ಪ್ಲೇ ಆಫ್ ಲೆಕ್ಕಾಚಾರ ನಡುವೆ ಇಂದು ನಡೆಯುತ್ತಿರುವ ಆರ್‌ಸಿಬಿ ಹಾಗೂ ಕೆಕೆಆರ್ ನಡುವಿನ ರೋಚಕ ಪಂದ್ಯದ ಟಾಸ್‌ಗೆ ಮಳೆ ಅಡ್ಡಿಯಾಗಿದೆ. ಹೀಗಾಗಿ ಟಾಸ್ ಪ್ರಕ್ರಿಯೆ ಕೆಲ ಕಾಲ ವಿಳಂಬವಾಗಲಿದೆ. 

ರಾಯ್‌ಪುರ (ಮೇ.13) ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಹಾಗೂ ಕೆಕೆಆರ್ ನಡುವಿನ ಪಂದ್ಯಕ್ಕೆ ರಾಯ್‌ಪುರ್ ಕ್ರೀಡಾಂಗಣ ಸಜ್ಜಾಗಿದೆ. ಈ ಮಹತ್ವದ ಪಂದ್ಯದಲ್ಲಿ ಟಾಸ್ ವಿಳಂಭವಾಗಿದೆ. ಸಂಜೆಯಿಂದಲೇ ರಾಯ್‌ಪುರದಲ್ಲಿ ಮಳೆಯಾಗುತ್ತಿದೆ. ಇದೀಗ ಟಾಸ್ ಪ್ರಕ್ರಿಯೆ ವೇಳೆ ತುಂತುರು ಮಳೆ ವಕ್ಕರಿಸಿದೆ. ಇದರಿಂದ ಟಾಸ್ ವಿಳಂಬವಾಗಿದೆ.

Add Asianetnews Kannada as a Preferred SourcegooglePreferred

ರಾಯ್‌ಪುರದಲ್ಲಿ ಮಳೆ ಸಿಂಚನ

ಸಂಜೆ 4.30ರ ವೇಳೆಗೆ ರಾಯ್‌ಪುರದಲ್ಲಿ ಮಳೆ ಸುರಿದಿದೆ. ಹೀಗಾಗಿ ಪಿಚ್ ಕವರ್ ಮಾಡಲಾಗಿತ್ತು. ಇದೀಗ ಮತ್ತೆ ಮಳೆ ಸುರಿದ ಕಾರಣ ಪಿಚ್ ಕವರ್ ಮಾಡಲಾಗಿದೆ. ಸದ್ಯ ಮಳೆ ನಿಂತಿದ್ದು ಸಿಬ್ಬಂದಿಗಳು ಮೈದಾನದಲ್ಲಿನ ನೀರು ತೆಗೆಯುವ ಕೆಲಸದಲ್ಲಿ ನಿರಂತರರಾಗಿದ್ದಾರೆ. ಮಳೆಯಿಂದ ಮೈದಾನದಲ್ಲಿ ತೇವಾಂಶ ಹೆಚ್ಚಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಟಾಸ್ ಪ್ರಮುಖ ಪಾತ್ರ ನಿರ್ವಹಿಸಲಿದೆ. ಜೊತೆಗೆ ರಾಯ್‌ಪುರ್ ಪಿಚ್ ಬ್ಯಾಟಿಂಗ್ ಫ್ರೆಂಡ್ಲಿಯಾಗಿದೆ. ಹೀಗಾಗಿ ಸೆಕೆಂಡ್ ಬ್ಯಾಟಿಂಗ್ ತಂಡಕ್ಕೆ ಫಲಿತಾಂಶ ತಮ್ಮ ಪರವಾಗಿ ಮಾಡುವ ಸಾಧ್ಯತೆ ಹೆಚ್ಚಿದೆ.

ಪ್ಲೇ ಆಫ್ ಲೆಕ್ಕಾಚಾರ

ಐಪಿಎಲ್ ಟೂರ್ನಿಯಲ್ಲಿ 2ನೇ ಸ್ಥಾನದಲ್ಲಿರುವ ಆರ್‌ಸಿಬಿ ಹಾಗೂ 8ನೇ ಸ್ಥಾನದಲ್ಲಿರುವ ಕೆಕೆಆರ್ ನಡುವಿನ ಹೋರಾಟ ತೀವ್ರ ಕುತೂಹಲ ಕೆರಳಿಸಿದೆ. ಪ್ಲೇ ಆಫ್ ಸ್ಥಾನಕ್ಕೇರಲು ಆರ್‌ಸಿಬಿ ಕನಿಷ್ಠ ಒಂದು ಗೆಲುವು ಬೇಕಿದೆ. ಇತ್ತ ಕೆಕೆಆರ್ ಇನ್ನುಳಿದ ಎಲ್ಲಾ ಪಂದ್ಯ ಗೆದ್ದು ಅದಷ್ಠ ಪರೀಕ್ಷೆ ನಡೆಸಲು ಮುಂದಾಗಿದೆ. ಹೀಗಾಗಿ ಇಂದಿನ ಹೋರಾಟ ಪ್ಲೇ ಆಫ್ ಲೆಕ್ಕಾಚರವನ್ನು ಮತ್ತಷ್ಟು ಸ್ಪಷ್ಟಪಡಿಸಲಿದೆ.

ಐಪಿಎಲ್ ಅಂಕಪಟ್ಟಿ

ಸದ್ಯ ಐಪಿಎಲ್ ಅಂಕಪಟ್ಟಿಯಲ್ಲಿ ಗುಜರಾತ್ ಟೈಟಾನ್ಸ್ ಮೊದಲ ಸ್ಥಾನದಲ್ಲಿದೆ. 12 ಪಂದ್ಯದಲ್ಲಿ 16 ಅಂಕಗಳಿಸಿ ಬಹುತೇಕ ಪ್ಲೇ ಆಫ್ ಸ್ಥಾನ ಖಚಿತಪಡಿಸಿಕೊಂಡಿದೆ. ಎರಡನೇ ಸ್ಥಾನದಲ್ಲಿರುವ 11 ಪಂದ್ಯದಲ್ಲಿ 14 ಅಂಕಗಳಿಸಿದೆ. ಆರ್‌ಸಿಬಿಗೆ ಕನಿಷ್ಠ ಒಂದು ಗೆಲುವು ಬೇಕು. ಆದರೆ ಟೇಬಲ್ ಟಾಪ್ 2ನಲ್ಲಿ ಉಳಿಯಬೇಕಾದರೆ 2 ಗೆಲುವು ಬೇಕೇ ಬೇಕು. ಮೂರನೇ ಸ್ಥಾನದಲ್ಲಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡ 12 ಪಂದ್ಯಗಳಿಂದ 14 ಅಂಕ ಸಂಪಾದಿಸಿದೆ. ಆದರೆ ಆರ್‌ಸಿಬಿಗಿಂತ ನೆಟ್ ರನ್‌ರೇಟ್ ಕಡಿಮೆ ಇರುವ ಕಾರಣ 3ನೇ ಸ್ಥಾನದಲ್ಲಿದ್ದರೆ, 11 ಪಂದ್ಯದಿಂದ 13 ಅಂಕಗಳಿಸಿರುವ ಪಂಜಾಬ್ ಕಿಂಗ್ಸ್ 4ನೇ ಸ್ಥಾನದಲ್ಲಿದೆ.