌಲರ್‌ ಬಿಟ್ಟುಕೊಟ್ಟ ಜಂಟಿ ಗರಿಷ್ಠ ರನ್‌.

ಕೆಲ ದಿನಗಳ ಹಿಂದಷ್ಟೇ ಅರುಣಾಚಲ ಪ್ರದೇಶದ ರಮೇಶ್‌ ರಾಹುಲ್‌ ಹರ್ಯಾಣ ವಿರುದ್ಧ ಪಂದ್ಯದಲ್ಲಿ 69 ರನ್‌ ಬಿಟ್ಟುಕೊಟ್ಟಿದ್ದರು. 2010ರಲ್ಲಿ ಹೈದರಾಬಾದ್‌ನ ಪಗಡಲ ನಾಯ್ಡು ಮುಂಬೈ ವಿರುದ್ಧ 67 ರನ್‌ ಬಿಟ್ಟುಕೊಟ್ಟಿ ಈ ಬಾರಿ ಟೂರ್ನಿಗೂ ಮುನ್ನ ಗರಿಷ್ಠ ರನ್‌ ಆಗಿತ್ತು.

13 ವರ್ಷದ ವೈಭವ್ ಸೂರ್ಯವನ್ಶಿ 2025ರ ಐಪಿಎಲ್ ಆಡಲು ಅರ್ಹವೇ?

ಕೂಚ್‌ ಬೆಹಾರ್‌ ಟ್ರೋಫಿ: ಗೆಲುವಿನತ್ತ ಕರ್ನಾಟಕ

ಮೈಸೂರು: ಇಲ್ಲಿ ನಡೆಯುತ್ತಿರುವ ಕೂಚ್‌ ಬೆಹಾರ್‌ ಅಂಡರ್-19 ಕ್ರಿಕೆಟ್‌ ಟೂರ್ನಿಯ ಒಡಿಶಾ ವಿರುದ್ಧ ಪಂದ್ಯದಲ್ಲಿ ಕರ್ನಾಟಕ ಬೃಹತ್‌ ಗೆಲುವಿನ ಸನಿಹದಲ್ಲಿದೆ. ಮೊದಲ ದಿನ 8 ವಿಕೆಟ್‌ಗೆ 290 ರನ್‌ ಕಲೆಹಾಕಿದ್ದ ರಾಜ್ಯ ತಂಡ ಶುಕ್ರವಾರ 308 ರನ್‌ಗೆ ಆಲೌಟಾಯಿತು. 
ಸಯ್ಯದ್‌ ತುಫೈಲ್‌ 4 ವಿಕೆಟ್‌ ಕಿತ್ತರು.

ಬಳಿಕ ಇನ್ನಿಂಗ್ಸ್‌ ಆರಂಭಿಸಿದ ಒಡಿಶಾ ಕೇವಲ 147 ರನ್‌ಗೆ ಆಲೌಟಾಯಿತು. ಸಂಬಿತ್‌ ಬೇಜಾ(48) ಹೊರತುಪಡಿಸಿ ಇತರರು ವಿಫಲರಾದರು. ರಾಜ್ಯದ ಪರ ಪ್ರಣವ್‌ ಅಶ್ವತ್ 5, ಧೀರಜ್‌ ಗೌಡ 3, ಈಶ ಪುತ್ತಿಗೆ 2 ವಿಕೆಟ್‌ ಪಡೆದರು. 161 ರನ್‌ ಹಿನ್ನಡೆಗೊಳಗಾದ ಒಡಿಶಾ ಫಾಲೋ-ಆನ್‌ಗೆ ತುತ್ತಾಗಿ 2ನೇ ಇನ್ನಿಂಗ್ಸ್‌ ಆರಂಭಿಸಿತು. ಸದ್ಯ ಒಡಿಶಾ 2ನೇ ದಿನದಂತ್ಯಕ್ಕೆ ವಿಕೆಟ್‌ ನಷ್ಟವಿಲ್ಲದೆ 33 ರನ್‌ ಗಳಿಸಿದ್ದು, ಇನ್ನಿಂಗ್ಸ್ ಸೋಲು ತಪ್ಪಿಸಲು ಇನ್ನೂ 128 ರನ್‌ ಕಲೆಹಾಕಬೇಕಿದೆ.