Asianet Suvarna News Asianet Suvarna News

MS Dhoni @42: ಕ್ಯಾಪ್ಟನ್ ಕೂಲ್ ಧೋನಿಗೆ ಶುಭಕೋರಿ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ ಕೊಟ್ಟ ರವೀಂದ್ರ ಜಡೇಜಾ..!

42ನೇ ಜನ್ಮದಿನದ ಸಂಭ್ರಮದಲ್ಲಿರುವ ಟೀಂ ಇಂಡಿಯಾ ಮಾಜಿ ನಾಯಕ ಎಂ ಎಸ್ ಧೋನಿ
ಎಂ ಎಸ್ ಧೋನಿ ಹುಟ್ಟುಹಬ್ಬಕ್ಕೆ ಶುಭ ಕೋರಿದ ಆಲ್ರೌಂಡರ್ ರವೀಂದ್ರ ಜಡೇಜಾ
ಧೋನಿ ಐಪಿಎಲ್ ಭವಿಷ್ಯದ ಬಗ್ಗೆ ಸುಳಿವು ಬಿಟ್ಟುಕೊಟ್ಟ ಜಡ್ಡು

Ravindra Jadeja Birthday Wish For MS Dhoni Breaks The Internet kvn
Author
First Published Jul 7, 2023, 12:50 PM IST

ಬಾರ್ಬೊಡೊಸ್‌(ಜು.07): ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಶುಕ್ರವಾರ(ಜು.07)ವಾದ ಇಂದು ತಮ್ಮ 42ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅನುಭವಿ ವಿಕೆಟ್‌ ಕೀಪರ್ ಬ್ಯಾಟರ್ ಎಂ ಎಸ್ ಧೋನಿ, ಇತ್ತೀಚೆಗಷ್ಟೇ 16ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡವನ್ನು ದಾಖಲೆಯ 5ನೇ ಬಾರಿಗೆ ಚಾಂಪಿಯನ್‌ ಪಟ್ಟಕ್ಕೇರಿಸುವಲ್ಲಿ ಯಶಸ್ವಿಯಾಗಿದ್ದರು.

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಫೈನಲ್ ಪಂದ್ಯದಲ್ಲಿ ಬಲಿಷ್ಠ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿದ ಧೋನಿ ನೇತೃತ್ವದ ಸಿಎಸ್‌ಕೆ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಚಾಂಪಿಯನ್ ಆಗುತ್ತಿದ್ದಂತೆಯೇ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಧೋನಿ ವಿದಾಯ ಹೇಳಬಹುದು ಎಂದು ಕ್ರಿಕೆಟ್ ವಿಶ್ಲೇಷಕರು ಲೆಕ್ಕಾಚಾರ ಹಾಕಿದ್ದರು. ಆದರೆ ಧೋನಿ ಈ ಕುರಿತಂತೆ ನಿರ್ಧಾರ ತೆಗೆದುಕೊಳ್ಳಲು ಇನ್ನು ಸಾಕಷ್ಟು ಸಮಯಾವಕಾಶವಿದೆ ಎಂದು ಹೇಳುವ ಮೂಲಕ ಒಗಟಾಗಿ ಉತ್ತರ ನೀಡಿದ್ದರು. ಇನ್ನು ಚೆನ್ನೈ ದಾಖಲೆಯ 5ನೇ ಬಾರಿಗೆ ಚಾಂಪಿಯನ್‌ ಆಗುವಲ್ಲಿ ಮಹತ್ತರ ಪಾತ್ರ ವಹಿಸಿರುವ ಸಿಎಸ್‌ಕೆ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ, ಇದೀಗ ಧೋನಿಗೆ ಹುಟ್ಟುಹಬ್ಬದ ಶುಭ ಕೋರುವುದರ ಜತೆಗೆ ಅಭಿಮಾನಿಗಳಿಗೂ ಗುಡ್ ನ್ಯೂಸ್ ನೀಡಿದ್ದಾರೆ.

MS Dhoni @42: Captain. Leader. Legend!ಗೆ ಜನ್ಮ ದಿನದ ಸಂಭ್ರಮ; ಧೋನಿ ಸರಿಸಾಟಿಯುಂಟೆ?

ಹೌದು, ಎಂ ಎಸ್ ಧೋನಿ ಇದೀಗ ತಮ್ಮ 42ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಶುಭ ಸಮಯದಲ್ಲಿ ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ, ಜಡೇಜಾ, "2009ರಿಂದ ಇಲ್ಲಿಯವರೆಗೂ ಹಾಗೂ ಎಂದೆಂದಿಗೂ ಹೀಗೆಯೇ ಸಾಗೋಣ. ಹುಟ್ಟುಹಬ್ಬದ ಶುಭಾಶಯಗಳು ಮಹಿ ಬಾಯ್. ಸದ್ಯದಲ್ಲೇ ಮತ್ತೆ ಯೆಲ್ಲೋದಲ್ಲಿ ಭೇಟಿಯಾಗೋಣ" ಎಂದು ಟ್ವೀಟ್‌ ಮಾಡಿದ್ದಾರೆ. ಇದರ ಜತೆಗೆ 2023ರ ಐಪಿಎಲ್ ಫೈನಲ್‌ನಲ್ಲಿ ಕೊನೆಯ ಎರಡು ಎಸೆತಗಳಲ್ಲಿ ಸಿಕ್ಸರ್ ಹಾಗೂ ಬೌಂಡರಿ ಬಾರಿಸಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ಬಳಿಕ ಧೋನಿಯನ್ನು ಬಿಗಿದಪ್ಪಿಕೊಂಡ ಫೋಟೋವನ್ನು ಈ ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ.

ರವೀಂದ್ರ ಜಡೇಜಾ ಅವರ ಈ ಟ್ವೀಟ್ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇದರ ಜತೆಗೆ ಸದ್ಯದಲ್ಲೇ ಹಳದಿ ಜೆರ್ಸಿಯಲ್ಲಿ ಮತ್ತೆ ಭೇಟಿಯಾಗೋಣ ಎನ್ನುವ ಮೂಲಕ ಧೋನಿ, 2024ರ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಕಣಕ್ಕಿಳಿಯುವುದು ಬಹುತೇಕ ಖಚಿತ ಎನ್ನುವ ಸುಳಿವನ್ನು ಜಡ್ಡು ಬಿಟ್ಟುಕೊಟ್ಟಿದ್ದಾರೆ.

2023ನೇ ಸಾಲಿನ ಐಪಿಎಲ್‌ ಫೈನಲ್ ಬಳಿಕ ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ಟ್ವೀಟ್ ಮಾಡಿದ ರವೀಂದ್ರ ಜಡೇಜಾ (Ravindra Jadeja), "ನಾವಿದನ್ನು ಮಾಡಿದ್ದು ಕೇವಲ ಮಹೇಂದ್ರ ಸಿಂಗ್ ಧೋನಿಗಾಗಿ ಮಾತ್ರ. ಮಹಿ ಬಾಯ್ ನಿಮಗಾಗಿ ಅಂದರೆ ಏನೂ ಬೇಕಾದರೂ' ಮಾಡುತ್ತೇವೆ ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದರು. ಈ ಮೂಲಕ ಹಲವು ಗಾಳಿ ಸುದ್ದಿಗಳಿಗೆ ಜಡ್ಡು ತೆರೆ ಎಳೆದಿದ್ದರು.

ಈ ಮೊದಲು ಮಹೇಂದ್ರ ಸಿಂಗ್ ಧೋನಿ (MS Dhoni) ಹಾಗೂ ರವೀಂದ್ರ ಜಡೇಜಾ ನಡುವೆ ಮನಸ್ತಾಪ ಏರ್ಪಟ್ಟಿದ್ದು, ಇಬ್ಬರ ಸಂಬಂಧದಲ್ಲಿ ಬಿರುಕುಬಿಟ್ಟಿದೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಇದರ ನಡುವೆ ಜಡೇಜಾ ಮಾಡುತ್ತಿದ್ದ ಕೆಲವು ಟ್ವೀಟ್‌ಗಳು ಅನುಮಾನ ಎನ್ನುವ ಬೆಂಕಿಗೆ ತುಪ್ಪ ಸುರಿದಂತೆ ಭಾಸವಾಗುತ್ತಿದ್ದವು. ಆದರೆ ಇದೀಗ ಧೋನಿಗಾಗಿ ತಾವು ಏನು ಬೇಕಾದರು ಮಾಡಲು ಸಿದ್ದ ಎನ್ನುವ ಮೂಲಕ ಧೋನಿ ಹಾಗೂ ಜಡ್ಡು ನಡುವೆ ಎಲ್ಲವು ಚೆನ್ನಾಗಿದೆ ಎನ್ನುವುದು ಜಗಜ್ಜಾಹೀರಾಗಿತ್ತು.

Follow Us:
Download App:
  • android
  • ios