ಮುಂಬರುವ ಐಪಿಎಲ್ ಮೆಗಾ ಹರಾಜಿನಲ್ಲಿ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್‌ ಅವರು 30 ಕೋಟಿ ರುಪಾಯಿಗೆ ಹರಾಜಾಗುವ ಸಾಧ್ಯತೆಯಿದೆ ಎಂದು ಸುರೇಶ್ ರೈನಾ ಹೇಳಿದ್ದಾರೆ

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಆಟಗಾರರ ಮೆಗಾ ಹರಾಜು ಇದೇ ನವೆಂಬರ್ 24 ಹಾಗೂ 25ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯಲಿದೆ. ಐಪಿಎಲ್ ಮೆಗಾ ಹರಾಜಿಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗಲೇ ಯಾವ ಆಟಗಾರ ಎಷ್ಟು ಬೆಲೆಗೆ ಯಾವ ತಂಡ ಕೂಡಿಕೊಳ್ಳಬಹುದು ಎನ್ನುವ ಕುತೂಹಲ ಜೋರಾಗಿದೆ. ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ ಟಿ20 ಸ್ಪೆಷಲಿಸ್ಟ್ ಆಟಗಾರರೆನಿಸಿಕೊಂಡಿರುವ ಜೋಸ್ ಬಟ್ಲರ್, ರಿಷಭ್ ಪಂತ್, ಮಿಚೆಲ್ ಸ್ಟಾರ್ಕ್, ಶ್ರೇಯಸ್ ಅಯ್ಯರ್, ಕೆ ಎಲ್ ರಾಹುಲ್, ಯುಜುವೇಂದ್ರ ಚಹಲ್ ಸೇರಿದಂತೆ ಹಲವು ಆಟಗಾರರು ಹರಾಜಿನ ಕೇಂದ್ರಬಿಂದುಗಳೆನಿಸಿಕೊಂಡಿದ್ದಾರೆ.

Add Asianetnews Kannada as a Preferred SourcegooglePreferred

ಈ ಪೈಕಿ ವಿಕೆಟ್ ಕೀಪರ್ ಬ್ಯಾಟರ್ ಎನಿಸಿಕೊಂಡಿರುವ ರಿಷಭ್ ಪಂತ್ ಅವರು ಐಪಿಎಲ್ ಮೆಗಾ ಹರಾಜಿಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಹೀಗಾಗಿ ರಿಷಭ್ ಪಂತ್ ಅವರನ್ನು ಖರೀದಿಸಲು ಹಲವು ಫ್ರಾಂಚೈಸಿಗಳು ಪೈಪೋಟಿ ನಡೆಸಲಿದ್ದು, ದೊಡ್ಡ ಮೊತ್ತಕ್ಕೆ ಹರಾಜಾಗುವ ಸಾಧ್ಯತೆಯಿದೆ ಎಂದು ಟೀಂ ಇಂಡಿಯಾ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಅಭಿಪ್ರಾಯಪಟ್ಟಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ನಂ.1 ಆಲ್ರೌಂಡರ್ ಆಗಿ ಹೊರಹೊಮ್ಮಿದ ಹಾರ್ದಿಕ್ ಪಾಂಡ್ಯ! ತಿಲಕ್ ವರ್ಮಾ ಲಾಂಗ್ ಜಂಪ್

'ಟೀಂ ಇಂಡಿಯಾ ಆಟಗಾರರು ದೊಡ್ಡ ಮೊತ್ತವನ್ನು ಪಡೆಯುವುದಕ್ಕೆ ಇದೊಂದು ಸುವರ್ಣಾವಕಾಶವಾಗಿದೆ. ಆಸ್ಟ್ರೇಲಿಯಾ ಆಟಗಾರರು ದೊಡ್ಡ ಮೊತ್ತವನ್ನು ಪಡೆಯುತ್ತಾರೆ ಎಂದಾದರೇ ನಮ್ಮ ಆಟಗಾರರು ಯಾಕೆ ದೊಡ್ಡ ಮೊತ್ತವನ್ನು ಗಳಿಸಬಾರದು' ಎಂದು ರೈನಾ ಹೇಳಿದ್ದಾರೆ.

ಕಳೆದ ಐಪಿಎಲ್ ಮಿನಿ ಹರಾಜಿನಲ್ಲಿ ಆಸ್ಟ್ರೇಲಿಯಾದ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಅವರನ್ನು ಕೋಲ್ಕತಾ ನೈಟ್ ರೈಡರ್ಸ್ ಫ್ರಾಂಚೈಸಿಯು 24.75 ಕೋಟಿ ರುಪಾಯಿ ನೀಡಿ ಖರೀದಿಸಿತ್ತು. ಇನ್ನು ಆಸ್ಟ್ರೇಲಿಯಾದ ಮತ್ತೋರ್ವ ವೇಗಿ ಪ್ಯಾಟ್ ಕಮಿನ್ಸ್ ಅವರನ್ನು ಸನ್‌ರೈಸರ್ಸ್‌ ಹೈದರಾಬಾದ್ ಫ್ರಾಂಚೈಸಿಯು 20.50 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು.

'ಡೆಲ್ಲಿ ಕ್ಯಾಪಿಟಲ್ಸ್ ನಾಯಕರಾಗಿದ್ದವರು ಓರ್ವ ಗನ್ ಪ್ಲೇಯರ್. ಗನ್ ವಿಕೆಟ್ ಕೀಪರ್. ಅವರ ಬ್ರ್ಯಾಂಡ್‌ ವ್ಯಾಲ್ಯೂ, ಅವರಿಂದ ಒಳ್ಳೆಯ ಜಾಹೀರಾತು ಮಾಡಬಹುದು. ಹೀಗಾಗಿ ಅವರಿಗೆ ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ ರಿಷಭ್ ಪಂತ್, 25ರಿಂದ 30 ಕೋಟಿ ರುಪಾಯಿಗೆ ಹರಾಜಾಗಬಹುದು ಎಂದು ಟೈಮ್ಸ್ ಆಫ್‌ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಸುರೇಶ್ ರೈನಾ ತಿಳಿಸಿದ್ದಾರೆ.

IPL ಹರಾಜಿನಲ್ಲಿ ರಾಹುಲ್‌ಗಾಗಿ ಈ 2 ತಂಡಗಳ ನಡುವೆ ಪೈಪೋಟಿ ಎಂದ ಸನ್ನಿ!

'ರಿಷಭ್ ಪಂತ್ ಎಲ್ಲೇಯಿದ್ದರೂ ಕಪ್ ಗೆಲ್ಲಿಸುವ ಮನೋಭಾವ ಹೊಂದಿದ್ದಾರೆ. ಅವರು ಡೆಲ್ಲಿಗೆ ಕಪ್ ಗೆಲ್ಲಿಸಬೇಕೆಂದು ಸಾಕಷ್ಟು ಪ್ರಯತ್ನ ಪಟ್ಟರು. ಇನ್ನು ಕೆ ಎಲ್ ರಾಹುಲ್ ಅವರು ಕೂಡಾ ಲಖನೌಗೆ ಕಪ್ ಗೆಲ್ಲಿಸಲು ಪ್ರಯತ್ನ ಪಟ್ಟರು. ಈ ಬಾರಿ ಕೆಲವು ತಂಡಗಳು ಕೇವಲ ಆಟಗಾರರನ್ನು ಖರೀದಿಸಲು ನೋಡುತ್ತಿಲ್ಲ, ಬದಲಾಗಿ ನಾಯಕರಾಗುವವರನ್ನು ಹುಡುಕುತ್ತಿವೆ. ಆರ್‌ಸಿಬಿ, ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಖನೌ ಸೂಪರ್ ಜೈಂಟ್ಸ್ ತಂಡಗಳು ಹೊಸ ನಾಯಕನ ಹುಡುಕಾಟದಲ್ಲಿವೆ ಎಂದು ರೈನಾ ಹೇಳಿದ್ದಾರೆ.