ಐಪಿಎಲ್ ಫೈನಲ್‌ನಲ್ಲಿ ಆರ್‌ಸಿಬಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದೆ. ಅಹಮದಾಬಾದ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಪಿಚ್, ಗುಜರಾತ್ ತಂಡದ ಪ್ರಯಾಣದ ಆಯಾಸ ಮತ್ತು ಅಭಿಮಾನಿಗಳ ಬೃಹತ್ ಬೆಂಬಲ ಆರ್‌ಸಿಬಿಗೆ ಮಾನಸಿಕ ಬಲ ತಂದಿದೆ. 

ಅಹಮದಾಬಾದ್ (ಮೇ.31): ಐಪಿಎಲ್ ಇತಿಹಾಸದ ಅತ್ಯಂತ ರೋಮಾಂಚಕ ಫೈನಲ್ ಮಹಾಸಮರಕ್ಕೆ ಅಹಮದಾಬಾದ್‌ನ ಮೊಟೇರಾ ಕ್ರೀಡಾಂಗಣ ಸಂಪೂರ್ಣವಾಗಿ ಸಜ್ಜಾಗಿದೆ. ಪಂದ್ಯದ ಪ್ರಮುಖ ಟಾಸ್‌ಅನ್ನು ಆರ್‌ಸಿಬಿ ಗೆದ್ದುಕೊಂಡಿದ್ದು ಮೊದಲು ಬೌಲಿಂಗ್‌ ಮಾಡುವ ನಿರ್ಧಾರ ಮಾಡಿದೆ. ಆದರೆ, ನಾಯಕ ರಜತ್‌ ಪಟೀದಾರ್‌ ಕ್ವಾಲಿಫೈರ್‌-1 ಪಂದ್ಯದಲ್ಲಿ ಅಡಿದ ತಂಡವನ್ನೇ ಅವರು ಉಳಿಸಿಕೊಂಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಗುಜರಾತ್ ಟೈಟಾನ್ಸ್ (GT) ನಡುವಿನ ಈ ಫೈನಲ್‌ ಫೈಟ್‌ ಆಟಗಾರರ ನಡುವಿನ ಹೋರಾಟವಾಗಿ ಉಳಿದಿಲ್ಲ. ಇದು ಪಿಚ್, ಆಟಗಾರರ ಫಿಟ್‌ನೆಸ್ ಹಾಗೂ ಕ್ರೀಡಾಂಗಣದ ಗ್ಯಾಲರಿಯಲ್ಲಿ ನಡೆಯುತ್ತಿರುವ ಅಭಿಮಾನಿಗಳ ಯುದ್ಧವಾಗಿ ಮಾರ್ಪಟ್ಟಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಫೈನಲ್ ಪಂದ್ಯಕ್ಕಾಗಿ ಮೈದಾನದ ‘ಪಿಚ್ ನಂಬರ್ 6’ ಅನ್ನು ಆಯ್ಕೆ ಮಾಡಲಾಗಿದೆ. ಈ ಪಿಚ್ ಅನ್ನು ಎರಡು ಕೋನಗಳಲ್ಲಿ ನೋಡಬಹುದು. ಈ ಹಿಂದೆ ಗುಜರಾತ್ ಮತ್ತು ಆರ್‌ಸಿಬಿ ಮುಖಾಮುಖಿಯಾದ ಎರಡೂ ಸಂದರ್ಭಗಳಲ್ಲಿ ಗುಜರಾತ್ ತಂಡ ಇದೇ ಪಿಚ್‌ನಲ್ಲಿ ಆಡಲು ಇಷ್ಟಪಟ್ಟಿತ್ತು. ಆದರೆ, ಇದೇ ಪಿಚ್‌ನ ಮತ್ತೊಂದು ಇತಿಹಾಸವೆಂದರೆ, ಕಳೆದ ವರ್ಷದ ಐಪಿಎಲ್ ಫೈನಲ್ ಪಂದ್ಯವೂ ಇದೇ ಮೇಲ್ಮೈನಲ್ಲಿ ನಡೆದಿತ್ತು. ಅಂದರೆ, ಇದು ಮೊಟೇರಾ ಸ್ಕ್ವೇರ್‌ನ ಅತ್ಯಂತ ಪ್ರಮುಖವಾದ 'ಸೆಂಟರ್ ಪಿಚ್' ಆಗಿದೆ. ವಿಶೇಷವೆಂದರೆ, ಕಳೆದ ವರ್ಷ ಆರ್‌ಸಿಬಿ ತಂಡ ಇದೇ ಪಿಚ್‌ನಲ್ಲಿ ಜಯಭೇರಿ ಬಾರಿಸಿತ್ತು ಹಾಗೂ ಈ ಪಿಚ್‌ನಲ್ಲಿ ಗುಜರಾತ್ ವಿರುದ್ಧ ಆರ್‌ಸಿಬಿ 1-1 ಸಮಬಲದ ದಾಖಲೆ ಹೊಂದಿದೆ. ಇದು ಬೆಂಗಳೂರು ತಂಡಕ್ಕೆ ಮಾನಸಿಕ ಬಲ ತಂದಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ XI): ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಟೀದಾರ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್‌ಕೀಪರ್‌), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ರೊಮಾರಿಯೊ ಶೆಫರ್ಡ್, ಭುವನೇಶ್ವರ್ ಕುಮಾರ್, ಜಾಕೋಬ್‌ ಡಫಿ, ಜೋಶ್ ಹ್ಯಾಸಲ್‌ವುಡ್‌, ರಸಿಕ್‌ ಸಲಾಮ್ ದಾರ್

ಗುಜರಾತ್ ಟೈಟಾನ್ಸ್ (ಪ್ಲೇಯಿಂಗ್ XI): ಸಾಯಿ ಸುದರ್ಶನ್, ಶುಭಮನ್ ಗಿಲ್ (ನಾಯಕ), ಜೋಸ್ ಬಟ್ಲರ್ (ವಿಕೆಟ್‌ಕೀಪರ್‌), ವಾಷಿಂಗ್ಟನ್ ಸುಂದರ್, ರಾಹುಲ್ ತೆವಾಟಿಯಾ, ನಿಶಾಂತ್ ಸಿಂಧು, ಜೇಸನ್ ಹೋಲ್ಡರ್, ರಶೀದ್ ಖಾನ್, ಕಗಿಸೊ ರಬಾಡ, ಅರ್ಷದ್ ಖಾನ್, ಮೊಹಮ್ಮದ್ ಸಿರಾಜ್

ಗುಜರಾತ್ ಟೀಮ್‌ಗೆ ಕಾಡುತ್ತಿದೆ ಪ್ರಯಾಣದ ಆಯಾಸ

ಗುಜರಾತ್ ಟೈಟಾನ್ಸ್ ತಂಡಕ್ಕೆ ಇದು ಹೋಮ್ ಗ್ರೌಂಡ್ ಆಗಿದ್ದರೂ, ಫೈನಲ್ ಪಂದ್ಯದ ಮುನ್ನ ಅವರ ವೇಳಾಪಟ್ಟಿ ಅತ್ಯಂತ ಬ್ಯುಸಿಯಾಗಿತ್ತು. ಕಳೆದ ಒಂದು ವಾರದಲ್ಲಿ ಮೂರು ವಿಭಿನ್ನ ನಗರಗಳಿಗೆ ಪ್ರಯಾಣಿಸಿರುವ ಗುಜರಾತ್ ಆಟಗಾರರು ತೀವ್ರ ಆಯಾಸಕ್ಕೆ ಒಳಗಾಗಿದ್ದಾರೆ. ಶನಿವಾರ ರಾತ್ರಿ 11 ಗಂಟೆಯ ಸುಮಾರಿಗೆವಷ್ಟೇ ಅಹಮದಾಬಾದ್‌ಗೆ ಬಂದಿಳಿದಿರುವ ಜಿಟಿ ಪಡೆ, ಕನಿಷ್ಠ 24 ಗಂಟೆಗಳ ಕಾಲವೂ ಹೋಮ್ ಪಿಚ್‌ನಲ್ಲಿ ಸರಿಯಾಗಿ ನೆಲೆಗೊಳ್ಳದೆ ನೇರವಾಗಿ ಫೈನಲ್ ಕದನಕ್ಕೆ ಇಳಿಯುತ್ತಿದೆ. ಇದು ಆರ್‌ಸಿಬಿಗೆ ಮತ್ತೊಂದು ಪ್ಲಸ್ ಪಾಯಿಂಟ್ ಆಗಬಹುದು.

ಕಿಂಗ್ ಕೊಹ್ಲಿ ಭಾಷಣ, ಸಿರಾಜ್ ರನ್‌ಅಪ್ ಮತ್ತು ಸಾಲ್ಟ್ ಸಸ್ಪೆನ್ಸ್

ಪಂದ್ಯದ ಟಾಸ್‌ಗೂ ಆರ್‌ಸಿಬಿ ಕ್ಯಾಂಪ್‌ನಲ್ಲಿ ಭಾರಿ ಸಿದ್ಧತೆಗಳು ಕಂಡುಬಂದವು. ಜೋಶ್ ಹ್ಯಾಜಲ್‌ವುಡ್, ಡಫಿ ಮತ್ತು ಸುಯಶ್ ಶರ್ಮ ನೆಟ್ಸ್‌ನಲ್ಲಿ ಅಭ್ಯಾಸ ಮಾಡಿದರು. ಈ ಮಧ್ಯೆ ಆರ್‌ಸಿಬಿ ತಂಡ ಮೈದಾನದಲ್ಲಿ ಟೀಮ್‌ ಮೀಟ್‌ ನಡೆಸಿದ್ದು, ಕೋಚ್ ಆಂಡಿ ಫ್ಲವರ್ ತಂಡಕ್ಕೆ ಪೆಪ್ ಟಾಕ್ ನೀಡಿದರು. ಆ ಬಳಿಕ ಕಿಂಗ್ ವಿರಾಟ್ ಕೊಹ್ಲಿ ಅವರು ಮಂಡಿಯೂರಿ ಕುಳಿತು ಇಡೀ ತಂಡಕ್ಕೆ ಭಾವುಕ ಹಾಗೂ ಆವೇಶದ ಭಾಷಣ ಮಾಡುವ ಮೂಲಕ ಹುರಿದುಂಬಿಸಿದರು. ಮತ್ತೊಂದೆಡೆ, ವೇಗಿ ಮೊಹಮ್ಮದ್ ಸಿರಾಜ್ ಭುಜದ ಗಾಯದಿಂದ ಸಂಪೂರ್ಣ ಗುಣಮುಖರಾಗಿ ಮೈದಾನಕ್ಕಿಳಿದು ರನ್‌ಅಪ್ ಮಾರ್ಕ್ ಮಾಡುತ್ತಿರುವುದು ಅಭಿಮಾನಿಗಳಿಗೆ ನೆಮ್ಮದಿ ತಂದಿದೆ.

ಅಹಮದಾಬಾದ್ ರಸ್ತೆಗಳೀಗ ಬೆಂಗಳೂರಿನ ಕಬ್ಬನ್ ರೋಡ್ ಮಯ!

ವಾಸ್ತವವಾಗಿ ಈ ಬಾರಿಯ ಫೈನಲ್ ಪಂದ್ಯ ಮೊದಲು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿತ್ತು. ಆದರೆ ಪಂದ್ಯ ಅಹಮದಾಬಾದ್‌ಗೆ ಶಿಫ್ಟ್ ಆದರೂ, ಅಲ್ಲಿನ ವಾತಾವರಣ ಮಾತ್ರ ಕಂಪ್ಲೀಟ್ ಬೆಂಗಳೂರಿನಂತೆಯೇ ಬದಲಾಗಿದೆ. ಮೊಟೇರಾ ರಸ್ತೆಯಲ್ಲಿ ಹೆಜ್ಜೆ ಇಟ್ಟರೆ ಅದು ಬೆಂಗಳೂರಿನ ಕ್ವೀನ್ಸ್ ರೋಡ್ ಅಥವಾ ಕಬ್ಬನ್ ರೋಡ್ ಇರಬೇಕೆಂದು ಭ್ರಮಿಸುವಷ್ಟರ ಮಟ್ಟಿಗೆ ಆರ್‌ಸಿಬಿ ಅಭಿಮಾನಿಗಳು ಅಹಮದಾಬಾದ್ ಅನ್ನು ಆಕ್ರಮಿಸಿಕೊಂಡಿದ್ದಾರೆ! ಮೈದಾನದ ಒಳಗೆ ಮತ್ತು ಹೊರಗೆ ಗುಜರಾತ್‌ನ ಒಬ್ಬ ಅಭಿಮಾನಿ ಸಿಕ್ಕರೆ ಆರ್‌ಸಿಬಿಯ ಬರೋಬ್ಬರಿ 200 ಅಭಿಮಾನಿಗಳು ಕೆಂಪು ಮತ್ತು ನೀಲಿ ಜರ್ಸಿಯಲ್ಲಿ ಕಂಗೊಳಿಸುತ್ತಿದ್ದಾರೆ. ಹೀಗಾಗಿ ಗುಜರಾತ್ ತಂಡ ತನ್ನದೇ ಮೈದಾನದಲ್ಲಿ ಆಡುತ್ತಿದ್ದರೂ, ಅದು ಅವರಿಗೆ ಹೋಮ್ ಗ್ರೌಂಡ್‌ನಂತೆ ಅನಿಸುತ್ತಿಲ್ಲ!